ನಿಗಮ ಮಂಡಳಿಗಳ ನೇಮಕಕ್ಕೆ ಸುರ್ಜೇವಾಲಾ, ವೇಣುಗೋಪಾಲ್‌ ರೇಟ್‌ ಕಾರ್ಡ್‌ ಫಿಕ್ಸ್‌ ಮಾಡಿ ಹೋಗಿದ್ದಾರೆ: ಬಿಜೆಪಿ ವ್ಯಂಗ್ಯ

1 min read

ಬೆಂಗಳೂರು: ರಾಜ್ಯಕ್ಕೆ ಆಗಮಿಸಿದ್ದ ಹೈಕಮಾಂಡ್‌ನ ಕಲೆಕ್ಷನ್‌ ಏಜೆಂಟರುಗಳಾದ ಸುರ್ಜೇವಾಲಾ ಮತ್ತು ಕೆ.ಸಿ. ವೇಣುಗೋಪಾಲ್‌ ಅವರು ನಿಗಮ ಮಂಡಳಿಗಳ ನೇಮಕಕ್ಕೆ ರೇಟ್‌ ಕಾರ್ಡ್‌ ಫಿಕ್ಸ್‌ ಮಾಡಿ ಹೋಗಿದ್ದಾರೆ ಎಂದು ಕಾಂಗ್ರೆಸ್​ ಕುರಿತು ಬಿಜೆಪಿ ವ್ಯಂಗ್ಯವಾಡಿದೆ.

ಸಾಮಾಜಿಕ ಜಾಲತಾಣ ಟ್ವಿಟರ್ ನಲ್ಲಿ ಸರಣಿ ಟ್ವೀಟ್ ಮಾಡಿರುವ ಬಿಜೆಪಿ, ಕಾಂಗ್ರೆಸ್ ವಿರುದ್ಧ ವಾಗ್ದಾಳಿ ನಡೆಸಿದೆ.

ರಾಜ್ಯಕ್ಕೆ ಆಗಮಿಸಿದ್ದ ಹೈಕಮಾಂಡ್‌ನ ಕಲೆಕ್ಷನ್‌ ಏಜೆಂಟರುಗಳಾದ ಸುರ್ಜೇವಾಲಾ ಮತ್ತು ಕೆ.ಸಿ. ವೇಣುಗೋಪಾಲ್‌ ಅವರು ನಿಗಮ ಮಂಡಳಿಗಳ ನೇಮಕಕ್ಕೆ ರೇಟ್‌ ಕಾರ್ಡ್‌ ಫಿಕ್ಸ್‌ ಮಾಡಿ ಹೋಗಿದ್ದಾರೆ. ಬಿಡಿಎ ರೂ.50 ಕೋಟಿ, ಬಿಡಬ್ಲೂಎಸ್‌ಎಸ್‌ಬಿ ರೂ.45 ಕೋಟಿ, ಕೆಆರ್‌ಐಡಿಎಲ್ ರೂ. 20 ಕೋಟಿ, ಕಿಯೋನಿಕ್ಸ್ ರೂ.15 ಕೋಟಿ, ಕರ್ನಾಟಕ ಉಗ್ರಾಣ ನಿಗಮ ರೂ.12 ಕೋಟಿ, ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆ ರೂ.10 ಕೋಟಿ ಎಂದು ಪಟ್ಟಿ ನೀಡಿದೆ.

 

ಇನ್ನು ಹತ್ತು ಹಲವು ನಿಗಮಗಳಿಗೆ ಕಲೆಕ್ಷನ್‌ ಮಾಸ್ಟರ್ಸ್‌ಗಳಾದ ಸಿದ್ದರಾಮಯ್ಯ ಹಾಗೂ ಡಿಕೆ.ಶಿವಕುಮಾರ್ ನಡೆಸುವ ಹರಾಜು ಪ್ರಕ್ರಿಯೆಯಲ್ಲಿ ಇನ್ನೂ ಹೆಚ್ಚು ಮೊತ್ತದ ಕಲೆಕ್ಷನ್‌ ಆಗುವ ಸಾಧ್ಯತೆ ಇದೆಯಂತೆ ಎಂದು ವ್ಯಂಗ್ಯವಾಡಿದೆ.

ಬಡವರ ಹೆಸರು ಹೇಳಿ ಅಧಿಕಾರಕ್ಕೆ ಬಂದ ಕಾಂಗ್ರೆಸ್ ಪಕ್ಷ ದ ಕಲೆಕ್ಷನ್ ಹಾವಳಿಗೆ ಕರ್ನಾಟಕದ ಬಡ ಮತ್ತು ಮಧ್ಯಮ ವರ್ಗದ ಜನ ತತ್ತರಿಸಿದ್ದಾರೆ. ಅಗತ್ಯ ಸೌಕರ್ಯಗಳಿಗೂ ಕೈ ಬಿಸಿ ಮಾಡಬೇಕಾದ ಕಾರಣ ಮಹಿಳೆಯರಂತೂ ಬೇಸತ್ತಿದ್ದಾರೆ.

ಸ್ಟಾಲಿನ್ ಜತೆಗಿನ ಹೊಂದಾಣಿಕೆಗಾಗಿ ಬರದಲ್ಲೂ ಕಾವೇರಿ ನೀರು ಹರಿಬಿಟ್ಟ ಕಾಂಗ್ರೆಸ್ ಸರ್ಕಾರಕ್ಕೆ ಮನೆಗಳಿಗೆ ನೀರು ಬಿಡಲು ಮಾತ್ರ ಲಂಚ ಕೊಡಲೇಬೇಕು. ಮೇಲಿನಿಂದ ಕೆಳ ಹಂತದವರೆಗೂ ಸರ್ಕಾರಿ ವ್ಯವಸ್ಥೆಯೇ ಲಂಚಕ್ಕಾಗಿ ಹಾತೊರೆಯಲು, ಸರ್ಕಾರ ನಡೆಸುವ ಕಲೆಕ್ಷನ್ ಮಾಸ್ಟರ್‌ಗಳೇ ಸ್ಫೂರ್ತಿ ಎಂದು ಟೀಕಿಸಿದೆ.

You May Also Like

More From Author

+ There are no comments

Add yours