ಕಲಬುರಗಿ (ಡಿ.3): ಪಂಚರಾಜ್ಯ ಚುನಾವಣಾ ಫಲಿತಾಂಶದ ಕುರಿತು ಈಗಲೇ ಪ್ರತಿಕ್ರಿಯೆ ಕೊಡುವುದು ಬಹಳ ಬೇಗ ಎನಿಸುತ್ತದೆ. ಆದರೆ ತೆಲಂಗಾಣ ಮತ್ತು ಛತ್ತೀಸ್ಗಢದಲ್ಲಿ ನಾವು ಮ್ಯಾಜಿಕ್ ನಂಬರ್ ಕ್ರಾಸ್ ಮಾಡುತ್ತೇವೆ ಎಂದು ಸಚಿವ ಪ್ರಿಯಾಂಕ್ ಖರ್ಗೆ ಹೇಳಿದರು.
ಇಂದು ಕಲಬುರಗಿಯಲ್ಲಿ ಮಾಧ್ಯಮ ಪ್ರತಿನಿಧಿಯೊಂದಿಗೆ ಮಾತನಾಡಿದ ಅವರು, ಮಧ್ಯಪ್ರದೇಶದಲ್ಲಿ ಸ್ವಲ್ಪ ಹಿನ್ನಡೆ ಅನಿಸುತ್ತಿದೆ ಆದರೂ ಫೈನಲ್ ವರೆಗೂ ಅದನ್ನೂ ಗೆಲ್ಲುತ್ತೇವೆ ಎನ್ನುವ ವಿಶ್ವಾಸ ಇದೆ. ಸಂಜೆವರೆಗೆ ಕಾಯ್ದು ನೋಡೋಣ, ಜನ ಯಾವ ರೀತಿ ಆಶೀರ್ವಾದ ಮಾಡಿದ್ದಾರೆ ಎನ್ನುವುದು ಗೊತ್ತಾಗುತ್ತದೆ ಎಂದರು.
ತೆಲಂಗಾಣದಲ್ಲಿ ನಾನೇ ಒಂದು ವಾರ ಇದ್ದು ನೋಡಿದ್ದೇನೆ. ಅಲ್ಲಿನ ಬಿಆರ್ಎಸ್ ಸರ್ಕಾರದ ವಿರುದ್ಧ ಜನರ ಆಕ್ರೋಶ ಇತ್ತು. 10 ಸ್ಕ್ಯಾಮ್ ನಲ್ಲಿ ಹತ್ತು ಲಕ್ಷ ಕೋಟಿ ಹಣ ಹಗರಣ ಮಾಡಿದ್ದಾರೆ ಎಂದು ಜನ ಮಾತನಾಡುತ್ತಿದ್ದಾರೆ. ಕಾಲೇಶ್ವರಂ ನೀರಾವರಿ ಯೋಜನೆ ಒಂದರಲ್ಲಿಯೇ ಒಂದುವರೆ ಲಕ್ಷ ಕೋಟಿ ರೂ.ಹಗರಣ ಆಗಿದೆ ಅಂತ ಹೇಳ್ತಿದಾರೆ. ಕಳೆದ ಹತ್ತು ವರ್ಷಗಳಲ್ಲಿ ಅಲ್ಲಿ ಯಾವುದೇ ರೀತಿಯ ಉದ್ಯೋಗ ಸೃಷ್ಟಿ ಆಗಿರಲಿಲ್ಲ, ಯುವಕರು ಆಕ್ರೋಶಗೊಂಡಿದ್ದರು. ಈ ಎಲ್ಲ ಕಾರಣಕ್ಕಾಗಿ ಜನ ನಮಗೆ ಆಶೀರ್ವಾದ ಮಾಡುತ್ತಿದ್ದಾರೆ ಎಂದು ಕೊಂಡಿದ್ದೇನೆ ಎಂದರು.
ನಾಲ್ಕು ರಾಜ್ಯಗಳ ಫಲಿತಾಂಶದಲ್ಲಿ ಕಾಂಗ್ರೆಸ್ ಗೆ ಮುನ್ನಡೆ ಕಾಣ್ತಿದೆ. ತೆಲಂಗಾಣ, ಛತ್ತಿಸ್ಗಡದಲ್ಲಿ ಅಧಿಕಾರದತ್ತ ಮುನ್ನುಗುತ್ತಿದ್ದೇವೆ. ತೆಲಂಗಾಣದಲ್ಲಿ ನಮ್ಮ ಗ್ಯಾರಂಟಿ ವರ್ಕೌಟ್ ಆಗಿದೆ. ಐದು ರಾಜ್ಯಗಳಲ್ಲೂ ಕಾಂಗ್ರೆಸ್ ಗ್ಯಾರಂಟಿ ವರ್ಕೌಟ್ ಆಗಿದೆ. ತೆಲಂಗಾಣದಲ್ಲಿ ಬಿಆರ್ ಎಸ್ ಸರ್ಕಾರದ ಆಡಳಿತ ವಿರೋಧಿ ಅಲೆ, ಭ್ರಷ್ಟಾಚಾರದಿಂದ ಹಿನ್ನಡೆ ಆಗಿದೆ. ಆದ್ರೆ ಕಾಂಗ್ರೆಸ್ ಗ್ಯಾರಂಟಿ ಭರವಸೆಗಳು ತೆಲಂಗಾಣದಲ್ಲಿ ಫಲ ನೀಡಿದೆ. ಸಮಾಜವನ್ನ ಜೋಡಿಸುವ ಕೆಲಸ ಕಾಂಗ್ರೆಸ್ ಮಾಡುತ್ತಿದೆ. ಜಾತಿ ಜಾತಿ ಮಧ್ಯೆ, ಧರ್ಮಗಳ ಮಧ್ಯೆ ಬೆಂಕಿ ಹಚ್ಚುವ ಕೆಲಸ ಅವರು ಮಾಡುತ್ತಾರೆ. ಅಧಿಕಾರ ಯಾರಿಗೂ ಶಾಶ್ವತ ಅಲ್ಲ. ಕಳೆದ ಬಾರಿ ಮಧ್ಯಪ್ರದೇಶದಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬಂದರೂ ಬಿಜೆಪಿ ಆಪರೇಷನ್ ಮಾಡಿ ಅಧಿಕಾರಕ್ಕೆ ಬಂದಿದ್ರು. ಕರ್ನಾಟಕದಲ್ಲಿ ಆಪರೇಷನ್ ಮಾಡಿದಂತೆ ಮಧ್ಯಪ್ರದೇಶಲ್ಲಿ ಬಿಜೆಪಿ ಅವರು ಆಪರೇಷನ್ ಮಾಡಿ ಅಧಿಕಾರಕ್ಕೆ ಬಂದಿದ್ರು. ರಾಜ್ಯ ಚುನಾವಣೆಗಳೆ ಬೇರೆ, ರಾಷ್ಟ್ರ ಚುನಾವಣೆಗಳೆ ಬೇರೆ. ಹೀಗಾಗಿ ಲೋಕಸಭೆ ಚುನಾವಣೆಗೆ ಪಂಚ ರಾಜ್ಯಗಳ ಫಲಿತಾಂಶ ದಿಕ್ಸೂಚಿ ಅಂತಾ ಹೇಳಕ್ಕಾಗಲ್ಲ ಎಂದರು.
ನಮಗೆ ಯಾವ ಆಪರೇಷನ್ ಭಯ ಇಲ್ಲ. ಆದ್ರೆ ನಮ್ಮ ಶಾಸಕರನ್ನು ಹಿಡಿದಿಟ್ಟುಕೊಳ್ಳುವ ಕೆಲಸ ಮಾಡಬೇಕಿದೆ. ಬಿಜೆಪಿ ಅವರು ತೋಳ್ಬಲ, ಹಣ ಬಲ, ಸಿಬಿಐ, ಇಡಿ ಬಳಕೆ ಮಾಡ್ತಾರೆ, ಹೀಗಾಗಿ ನಮ್ಮ ಶಾಸಕರನ್ನ ನಾವು ಸೇಫ್ ಆಗಿ ಇಟ್ಟುಕೊಳ್ಳಬೇಕಿದೆ ಎಂದರು.
ತೆಲಂಗಾಣದಲ್ಲಿ ಅಧಿಕಾರಕ್ಕೆ ಬರುವುದು ನಿಶ್ಚಿತವಾಗಿರುವ ಹಿನ್ನೆಲೆ ನಿನ್ನೆಯಿಂದಲೇ ಡಿಸಿಎಂ ಡಿಕೆ ಶಿವಕುಮಾರ ನೇತೃತ್ವದಲ್ಲಿ ರಾಜ್ಯದ ನಾಯಕರು ತೆಲಂಗಾಣ ಹೋಟೆಲ್ನಲ್ಲಿ ಠಿಕಾಣಿ ಹೂಡಿದ್ದಾರೆ. ಕೆಸಿಆರ್ ಬಿಜೆಪಿ ಆಪರೇಷನ್ ನಡೆಸುವ ಆತಂಕ ಹಿನ್ನೆಲೆ ಈಗಾಗಲೇ ಗೆಲ್ಲುವ ಶಾಸಕರನ್ನು ಬಸ್ ಮೂಲಕ ಬೇರೆಡೆ ಸಾಗಿಸಲು ಸಿದ್ಧತೆ ನಡೆಸಿದ್ದಾರೆ.
+ There are no comments
Add yours