ವಿನಾಶಕ್ಕೆ ತಲುಪಿದ ಮಲೆನಾಡಿನ ವಿಶಿಷ್ಠ ಹಣ್ಣಿನ ತಳಿ; ಚಿಟ್ಟ ಕಿತ್ತಳೆಗೆ ಬೇಕು ಪ್ರೋತ್ಸಾಹ

1 min read

ಹೈಲೈಟ್ಸ್‌:

  • ಕಳೆದೆರಡು ದಶಕಗಳ ಹಿಂದೆ ಮಲೆನಾಡು ಭಾಗದಲ್ಲಿ ಕಾಫಿಯೊಂದಿಗೆ ಯಥೇಚ್ಚ ಪ್ರದೇಶದಲ್ಲಿ ಬೆಳೆಯಲಾಗುತ್ತಿದ್ದ ಚಿಟ್ಟಕಿತ್ತಳೆ ಕಣ್ಮರೆ
  • ನಾಗಪುರ ಕಿತ್ತಳೆ ಪ್ರವೇಶದಿಂದಾಗಿ ಚಿಟ್ಟಕಿತ್ತಳೆ ಬೆಳೆಯಲು ರೈತರ ಹಿಂದೇಟು
  • ಮಲೆನಾಡು ಭಾಗದ ವಿಶಿಷ್ಟ ಹಣ್ಣಿನ ತಳಿಯ ಸಂರಕ್ಷಣೆಗೆ ಬೇಕಿದೆ ಪ್ರೋತ್ಸಾಹ

ಮೂಡಿಗೆರೆ: ಕಳೆದೆರಡು ದಶಕಗಳ ಹಿಂದೆ ಮಲೆನಾಡು ಭಾಗದಲ್ಲಿ ಕಾಫಿಯೊಂದಿಗೆ ಯಥೇಚ್ಚ ಪ್ರದೇಶದಲ್ಲಿ ಬೆಳೆಯಲಾಗುತ್ತಿದ್ದ ಚಿಟ್ಟಕಿತ್ತಳೆ ಕಣ್ಮರೆಯಾಗುತ್ತಿದೆ. ಬಾದ್ಲಿಕೆ (ಪರಾವಲಂಬಿ ಸಸ್ಯ) ಮತ್ತು ಬೇರುಕೊರಕದ ಹಾವಳಿ ಹಾಗೂ ನಾಗಪುರ ಕಿತ್ತಳೆ ಪ್ರವೇಶದಿಂದಾಗಿ ಚಿಟ್ಟಕಿತ್ತಳೆ ಬೆಳೆಯಲು ರೈತರು ಹಿಂದೇಟು ಹಾಕುತ್ತಿದ್ದು ಈ ಭಾಗದ ವಿಶಿಷ್ಟ ಹಣ್ಣಿನ ತಳಿಯ ಸಂರಕ್ಷಣೆಗೆ ಪ್ರೋತ್ಸಾಹ ಬೇಕಿದೆ.

ಈ ಹಿಂದೆ ಕಾಫಿ, ಏಲಕ್ಕಿ, ಕಾಳು ಮೆಣಸು, ಅಡಕೆ ಜತೆಗೆ ಚಿಟ್ಟಕಿತ್ತಳೆಯನ್ನು ಸಾಂಪ್ರದಾಯಿಕವಾಗಿ ಬೆಳೆಯಲಾಗುತ್ತಿತ್ತು. ಅದರಲ್ಲೂ ಪಶ್ಚಿಮ ಘಟ್ಟದ ಚಾರ್ಮಾಡಿ, ಶಿರಾಡಿ, ಅಗುಂಬೆ, ಹೇಮಾವತಿ ನದಿ ಉಗಮ ಸ್ಥಾನದಿಂದ ಸಕಲೇಶಪುರದ ವರೆಗಿನ ನದಿಪಾತ್ರದಲ್ಲಿ ಹಾಲುಗರ್ಜೆ, ಹುಲುಬರ ಈಚಲು. ಜೋಪಲು, ಚೊಟ್ಟೆ ಹಣ್ಣುಗಳ ಜತೆಗೆ ಈ ಚಿಟ್ಟಕಿತ್ತಲೆ ಯಥೇಚ್ಚವಾಗಿ ಕಂಡು ಬರುತ್ತಿತ್ತು. ಅಲ್ಲದೇ ಅರೆಬಿಕಾ ಕಾಫಿ ಬೆಳೆಯುವ ಪ್ರದೇಶದಲ್ಲಿ ಚಿಟ್ಟಕಿತ್ತಳೆ ಬೆಳೆಗೆ ಪೂರಕ ವಾತಾವರಣ ಇದ್ದಿದ್ದರಿಂದ ಇಲ್ಲಿನ ಸಾವಿರಾರು ಹೆಕ್ಟೆರ್‌ನಲ್ಲಿನ ಕಾಫಿ ತೋಟಗಳಲ್ಲಿ ಚಿಟ್ಟಕಿತ್ತಳೆ ಮರಗಳು ಬೆಳೆದಿದ್ದವು.

ಚಿಟ್ಟ ಕಿತ್ತಳೆ ವಿಶೇಷವೇನು?

ವಿಶೇಷವಾಗಿ ತಂಪು ಪ್ರದೇಶದಲ್ಲಿ ವರ್ಷವಿಡೀ ಚಿಟ್ಟಕಿತ್ತಳೆ ಹಣ್ಣು ಸಿಗುತ್ತದೆ. ಮಳೆಗಾಲ ಮುಗಿದು ಡಿಸೆಂಬರ್‌ ನಲ್ಲಿ ಹಾಗೂ ಫೆಬ್ರವರಿ, ಮಾರ್ಚ್ ಬೇಸಿಗೆಯಲ್ಲಿ ಗಿಡಕ್ಕೆ ನೀರು ದೊರೆತರೆ ಜೂನ್‌ ತಿಂಗಳು ಸೇರಿ ವರ್ಷದಲ್ಲಿಎರಡು ಬಾರಿ ಫಲಸು ದೊರೆಯಲಿದೆ. ಹಣ್ಣಾದ ಚಿಟ್ಟಕಿತ್ತಳೆಯಲ್ಲಿ ಪೂರ್ಣ ರಸ ತುಂಬಿರುತ್ತದೆ. ಅಲ್ಲದೇ ಸಿ ವಿಟಮಿನ್‌ ನಾಗಪುರ ಕಿತ್ತಳೆಗೆ ಹೋಲಿಸಿದರೆ ಇದರಲ್ಲಿ ಹತ್ತುಪಟ್ಟು ಅಧಿಕವಾಗಿರುತ್ತದೆ.

ನಾಗಪುರ ಕಿತ್ತಳೆ ಪ್ರಭಾವ

ಒಂದು ಮರದಲ್ಲಿ ಕನಿಷ್ಠ 3 ಸಾವಿರ ಹಣ್ಣುಗಳು ದೊರೆತು ಕಾಫಿಯೊಂದಿಗೆ ಬೆಳೆಗಾರರಿಗೆ ಲಾಭ ತಂದು ಕೊಡುತ್ತಿದ್ದ ಚಿಟ್ಟಕಿತ್ತಳೆ ಬಾದ್ಲಿಕೆ, ಬೇರುಕೊರಕದ ಹಾವಳಿ, ಮರಗಸಿ ರೋಗಬಾಧೆಗೆ ಸಿಲುಕಿ ಕಣ್ಮರೆಯಾಗುತ್ತಿದೆ. ಬೇಡಿಕೆ ಇದ್ದರೂ ಹಣ್ಣುಗಳೇ ಸಿಗುತ್ತಿಲ್ಲ. ತಾಲೂಕಿನ ಹುಲ್ಲೆಮನೆ, ಕುಂದೂರು, ಪಟ್ಟದೂರು ಸೇರಿದಂತೆ ಅನೇಕ ಕಡೆಯಲ್ಲಿಬೆರಳಣಿಕೆಯಷ್ಟು ಚಿಟ್ಟಕಿತ್ತಳೆ ಕಾಣಸಿಗುತ್ತಿದ್ದು, ಶೇ.90ರಷ್ಟು ವಿನಾಶಗೊಂಡಿದೆ. ಇದೇ ಜಾಗದಲ್ಲಿಈಗ ನಾಗಪುರ ಕಿತ್ತಳೆ ಕಂಡುಬರುತ್ತಿದೆ. ಈ ತಳಿಯ ಹಣ್ಣಿಗಿರುವ ಬೇಡಿಕೆ ರೈತರನ್ನು ಆಕರ್ಷಿಸುತ್ತಿದೆ.

ಸಾವಯವ ಹಣ್ಣಾಗಿರುವ ಚಿಟ್ಟಕಿತ್ತಳೆ ಮಲೆನಾಡು ಭಾಗದಲ್ಲಿ ಮರಗಳಿದ್ದರೆ ಅದನ್ನು ಕಾಪಾಡಿಕೊಳ್ಳಬೇಕು. ಇದರಲ್ಲಿಸಿ ವಿಟಮಿನ್‌ ಅಧಿಕವಾಗಿರುತ್ತದೆ. ಮಂಗಗಳು, ಪಕ್ಷಿಗಳು ಈ ಹಣ್ಣಿಗೆ ಆಕರ್ಷಿತಗೊಳ್ಳುತ್ತವೆ. ಇದರಿಂದ ಪಾಸ್ಪೇಟ್‌ ಗೊಬ್ಬರದ ಅಂಶ ಹೆಚ್ಚಾಗುತ್ತದೆ. ಚಿಟ್ಟಕಿತ್ತಳೆ ಬೆಳೆಸುವ ಅಭಿಯಾನಕ್ಕೆ ಎಲ್ಲರೈತರು ಮುಂದಾಗಬೇಕು.

ಚಿಟ್ಟಕಿತ್ತಳೆ ಸಾವಯವ ಬೆಳೆಯಾಗಿದ್ದು ಆರೋಗ್ಯಕರವಾರ ಹಣ್ಣಾಗಿದೆ. ಗಿಡಗಳು ವರ್ಷ ಕಳೆದಂತೆ ಉತ್ತಮ ಫಸಲು ನೀಡುತ್ತವೆ. ಆದರೆ, ವಿನಾಶದಂಚಿಗೆ ತಲುಪಿದ್ದರಿಂದ ಕೆವಿಕೆ ಅಧಿಕಾರಿಗಳ ಸಹಯೋಗದೊಂದಿಗೆ ಚಿಟ್ಟಕಿತ್ತಲೆ ಬೆಳೆಯಲು ಅಭಿಯಾನ ನಡೆಸಲಾಗುವುದು.

– ನಯನಾ ತಳವಾರ, ಕೃಷಿಕರು.

ನಮ್ಮ ಜಮೀನಿನಲ್ಲಿದ್ದ ಚಿಟ್ಟಕಿತ್ತಳೆ ಗಿಡವನ್ನು ಉಳಿಸಿಕೊಂಡೇ ಕಾಫಿ ತೋಟ ಮಾಡಿದ್ದೇವೆ. ಈಗ ನಮ್ಮ ತೋಟದಲ್ಲಿರುವ ಮರಕ್ಕೆ 35 ರಿಂದ 40 ವರ್ಷ ಆಗಿರಬಹುದು. ಇದು ಪ್ರತಿ ವರ್ಷ 600ಕ್ಕೂ ಹೆಚ್ಚು ಹಣ್ಣುಗಳನ್ನು ಬಿಡುತ್ತಿದೆ.

– ಕೆ.ಆರ್‌.ಸುರೇಶ್‌, ಹುಲ್ಲೆಮನೆ, ಕೃಷಿಕರು.

ನಮ್ಮ ತೋಟದಲ್ಲಿ 60 ವರ್ಷದ ಚಿಟ್ಟಗಿತ್ತಳೆ ಮರವಿದೆ. ನನ್ನ ತಂದೆ 30 ವರ್ಷದ ಹಿಂದೆ ತೋಟ ಕೊಳ್ಳುವಾಗಲೇ ಈ ಮರ ಇತ್ತು. ಮರದಲ್ಲಿಮುಳ್ಳು ಕಡಿಮೆಯಿದ್ದು ಒಳ್ಳೆ ಗಾತ್ರದ ಹಣ್ಣುಗಳು ಬಿಡುತ್ತದೆ. ಬಾದ್ಲಿಕೆ ಕಾಟ ಮಿತಿ ಮೀರದಂತೆ ಎಚ್ಚರವಹಿಸಿದರೆ ಮರ ಉಳಿಸಿಕೊಳ್ಳಬಹುದು.

You May Also Like

More From Author

+ There are no comments

Add yours