ಸಿ.ಟಿ. ರವಿ ನಿವಾಸಕ್ಕೆ ವಿಜಯೇಂದ್ರ ಭೇಟಿ – ಮಾತುಕತೆ: ಇದು ಭಿನ್ನಧ್ವನಿಗಳನ್ನು ಒಳಗೊಳ್ಳುವ ಸಂದೇಶವೇ?

0 min read

ಹೈಲೈಟ್ಸ್‌:

  • ನ. 14ರಂದು ಸಿ.ಟಿ. ರವಿ ನಿವಾಸಕ್ಕೆ ವಿಜಯೇಂದ್ರ ಭೇಟಿ.
  • ಬಿ.ವೈ. ವಿಜಯೇಂದ್ರ ಅವರು ಬಿಜೆಪಿ ರಾಜ್ಯಾಧ್ಯಕ್ಷರಾಗಿದ್ದು ಬಿಜೆಪಿಯ ಒಂದು ಬಣಕ್ಕೆ ಸಂತಸವಾಗಿಲ್ಲ.
  • ವಿಜಯೇಂದ್ರ ನೇಮಕವನ್ನು ಒಪ್ಪುತ್ತಲೇ ಅಸಮಾಧಾನದ ಮಾತು.
  • ಸಿಟಿ ರವಿ ನಿವಾಸಕ್ಕೆ ಭೇಟಿ ನೀಡುವ ಮೂಲಕ ಭಿನ್ನಮತೀಯರಿಗೆ ವಿಜಯೇಂದ್ರರಿಗೆ ಸಂದೇಶಕ್ಕೆ ಯತ್ನ.

ಬೆಂಗಳೂರು: ಬಿಜೆಪಿ ರಾಜ್ಯಾಧ್ಯಕ್ಷರಾಗಿ ಮಾಜಿ ಸಿಎಂ ಬಿಎಸ್ ಯಡಿಯೂರಪ್ಪ ಅವರ ಪುತ್ರ ಬಿವೈ ವಿಜಯೇಂದ್ರ ಆಯ್ಕೆಗೊಂಡಿದ್ದಾರೆ. ವಿಜಯೇಂದ್ರ ಆಯ್ಕೆಯ ಬಗ್ಗೆ ಪಕ್ಷದಲ್ಲಿ ಪರ ಹಾಗೂ ವಿರೋಧ ಅಭಿಪ್ರಾಯಗಳು ಇವೆ. ಬಿಎಸ್‌ವೈ ಆಪ್ತ ಬಳಗ ಹೈಕಮಾಂಡ್‌ ನಿರ್ಧಾರದಿಂದ ಖುಷಿಯಲ್ಲಿದ್ದರೆ, ಮತ್ತೊಂದು ಬಣ ಬೇಸರದಲ್ಲಿದೆ.

ಅದರಲ್ಲೂ ಮಾಜಿ ಶಾಸಕ ಸಿ.ಟಿ ರವಿ, ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಸೇರಿದಂತೆ ಬಿಎಲ್‌ ಸಂತೋಷ್‌ ಆಪ್ತವಲಯದಲ್ಲಿ ಗುರುತಿಸಿಕೊಂಡವರಿಗೆ ವಿಜಯೇಂದ್ರ ಆಯ್ಕೆ ಖುಷಿ ನೀಡಿದೆಯಾ? ಎಂಬುವುದು ಸಾಕಷ್ಟು ಕುತೂಹಲಕ್ಕೆ ಕಾರಣವಾಗಿರುವುದಂತೂ ಸತ್ಯ. ಈ ನಡುವೆ ವಿಜಯೇಂದ್ರ ಒಂದು ಹೆಜ್ಜೆ ಮುಂದಿಡುತ್ತಿದ್ದಾರೆ. ಬಿಜೆಪಿ ನಾಯಕ ಸಿ.ಟಿ ರವಿ ಅವರ ಮನೆಗೆ ತೆರಳಿ ಅವರ ಜತೆಗೆ ಮಾತುಕತೆಯನ್ನು ನಡೆಸಿದ್ದಾರೆ. ಇದು ಭಿನ್ನಧ್ವನಿಗಳನ್ನು ಒಳಗೊಳ್ಳುವ ಪ್ರಕ್ರಿಯೆಯೇ? ಎಂಬ ಪ್ರಶ್ನೆ ಸಹಜವಾಗಿ ಉದ್ಭವಿಸುತ್ತಿದೆ.

ವಿಜಯೇಂದ್ರಗೆ ಹೈಕಮಾಂಡ್ ಸೂಚನೆ ಏನು?

ಬಿಜೆಪಿ ರಾಜ್ಯಾಧ್ಯಕ್ಷ ಸ್ಥಾನಕ್ಕೆ ಈ ಹಿಂದೆಯೂ ವಿಜಯೇಂದ್ರ ಹೆಸರು ಕೇಳಿಬಂದಿತ್ತು. ಆದರೆ ಪಕ್ಷದ ಆಂತರಿಕ ವಲಯದಲ್ಲಿ ವಿರೋಧದ ಹಿನ್ನೆಲೆಯಲ್ಲಿ ಅವರ ಹೆಸರು ತೆರೆಯ ಹಿಂದಕ್ಕೆ ಸರಿದಿತ್ತು. ಆದರೂ ದೆಹಲಿ ಮಟ್ಟದಲ್ಲಿ ಬಿಎಸ್‌ವೈ ಸಾಕಷ್ಟು ಲಾಬಿ ನಡೆಸಿದ್ದರು. ಈ ನಡುವೆ ದಿಢೀರ್ ಆಗಿ ಹೈಕಮಾಂಡ್ ವಿಜಯೇಂದ್ರಗೆ ರಾಜ್ಯಾಧ್ಯಕ್ಷ ಪಟ್ಟವನ್ನು ಕಟ್ಟಿದೆ.

ಬಿಎಸ್ ಯಡಿಯೂರಪ್ಪ ಸಿಎಂ ಆಗಿದ್ದಾಗ ವಿಜಯೇಂದ್ರ ವಿರುದ್ಧ ಪಕ್ಷದ ಶಾಸಕರೇ ಭ್ರಷ್ಟಾಚಾರದ ಆರೋಪವನ್ನು ಮಾಡಿದ್ದರು. ಅದರಲ್ಲೂ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಮುಂಚೂಣಿಯಲ್ಲಿದ್ದರು. ಅಂದು ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿಯಾಗಿದ್ದ ಸಿ.ಟಿ ರವಿ ಕಿಚನ್ ಕ್ಯಾಬಿನೆಟ್‌ ಕುರಿತಾದ ಹೇಳಿಕೆಯೂ ಪರೋಕ್ಷವಾಗಿ ಬಿಎಸ್‌ವೈ ಕುಟುಂಬವನ್ನೇ ಉಲ್ಲೇಖಿಸಿಯಾಗಿತ್ತು.

ಸಹಜವಾಗಿ ಬಿಜೆಪಿಯ ಒಂದು ಬಣ ಅದರಲ್ಲೂ ಸಂಘ ನಿಷ್ಠ ಬಣ ಬಿಎಸ್‌ವೈ ಕುಟುಂಬದ ವಿರುದ್ಧ ಕೆಲವೊಂದು ಕಾರಣಗಳಿಗಾಗಿ ನಿಂತಿತ್ತು. ಇದಕ್ಕೆ ತಮ್ಮದೇ ಆದ ಸೈದ್ಧಾಂತಿಕ ಸಮರ್ಥನೆಯನ್ನೂ ನೀಡಲಾಗುತ್ತಿತ್ತು. ಆದರೆ ಇದೀಗ ಈ ಎಲ್ಲಾ ವಿರೋಧಗಳ ನಡುವೆಯೂ ಬೇರೆ ಬೇರೆ ರಾಜಕೀಯ ಲೆಕ್ಕಾಚಾರದಲ್ಲಿ ವಿಜಯೇಂದ್ರಗೆ ಹೈಕಮಾಂಡ್ ಪಟ್ಟ ಕಟ್ಟಿದೆ. ಆದರೆ ಕೆಲವೊಂದು ಸೂಚನೆಗಳನ್ನು ನೀಡಿದೆ ಎಂಬ ಮಾಹಿತಿಯೂ ಇದೆ.

ರಾಜ್ಯಾಧ್ಯಕ್ಷರಾಗಿ ಸಂಘಟನೆಗೆ ಆದ್ಯತೆ ನೀಡುವ ನಿಟ್ಟಿನಲ್ಲಿ ಎಲ್ಲರನ್ನು ಒಳಗೊಳ್ಳುವ ಸೂಚನೆಯನ್ನು ನೀಡಿದೆ. ಪಕ್ಷದಲ್ಲಿ ಯಾವುದೇ ಗುಂಪುಗಾರಿಕೆಗೆ ಅವಕಾಶ ಕೊಡದೆ, ಎಲ್ಲರ ಜೊತೆಗೂಡಿ ಪಕ್ಷವನ್ನು ಸಂಘಟನೆ ಮಾಡಬೇಕು. ಕೇವಲ ಗೆಲ್ಲುವ ಗುರಿಯನ್ನು ಮಾತ್ರ ಇಟ್ಟುಕೊಳ್ಳಬೇಕು ಎಂಬ ಸೂಚನೆಯನ್ನು ನೀಡಿದೆ ಎಂಬ ಮಾಹಿತಿ ಇದೆ.

ಯತ್ನಾಳ್‌ ಜೊತೆಗೆ ಇದೇ ನಿಲುವು ವ್ಯಕ್ತಪಡಿಸುತ್ತಾರಾ ವಿಜಯೇಂದ್ರ?

ಸಿ.ಟಿ ರವಿ ನಿವಾಸಕ್ಕೆ ತೆರಳಿ ಅವರನ್ನು ಭೇಟಿ ಮಾಡಿ ಮಾತುಕತೆ ನಡೆಸಿದ ವಿಜಯೇಂದ್ರ, ತಮ್ಮ ಮತ್ತೋರ್ವ ಟೀಕಾಕಾರರಾದ ಹಿರಿಯ ಬಿಜೆಪಿ ನಾಯಕ ಬಸನಗೌಡ ಪಾಟೀಲ್ ಯತ್ನಾಳ್ ಅವರನ್ನು ಭೇಟಿ ಮಾಡುತ್ತಾರಾ? ಎಂಬ ಕುತೂಹಲ ಸಹಜವಾಗಿ ಕೆರಳಿಸಿದೆ. ವಿಜಯೇಂದ್ರ ಅವರನ್ನು ರಾಜ್ಯಾಧ್ಯಕ್ಷರನ್ನಾಗಿ ಆಯ್ಕೆ ಮಾಡಿದರೂ ಯತ್ನಾಳ್ ಈವರೆಗೆ ಅವರಿಗೆ ಶುಭಾಶಯವನ್ನು ಕೋರಿಲ್ಲ. ಅವರ ಸಾಮಾಜಿಕ ಜಾಲತಾಣ ಪುಟಗಳಲ್ಲೂ ಶುಭಕೋರಿಲ್ಲ.

ಇನ್ನು ಬಿಎಸ್‌ವೈ ಆಪ್ತರೂ ಕೂಡಾ, ಅದರಲ್ಲೂ ಮಾಜಿ ಸಚಿವ ಮುರುಗೇಶ್ ಆರ್‌. ನಿರಾಣಿ ಯತ್ನಾಳ್‌ಗೆ ಟಾಂಟ್‌ ನೀಡುತ್ತಾ ಬರುತ್ತಿದ್ದಾರೆ. ಆದರೂ ವಿಜಯೇಂದ್ರ ವಿಚಾರವಾಗಿ ಯತ್ನಾಳ್ ಸೈಲೆಂಟಾಗಿದ್ದಾರೆ. ಪರ ಅಥವಾ ವಿರೋಧವಾದ ಯಾವುದೇ ಹೇಳಿಕೆ ಕೊಟ್ಟಿಲ್ಲ. ಈ ನಿಟ್ಟಿನಲ್ಲಿ ವಿಜಯೇಂದ್ರ ಒಂದುನ ಹೆಜ್ಜೆ ಮುಂದಿಡುತ್ತಾರಾ? ಎಂಬುವುದನ್ನು ಕಾದುನೋಡಬೇಕಾಗಿದೆ.

You May Also Like

More From Author

+ There are no comments

Add yours