ಕಲಬುರಗಿ (ನ.02): ಹುಟ್ಟುತ್ತಾ ಹುಟ್ಟುತ್ತಾ ಅಣ್ಣ ತಮ್ಮಂದಿರು ಬೆಳೆಯುತ್ತಾ ಬೆಳೆಯುತ್ತಾ ದಾಯಾದಿಗಳು ಎನ್ನುವ ಮಾತಿದೆ. ಈ ಮಾತಿಗೆ ಅಪವಾದ ಎನ್ನುವಂತೆ ಶಿಕ್ಷಕ ವೃತ್ತಿಯ ಸಹೋದರರಿಬ್ಬರು ಸಾವಿನಲ್ಲಿ ಒಂದಾದ ಘಟನೆ ಬಿಸಿಲೂರು ಕಲ್ಬುರ್ಗಿ ಜಿಲ್ಲೆಯಲ್ಲಿ ನಡೆದಿದೆ. ಕಲಬುರ್ಗಿ ಜಿಲ್ಲೆಯ ಅಫಜಲಪುರ ಪಟ್ಟಣದ ರಾಜು ಭಾಸಗಿ ಮತ್ತು ರಮೇಶ್ ಬಾಸಗಿ ಎನ್ನುವವರೇ ಒಂದೇ ದಿನ ಸಾವಿಗಿಡಾಗಿ ಕುಟುಂಬಕ್ಕೆ ಆಘಾತ ಮೂಡಿಸಿರುವ ಅಪರೂಪದ ಸಹೋದರರು.
ಮಾದರಿ ಸಹೋದರರು: ಅಫಜಲಪುರ ಪಟ್ಟಣದ ಈ ಸಹೋದರರು ಬಾಲ್ಯದಿಂದಲೂ ಒಂದೇ ರೀತಿ ಬೆಳೆದವರು. ಇಬ್ಬರೂ ಓದಿನಲ್ಲಿ ಮುಂದೆ. ಅಷ್ಟೇ ಅಲ್ಲ ಮುಂದೆ ಇಬ್ಬರೂ ಸರಕಾರಿ ನೌಕರಿ ಪಡೆದುಕೊಂಡರು. ಇಬ್ಬರೂ ಶಿಕ್ಷಕರಾಗಿ ಸೇವೆ ಸಲ್ಲಿಸುತ್ತಿದ್ದವರು.
ಅಣ್ಣನಿಗೆ ಕಾಡಿತ್ತು ಅನಾರೋಗ್ಯ: ಸಹೋದರರಾದ ರಾಜು ಭಾಸಗಿ ಮತ್ತು ರಮೇಶ್ ಭಾಸಗಿ ಇಬ್ಬರೂ ಸಹೋದರರಾದರೂ ಸ್ನೇಹಿತರಂತೆ ಜೀವಿಸುತ್ತಿದ್ದವರು. ಮೇಲಾಗಿ ಇಬ್ಬರೂ ಸರ್ಕಾರಿ ನೌಕರರು. ಅಲ್ಲದೇ ಇಬ್ಬರೂ ಸಹ ಅಫಜಲಪುರ ತಾಲೂಕಿನ ಬೇರೆ ಬೇರೆ ಸರ್ಕಾರಿ ಶಾಲೆಯಲ್ಲಿ ಶಿಕ್ಷಕರಾಗಿ ಸೇವೆ ಸಲ್ಲಿಸುತ್ತಿದ್ದರು. ಹಿರಿಯ ಸಹೋದರ ರಮೇಶ್ ಭಾಸಗಿ ಕಳೆದ ಕೆಲ ದಿನಗಳಿಂದ ಅನಾರೋಗ್ಯಕ್ಕೆ ಈಡಗಿದ್ದ. ನಿರಂತರ ಚಿಕಿತ್ಸೆ ಸಹ ಪಡೆಯುತ್ತಿದ್ದ. ಅಣ್ಣನ ಚಿಕಿತ್ಸೆಗೆ ಬೆನ್ನೆಲುಬಾಗಿ ನಿಂತು ಸೇವೆ ಮಾಡುತ್ತಿದ್ದ ಕಿರಿಯ ಸಹೋದರ ರಮೇಶ್ ಭಾಸಗಿ. ಇದರಿಂದಾಗಿ ಈ ಸಹೋದರರ ನಡುವೆ ಅಟ್ಯಾಚ್ಮೆಂಟ್ ಮತ್ತಷ್ಟು ಗಟ್ಟಿಯಾಗಿತ್ತು.
ದಿಢೀರನೆ ತಮ್ಮ ಸಾವು: ಮೊನ್ನೆ ಮನ್ನೆಯವರೆಗೂ ಆರೋಗ್ಯವಾಗಿಯೇ ಇದ್ದು ಅಣ್ಣನ ಚಿಕಿತ್ಸೆಯ ಉಸ್ತುವಾರಿ ನೋಡಿಕೊಳ್ಳುತ್ತಿದ್ದ ಕಿರಿಯ ಸಹೋದರ ರಾಜು ಭಾಸಗಿಗೆ ವಾರದ ಹಿಂದಷ್ಟೇ ಆರೋಗ್ಯ ಸರಿಯಿರಲಿಲ್ಲ. ಚಿಕಿತ್ಸೆಗಾಗಿ ಹೈದ್ರಾಬಾದನ ಖಾಸಗಿ ಆಸ್ಪತ್ರೆಗೆ ತೆರಳಿದ್ದ. ಆದರೆ ವಿಧಿ ಆಟ ನೋಡಿ, ಚಿಕಿತ್ಸೆ ಫಲಕಾರಿಯಾಗದೇ ಅಕಾಲಿಕವಾಗಿ ಸಾವಿಗೀಡಾದ ಕಿರಿಯ ಸಹೋದರ ರಾಜು ಭಾಸಗಿ.
ತಮ್ಮ ಸಾವಿನ ಸುದ್ದಿ ಕೇಳಿ ಅಣ್ಣನಿಗೆ ಹೃದಯಾಘಾತ: ಕಿರಿಯ ಸಹೋದರ ರಾಜುವಿನ ಅನಾರೋಗ್ಯದ ಬಗ್ಗೆ ಅಣ್ಣ ರಮೇಶ ಭಾಸಗಿಗೆ ಮಾಹಿತಿಯೇ ಇರಲಿಲ್ಲ. ಆದರೆ ಏಕಾಏಕಿ ಕಿರಿಯ ಸಹೋದರ ರಾಜು ಇನ್ನಿಲ್ಲ ಎನ್ನುವ ಸುದ್ದಿ ಅಣ್ಣ ರಮೇಶ ಭಾಸಗಿಗೆ ಅರಗಿಸಿಕೊಳ್ಳಲಾಗಲಿಲ್ಲ. ತಾನು ಚಿಕಿತ್ಸೆ ಪಡೆಯುತ್ತಿದ್ದರೂ ತಮ್ಮನನ್ನು ಕಾಣಲು ಹಪಹಪಿಸುತ್ತಿದ್ದ. ಆದರೆ ವಿಧಿ ಆಟ ಬೇರೆಯದೇ ಆಗಿತ್ತು. ಅದೇ ದಿನ ರಾತ್ರಿ ಹೃದಯಾಘಾತದಿಂದ ಅಣ್ಣ ರಮೇಶ ಭಾಸಗಿ ಸಹ ಸಾವಿಗೀಡಾಗುವ ಮೂಲಕ ಸಾವಿನಲ್ಲಿ ತಮ್ಮನೊಂದಿಗೆ ಒಂದಾದ ಅಣ್ಣ ರಮೇಶ ಭಾಸಗಿ.
ಊರ ಜನರೆಲ್ಲಾ ಕಂಬನಿ: ಈ ಶಿಕ್ಷಕ ಸಹೋದರರಿಬ್ಬರ ಅಕಾಲಿಕ ಸಾವು, ಅಫಜಲಪುರದ ಭಾಸಗಿ ಕುಟುಂಬಕ್ಕೆ ತೀವ್ರ ಅಘಾತ ನೀಡಿದೆ. ಶಾಲಾ ಮಕ್ಕಳು ಸೇರಿದಂತೆ ಶಿಕ್ಷಣ ಇಲಾಖೆಯ ಬಂಧು ಮಿತ್ರರು ಮಾತ್ರವಲ್ಲದೇ ಇಡೀ ಊರಿಗೆ ಊರೇ ಈ ಸಹೋದರರಿಬ್ಬರ ಅಕಾಲಿಕ ಸಾವಿಗೆ ಕಂಬನಿ ಮಿಡಿದಿದೆ. ಹುಟ್ಟುತ್ತಾ ಹುಟ್ಟುತ್ತಾ ಅಣ್ಣ ತಮ್ಮಂದಿರು ಬೆಳೆಯುತ್ತಾ ಬೆಳೆಯುತ್ತಾ ದಾಯಾದಿಗಳು ಹೇಳುವ ಮಾತಿದೆ. ಜೀವಿತಾವಧಿಯಲ್ಲಿ ಮಾತ್ರವಲ್ಲದೆ ಸಾವಿನಲ್ಲೂ ಈ ಗಾದೆ ಮಾತನ್ನು ಸುಳ್ಳಾಗಿಸಿದ್ದಾರೆ ಈ ಅಪರೂಪದ ಸಹೋದರರು ಎಂದು ಅಫಜಲಪುರದ ಜನ ಮೃತರ ಬಗ್ಗೆ ಕಂಬನಿ ಮಿಡಿಯುತ್ತಿದ್ದಾರೆ.
+ There are no comments
Add yours