14 ಸೈಟ್ ವಾಪಸ್ ಮಾಡಿ, ಸಿಎಂ ಸಿದ್ದರಾಮಯ್ಯ ಸೇಫ್ ಆದ್ರಾ : ಕಾನೂನು ಲೆಕ್ಕಾಚಾರ ಏನನ್ನುತ್ತೆ?

0 min read

ಹೈಲೈಟ್ಸ್‌:

  • ಹರ್ಯಾಣ ವಿಧಾನಸಭಾ ಚುನಾವಣೆಯ ಪ್ರಚಾರದಲ್ಲೂ ಮುಡಾ ಸದ್ದು
  • 14 ಸೈಟ್ ವಾಪಸ್ ನೀಡುವಂತೆ ಹಿರಿಯ ಕಾಂಗ್ರೆಸ್ ನಾಯಕ ಕಬಿಲ್ ಸಿಬಲ್ ಸಲಹೆ?
  • ಸೈಟ್ ವಾಪಸ್ ನೀಡಿದ್ರೂ ಕಾನೂನು ಕುಣಿಕೆಯಿಂದ ಹೊರಬರಲು ಸಿಎಂಗೆ ಸಾಧ್ಯವಿಲ್ಲ

ಬೆಂಗಳೂರು / ಮೈಸೂರು : ದೂರದ ಹರ್ಯಾಣ ವಿಧಾನಸಭಾ ಚುನಾವಣೆಯ ಪ್ರಚಾರದಲ್ಲೂ ಮುಡಾ, ಸಿಎಂ ಸಿದ್ದರಾಮಯ್ಯ ಸದ್ದು ಮಾಡುತ್ತಿದ್ದಾರೆ. ಕರ್ನಾಟಕದ ಮುಡಾ ಮತ್ತು ವಾಲ್ಮೀಕಿ ನಿಗಮದ ಹಗರಣವನ್ನು ಪ್ರಧಾನಿ ಮೋದಿ ಆದಿಯಾಗಿ, ಬಿಜೆಪಿ ಚುನಾವಣಾ ಅಸ್ತ್ರವನ್ನಾಗಿಸಿ ಕೊಂಡಿದ್ದಾರೆ.

ಮುಡಾ ನಿವೇಶನ ಹಂಚಿಕೆ ವಿಷಯಕ್ಕೆ ಸಂಬಂಧಿಸಿದಂತೆ ಗಟ್ಟಿ ಧ್ವನಿಯಲ್ಲಿ ಮಾತನಾಡುತ್ತಿದ್ದ ಮುಖ್ಯಮಂತ್ರಿಗಳ ಧ್ವನಿ ಎಲ್ಲೋ ಸಣ್ಣದಾಗಿ ಕ್ಷೀಣಿಸಲು ಆರಂಭವಾಗಿದೆಯೋ ಎನ್ನುವ ರೀತಿಯಲ್ಲಿದೆ ಸಿಎಂ ಬಾಡಿ ಲಾಂಗ್ವೇಜ್. ಇಡಿ ಆಖಾಡಕ್ಕೆ ಇಳಿದ ನಂತರ, ಮುಡಾ ಇನ್ನಷ್ಟು ಸದ್ದು ಮಾಡಲು ಆರಂಭಿಸಿದೆ.

ಜಾರಿ ನಿರ್ದೇಶನಾಲಯವು ಇಸಿಐಆರ್ ದಾಖಲಿಸಿದ ನಂತರ, ಕಾಂಗ್ರೆಸ್ಸಿನ ದೆಹಲಿ ಹಿರಿಯ ನಾಯಕರೊಬ್ಬರ ಸಲಹೆಯ ಮೇರೆಗೆ ಸೈಟ್ ವಾಪಸ್ ಕೊಡುವ ನಿರ್ಧಾರಕ್ಕೆ ಸಿಎಂ ಪತ್ನಿ ಪಾರ್ವತಿ ಬಂದಿದ್ದಾರೆ ಎಂದು ಹೇಳಲಾಗುತ್ತಿದೆ. ಆ ಮೂಲಕ, ಆಗಿರುವ ತಪ್ಪನ್ನು ಮುಖ್ಯಮಂತ್ರಿ ಒಪ್ಪಿಕೊಂಡರೆ ಎನ್ನುವುದು ಚರ್ಚೆಯ ವಿಷಯವಾಗಿದೆ.

ಮುಖ್ಯಮಂತ್ರಿಯವರ ಪತ್ನಿ ಪಾರ್ವತಿ, 14 ನಿವೇಶನಗಳನ್ನು ಮುಡಾಗೆ ಹಿಂದಿರುಗಿಸಿದ್ದಾರೆ. ಅದಕ್ಕೆ ಸಂಬಂಧ ಪಟ್ಟ ದಾಖಲೆ ವರ್ಗಾವಣೆ ಪ್ರಕ್ರಿಯೆ ಶರವೇಗದಲ್ಲಿ ಮುಡಾ ಅಧಿಕಾರಿಗಳು ಮುಗಿಸಿದ್ದಾರೆ. ನಿವೇಶನ ವಾಪಸ್ ಕೊಟ್ಟಿದ್ದು ಮತ್ತು ಅದರ ಕ್ರಯಪತ್ರ ಬದಲಾಗಿರುವುದರಿಂದ ಸಿಎಂ ಸೇಫ್ ಆಗ್ತಾರಾ ಎನ್ನುವ ವಿಚಾರದಲ್ಲಿ ಕಾನೂನು ಪಂಡಿತರು ತಮ್ಮ ವಾದವನ್ನು ಮುಂದಿಟ್ಟಿದ್ದಾರೆ.

2022ರಲ್ಲಿ ಲೋಕಾಯುಕ್ತ ಸಂಸ್ಥೆಯ 18 ಅಧಿಕಾರಿಗಳ ವಿರುದ್ದ 360 ಕೋಟಿ ರೂಪಾಯಿಗಳನ್ನು ಅನ್ಯ ಯೋಜನೆಗೆ ದುರುಪಯೋಗ ಮಾಡಿದ ಆರೋಪದ ಮೇಲೆ ಪ್ರಕರಣ ದಾಖಲಾಗಿತ್ತು. ಈ ವಿಚಾರಕ್ಕೆ ಸಂಬಂಧಿಸಿದಂತೆ, ಇಡಿ ಅಧಿಕಾರಿಗಳು ಮಾಹಿತಿ/ದಾಖಲೆ ಕಲೆಹಾಕುತ್ತಿದ್ದಾರೆ ಎಂದು ಹೇಳಲಾಗುತ್ತಿದೆ. ಹಾಗಾಗಿ, ಮುಡಾ ಅಧಿಕಾರಿಗಳಿಗೆ ಢವಢವ ಆರಂಭವಾಗಿದೆ.

ಇನ್ನು, ಮುಖ್ಯಮಂತ್ರಿಗಳ ಪತ್ನಿ ನಿವೇಶನವನ್ನು ವಾಪಸ್ ನೀಡಿದರೂ ಕೂಡಾ, ಲೋಕಾಯುಕ್ತ ಪೊಲೀಸರ ಮತ್ತು ಇಡಿ ವಿಚಾರಣೆಯಲ್ಲಿ ಯಾವುದೇ ಬದಲಾವಣೆ ಆಗುವುದಿಲ್ಲ. ಬದಲಿಗೆ, ಇನ್ನಷ್ಟು ವೇಗವನ್ನು ಪಡೆದುಕೊಳ್ಳಬಹುದು ಎಂದು ಹೇಳಲಾಗುತ್ತಿದೆ.
ಜೊತೆಗೆ, ಮುಖ್ಯಮಂತ್ರಿಗಳಾಗಲಿ ಮತ್ತು ಅವರ ಪತ್ನಿ, ಭಾವಮೈದುನ ತನಿಖೆಯಿಂದ ತಪ್ಪಿಸಿಕೊಳ್ಳಲು ಆಗುವುದಿಲ್ಲ. ಯಾಕೆಂದರೆ, ಭ್ರಷ್ಟಾಚಾರ ತಡೆ ಕಾಯಿದೆ ಅಡಿಯಲ್ಲಿ ಈಗಾಗಲೇ ಕೇಸ್ ದಾಖಲಾಗಿದೆ. ಹಾಗಾಗಿ, ಸೈಟ್ ಹಿಂದಿರುಗುಸಿರುವುದರಿಂದ, ಯಾವುದೇ ನೇರ ಪ್ರಯೋಜನ ಮುಖ್ಯಮಂತ್ರಿಗಳಿಗೆ ಆಗುವುದಿಲ್ಲ.ಸೈಟ್ ಹಿಂದಿರುಗಿಸುವುದು ರಾಜೀ ಮಾಡಿಕೊಳ್ಳುವ ಅಪರಾಧವಲ್ಲ. ಹಾಗಾಗಿ, ತನಿಖೆಯ ಮೇಲೆ ಯಾವುದೇ ಪ್ರಭಾವ ಬೀರುವುದಿಲ್ಲ. ಕರ್ನಾಟಕ ಹೈಕೋರ್ಟ್ ನಲ್ಲಿ ಈಗಾಗಲೇ ಆದೇಶ ಪ್ರಕಟವಾಗಿದೆ. ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯದ ಆದೇಶದ ಪ್ರಕಾರ ಎಫ್ಐಆರ್ ದಾಖಲಾಗಿದೆ.

ರಾಜ್ಯದ ಕೆಲವು ಹಿರಿಯ ಅಧಿಕಾರಿಗಳು ಮತ್ತು ಕಾನೂನು ಪಂಡಿತರ ಪ್ರಕಾರ, ನಿವೇಶನ ಹಿಂದಕ್ಕೆ ನೀಡಿದ್ದರಿಂದ ಮುಖ್ಯಮಂತ್ರಿಗಳಿಗೆ ಯಾವುದೇ ಅನುಕೂಲವಾಗುವುದಿಲ್ಲ ಎಂದು ಹೇಳಲಾಗುತ್ತಿದೆ. ಒಟ್ಟಿನಲ್ಲಿ, ಸಿಎಂ ಸೈಟ್ ವಾಪಸ್ ನೀಡಿದ್ದು ಸರಿಯೋ/ತಪ್ಪೋ ಎನ್ನುವುದು ಮುಂದಿನ ವಿಚಾರಣೆಯ ನಂತರ ಗೊತ್ತಾಗಲಿದೆ.

You May Also Like

More From Author

+ There are no comments

Add yours