ಕೋಲ್ಕತಾ: ತರಬೇತಿನಿರತ ವೈದ್ಯೆಯ ಅತ್ಯಾಚಾರ ಹಾಗೂ ಕೊಲೆ ಪ್ರಕರಣದಿಂದ ರಾಷ್ಟ್ರವ್ಯಾಪಿ ಚರ್ಚೆಗೆ ಗುರಿಯಾಗಿರುವ ಕೋಲ್ಕತಾದ ಆರ್ಜಿ ಕರ್ ವೈದ್ಯ ಕಾಲೇಜಿನ ಮುಖ್ಯಸ್ಥ ಹುದ್ದೆಗೆ ಘಟನೆ ಬಳಿಕ ರಾಜೀನಾಮೆ ನೀಡಿದ ಡಾ। ಸಂದೀಪ್ ಘೋಷ್ ಅವರು ಅನಾಥ ಶವಗಳನ್ನು ಮಾರಿಕೊಳ್ಳುತ್ತಿದ್ದರು. ಆಸ್ಪತ್ರೆಯ ಬಯೋಮೆಡಿಕಲ್ ತ್ಯಾಜ್ಯ ಹಾಗೂ ಔಷಧಗಳನ್ನು ಬಾಂಗ್ಲಾದೇಶಕ್ಕೆ ಅಕ್ರಮವಾಗಿ ಕಳ್ಳ ಸಾಗಣೆ ಮಾಡುತ್ತಿದ್ದರು. ತಮಗೆ ಬೇಕಾದವರಿಂದ ಕಮಿಷನ್ ಪಡೆದು ಆಸ್ಪತ್ರೆಯ ಟೆಂಡರ್ಗಳನ್ನು ನೀಡುತ್ತಿದ್ದರು. ವೈದ್ಯ ವಿದ್ಯಾರ್ಥಿಗಳಿಂದ ಹಣ ಪೀಕಲು ವಿದ್ಯಾರ್ಥಿಗಳನ್ನು ಬೇಕಂತಲೇ ಫೇಲ್ ಮಾಡುತ್ತಿದ್ದರು…
ಆರ್ಜಿ ಕರ್ ಆಸ್ಪತ್ರೆಯಲ್ಲಿ ಉಪ ಅಧೀಕ್ಷಕರಾಗಿ ಕೆಲಸ ಮಾಡುತ್ತಾ, ಸಂದೀಪ್ ಘೋಷ್ ಅವರ ಹಗರಣಗಳನ್ನು ಬೊಟ್ಟು ಮಾಡಿದ ಕಾರಣಕ್ಕೆ ಎತ್ತಂಗಡಿ ಶಿಕ್ಷೆಗೆ ಗುರಿಯಾಗಿದ್ದ ಡಾ। ಅಖ್ತರ್ ಅಲಿ ಅವರು ಈ ಗಂಭೀರ ಆರೋಪಗಳನ್ನು ಟೀವಿ ವಾಹಿನಿಯೊಂದರ ಮುಂದೆ ಮಾಡಿದ್ದಾರೆ. ಅಲ್ಲದೆ, ವೈದ್ಯೆಯ ಅತ್ಯಾಚಾರ ಹಾಗೂ ಕೊಲೆ ಪ್ರಕರಣದಲ್ಲಿ ಬಂಧನಕ್ಕೆ ಒಳಗಾಗಿರುವ ಆರೋಪಿ ಸಂಜಯ್ ರಾಯ್ ಆಸ್ಪತ್ರೆಯ ಮುಖ್ಯಸ್ಥರಾಗಿದ್ದ ಸಂದೀಪ್ ಘೋಷ್ ಅವರ ಭದ್ರತಾ ಸಿಬ್ಬಂದಿಗಳ ಪೈಕಿ ಒಬ್ಬನಾಗಿದ್ದ ಎಂದೂ ಹೇಳಿದ್ದಾರೆ.
ಡಾ। ಘೋಷ್ ಅವರ ಅಕ್ರಮ ಚಟುವಟಿಕೆಗಳ ಬಗ್ಗೆ ರಾಜ್ಯ ವಿಚಕ್ಷಣಾ ಆಯೋಗಕ್ಕೆ ದೂರು ನೀಡಿದ್ದೆ. ಆ ಕುರಿತು ತನಿಖೆ ನಡೆಸಲು ರಚನೆಯಾದ ವಿಚಾರಣಾ ಆಯೋಗದ ಸದಸ್ಯನಾಗಿದ್ದೆ. ಡಾ। ಘೋಷ್ ತಪ್ಪಿತಸ್ಥ ಎಂಬುದು ಪತ್ತೆಯಾದರೂ ಅವರ ವಿರುದ್ಧ ಯಾವುದೇ ಕ್ರಮವಾಗಲಿಲ್ಲ. ವಿಚಾರಣಾ ವರದಿಯನ್ನು ರಾಜ್ಯ ಆರೋಗ್ಯ ಇಲಾಖೆಗೆ ಸಲ್ಲಿಸಿದ ದಿನವೇ ನನ್ನನ್ನು ಆರ್ಜಿ ಕರ್ ಆಸ್ಪತ್ರೆಯಿಂದ ವರ್ಗ ಮಾಡಲಾಯಿತು ಎಂದಿದ್ದಾರೆ.
ವೈದ್ಯೆಯ ಕೊಲೆ ನಡೆದಿದ್ದರೂ ಅದನ್ನು ಆತ್ಮಹತ್ಯೆ ಎಂದು ಬಿಂಬಿಸಲು ಡಾ। ಘೋಷ್ ಯತ್ನಿಸಿದ್ದರು ಎಂದು ಸುಪ್ರೀಂಕೋರ್ಟ್ ಮಂಗಳವಾರ ತರಾಟೆಗೆ ತೆಗೆದುಕೊಂಡಿತ್ತು.
+ There are no comments
Add yours