ಕುಸಿದು ಬಿದ್ದ ಕಾಳಿ ಸೇತುವೆ: ಓರ್ವ ವ್ಯಕ್ತಿಗೆ ಗಾಯ, ಕಾರವಾರ-ಗೋವಾ ಸಂಚಾರ ಸ್ಥಗಿತ

1 min read

ಕಾರವಾರ: ಕಾರವಾರದ ಮೂಲಕ ಸಾಗುವ ರಾಷ್ಟ್ರೀಯ ಹೆದ್ದಾರಿ 66ರಲ್ಲಿ ಕಾಳಿ ನದಿಗೆ ಅಡ್ಡವಾಗಿ ನಿರ್ಮಿಸಲಾಗಿದ್ದ ಸೇತುವೆ ಮಂಗಳವಾರ ತಡರಾತ್ರಿ ಕುಸಿದುಬಿದ್ದಿದ್ದು, ಘಟನೆಯಲ್ಲಿ ಲಾರಿ ಚಾಲಕನೊಬ್ಬ ಗಾಯಗೊಂಡಿದ್ದಾನೆಂದು ತಿಳಿದುಬಂದಿದೆ.

ಕಾರವಾರ ಗೋವಾ ಸಂಪರ್ಕ ಮಾಡುವ ನಗರದ ಕೋಡಿಭಾಗ್ ಬಳಿ ಇರುವ ಈ ಸೇತುವೆ ಮಂಗಳವಾರ ತಡರಾತ್ರಿ ಸುಮಾರು 1 ಗಂಟೆ ವೇಳೆಗೆ ಕುಸಿದು ಬಿದ್ದಿದೆ.

ಫಿಲ್ಲರ್ ಕಂಬಗಳ ನಡುವೆ ಸೇತುವೆ ಮೂರ್ನಾಲ್ಕು ಕಡೆ ತುಂಡಾಗಿ ನದಿಗೆ ಬಿದ್ದಿದ್ದು, ಇದೇ ವೇಳೆ ಗೋವಾದಿಂದ ಕಾರವಾರ ಕಡೆಗೆ ಆಗಮಿಸುತ್ತಿದ್ದ ಟ್ರಕ್ ನದಿಗೆ ಬಿದ್ದಿದೆ. ತಕ್ಷಣ ಮೀನುಗಾರರು ಹಾಗೂ ಪೋಲಿಸರು ಲಾರಿ ಚಾಲಕನನ್ನು ರಕ್ಷಣೆ ಮಾಡಿದ್ದಾರೆ.

ಗಾಯಗೊಂಡಿರುವ ವ್ಯಕ್ತಿಯನ್ನು ಕೇರಳ ಮೂಲದ ರಾಧಾಕೃಷ್ಣ ನಾಳಾ ಸ್ವಾಮಿ (37) ಎಂದು ಗುರ್ತಿಸಲಾಗಿದೆ. ವ್ಯಕ್ತಿಗೆ ಆಸ್ಪತ್ರೆಯಲ್ಲಿ ಚಿಕಿತ್ಸೆ ಮುಂದುವರೆದಿದೆ.

ಇನ್ನು ಘಟನೆ ಸಂಭವಿಸುವ ವೇಳೆ ಬೈಕ್ ಹಾಗೂ ಕಾರು ಕೂಡ ಇದೇ ಸೇತುವೆ ಮೇಲೆ ಸಂಚಾರ ಮಾಡುತ್ತಿತ್ತು ಎನ್ನಲಾಗಿದ್ದು ಅವರು ಮುಂದೆ ಸಾಗಿದ್ದಾರೆ ಎನ್ನಲಾಗುತ್ತಿದೆ. ಸದ್ಯ ಟ್ರಕ್ ನೀರಿನಲ್ಲಿ ಬಿದ್ದಿದ್ದು ಮತ್ತೆ ಯಾವುದಾದರೂ ವಾಹನ ಬಿದ್ದಿರುವ ಬಗ್ಗೆ ಸ್ಥಳೀಯ ಮೀನುಗಾರರ ಜೊತೆ ಪೊಲೀಸರು ದೋಣಿಗಳ ಮೂಲಕ ಹುಡುಕಾಟ ನಡೆಸಿದ್ದಾರೆ.

ಸುದ್ದಿ ತಿಳಿದ ಕೂಡಲೇ ಮಧ್ಯರಾತ್ರಿ ಸ್ಥಳಕ್ಕೆ ಬಂದ ಶಾಸಕ ಸತೀಶ್ ಸೈಲ್ ಘಟನೆ ಕುರಿತು ಅಧಿಕಾರಿಗಳ ಜೊತೆ ಚರ್ಚೆ ನಡೆಸಿದ್ದಾರೆ. ಸ್ಥಳದಲ್ಲಿ ಜಿಲ್ಲಾಧಿಕಾರಿ ಲಕ್ಷ್ಮಿ ಪ್ರಿಯಾ, ಎಸ್ಪಿ ಎಮ್.ನಾರಾಯಣ ಸೇರಿ ಅಧಿಕಾರಿಗಳ ತಂಡ ಬೀಡುಬಿಟ್ಟಿದ್ದು, ಇತರ ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಂಡಿದೆ.

ಈ ನಡುವೆ ಕಾಳಿ ನದಿಗೆ ಕಟ್ಟಲಾಗಿದ್ದ ಹಳೆಯ ಸೇತುವೆ ಕುಸಿದ ಪರಿಣಾಮವಾಗಿ, ಅದರ ಹತ್ತಿರದಲ್ಲೇ ಕಟ್ಟಲಾಗಿರುವ ಹೊಸ ಸೇತುವೆಯ ಗುಣಮಟ್ಟವನ್ನು ಪರಿಶೀಲಿಸುವಂತೆ ಸರ್ಕಾರ ಆದೇಶ ಹೊರಡಿಸಿದೆ. ಈ ಹಿನ್ನೆಲೆಯಲ್ಲಿ ರಾಷ್ಟ್ರೀಯ ಹೆದ್ದಾರಿಯಲ್ಲಿ ಕಾರವಾರದಿಂದ ಗೋವಾ ಕಡೆಗೆ ವಾಹನ ಸಂಚಾರ ಸ್ಥಗಿತಗೊಂಡಿದೆ.

ಸರ್ಕಾರದಿಂದ ಉತ್ತರ ಕನ್ನಡ ಜಿಲ್ಲಾಡಳಿತಕ್ಕೆ ರವಾನೆಯಾಗಿರುವ ಪತ್ರದಲ್ಲಿ, ‘ಕಾರವಾರ ಮತ್ತು ಸದಾಶಿವಗಡವನ್ನು ಸಂಪರ್ಕಿಸುವ ಕಾಳಿ ನದಿಯ ಹಳೆಯ ಸೇತುವೆಯು 07.08.2024 ರಂದು 1:30 AM ಕ್ಕೆ ಕುಸಿದಿದೆ. ಯಾವುದೇ ಹೆಚ್ಚಿನ ಘಟನೆಗಳನ್ನು ತಡೆಯಲು ಕಾಳಿ ನದಿಯ ಹೊಸ ಸೇತುವೆಯ ಸ್ಥಿರತೆಯನ್ನು ಪರಿಶೀಲಿಸುವ ಮತ್ತು ಖಚಿತಪಡಿಸಿಕೊಳ್ಳುವ ತುರ್ತು ಅಗತ್ಯವಿದೆ ಎಂದು ತಿಳಿಸಲಾಗಿದೆ.

ಕಾರವಾರ ಮತ್ತು ಸದಾಶಿವಗಡವನ್ನು ಸಂಪರ್ಕಿಸುವ ಕಾಳಿ ನದಿಯ ಹೊಸ ಸೇತುವೆಯ ಸ್ಥಿರತೆಯನ್ನು ಪರಿಶೀಲಿಸಲು ಮತ್ತು ವರದಿ ಮಾಡಲು ಪ್ರಯತ್ನಗಳನ್ನು ಸಂಘಟಿಸಲು ಮತ್ತು ಮುನ್ನಡೆಸಲು. ಸ್ಥಿರತೆಯ ವರದಿಯನ್ನು 07.08.2024 ಮಧ್ಯಾಹ್ನ 12:00 ಗಂಟೆಯೊಳಗೆ ಸಲ್ಲಿಸಬೇಕು. ಈ ಆದೇಶದ ಅನುಸರಣೆಯನ್ನು ಯೋಜನಾ ನಿರ್ದೇಶಕರು, ಎನ್‌ಎಚ್‌ಎಎಲ್ ಹೊನ್ನಾವರ ಅವರು ಖಚಿತಪಡಿಸಿಕೊಳ್ಳಬೇಕು ಎಂದು ಉಲ್ಲೇಖಿಸಲಾಗಿದೆ.

ಕಾರವಾರ ವೈದ್ಯಕೀಯ ವಿಜ್ಞಾನಗಳ ಸಂಸ್ಥೆಯ ಡೀನ್ ಗಜಾನನ ನಾಯ್ಕ ಮಾತನಾಡಿ, ಚಾಲಕನಿಗೆ ಸಣ್ಣಪುಟ್ಟ ಗಾಯಗಳಾಗಿದ್ದು, ಗಂಭೀರ ಗಾಯಗಳಾಗಿಲ್ಲ. ಇದೀಗ ಚೇತರಿಸಿಕೊಳ್ಳುತ್ತಿದ್ದಾನೆಂದು ಹೇಳಿದ್ದಾರೆ.

1983ರಲ್ಲಿ ಈ ನದಿಯ ಮೇಲೆ ನಿರ್ಮಿಸಲಾಗಿದ್ದ ಈ ಸೇತುವೆಯು ಕರ್ನಾಟಕ ಹಾಗೂ ಗೋವಾ ರಾಜ್ಯಗಳನ್ನು ಸಂಪರ್ಕಿಸುವ ಪ್ರಮುಖ ಸಂಪರ್ಕ ಸೇತುವೆಯಾಗಿದೆ. ರಾಷ್ಟ್ರೀಯ ಹೆದ್ದಾರಿ 66ರಲ್ಲಿ ಕಾರವಾರದಲ್ಲಿ ಒಟ್ಟು 2 ಸೇತುವೆಗಳನ್ನು ಕಟ್ಟಲಾಗಿತ್ತು. ಅವುಗಳಲ್ಲಿ ಈಗ ಕುಸಿದಿರುವುದು ಹಳೆಯ ಸೇತುವೆಯಾಗಿದೆ.

You May Also Like

More From Author

+ There are no comments

Add yours