ಪತಂಜಲಿ ಉತ್ಪನ್ನಗಳಿಗೆ ತಲಾ 1 ಕೋಟಿ ದಂಡ: ಸುಪ್ರೀಂ ಎಚ್ಚರಿಕೆ

1 min read

ನವದೆಹಲಿ: ಆಧುನಿಕ ವೈದ್ಯ ಪದ್ಧತಿಗಳ ವಿರುದ್ಧ ತಪ್ಪುದಾರಿಗೆಳೆವ ಹೇಳಿಕೆ ನೀಡುವುದು ಹಾಗೂ ಜಾಹೀರಾತು ಪ್ರಕಟಿಸುವುದನ್ನು ತಕ್ಷಣವೇ ನಿಲ್ಲಿಸುವಂತೆ ಬಾಬಾ ರಾಮ ದೇವ್ ಅವರ ಪತಂಜಲಿ ಆಯುರ್ವೇದ ಕಂಪನಿಗೆ ಸುಪ್ರೀಂ ಕೋರ್ಟ್ ಎಚ್ಚರಿಸಿದೆ. ಇಲ್ಲದಿದ್ದರೆ ಪತಂಜಲಿಯ ಪ್ರತಿ ಉತ್ಪನ್ನದ ಮೇಲೆ ತಲಾ 1 ಕೋಟಿ ರು. ದಂಡ ವಿಧಿಸುವುದಾಗಿ ಎಚ್ಚರಿಸಿದೆ.

‘ಪತಂಜಲಿ ಔಷಧ ಉತ್ಪನ್ನಗಳ ಜಾಹೀರಾತುಗಳು ತಪ್ಪು ದಾರಿಗೆ ಎಳೆಯುವಂತವು. ವಿಶೇಷವಾಗಿ ಕೋವಿಡ್ ಲಸಿಕೆ (covid vaccine) ವಿರುದ್ಧ ಹಾಗೂ ಆಧುನಿಕ ಔಷಧ ಪದ್ಧತಿ ಅಲೋಪತಿ ವಿರುದ್ಧ ಪತಂಜಲಿ ಜಾಹೀರಾತು ಪ್ರಕಟಿಸಿದೆ ಹಾಗೂ ಅದರ ಮುಖ್ಯಸ್ಥ ಬಾಬಾ ರಾಮದೇವ್ (Ramdev)ಹೇಳಿಕೆ ನೀಡಿದ್ದಾರೆ’ ಎಂದು ಭಾರತೀಯ ವೈದ್ಯಕೀಯ ಸಂಘ (ಐಎಂಎ) ಅರ್ಜಿ ಸಲ್ಲಿಸಿತ್ತು. ಇದರ ವಿಚಾರಣೆ ನಡೆಸಿದ ಪೀಠ, ‘ಪತಂಜಲಿ ಇಂತಹ ಸುಳ್ಳು ಮತ್ತು ದಾರಿ ತಪ್ಪಿಸುವ ಜಾಹೀರಾತು (ADVT) ತಕ್ಷಣವೇ ನಿಲ್ಲಿಸಬೇಕು. ನಿಲ್ಲಿಸದೇ ಹೋದರೆ  ‘ನಿರ್ದಿಷ್ಟ ರೋಗ ಗುಣಪಡಿಸಬಹುದು’ ಎಂಬ ಸುಳ್ಳು ಜಾಹೀರಾತಿನ ಪ್ರತಿ ಉತ್ಪನ್ನದ ಮೇಲೆ 1 ಕೋಟಿ ರು. ದಂಡ ಹಾಕಬೇಕಾಗುತ್ತದೆ’ ಎಂದಿತು.

ಫೆಮಾ ಕಾಯ್ದೆ ಉಲ್ಲಂಘನೆ: ಬೈಜೂಸ್‌ಗೆ  9000 ಕೋಟಿ ಇ.ಡಿ. ನೋಟಿಸ್‌ ಜಾರಿ

ನವದೆಹಲಿ: ವಿದೇಶಿ ಹೂಡಿಕೆ ನಿಯಮ (ಫೆಮಾ) ಉಲ್ಲಂಘನೆ ಪ್ರಕರಣದಲ್ಲಿ ಬೆಂಗಳೂರು ಮೂಲದ ಆನ್‌ಲೈನ್‌/ಆಫ್‌ಲೈನ್‌ ಶಿಕ್ಷಣ ಸಂಸ್ಥೆ ಬೈಜೂಸ್‌ಗೆ ಜಾರಿ ನಿರ್ದೇಶನಾಲಯವು 9000 ಕೋಟಿ ರು ದಂಡ ಪಾವತಿ ಮಾಡುವಂತೆ ನೋಟಿಸ್‌ ನೀಡಿದೆ ಎಂದು ಮೂಲಗಳು ಹೇಳಿವೆ. ಇದು ಈಗಾಗಲೇ ಆರ್ಥಿಕ ಸಂಕಷ್ಟದಲ್ಲಿರುವ ಸಂಸ್ಥೆಗೆ ಭಾರೀ ಶಾಕ್‌ ನೀಡಿದೆ. ಆದರೆ ಈವರೆಗೂ ತನಗೆ ಅಂಥ ಯಾವುದೇ ನೋಟಿಸ್‌ ಬಂದಿಲ್ಲ ಎಂದು ಬೈಜೂಸ್‌ ಸ್ಪಷ್ಟನೆ ನೀಡಿದೆ.

 

ನೋಟಿಸ್‌:

2011-23ರ ಅವಧಿಯಲ್ಲಿ ಬೈಜೂಸ್‌ 28000 ಕೋಟಿ ರು. ವಿದೇಶಿ ನೇರ ಬಂಡವಾಳ ಹೂಡಿಕೆ ಸ್ವೀಕರಿಸಿದೆ. ಜೊತೆಗೆ ಇದೇ ಅವಧಿಯಲ್ಲಿ ಕಂಪನಿ ಸಾಗರೋತ್ತರ ನೇರ ಹೂಡಿಕೆ ಹೆಸರಲ್ಲಿ ವಿದೇಶಗಳಿಗೆ 9754 ಕೋಟಿ ರು. ರವಾನಿಸಿದೆ. ಈ ಹಂತದಲ್ಲಿ ಕಂಪನಿ ಫೆಮಾ ನಿಯಮಗಳ ಉಲ್ಲಂಘನೆ ಮಾಡಿದೆ ಎಂದು ಆರೋಪಿಸಿರುವ ಜಾರಿ ನಿರ್ದೇಶನಾಲಯ, ರವೀಂದ್ರನ್‌ ಮತ್ತು ದಿವ್ಯಾ ಗೋಕುಲ್‌ನಾಥ್‌ ದಂಪತಿ ಒಡೆತನದ ಕಂಪನಿಗೆ 9000 ಕೋಟಿ ರು. ಪಾವತಿಸುವಂತೆ ನೋಟಿಸ್‌ ಜಾರಿ ಮಾಡಿದೆ ಎಂದು ಆಂಗ್ಲ ಮಾಧ್ಯಮವೊಂದು ವರದಿ ಮಾಡಿದೆ. ಕೆಲ ತಿಂಗಳ ಹಿಂದಷ್ಟೇ ಇ.ಡಿ. ಅಧಿಕಾರಿಗಳು ಬೆಂಗಳೂರಿನಲ್ಲಿರುವ ಬೈಜೂಸ್‌ ಕಚೇರಿ ಮೇಲೆ ದಾಳಿ ಮಾಡಿ ದಾಖಲೆಗಳನ್ನು ವಶಪಡಿಸಿಕೊಂಡಿದ್ದರು.

ಬೈಜೂಸ್‌ ಹಿನ್ನೆಲೆ:

ರವೀಂದ್ರನ್‌ ಮತ್ತು ದಿವ್ಯಾ 2015ರಲ್ಲಿ ವಿದ್ಯಾರ್ಥಿಗಳಿಗಾಗಿ ಬೈಜೂಸ್‌ ಲರ್ನಿಂಗ್‌ ಆ್ಯಪ್‌ ಬಿಡುಗಡೆ ಮಾಡಿದ್ದರು. ಬಳಿಕ ಮಕ್ಕಳಿಗೆ ಗಣಿತ ವಿಷಯದ ಆ್ಯಪ್‌ ಬಿಡುಗಡೆ ಮಾಡಲಾಗಿತ್ತು. 2018ರ ವೇಳೆಗೆ ಸಂಸ್ಥೆಗೆ 1.5 ಕೋಟಿ ವಿದ್ಯಾರ್ಥಿಗಳು ಸೇರ್ಪಡೆಯಾಗಿದ್ದರು. ಸಂಸ್ಥೆ ದೇಶದ ಮೂಲೆ ಮೂಲೆಗೂ ವ್ಯಾಪಿಸಿತ್ತು. ಈ ನಡುವೆ ಕೋವಿಡ್‌ ಸಮಯದಲ್ಲಿ ಶಾಲೆಗಳು ಮುಚ್ಚಿದಾಗ ಸಂಸ್ಥೆ ಇನ್ನಷ್ಟು ಅಗಾಧವಾಗಿ ಬೆಳೆದು ಭಾರತದ ನಂ.1 ಎಜುಕೇಷನ್‌ ಆ್ಯಪ್‌ ಎಂಬ ಹೆಗ್ಗಳಿಕೆಗೆ ಪಾತ್ರವಾಗಿತ್ತು. ಅದರ ಮಾರುಕಟ್ಟೆ ಮೌಲ್ಯ 40000 ಕೋಟಿ ರು. ಎಂದು ಅಂದಾಜಿಸಲಾಗಿತ್ತು. ಆದರೆ ಕೋವಿಡ್‌ ಅಂತ್ಯಗೊಂಡ ಬಳಿಕ ವಿದ್ಯಾರ್ಥಿಗಳ ಸಂಖ್ಯೆ ಭಾರೀ ಪ್ರಮಾಣದಲ್ಲಿ ಇಳಿದಿತ್ತು. ಹೀಗಾಗಿ ಸಂಸ್ಥೆ ಸಾವಿರಾರು ಶಿಕ್ಷಕರು ಮತ್ತು ಸಿಬ್ಬಂದಿಗಳನ್ನು ಉದ್ಯೋಗದಿಂದ ತೆಗೆದು ಹಾಕಿತ್ತು. ಜೊತೆಗೆ ಭಾರೀ ಪ್ರಮಾಣದ ಹೂಡಿಕೆ ಮತ್ತು ಇತರೆ ಕಂಪನಿಗಳ ಖರೀದಿಗೆ ಭಾರೀ ಹಣ ವೆಚ್ಚ ಮಾಡಿದ ಕಾರಣ ಕಂಪನಿ ದೊಡ್ಡಮಟ್ಟದ ನಷ್ಟಕ್ಕೆ ಗುರಿಯಾಗಿತ್ತು.

You May Also Like

More From Author

+ There are no comments

Add yours