ಬೆಂಗಳೂರು: ನಗರದ ಕೆಲ ರಸ್ತೆಗಳಿಗೆ ವೈಟ್ ಟಾಪಿಂಗ್ ಮಾಡುವ ಕಾಮಗಾರಿಗೆ ಚಾಲನೆ ನೀಡುವ ವೇಳೆ ಉಪ ಮುಖ್ಯಮಂತ್ರಿ ಡಿಕೆ.ಶಿವಕುಮಾರ್ ಶೂಗಳನ್ನೇ ಖದೀಮರು ಕದ್ದಿರುವ ಘಟನೆ ಸೋಮವಾರ ನಡೆದಿದೆ.
ರಾಜ್ಯ ಸರ್ಕಾರವು ಬೆಂಗಳೂರಿನ ಆಯ್ದ ಮುಖ್ಯರಸ್ತೆಗಳಿಗೆ ವೈಟ್ ಟಾಪಿಂಗ್ ಅಳವಡಿಸಲು ನಿರ್ಧರಿಸಿದೆ. ವೈಟ್ ಟಾಪಿಂಗ್ ನಿಂದಾಗಿ, ಡಾಂಬರ್ ರಸ್ತೆಗಳನ್ನು ದೀರ್ಘಕಾಲ ಬಾಳಿಕೆ ಬರುವಂಥ ರಸ್ತೆಗಳನ್ನಾಗಿ ಪರಿವರ್ತಿಸುವ ಯೋಜನೆ ಇದಾಗಿದೆ.
ಇದರ ಉದ್ಘಾಟನೆಯನ್ನು ರಾಜಾಜಿನಗರದ ಭಾಷ್ಯಂ ಸರ್ಕಲ್ ನಲ್ಲಿ ಜು. 15ರ ಬೆಳಗ್ಗೆ ಚಾಲನೆ ನೀಡಲಾಯಿತು. ಉಪ ಮುಖ್ಯಮಂತ್ರಿ ಡಿಕೆ ಶಿವಕುಮಾರ್, ಮಲ್ಲೇಶ್ವರಂ ಶಾಸಕ ಹಾಗೂ ಮಾಜಿ ಉಪ ಮುಖ್ಯಮಂತ್ರಿ ಅಶ್ವತ್ಥ್ ನಾರಾಯಣ್ ಸೇರಿದಂತೆ ಅನೇಕ ಗಣ್ಯರು ಈ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು.
ಕಾಮಗಾರಿ ಆರಂಭಕ್ಕಾಗಿ ಸಾಂಕೇತಿಕವಾಗಿ ಗುದ್ದಲಿ ಪೂಜೆಯನ್ನು ಗಣ್ಯರು ನೆರವೇರಿಸಲು ಮುಂದಾದಾಗ ಔಪಚಾರಿಕವಾಗಿ ಡಿಕೆಶಿ ಹಾಗೂ ಮೊದಲಾದ ಗಣ್ಯರು ತಮ್ಮ ಪಾದರಕ್ಷೆಗಳನ್ನು ಅಲ್ಲೇ ಪಕ್ಕದಲ್ಲೇ ಬಿಟ್ಟಿದ್ದರು.
ಡಿಕೆಶಿಯವರೂ ಪೂಜೆ ನಡೆಯುವ ಅನತಿ ದೂರದಲ್ಲೇ ತಮ್ಮ ಶೂಗಳನ್ನು ಕಳಚಿ, ಪೂಜೆ ನಡೆಯುವ ಜಾಗಕ್ಕೆ ಬಂದರು. ಆದರೆ, ಇದೇ ಸಂದರ್ಭವನ್ನು ಬಳಸಿಕೊಂಡಿರುವ ಯಾರೋ ಖದೀಮರು ಡಿಕೆಶಿಯವರ ಶೂಗಳನ್ನೇ ಕದ್ದಿದ್ದಾರೆ.
ಪೂಜೆ ಮುಗಿಸಿ ಬಂದ ಡಿಕೆಶಿಯವರಿಗೆ ತಮ್ಮ ಶೂಗಳನ್ನು ಯಾರೋ ಎಗರಿಸಿದ್ದಾರೆ ಎಂಬುದು ತಿಳಿದಿದೆ. ಅಲ್ಲೇ ಅಕ್ಕಪಕ್ಕ ಹುಡುಕಾಡಿದರೂ ಶೂಗಳು ಸಿಕ್ಕಿಲ್ಲ. ಆಗ, ಉಪ ಮುಖ್ಯಮಂತ್ರಿಗಳು, ತಮ್ಮ ಕಾರಿನತ್ತ ತೆರಳಿ ಅದರಲ್ಲಿದ್ದ ತಮ್ಮ ಬೇರೆ ಶೂಗಳನ್ನು ಧರಿಸಿಕೊಂಡು ಪ್ರಯಾಣ ಬೆಳೆಸಿದ್ದಾರೆ.
1800 ಕೋಟಿ ರೂ ವೆಚ್ಚದ ವೈಟ್ ಟಾಪಿಂಗ್ ಯೋಜನೆಗೆ ಚಾಲನೆ
ನಗರದಲ್ಲಿ ಶಾಶ್ವತ ರಸ್ತೆಗಳನ್ನು ನಿರ್ಮಿಸುವ ಉದ್ದೇಶದಿಂದ ಉಪ ಮುಖ್ಯಮಂತ್ರಿ ಡಿಕೆ.ಶಿವಕುಮಾರ್ ಅವರು ಸೋಮವಾರ ರೂ.1800 ಕೋಟಿ ವೆಚ್ಚದ ಟಾಪಿಂಗ್ ಯೋಜನೆಗೆ ಚಾಲನೆ ನೀಡಿದರು.
ಚಾಮರಾಜಪೇಟೆ, ಗಾಂಧಿನಗರ, ಮಲ್ಲೇಶ್ವರಂ ಮತ್ತು ಮಹಾಲಕ್ಷ್ಮಿಪುರ ವಿಧಾನಸಭಾ ಕ್ಷೇತ್ರಗಳಲ್ಲಿ 200 ಕೋಟಿ ರೂಪಾಯಿ ವೆಚ್ಚದ 19.67 ಕಿ.ಮೀ ರಸ್ತೆ ವೈಟ್ಟಾಪಿಂಗ್ ಕಾಮಗಾರಿಗೆ ಉಪಮುಖ್ಯಮಂತ್ರಿಗಳು ಚಾಲನೆ ನೀಡಿದರು.
ಭೂಮಿಪೂಜೆ ನೆರವೇರಿಸಿ ಮಾತನಾಡಿದ ಅವರು, ರೂ.1,800 ಕೋಟಿ ವೆಚ್ಚದಲ್ಲಿ 157 ಕಿ.ಮೀ ನಗರದ ರಸ್ತೆ ವೈಟ್ ಟಾಪಿಂಗ್ ಕಾಮಗಾರಿ ನಡೆಸಲಾಗುತ್ತದೆ ಎಂದು ಹೇಳಿದರು.
ಸುಗಮ ಸಂಚಾರವನ್ನು ಖಚಿತಪಡಿಸಿಕೊಳ್ಳಲು ಬ್ರ್ಯಾಂಡ್ ಬೆಂಗಳೂರು ಉಪಕ್ರಮದ ಅಡಿಯಲ್ಲಿ ಈ ಯೋಜನೆಯನ್ನು ಕೈಗೆತ್ತಿಕೊಳ್ಳಲಾಗಿದೆ. ಈ ರಸ್ತೆಗಳು ಕನಿಷ್ಠ 25 ವರ್ಷ ಬಾಳಿಕೆ ಬರಲಿವೆ. 1,800 ಕೋಟಿ ರೂಪಾಯಿ ವೆಚ್ಚದಲ್ಲಿ 157 ಕಿಮೀ ವೈಟ್-ಟಾಪ್ ರಸ್ತೆಗಳನ್ನು ನಿರ್ಮಿಸಲಿದ್ದೇವೆ, ಈ ರಸ್ತೆಗಳು ಶಾಶ್ವತ ಮತ್ತು ಗುಂಡಿಗಳಿಂದ ಮುಕ್ತವಾಗಿರಲಿವೆ ಎಂದು ತಿಳಿಸಿದರು.
+ There are no comments
Add yours