“ತಿರುಮಲ ದೇವಸ್ಥಾನ ಹಿಂದೂಗಳಿಗೆ ಸೇರಿದ್ದು, ಇಲ್ಲಿ ‘ಓಂ ನಮೋ ವೆಂಕಟೇಶಾಯ’ ಘೋಷಣೆ ಮಾತ್ರ ಕೇಳಿಬರಬೇಕು: ಆಂಧ್ರಪ್ರದೇಶ ಸಿಎಂ ಚಂದ್ರಬಾಬು ನಾಯ್ಡು

1 min read

ತಿರುಪತಿ: ತಿರುಮಲ ದೇವಸ್ಥಾನ ಹಿಂದೂಗಳಿಗೆ ಸೇರಿದ್ದು, ಇಲ್ಲಿ ‘ಓಂ ನಮೋ ವೆಂಕಟೇಶಾಯ’ ಘೋಷಣೆ ಮಾತ್ರ ಕೇಳಿಬರಬೇಕು ಎಂದು ಆಂಧ್ರ ಪ್ರದೇಶ ನೂತನ ಮುಖ್ಯಮಂತ್ರಿ ಚಂದ್ರಬಾಬು ನಾಯ್ಡು ಹೇಳಿದ್ದಾರೆ.

ಆಂಧ್ರಪ್ರದೇಶ ಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸಿದ ಬೆನ್ನಲ್ಲೇ ಇಂದು ತಿರುಪತಿ-ತಿರುಮಲ ದೇಗುಲಕ್ಕೆ ಕುಟುಂಬ ಸಮೇತರಾಗಿ ಭೇಟಿ ನೀಡಿದ್ದ ಚಂದ್ರಬಾಬು ನಾಯ್ಡು ಅವರು ವೆಂಕಟೇಶ್ವರ ಸ್ವಾಮಿಯ ದರ್ಶನ ಪಡೆದರು.

ದರ್ಶನದ ಬಳಿಕ ದೇಗುಲದ ಹೊರಗೆ ಬಂದು ಸುದ್ದಿಗಾರರೊಂದಿಗೆ ಮಾತನಾಡಿದ ಚಂದ್ರಬಾಬು ನಾಯ್ಡು ಅವರು, ಶ್ರೀ ವೆಂಕಟೇಶ್ವರಸ್ವಾಮಿಯ ಆಶೀರ್ವಾದದಿಂದ ನಾನು ಮತ್ತೆ ಸಿಎಂ ಆಗಿದ್ದೇನೆ. ಈ ಹಿಂದಿನ ಸರ್ಕಾರದಲ್ಲಿ ಈ ಕ್ಷೇತ್ರದಲ್ಲಿ ಸಾಕಷ್ಟು ಅನಾಚಾರಗಳು ನಡೆದಿವೆ. ನಮ್ಮ ಸರ್ಕಾರದ ಶುದ್ಧೀಕರಣ ಕಾರ್ಯ ಇಲ್ಲಿಂದಲೇ ಆರಂಭಿಸುತ್ತೇವೆ. ಇನ್ನು ಮುಂದೆ ನಾಯಕರು ಬಂದಾಗ ನೇತಾಡುವ ಪರದೆಗಳು ಮತ್ತು ಮರಗಳು ಇರುವುದಿಲ್ಲ. ತಿರುಮಲದಲ್ಲಿ ಗಾಂಜಾ, ಮದ್ಯ ಮುಕ್ತವಾಗಿ ಸಿಗುವಂತೆ ಮಾಡಲಾಗಿತ್ತು. ಇವುಗಳೆಲ್ಲವನ್ನೂ ಇದೀಗ ನಾವು ನಿರ್ಮೂಲನೆ ಮಾಡುತ್ತೇವೆ ಎಂದರು.

ಅಂತೆಯೇ ತಿರುಮಲದಿಂದಲೇ ಶುದ್ಧೀಕರಣ ಆರಂಭವಾಗಬೇಕು. ಪ್ರಸಾದ ತಯಾರಿಕೆ ಮತ್ತು ವಿತರಣೆಯಲ್ಲಿನ ದೋಷಗಳು ಮತ್ತು ತಿರುಮಲದ ಶುಚಿತ್ವದ ಬಗ್ಗೆ ವಿಶೇಷ ಗಮನಹರಿಸಿ ಕ್ರಮ ಕೈಗೊಳ್ಳಲಾಗುವುದು. ರಾಜ್ಯದ ಸಮಸ್ತ ಜನತೆಗೆ ಒಳಿತನ್ನು ಮಾಡುವುದೇ ಗುರಿಯಾಗಿದೆ. ಸರ್ಕಾರದ ಜತೆಗೆ ಜನರು ಅಭಿವೃದ್ಧಿಯಲ್ಲಿ ತೊಡಗಿಸಿಕೊಳ್ಳಬೇಕು.

ಕಳೆದುಹೋದ ಮತ್ತು ತೊಂದರೆಗೊಳಗಾದ ಸಮುದಾಯಗಳನ್ನು ನಾವು ಬೆಂಬಲಿಸಬೇಕು. ರಾಜಧಾನಿ ಅಮರಾವತಿ, ಪೋಲಾವರಂ ಯೋಜನೆ ಕುಸಿದಿದೆ. ಅವುಗಳನ್ನು ಪೂರ್ಣಗೊಳಿಸುವ ಗುರಿಯೊಂದಿಗೆ ನಾನು ಕೆಲಸ ಮಾಡುತ್ತೇನೆ ಎಂದರು.

ತಿರುಮಲ ದೇವಸ್ಥಾನ ಹಿಂದೂಗಳಿಗೆ ಸೇರಿದ್ದು, ಇಲ್ಲಿ ‘ಓಂ ನಮೋ ವೆಂಕಟೇಶಾಯ’ ಘೋಷಣೆ ಮಾತ್ರ ಕೇಳಿಬರಬೇಕು

ಇದೇ ವೇಳೆ ತಿರುಮಲ ಪವಿತ್ರ ತಾಣವನ್ನು ವಿಶ್ವದಲ್ಲೇ ಅತ್ಯುತ್ತಮವಾಗಿಸೋಣ ಎಂದು ಕರೆ ನೀಡಿದ ಚಂದ್ರಬಾಬು ನಾಯ್ಡು, ‘ನಾನು ಬೆಳಗ್ಗೆ ಎದ್ದಾಗ ಶ್ರೀ ವೆಂಕಟೇಶ್ವರ ಸ್ವಾಮಿಯನ್ನು ಒಂದು ನಿಮಿಷ ತುಂಬು ಹೃದಯದಿಂದ ಪ್ರಾರ್ಥಿಸುತ್ತೇನೆ. ಜಗತ್ತಿನಾದ್ಯಂತ ಶ್ರೀ ವೆಂಕಟೇಶ್ವರ ಸ್ವಾಮಿ ದೇವಾಲಯಗಳನ್ನು ನಿರ್ಮಿಸಲು ಕ್ರಮಕೈಗೊಳ್ಳುತ್ತೇವೆ.

ಈ ಪವಿತ್ರ ಜಾಗದಲ್ಲಿ ಸಾಕಷ್ಟು ಅನಾಚಾರಗಳು ನಡೆದಿವೆ. ಅವುಗಳೆಲ್ಲವನ್ನೂ ನಾವು ಬುಡ ಸಹಿತ ಕಿತ್ತೊಗೆಯುತ್ತೇವೆ. ತಿರುಮಲ ದೇವಸ್ಥಾನ ಹಿಂದೂಗಳಿಗೆ ಸೇರಿದ್ದು, ಇಲ್ಲಿ ‘ಓಂ ನಮೋ ವೆಂಕಟೇಶಾಯ’ ಘೋಷಣೆ ಮಾತ್ರ ಕೇಳಿಬರಬೇಕು. ಈ ಹಿಂದಿನ ಸರ್ಕಾರ ಈ ಪವಿತ್ರ ಜಾಗವನ್ನು ಅಪವಿತ್ರಗೊಳಿಸುವ ಕಾರ್ಯ ಮಾಡಿತ್ತು. ಅದು ಸರಿಯಲ್ಲ. ನಾವು ಈಗ ಅದನ್ನು ಸರಿಪಡಿಸುತ್ತೇವೆ. ಬೆಳಗಿನ ಜಾವ ಇಲ್ಲಿ ಸುಪ್ರಭಾತ, ನಮೋ ವೆಂಕಟೇಶಾಯ ನಮಃ ಘೋಷಣೆಗಳು ಮಾತ್ರ ಕೇಳಬೇಕು ಎಂದು ಹೇಳಿದರು.

ಕುಟುಂಬಕ್ಕಾಗಿ ಸಮಯ ಮೀಸಲಿಡುತ್ತೇನೆ

ತೆಲುಗು ಜನಾಂಗ ವಿಶ್ವದಲ್ಲೇ ಉನ್ನತ ಮಟ್ಟದಲ್ಲಿಬೇಕು. ಆರ್ಥಿಕ ಅಸಮಾನತೆ ಹೋಗಲಾಡಿಸುವುದು ತಮ್ಮ ಧ್ಯೇಯ. ಆಂಧ್ರಪ್ರದೇಶವನ್ನು ಬಡತನ ಮುಕ್ತ ರಾಜ್ಯವನ್ನಾಗಿ ಮಾಡಬೇಕು. ಕುಟುಂಬ ವ್ಯವಸ್ಥೆಯು ನಮ್ಮ ಶಕ್ತಿ. ಎಷ್ಟೇ ಕಷ್ಟಗಳು ಬಂದರೂ ಹಂಚಿಕೊಳ್ಳಲು ಕುಟುಂಬಸ್ಥರು ಇರುತ್ತಾರೆ ಎಂದು ತಾವು ಜೈಲಿನಲ್ಲಿದ್ದಾಗ ಕುಟುಂಬದ ಸದಸ್ಯರು ಬೆಂಬಲಕ್ಕೆ ನಿಂತಿದ್ದನ್ನು ಚಂದ್ರಬಾಬು ನಾಯ್ದು ಸ್ಮರಿಸಿದರು.

ಅಂತೆಯೇ ನನ್ನ ಕುಟುಂಬಕ್ಕೆ ನಾನು ಏನನ್ನೂ ಕೊಡಬೇಕಾಗಿಲ್ಲ. ರಾಜಕೀಯವನ್ನು ಅವಲಂಬಿಸಬಾರದು ಎಂಬ ಉದ್ದೇಶದಿಂದ ಅವರಿಗೆ ವ್ಯಾಪಾರವನ್ನು ಸ್ಥಾಪಿಸಲಾಯಿತು. ಮೊದಲು ಕುಟುಂಬಕ್ಕೆ ಸಮಯ ಮೀಸಲಿಟ್ಟಿರಲಿಲ್ಲ.. ಈಗ ಸಮಯ ಮಾಡಿಕೊಂಡು ಅವರಿಗಾಗಿ ಕೊಂಚ ಸಮಯ ನೀಡುವ ಪ್ರಯತ್ನ ಮಾಡುತ್ತೇನೆ ಎಂದರು.

You May Also Like

More From Author

+ There are no comments

Add yours