ಶೃಂಗೇರಿಯಲ್ಲಿ ತುಂಗಾನದಿಯಲ್ಲಿ ಪ್ರವಾಹ; ರಸ್ತೆ ಸಂಚಾರ ಬಂದ್

1 min read

ಹೈಲೈಟ್ಸ್‌:

  • ಪುನರ್ವಸು ಮಳೆ ಅಬ್ಬರದಿಂದ ತುಂಗಾ ನದಿಯಲ್ಲಿ ಪ್ರವಾಹ ಸೃಷ್ಟಿ
  • ಚಿಕ್ಕಮಗಳೂರು ಜಿಲ್ಲೆಯ ಪಂಚ ನದಿಗಳು ಅಪಾಯದ ಮಟ್ಟ ಮೀರಿ ಹರಿಯುತ್ತಿದೆ
  • ನದಿ ತಟದಲ್ಲಿರುವ ಕಪ್ಪೆ ಶಂಕರ, ಶಾರದಾಂಬೆ ದೇವಾಸ್ಥಾನದ ಪಾರ್ಕಿಂಗ್‌ ಜಾಗ ಮುಳುಗಡೆ

ಶೃಂಗೇರಿ : ಬಿಟ್ಟು ಬಿಡದೇ ಸುರಿದ ಪುನರ್ವಸು ಮಳೆ ತುಂಗಾ ನದಿಯಲ್ಲಿ ಪ್ರವಾಹ ಸೃಷ್ಟಿಸಿದ್ದು, ಹಲವೆಡೆ ಭೂಕುಸಿತ, ಮನೆಗೆ ಹಾನಿ ಸಂಭವಿಸಿದೆ.

ಪಟ್ಟಣದ ಬೈಪಾಸ್‌ ರಸ್ತೆಗೆ ಸೋಮವಾರ ರಾತ್ರಿ ಪ್ರವಾಹದ ನೀರು ಬಂದಿದ್ದು, ಗಾಂಧಿ ಮೈದಾನ ಆವರಿಸಿತ್ತು. ಗಾಂಧಿ ಮೈದಾನದಲ್ಲಿ 25 ಕ್ಕೂ ಹೆಚ್ಚು ಅಂಗಡಿ, ಹೋಟೆಲ್‌ಗಳನ್ನು ಸೋಮವಾರ ಸಂಜೆ ಮುನ್ನೆಚ್ಚರಿಕೆ ಕ್ರಮವಾಗಿ ತೆರವುಗೊಳಿಸಲಾಗಿತ್ತು.

ಶ್ರೀ ಶಾರದಾ ಪೀಠದ ಭೋಜನ ಶಾಲೆಯ ಕೆಳ ಅಂತಸ್ತಿಗೆ ತುಂಗಾ ನದಿಯ ಪ್ರವಾಹದ ನೀರು ನುಗ್ಗಿದೆ. ಶ್ರೀಮಠದಿಂದ ನರಸಿಂಹವನಕ್ಕೆ ತೆರಳುವ ಕಾಲು ರಸ್ತೆ ಬಂದಾಗಿದೆ.

ಪಟ್ಟಣದಿಂದ ಕಿಕ್ರೆ, ಮೇಗಳಬೈಲು, ಜೈನರಮಕ್ಕಿ ಮುಂತಾದ ಹಳ್ಳಿಗೆ ಸಂಪರ್ಕಿಸುವ ಕಿಕ್ರೆ ಹಳ್ಳದ ಸೇತುವೆ ಮೇಲೆ ನೀರು ಹರಿದಿದ್ದು, ಸಂಚಾರಕ್ಕೆ ಅಡ್ಡಿಯಾಗಿತ್ತು. ಆನೆಗುಂದ ಬಳಿ ತೋಟ, ಗದ್ದೆಗೆ ಪ್ರವಾಹದ ನೀರು ನುಗ್ಗಿದೆ. ಕಾವಡಿ ಬಳಿ ಲಾರಿಯೊಂದು ಭಾಗಶಃ ನೀರಿನಲ್ಲಿ ಮುಳುಗಿದೆ. ಕಿಕ್ರೆ ಕೆಳಕೊಡಿಗೆ ರಸ್ತೆಯಲ್ಲಿ ಮರ ಬಿದ್ದು, ಸಂಚಾರಕ್ಕೆ ಅಡ್ಡಿಯಾಗಿತ್ತು.

ಮನೆಗಳಿಗೆ ಹಾನಿ:

ಪಟ್ಟಣ ಹೊರವಲಯದ ಕುಮಾರ್‌ ಎಂಬುವವರ ಮನೆ ಎದುರು ರಾಷ್ಟ್ರೀಯ ಹೆದ್ದಾರಿಯಲ್ಲಿ ಧರೆ ಕುಸಿತವಾಗಿದ್ದು, ಮನೆ ಅಪಾಯದಲ್ಲಿದೆ. ಶೀರ್ಲು ಗ್ರಾಮದ ಗುರ್ಗಿಯಲ್ಲಿ ಮೋರಿ ಕುಸಿದು ಸಂಚಾರಕ್ಕೆ ಅಡಚಣೆಯಾಗಿದೆ. ಗಿಣಕಲ್‌ ಗ್ರಾಮದ ಶಾಂತಾ ಎಂಬುವವರ ಕೊಟ್ಟಿಗೆ ಕುಸಿದಿದೆ. ಬೇಗಾರ್‌ ಅಸನಬಾಳಿನ ಮಂಜಪ್ಪ ಅವರ ಮನೆ ಮೇಲೆ ಮರ ಬಿದ್ದು, ಹಾನಿಯಾಗಿದೆ.

ಹೆಮ್ಮನೆ ವನಮಾಲ ಎಂಬುವವರ ಮನೆ ಮೇಲೆ, ನೆಮ್ಮಾರ್‌ ಗ್ರಾಮ ಪಂಚಾಯಿತಿ ಅಂಚೆ ಕಚೇರಿ ಮೇಲೆ, ಗಂಡಘಟ್ಟ ಶ್ರೀಧರ್‌ ತೋಟದ ಶೆಡ್‌ ಮೇಲೆ, ಕೆರೆಕಟ್ಟೆ ಅರಣ್ಯ ಇಲಾಖೆ ವಸತಿಗೃಹದ ಮೇಲೆ ಮರ ಬಿದ್ದು, ಮನೆ ಜಖಂಗೊಂಡಿದೆ. ತಾಲೂಕಿನ ಗ್ರಾಮೀಣ ಭಾಗದಲ್ಲಿ ವಿದ್ಯುತ್‌ ಕಂಬಗಳು ಉರುಳಿ, ಬಹುತೇಕ ಗ್ರಾಮೀಣ ಪ್ರದೇಶ ಕತ್ತಲಲ್ಲಿ ಇದೆ.

ಚಿಕ್ಕಮಗಳೂರಲ್ಲಿ ಮಳೆ ಆರ್ಭಟ

ಜಿಲ್ಲೆಯ ಮಲೆನಾಡು ಭಾಗದಲ್ಲಿ ಸೋಮವಾರ ರಾತ್ರಿಯಿಂದ ಮಂಗಳವಾರ ಬೆಳಗ್ಗೆಯವರೆಗೂ ಸುರಿದ ಭಾರೀ ಮಳೆಗೆ ಕೆಲವೆಡೆ ಧರೆ ಕುಸಿತ, ರಸ್ತೆ, ಮನೆಗಳಿಗೆ ಹಾನಿಯಾಗಿದ್ದು ಜಿಲ್ಲೆಯ ಪಂಚ ನದಿಗಳು ಅಪಾಯದ ಮಟ್ಟ ಮೀರಿ ಹರಿಯುತ್ತಿದೆ.

ತುಂಗಾ ನದಿ ಆರ್ಭಟಕ್ಕೆ ಶೃಂಗೇರಿ ಪಟ್ಟಣ ನಲುಗಿದ್ದು, ನದಿ ತಟದಲ್ಲಿರುವ ಕಪ್ಪೆ ಶಂಕರ, ಶಾರದಾಂಬೆ ದೇವಾಸ್ಥಾನದ ಪಾರ್ಕಿಂಗ್‌ ಜಾಗ ಮುಳುಗಡೆಯಾಗಿದೆ. ಕಳಸದಲ್ಲಿ ಸೋಮವಾರ 110.6 ಮಿ.ಮೀ. ಮಳೆಯಾಗಿದೆ. ಕಳಸ-ಹೊರನಾಡು ಮಧ್ಯೆ ಭದ್ರಾ ನದಿಯ ಹೆಬ್ಬೋಳೆ ಸೇತುವೆ ಕೆಲ ಕಾಲ ಮುಳುಗಿತ್ತು. ಹೊರನಾಡಿಗೆ ಹೋಗುವ ಪ್ರವಾಸಿಗರು ಮತ್ತು ಸ್ಥಳೀಯರು ಬದಲಿ ಮಾರ್ಗ ಹಳುವಳ್ಳಿ ಮಾರ್ಗವನ್ನು ಬಳಸಿದರು.

ಬಾಳೆಹೊನ್ನೂರು ಸೇತುವೆ ಸಮೀಪ ಭದ್ರಾ ನದಿ ನೀರು ಅಡಕೆ ತೋಟಕ್ಕೆ ನುಗ್ಗಿದೆ. ಮೂಡಿಗೆರೆ ತಾಲೂಕಿನ ಕೊಟ್ಟಿಗೆಹಾರ ಸೇರಿದಂತೆ ಹಲವು ಕಡೆಗಳಲ್ಲಿ ಮಳೆಗೆ ವಿದ್ಯುತ್‌ ಕಂಬಗಳು ಧರೆಗುರುಳಿದ್ದು, ಸೋಮವಾರ ರಾತ್ರಿ ವಿದ್ಯುತ್‌ ವ್ಯತ್ಯಯ ಉಂಟಾಗಿ ಜನರು ಪರಿತಪಿಸುವಂತಾಗಿತ್ತು. ಮುಳ್ಳಯ್ಯನಗಿರಿ ಭಾಗದಲ್ಲಿ ಐದಾರು ಕಡೆ ಸಣ್ಣಪ್ರಮಾಣದಲ್ಲಿ ಧರೆ ಕುಸಿದಿದೆ.

You May Also Like

More From Author

+ There are no comments

Add yours