ಅಯೋಧ್ಯೆ ರಾಮಮಂದಿರ ಉದ್ಘಾಟನೆಗೆ 10 ಕೋಟಿ ಹಿಂದೂ ಕುಟುಂಬಕ್ಕೆ ಆಹ್ವಾನ: ವಿಹೆಚ್‌ಪಿ

1 min read

ನವದೆಹಲಿ: ಅಯೋಧ್ಯೆಯಲ್ಲಿ ನಿರ್ಮಾಣವಾಗುತ್ತಿರುವ ಭವ್ಯ ಶ್ರೀರಾಮ ಮಂದಿರದ ಪ್ರಾಣಪ್ರತಿಷ್ಠಾಪನೆಯಲ್ಲಿ ಪಾಲ್ಗೊಳ್ಳಲು ವಿಶ್ವಾದ್ಯಂತ 10 ಕೋಟಿ ಹಿಂದೂ ಕುಟುಂಬಗಳಿಗೆ ಆಹ್ವಾನ ನೀಡಲಾಗುತ್ತದೆ ಎಂದು ವಿಶ್ವ ಹಿಂದು ಪರಿಷದ್‌ ಹೇಳಿದೆ.

ಈ ಕುರಿತು ಮಾತನಾಡಿದ ಪರಿಷದ್‌ನ ಕಾರ್ಯನಿರ್ವಹಕ ಅಧ್ಯಕ್ಷ ಅಲೋಕ್‌ ಕುಮಾರ್‌,‘ಪ್ರಾಣ ಪ್ರತಿಷ್ಠಾಪನೆಯಲ್ಲಿ ಭಾಗಿಯಾಗಲು 10 ಕೋಟಿ ಕುಟುಂಬಗಳಿಗೆ ವಿಶ್ವ ಹಿಂದು ಪರಿಷದ್‌ನ ಕಾರ್ಯಕರ್ತರು ಮನೆಗೆ ತೆರಳಿ ಆಹ್ವಾನ ನೀಡಲಿದ್ದಾರೆ. ಆಹ್ವಾನ ಪತ್ರಿಕೆಯೊಂದಿಗೆ ರಾಮನ ಚಿತ್ರವನ್ನು ನೀಡಲಾಗುತ್ತದೆ. ಈ ವೇಳೆ ಯಾವುದೇ ರೀತಿಯ ಕಾಣಿಕೆ ಸಂಗ್ರಹ ಮಾಡುವುದಿಲ್ಲ. ವಿಶೇಷವಾಗಿ ರಾಮಜನ್ಮಭೂಮಿ ಹೋರಾಟದಲ್ಲಿ ಮಡಿದವರ ಕುಟುಂಬಗಳಿಗೆ ವಿಶೇಷ ಆಹ್ವಾನ ನೀಡಲಾಗುತ್ತದೆ. ಅವರಿಗೆ ಜ.27ರಿಂದ ಫೆ.22ರವರೆಗೆ ಗುಂಪುಗಳಾಗಿ ಮಾಡಿ ಸ್ವಾಮಿ ದರ್ಶನ ಮಾಡಿಸಲಾಗುತ್ತದೆ ಎಂದು ಮಾಹಿತಿ ನೀಡಿದರು.

ಪ್ರಾಣ ಪ್ರತಿಷ್ಠಾಪನೆಯ ಸುಸಂದರ್ಭದಲ್ಲಿ ದೇಶದ ಎಲ್ಲರೂ ಬರಲಾಗದ ಕಾರಣ ಜನರು ತಮ್ಮ ಸಮೀಪದ ದೇಗುಲಗಳಲ್ಲಿ ಪೂಜೆ ಸಲ್ಲಿಸಿ ನೇರ ಪ್ರಸಾರ ಕಾರ್ಯಕ್ರಮವನ್ನು ವೀಕ್ಷಿಸಿ ತಮ್ಮ ಮನೆಗಳಲ್ಲಿ ಕನಿಷ್ಠ 5 ದೀಪಗಳನ್ನು ಬೆಳಗಿಸಿ. ನಂತರದ ದಿನದಲ್ಲಿ ರಾಮ ಮಂದಿರಕ್ಕೆ ಭೇಟಿ ನೀಡಬೇಕೆಂದು ಅವರು ಮನವಿ ಮಾಡಿದರು.

ಅಯೋಧ್ಯೆ ರಾಮಮಂದಿರದ 3 ಮಹಡಿಯ ಎಲ್ಲಾ 18 ಬಾಗಿಲಿಗೆ ಸ್ವರ್ಣ ಲೇಪನ

ಅಯೋಧ್ಯೆಯ ನೂತನ ರಾಮಮಂದಿರದಲ್ಲಿ ಪ್ರತಿಷ್ಠಾಪನೆ ಮಾಡಲಾಗುವ ರಾಮಲಲ್ಲಾನನ್ನು ಸ್ವರ್ಣಖಚಿತ ಸಿಂಹಾಸನದ ಮೇಲೆ ಪ್ರತಿಷ್ಠಾಪನೆ ಮಾಡಲಾಗುವುದು ಎಂಬ ಸುದ್ದಿಯ ಬೆನ್ನಲ್ಲೇ, ದೇಗುಲದ 3 ಮಹಡಿಯಲ್ಲಿ ಇರುವ ಎಲ್ಲ 18 ಬಾಗಿಲುಗಳಿಗೂ ಕೂಡಾ ಸ್ವರ್ಣ ಲೇಪನ ಮಾಡಲಾಗುತ್ತಿದೆ ಎಂಬ ವಿಷಯ ತಿಳಿದು ಬಂದಿದೆ. ದೆಹಲಿ (delhi) ಮೂಲಕದ ಕುಶಲಕರ್ಮಿಗಳು ಮಹಾರಾಷ್ಟ್ರದ (Maharashtra) ಸಾಗುವಾನಿ ಮರದಿಂದ ತಯಾರಿಸಿರುವ ಬಾಗಿಲುಗಳ ಮೇಲೆ ಆನೆ, ಕಮಲ ಹಾಗೂ ಇತರ ವಿನ್ಯಾಸಗಳನ್ನು ಮಾಡಿದ್ದಾರೆ. ಅವುಗಳಿಗೆ ಮೊದಲು ಕಾಪರ್ ಹೊದಿಕೆ ನೀಡಿ ನಂತರ ಸ್ವರ್ಣ ಲೇಪನ ಮಾಡುವ ಮೂಲಕ ಬಾಳಿಕೆ ಹೆಚ್ಚುವಂತೆ ಮಾಡುವ ಜೊತೆಗೆ ಅದರ ವೈಭೋಗವನ್ನೂ ಇಮ್ಮಡಿಗೊಳಿಸುವಂತೆ ವಿನ್ಯಾಸಗೊಳಿಸಲಾಗಿದೆ. ಅದರ ಮೇಲೆ ಸ್ವರ್ಣಲೇಪನ ಮಾಡಲಾಗುತ್ತಿದ್ದು, ಈ ಕಾಮಗಾರಿ ಅಂತಿಮ ಹಂತದಲ್ಲಿದೆ. ಈ ಪೈಕಿ ಅತಿದೊಡ್ಡ ಬಾಗಿಲು ಮಂದಿರದ ಗರ್ಭಗುಡಿಯಲ್ಲಿ ಇರಲಿದೆ.

 

ಅಯೋಧ್ಯೇಲಿ ಭೂಮಿಗಾಗಿ ರಾಜ್ಯಗಳ ದೌಡು: ವಿದೇಶಗಳಿಂದಲೂ ಆಸಕ್ತಿ

ಇಲ್ಲಿ ನಿರ್ಮಾಣವಾಗುತ್ತಿರುವ ಭವ್ಯ ಶ್ರೀರಾಮ ಮಂದಿರ ಉದ್ಘಾಟನೆಗೆ ಸಜ್ಜಾಗಿರುವ ಬೆನ್ನಲ್ಲೇ, ಅಯೋಧ್ಯೆಗೆ ತೆರಳುವ ತಮ್ಮ ರಾಜ್ಯಗಳ ಭಕ್ತರಿಗೆ ವಸತಿ ಸೌಕರ್ಯಕ್ಕಾಗಿ ಕಟ್ಟಡ ನಿರ್ಮಿಸಲು ವಿವಿಧ ರಾಜ್ಯ ಸರ್ಕಾರಗಳು, ವಿವಿಧ ದೇಶಗಳು ಮತ್ತು ನೂರಾರು ಮಠಗಳು ಮುಂದಾಗಿವೆ. ಈ ನಿಟ್ಟಿನಲ್ಲಿ ಉತ್ತರಪ್ರದೇಶ ಸರ್ಕಾರ ಕೂಡಾ ಸಕಾರಾತ್ಮಕವಾಗಿ ಸ್ಪಂದಿಸಿದ್ದು ಆಸಕ್ತ ರಾಜ್ಯಗಳಿಂದ ನ.10ರಿಂದ ಅರ್ಜಿ ಸ್ವೀಕರಿಸಲು ನಿರ್ಧರಿಸಿದೆ.

ವಸತಿ ಗೃಹಗಳ ನಿರ್ಮಾಣಕ್ಕೆಂದೇ ಅಯೋಧ್ಯೆ ಜಿಲ್ಲಾಡಳಿತವು 1405 ಎಕರೆ ಮೀಸಲಿರಿಸಿದ್ದು, ಅಗತ್ಯ ಬಿದ್ದರೆ ಅದನ್ನು 1800 ಎಕರೆಗೆ ವಿಸ್ತರಿಸುವ ಯೋಜನೆಯನ್ನೂ ಹಾಕಿಕೊಂಡಿದೆ. ರಾಜಧಾನಿ ನವದೆಹಲಿ ಮತ್ತು ಪ್ರಮುಖ ಧಾರ್ಮಿಕ ಕ್ಷೇತ್ರಗಳಲ್ಲಿ ಹೊಂದಿರುವಂತೆ ಅಯೋಧ್ಯೆಯಲ್ಲೂ ತಮ್ಮ ವಸತಿ ಗೃಹ ನಿರ್ಮಾಣಕ್ಕೆ ರಾಜ್ಯ ಸರ್ಕಾರಗಳು, ಮಠಗಳು ನಿರ್ಧರಿಸಿವೆ.

 

ಈಗಾಗಲೇ ಮಹಾರಾಷ್ಟ್ರ, ಮಧ್ಯಪ್ರದೇಶ, ಉತ್ತರಾಖಂಡ, ಅರುಣಾಚಲ ಪ್ರದೇಶ, ಸಿಕ್ಕಿಂ, ಗುಜರಾತ್‌ ಹಾಗೂ ಅಸ್ಸಾಂ ಸರ್ಕಾರಗಳು ರಾಜ್ಯ ಸರ್ಕಾರಕ್ಕೆ ಆಸಕ್ತಿ ತೋರಿದೆ. ಜೊತೆಗೆ ನೇಪಾಳ, ಶ್ರೀಲಂಕಾ ಹಾಗೂ ದಕ್ಷಿಣ ಕೊರಿಯಾ ದೇಶಗಳು ಸಹ ಅಯೋಧ್ಯೆಯಲ್ಲಿ ಭೂಮಿಗಾಗಿ ಮನವಿ ಮಾಡಿದೆ. ಇದರ ಜೊತೆಗೆ ಅಯೋಧ್ಯೆಯಲ್ಲಿ ಸ್ಥಳಾವಕಾಶ ಕೋರಿ 100ಕ್ಕೂ ಹೆಚ್ಚಿನ ಮಠಗಳು ಈಗಾಗಲೇ ಅರ್ಜಿ ಸಲ್ಲಿಸಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

You May Also Like

More From Author

+ There are no comments

Add yours