ರಾಜ್ಯದ ಮಕ್ಕಳಲ್ಲಿ ಹೆಚ್ಚುತ್ತಿದೆ ಮಂಗನಬಾವು: ಪೋಷಕರೇ ಚಳಿಗಾಲದ ಹೊತ್ತಲ್ಲಿ ಹುಷಾರು!

1 min read

ಹೈಲೈಟ್ಸ್‌:

  • ಚಳಿಗಾಲದಲ್ಲಿ ಸಾಮಾನ್ಯವಾಗಿ ಕಾಣಿಸಿಕೊಳ್ಳುವ ಕಾಯಿಲೆ
  • ಇಂದ್ರ ಧನುಷ್‌ ಲಸಿಕಾ ಅಭಿಯಾನದಲ್ಲಿ ಲಸಿಕೆಗೆ ಒತ್ತಾಯ
  • ಮಂಫ್ಸ್‌ ಸೋಂಕನ್ನು ಕೆಪ್ಪಟೆ ಅಥವಾ ಮಂಗನ ಬಾವು ಅಂತಲೂ ಕರೆಯುತ್ತಾರೆ

ಬೆಂಗಳೂರುರಾಜ್ಯದಲ್ಲಿ ಚಳಿಗಾಲ ಆರಂಭವಾಗಿದ್ದು, ಮಕ್ಕಳು ಋುತುಮಾನಾಧಾರಿತ ಕಾಯಿಲೆಗೆ ತುತ್ತಾಗುತ್ತಿದ್ದಾರೆ. ಈ ವರ್ಷ ಹೆಚ್ಚಿನ ಮಕ್ಕಳು ಮಂಫ್ಸ್‌ ಸೋಂಕಿಗೆ ತುತ್ತಾಗಿದ್ದಾರೆ.

ಮಂಫ್ಸ್‌ ಇದನ್ನು ಕೆಪ್ಪಟೆ ಅಥವಾ ಮಂಗನ ಬಾವು ಅಂತಲೂ ಕರೆಯುತ್ತಾರೆ. ಸಾಂಕ್ರಾಮಿಕ ವೈರಲ್‌ ಸೋಂಕಾಗಿದ್ದು, ಪ್ರಾಥಮಿಕವಾಗಿ ಲಾಲಾ ರಸ ಗ್ರಂಥಿಗಳ ಮೇಲೆ ಪರಿಣಾಮ ಬೀರುತ್ತದೆ. ವೈರಸ್‌ ವಿಶಿಷ್ಟವಾಗಿ ಉಸಿರಾಟದ ಹನಿಗಳು ಅಥವಾ ಸೋಂಕಿತ ಲಾಲಾ ರಸದ ನೇರ ಸಂಪರ್ಕದ ಮೂಲಕ ಹರಡುತ್ತದೆ. ನಿಕಟ ವೈಯಕ್ತಿಕ ಸಂಪರ್ಕದಿಂದಲೂ ಈ ಸೋಂಕು ಹರಡುತ್ತದೆ ಎನ್ನುತ್ತಾರೆ ಮಕ್ಕಳ ತಜ್ಞರು.

ಇಂದ್ರ ಧನುಷ್‌ನಲ್ಲಿ ಎಂಎಂಆರ್‌ ನೀಡಿ

ಸದ್ಯ ಮಕ್ಕಳಿಗೆ ನೀಡುವ ಇಂದ್ರ ಧನುಷ್‌ ಲಸಿಕಾ ಅಭಿಯಾನದಲ್ಲಿ ಮಂಫ್ಸ್‌ (ಕೆಪ್ಪಟೆ ಅಥವಾ ಮಂಗನ ಬಾವು) ಕಾಯಿಲೆ ನಿವಾರಣೆಗೆ ಬೇಕಾದ ಲಸಿಕೆ ನೀಡುತ್ತಿಲ್ಲ. ಇದರಿಂದ ಈ ಸೋಂಕಿಗೆ ಹೆಚ್ಚಿ ಮಕ್ಕಳು ಒಳಗಾಗುತ್ತಿದ್ದಾರೆ ಎನ್ನುತ್ತಾರೆ ತಜ್ಞರು. ಇಂದ್ರ ಧನುಷ್‌ ಲಸಿಕೆಯಲ್ಲಿ ಎಂಆರ್‌ ಲಸಿಕೆ ನೀಡಲಾಗುತ್ತದೆ. ಈ ಲಸಿಕೆ ದಡಾರ ಮತ್ತು ರುಬೆಲ್ಲಾ ಕಾಯಿಲೆ ಗುಣಪಡಿಸುತ್ತದೆ. ಎಂಆರ್‌ ಲಸಿಕೆ ಬದಲಿಗೆ ಎಎಂಆರ್‌ ಲಸಿಕೆ ನೀಡಿದಲ್ಲಿ ಮಂಫ್ಸ್‌ನಿಂದ ಮಕ್ಕಳು ಪಾರಾಗಬಹದಿತ್ತು. ಎಂಎಂಆರ್‌ ನೀಡುವುದರಿಂದ ದಡಾರ ಮತ್ತು ರುಬೆಲ್ಲಾ ಕಾಯಿಲೆ ಜತೆ ಮಂಫ್ಸ್‌ ಕಾಯಿಲೆಗೂ ಔಷಧ ಸಿಗುತ್ತದೆ ಎನ್ನುತ್ತಾರೆ ಭಾರತೀಯ ವೈದ್ಯಕೀಯ ಸಂಘದ ರಾಜ್ಯಾಧ್ಯಕ್ಷ ಹಾಗೂ ಮಕ್ಕಳ ತಜ್ಞ ಡಾ. ಎಸ್‌. ಶ್ರೀನಿವಾಸ್‌.

ಕೆಪ್ಪಟೆಯ ಪ್ರಮುಖ ಲಕ್ಷಣಗಳು?

ಕೆಪ್ಪಟೆಯ ವಿಶಿಷ್ಟ ಲಕ್ಷಣವೆಂದರೆ ಒಂದು ಅಥವಾ ಎರಡೂ ಪರೋಟಿಡ್‌ ಗ್ರಂಥಿಗಳ ಊತ. ಇದರ ಪರಿಣಾಮವಾಗಿ ಕೆನ್ನೆ ಊದಿಕೊಳ್ಳುತ್ತದೆ. ಇತರ ಸಾಮಾನ್ಯ ರೋಗ ಲಕ್ಷಣಗಳು ಜ್ವರ, ತಲೆ ನೋವು, ಸ್ನಾಯು ನೋವು, ಆಯಾಸ ಮತ್ತು ನುಂಗಲು ತೊಂದರೆಯಾಗುವುದು. ಈ ರೋಗ ಲಕ್ಷಣಗಳು ಇತರ ಉಸಿರಾಟದ ಸೋಂಕುಗಳೊಂದಿಗೆ ಕ್ರಮಿಸಬಹುದು.

‘ಕೆಪ್ಪಟೆಗೆ ಯಾವುದೇ ನಿರ್ದಿಷ್ಟ ಆಂಟಿ ವೈರಲ್‌ ಚಿಕಿತ್ಸೆ ಇಲ್ಲ. ಎಂಎಂಆರ್‌ (ದಡಾರ, ಮಂಗನ ಬಾವು ಮತ್ತು ರುಬೆಲ್ಲಾ) ಲಸಿಕೆ ಕೆಪ್ಪಟೆಯ ಕಡಿಮೆ ಮಾಡಲು ಹೆಚ್ಚು ಪರಿಣಾಮಕಾರಿಯಾಗಿದೆ. ಈ ಲಸಿಕೆ ದೀರ್ಘಾವಧಿಯ ಪ್ರತಿರಕ್ಷೆ ಒದಗಿಸುತ್ತದೆ’ ಎಂದು ಭಾರತೀಯ ವೈದ್ಯಕೀಯ ಸಂಘದ ರಾಜ್ಯಾಧ್ಯಕ್ಷ ಡಾ. ಶ್ರೀನಿವಾಸ್‌ ಎಸ್‌. ಹೇಳಿದ್ದಾರೆ.

‘ಋುತುಮಾನದಲ್ಲಿ ಕಾಣಿಸಿಕೊಳ್ಳುವ ಕಾಯಿಲೆಗಳಾದ ಶೀತ, ಜ್ವರ, ಕೆಮ್ಮು, ಅಲರ್ಜಿ ಜತೆ ಇತ್ತೀಚಿನ ದಿನದಲ್ಲಿ ಮಂಫ್ಸ್‌ ಕೂಡ ಹೆಚ್ಚಿನ ಮಕ್ಕಳಲ್ಲಿ ಕಾಣಿಸಿಕೊಳ್ಳುತ್ತಿದೆ. ಆರಂಭದಲ್ಲಿಯೇ ಚಿಕಿತ್ಸೆ ಪಡೆದರೆ ಇದು ಗಂಭೀರವಾದ ಕಾಯಿಲೆಯಲ್ಲ. ಮೂರ್ನಾಲ್ಕು ದಿನವಿದ್ದು, ಕಡಿಮೆಯಾಗುತ್ತದೆ’ ಎಂದು ಮಕ್ಕಳ ತಜ್ಞರಾದ ಡಾ. ಚಿಕ್ಕನರಸಾರೆಡ್ಡಿ ಹೇಳಿದ್ದಾರೆ.

You May Also Like

More From Author

+ There are no comments

Add yours