ನಾನು ಎವರೇಜ್ ಸ್ಟೂಡೆಂಟ್‌ ಆದ್ರೂ ಮುಖ್ಯಮಂತ್ರಿ ಆಗಿದ್ದೇನೆ: ಸಿದ್ದರಾಮಯ್ಯ

1 min read

ಬೆಂಗಳೂರು (ಅ.29): ನಮ್ಮೂರಿನಲ್ಲಿ ಶಾನುಭೋಗರು ಕುರುಬರು ಲಾಯರ್‌ ಓದಬಾರದು ಎಂದು ನಮ್ಮಪ್ಪನಿಗೆ ಹೇಳಿದ್ದರು. ಆದ್ರೂ ನಾನು ಲಾಯರ್‌ ಆಗಿ ಓದಿ ಬಂದಮೇಲೆ ಶಾನುಭೋಗ ಆಸ್ತಿ ವಿಚಾರದ ಕೇಸ್‌ನಲ್ಲಿ ಶಾನುಭೋಗರಿಗೆ 2 ಗಂಟೆ ಕ್ರಾಸ್‌ ಎಕ್ಸಾಂ ಮಾಡಿದ್ದೆನು. ನಾನು ಓದಿನಲ್ಲಿ ಎವರೇಜ್‌ ಸ್ಟೂಡೆಂಟ್‌ ಆಗಿದ್ದರೂ ಇಂದು ಮುಖ್ಯಮಂತ್ರಿ ಆಗಿದ್ದೇನೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದರು.

ಬೆಂಗಳೂರಿನ ಕಾಳಿದಾಸ ಹೆಲ್ತ್ ಆಂಡ್ ಎಜುಕೇಷನ್ ಟ್ರಸ್ಟ್ ಮತ್ತು ಅಹಿಲ್ಯಾ ಫೌಂಡೇಷನ್ ಹಮ್ಮಿಕೊಂಡಿದ್ದ ‘ಪ್ರೇರಣಾ ಸಮಾರಂಭ’ವನ್ನು ಉದ್ಘಾಟಿಸಿ, ಹಿಂದುಳಿದ ವರ್ಗಗಳ ವೈದ್ಯ ವಿದ್ಯಾರ್ಥಿಗಳನ್ನು ಸನ್ಮಾನಿಸಿ, ವಿದ್ಯಾರ್ಥಿ ವೇತನ ವಿತರಿಸಿದರು. ನಂತರ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಈ ಟ್ರಸ್ಟ್ ಕಾರ್ಯಕ್ರಮವನ್ನ ಐದು ವರ್ಷಗಳ ಹಿಂದೆ ನಾನು ಉದ್ಘಾಟನೆ ಮಾಡಿದ್ದೆನು. ಈಗ ಟ್ರಸ್ಟ್ ಬೆಳೆಯುತ್ತಿದೆ ಇನ್ನೂ ಹೆಚ್ಚು ಬೆಳೆಯಲಿ ಎಂದು ಹಾರೈಸುತ್ತೇನೆ. ಸಮಾಜದಲ್ಲಿ ಎಲ್ಲಾ ಜನಾಂಗ ಶಿಕ್ಷಣ ಪಡೆದುಕೊಳ್ಳಬೇಕು ಎಂದು ಹೇಳಿದರು.

ಯಾವುದೇ ಕ್ಷೇತ್ರದಲ್ಲಿ ಅಕ್ಷರ ಸಂಸ್ಕೃತಿಯಿಂದ ವಂಚಿತರಾಗಿದ್ದಾರೋ ಅವರು ಶಿಕ್ಷಣ ಪಡೆದುಕೊಳ್ಳಬೇಕು. ಯಾರು ಹುಟ್ಟಿನಿಂದ ಮೇಧಾವಿಗಳಲ್ಲ. ಅವಕಾಶಗಳಿಂದ ಕೆಲವರು ವಂಚಿತರಾಗಿರ್ತಾರೆ. ಇಡೀ ನಮ್ಮ ಊರಿನಲ್ಲಿ ಲಾಯರ್ ಆದವರಲ್ಲಿ ನಾನು ಒಬ್ಬನೇ. ನಮ್ಮ ಅಪ್ಪ ಶಾನಬೋಗ ಚನ್ನಪ್ಪ ಅವರ ಮಾತು ಬಹಳ ಕೇಳ್ತಿದ್ದರು. ಲಾ ಕಾಲೇಜು ಸೇರಿಕೊಳ್ಳೀನಿ ಅಂತ ನಮ್ಮ ಅಪ್ಪನಿಗೆ ಹೇಳಿದೆ. ಅವರು ಇರು ಶಾನಬೋಗರ ಕೇಳಿಕೊಂಡು ಬರ್ತೀನಿ ಎಂದು ಹೇಳಿದ್ದರು. ಶಾನಬೋಗರು, ನೀವು ಕುರುಬರು ನಿಮ್ಮ ಮಗನನ್ನು ಲಾಯರ್ ಕೆಲಸ ಮಾಡಿಸ್ತೀಯಾ ಬೇಡ ಅಂದು ಬಿಟ್ಟಿದ್ದರು. ಕುರುಬರು ಲಾಯರ್ ಕೆಲಸ ಮಾಡೋಕೆ ಆಗಲ್ಲ, ಅದೇನಿದ್ರು ಮೇಲ್ವರ್ಗದದವರು ಮಾಡೋದು ಎಂದು ನಮ್ಮಪ್ಪನಿಗೆ ಹೇಳಿದ್ದರು.

ನಮ್ಮಪ್ಪ ನನಗೆ ಲಾಯರ್‌ ಆಗುವುದು ಬೇಡವೆಂದು ಹೇಳಿದರು. ಾಗ ನಾನು ಪಂಚಾಯ್ತಿ ಸೇರಿಸಿ, ನನ್ನ ಪಾಲಿನ ಆಸ್ತಿ ಕೇಳಿದೆ. ನಂತರ ನಮ್ಮ ಅಪ್ಪ ಲಾಗೆ ಸೇರಿಸಿದರು. ನಾನು ಲಾ ಸೇರಿ ಓದು ಸಂಪೂರ್ಣಗೊಳಿಸಿ ಲಾಯರ್ ಕೆಲಸ ಮಾಡಿದೆ. ನಾನು ಲಾಯರ್ ಆದ ಮೇಲೆ ಶಾನಬೋಗ ಚನ್ನಪ್ಪಯ್ಯನ ವಿಲ್ ವಿಚಾರವಾಗಿ, ಚನ್ನಪ್ಪಯ್ಯನನ್ನೇ 2 ಗಂಟೆ ಕ್ರಾಸ್ ಎಕ್ಸಾಂ ಮಾಡಿದ್ದೆನು. ನಂತರ ಬಂದಾಗ ಚನ್ನಪ್ಪಯ್ಯನ ಮಾತಾಡಿಸಿದೆ, ನಮಗೂ ವಿದ್ಯೆ ಇದೆ ಎಂದೂ ಹೇಳಿದ್ದೆನು. ನಮ್ಮೂರಿನ ಶಾನಬೋಗ ಚನ್ನಪ್ಪಯ್ಯ ಏನೂ ಮಾತಾಡದೆ ಹೋದ್ರು ಎಂದು ತಮ್ಮ ಅಂದಿನ ವಿದ್ಯಾಭ್ಯಾಸದ ಅಡೆತಡೆಗಳ ಬಗ್ಗೆ ಸಿಎಂ ಸಿದ್ದರಾಮಯ್ಯ ಪ್ರಸ್ತಾಪ ಮಾಡಿದರು.

ನಮ್ಮಲ್ಲಿ ಶಿಕ್ಷಣ ಪ್ರಸಾರದಲ್ಲಿ ಅಸಮಾನತೆ ಇದೆ. ಬ್ರಿಟೀಷರು ಬರುವ ಮುನ್ನ ವಿದ್ಯೆ ಕಲಿಯಲು ಅವಕಾಶ ಇರಲಿಲ್ಲ, ನಿಷೇಧ ಇತ್ತು. ಸಂವಿಧಾನ ಬಂದ ಮೇಲೆ ವಿದ್ಯೆ ಪ್ರತಿಯೊಬ್ಬರ ಹಕ್ಕು ಎಂದು ಅಂಬೇಡ್ಕರ್ ಹೇಳಿದ್ದಾರೆ. ಯಾರು ಹುಟ್ಟಿನಿಂದ ಮೇಧಾವಿಗಳಲ್ಲ. ಅವಕಾಶಗಳಿಂದ ಕೆಲವರು ವಂಚಿತರಾಗಿರ್ತಾರೆ. ಯಾರಾರು ಅಕ್ಷರ ಸಂಸ್ಕೃತಿಯಿಂದ ವಂಚಿತರಾಗಿದ್ದಾರೋ ಅವರು ಶಿಕ್ಷಣ ಪಡೆದುಕೊಳ್ಳಬೇಕು. ನಾನು ಅವರೇಜ್ ಸ್ಟುಡೆಂಟ್ ಆಗಿದ್ದೆನು. SSLC ಫಸ್ಟ್ ಕ್ಲಾಸ್, PUC ಸೆಂಕಡ್ ಕ್ಲಾಸ್ ಹಾಗೂ ಪದವಿಯಲ್ಲಿ ಎವರೇಜ್ ಸ್ಟುಡೆಂಟ್‌ ಆಗಿದ್ದೆನು. ಆದ್ರೂ ನಾನು ಇವತ್ತು ಮುಖ್ಯಮಂತ್ರಿ ಆಗಿದ್ದೇನೆ ಎಂದರು.

You May Also Like

More From Author

+ There are no comments

Add yours