ಹೈಲೈಟ್ಸ್:
- ಶಬರಿಮಲೆ ದೇವಸ್ಥಾನದ 18 ಮೆಟ್ಟಿಲೇರಲು ಹೈಡ್ರೋಲಿಕ್ ಮೇಲ್ಛಾವಣಿಯ ಆಧಾರ ಸ್ತಂಭ ಇದೀಗ ವಿವಾದದ ಕೇಂದ್ರಬಿಂದು
- ಯಾತ್ರಾರ್ಥಿಗಳನ್ನು 18 ಮೆಟ್ಟಿಲು ದಾಟಿಸುವಲ್ಲಿ ಪೊಲೀಸರು ಚುರುಕಾಗಿ ಕಾರ್ಯನಿರ್ವಹಿಸುತ್ತಿಲ್ಲ ಎಂದು ದೇವಸ್ವಂ ಮಂಡಳಿ ಅತೃಪ್ತಿ
- ಇಲ್ಲಿ ಕಾರ್ಯನಿರ್ವಹಣೆಗೆ ಮೇಲ್ಛಾವಣಿಗಳ ಆಧಾರ ಸ್ತಂಭಗಳೇ ಅಡ್ಡಿ ಎಂದು ದೇವಸ್ವಂ ಬೋರ್ಡ್ ವಿರುದ್ಧ ಪೊಲೀಸರ ಅತೃಪ್ತಿ
ಶಬರಿಮಲೆ ಶ್ರೀ ಅಯ್ಯಪ್ಪ ಸನ್ನಿಧಾನದ ಹದಿನೆಂಟು ಮೆಟ್ಟಿಲುಗಳ ಮೇಲಿನ ಹೈಡ್ರಾಲಿಕ್ ಮೇಲ್ಛಾವಣಿ ನಿರ್ಮಾಣವನ್ನು ಕೇರಳ ಪೊಲೀಸರು ವಿರೋಧಿ ಸಿದ್ದಾರೆ. ಮೇಲ್ಟಾವಣಿಯ ಕಲ್ಲಿನ ಸ್ತಂಭಗಳೇ ಯಾತ್ರಿಕರಿಗೆ 18 ಮೆಟ್ಟಿಲೇರಲು ಅಡ್ಡಿಯಾಗುತ್ತಿವೆ. ಪೊಲೀಸರಿಗೆ ಕಾಲಿಡಲೂ ಜಾಗವಿಲ್ಲದೆ ಹರಸಾಹಸದಿಂದ ಕರ್ತವ್ಯ ನಿರ್ವಹಿಸುತ್ತಿದ್ದಾರೆ.
18 ಮೆಟ್ಟಿಲುಗಳ ಮೂಲಕ ಯಾತ್ರಾರ್ಥಿಗಳನ್ನು ದಾಟಿಸುವಲ್ಲಿ ಪೊಲೀಸರು ಚುರುಕಾಗಿಲ್ಲ ಎಂದು ದೇವಸ್ವಂ ಮಂಡಳಿ ಟೀಕಿಸಿದ್ದರೆ, ಅಪೂರ್ಣ ಸ್ಥಿತಿಯಲ್ಲಿರುವ ಸ್ತಂಭಗಳೇ ಸಮಸ್ಯೆಯಾಗಿವೆ ಎಂದು ಪತ್ತನಂತಿಟ್ಟ ಜಿಲ್ಲಾ ಪೊಲೀಸ್ ಮುಖ್ಯಸ್ಥರು ಮಂಡಳಿಗೆ ವಿವರಣೆ ನೀಡಿದ್ದಾರೆ.
ಹೈಕೋರ್ಟೋನಿಂದ ಸ್ವಯಂಪ್ರೇರಿತ ಪ್ರಕರಣಹೈಡ್ರಾಲಿಕ್ ಚಾವಣಿ ಅಳವಡಿಕೆ ವಿಚಾರವಾಗಿ ಹೈಕೋರ್ಟ್ ಸ್ವಯಂಪ್ರೇರಿತ ಪ್ರಕರಣ ದಾಖಲಿಸಿ ಕ್ರಮ ಆರಂಭಿಸಿದೆ. ಸ್ತಂಭಗಳ ಅವೈಜ್ಞಾನಿಕ ನಿರ್ಮಾಣದ ವಿರುದ್ಧ ವ್ಯಾಪಕ ದೂರುಗಳು ಬಂದ ಹಿನ್ನೆಲೆಯಲ್ಲಿ ನ್ಯಾಯಾಲಯ ಈ ಕ್ರಮಕೈಗೊಂ ಡಿದೆ. ವಿಭಾಗೀಯ ಪೀಠ ದೇವಸ್ವಂ ಮಂಡಳಿ ಮತ್ತು ಕೇರಳ ಸರಕಾರದಿಂದ ವಿವರಣೆ ಕೇಳಿದೆ.
ಗಾಳಿ, ಮಳೆ ಮತ್ತು ಬಿಸಿಲಿನ ವಾತಾವರಣದಲ್ಲಿ ಮೆಟ್ಟಿಲ ಪೂಜೆ ಮಾಡಲು ಸಮಸ್ಯೆಯಾಗಿದ್ದು, ತಾತ್ಕಾಲಿಕವಾಗಿ ಉಪಯೋಗಿಸಿ ಮಡಚ ಬಹುದಾದ ಹೈಡ್ರಾಲಿಕ್ ಮೇಲ್ಟಾವಣಿ ಯನ್ನು ಅಳವಡಿಸಲಾಗುತ್ತಿದೆ. ಪ್ರಸ್ತುತ ದೇಗುಲದ ಪ್ರಮುಖ ನೈವೇದ್ಯವಾದ ಪಡಿಪೂಜೆಯನ್ನು ಟರ್ಪಾಲ್ ಕಟ್ಟುವ ಮೂಲಕ ನಡೆಸಲಾಗುತ್ತಿದೆ.
ಹೊಸ ಮೇಲ್ಟಾವಣಿ ನಿರ್ಮಾಣದ ಬಳಿಕ ಪೂಜೆಗಳು ಸುಗಮವಾಗಿ ನಡೆಯಲಿವೆ. ಇದರೊಂದಿಗೆ ಸ್ವರ್ಣಲೇಪಿತ 18 ಮೆಟ್ಟಿಲು ಹೆಚ್ಚು ಬಾಳಿಕೆ ಬರುತ್ತದೆ. ಮಳೆ ಬಂದಾಗ ಯಾತ್ರಿಕರು ಮೆಟ್ಟಿಲು ಹತ್ತಲು ಸಾಧ್ಯವಾಗದ ಪರಿಸ್ಥಿತಿ ತಪ್ಪಿಸಬಹುದು ಎಂದು ತಿರುವಾಂಕೂರ್ ದೇವಸ್ವಂ ಬೋರ್ಡ್ ಹೈಕೋರ್ಟ್ಗೆ ತಿಳಿಸಿದೆ.
ದೇವಸ್ವಂ ಮನವಿಗೆ ಪೊಲೀಸ್ ಇಲಾಖೆ ನಕಾರ
ಈ ವಿಚಾರದಲ್ಲಿ ಸರಕಾರ ವಿವರಣೆಗೆ ಕಾಲಾವಕಾಶ ಕೋರಿದ ಹಿನ್ನೆಲೆಯಲ್ಲಿ ಪ್ರಕರಣವನ್ನು ಡಿಸೆಂಬರ್ 19ಕ್ಕೆ ಮುಂದೂಡಿರುವಂತೆ ಪೊಲೀಸರೂ ವಿರೋಧ ವ್ಯಕ್ತಪಡಿಸಿದ್ದಾರೆ. ಮುಖ್ಯಮಂತ್ರಿಗಳ ಸಮ್ಮುಖ ನಡೆದ ಶಬರಿಮಲೆ ವಿಶೇಷ ಪರಿಶೀಲನೆ ಸಭೆಯಲ್ಲಿ ಒಂದು ನಿಮಿಷದಲ್ಲಿ ಹದಿನೆಂಟು ಮೆಟ್ಟಿಲ ಮೂಲಕ ಕನಿಷ್ಠ 75 ಭಕ್ತರನ್ನು ದಾಟಿಸಬೇಕು ಎಂದು ದೇವಸ್ವಂ ಬೋರ್ಡ್ ಒತ್ತಾಯಿಸಿದ್ದರೂ ಇದು ಸಾಧ್ಯವಿಲ್ಲ ಎಂದು ಎಡಿಜಿಪಿ ತಿಳಿಸಿದ್ದರು.
ಮುಖ್ಯಮಂತ್ರಿಗಳ ಸಮ್ಮುಖದಲ್ಲೇ ದೇವಸ್ಥಂ ಬೋರ್ಡ್ ಮತ್ತು ಪೊಲೀಸರ ನಡುವೆ ವಾಗ್ವಾದ ನಡೆದಿದ್ದು, ಇದರ ಬೆನ್ನಲ್ಲೆ ಕಲ್ಲಿನ ಸ್ತಂಭಗಳನ್ನು ಬದಲಾಯಿಸುವಂತೆ ಪೊಲೀಸರು ಒತ್ತಾಯಿಸಿದ್ದಾರೆ. ಹೈದರಾಬಾದ್ ಮೂಲದ ಕಂಪನಿಯೊಂದರ ಸೇವೆಯಾಗಿ ಹೈಡ್ರಾಲಿಕ್ ಮೇಲ್ಟಾವಣಿ ನಿರ್ಮಿಸಲಾಗುತ್ತಿದ್ದು, ಕಂಬಗಳ ವಿರುದ್ಧ ಹೈಕೋರ್ಟ್ನಲ್ಲಿ ಪ್ರಕರಣ ದಾಖಲಾಗಿದೆ. ಎರಡೂ ಬದಿಗಳಲ್ಲಿನ ಕೋಟೆಯಂತಹ ಸ್ತಂಭಗಳ ನಿರ್ಮಾಣದಿಂದಾಗಿ ದೇಗುಲದ ಪ್ರಾಂಗಣ ಮತ್ತು ಮೆಟ್ಟಿಲುಗಳ ಬದಿಯಿಂದ ಮೆಟ್ಟಿಲ ಪೂಜೆ ಕಾಣಿಸುವುದಿಲ್ಲ ಎಂಬ ಟೀಕೆ ವ್ಯಕ್ತವಾಗಿತ್ತು.
ಅಗತ್ಯದ ಸಂದರ್ಭ ಮೆಟ್ಟಿಲುಗಳ ಮೇಲಿನ ಗಾಜಿನ ಚಾವಣಿ ತೆಗೆಯಬಹುದಾದ ಈ ಕಾಮಗಾರಿಯನ್ನು ಫೆಬ್ರವರಿಯಲ್ಲಿ ಆರಂಭಿಸಲಾಗಿದ್ದರೂ ಮಂಡಲ ಆರಂಭಗೊಂಡರೂ ಪೂರ್ಣಗೊಳ್ಳದ ಹಿನ್ನೆಲೆ ಯಲ್ಲಿ ಮೇಲ್ಟಾವಣಿ ನಿರ್ಮಾಣ ಕಾಮಗಾರಿ ಸ್ಥಗಿತಗೊಂಡಿದೆ. ಪ್ರಸ್ತುತ ಈ ಅಪೂರ್ಣ ಕಾಮಗಾರಿಯಿಂದ ಮೆಟ್ಟಿಲ ಮೇಲಿನ ಆರೋಹಣ ನಿಧಾನವಾಗಿದ್ದು, ಭಕ್ತರು ದರ್ಶನಕ್ಕೆ ಕಾಯಬೇಕಾದ ಪರಿಸ್ಥಿತಿ ನಿರ್ಮಾಣವಾಗಿರುವುದು ವಿವಾದಕ್ಕೆ ಕಾರಣವಾಗಿದೆ.
+ There are no comments
Add yours