ಗದಗ (ಜ.8): ಚಿತ್ರನಟ ಯಶ್ ಬರ್ತಡೇಗೆ ಕಾರ್ಯಕ್ರಮ ಮಾಡೋಕೆ ತಯಾರಿ ಮಾಡೋ ವೇಳೆ ವಿದ್ಯುತ್ ತಂತಿ ತಗುಲಿ ಯುವಕರು ಮೃತಪಟ್ಟಿದ್ದಾರೆ ಇದು ಅತ್ಯಂತ ದುರ್ದೈವಕರ ಘಟನೆ ಎಂದು ಸಚಿವ ಎಚ್ಕೆ ಪಾಟೀಲ್ ಬೇಸರ ವ್ಯಕ್ತಪಡಿಸಿದರು
ಯಶ್ ಅಭಿಮಾನಿಗಳ ದಾರುಣ ಸಾವು ವಿಚಾರ ಸಂಬಂಧ ಗದಗನಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಸಚಿವರು, ಇಂದು ಯಶ್ ಬರ್ತಡೇ ಇದ್ದಿದ್ರಿಂದ ಸೂರಣಗಿ ನಿನ್ನೆ ಮಧ್ಯರಾತ್ರಿಯೇ ಫ್ಲೆಕ್ಸ್ ನಿಲ್ಲಿಸಲು ಯುವಕರು ಮುಂದಾಗಿದ್ರು. ಫ್ಲೆಕ್ಸ್ ಮಾಡಿಸಿ ಅದರಲ್ಲಿ ರಾಡ್ ಇಟ್ಟುಕೊಂಡು ಕಟ್ಟುತ್ತಿದ್ದರು. ರಾಡ್ ಉದ್ದ ಇದ್ದಿದ್ದರಿಂದ ಕೆಇಬಿ ಲೈನ್ಗೆ ತಾಗಿ ವಿದ್ಯುತ್ ಹರಿದು ಮೃತಪಟ್ಟಿದ್ದಾರೆ. ಮೂವರಿಗೆ ತೀವ್ರ ಗಾಯಗಳಾಗಿವೆ. ಲಕ್ಷ್ಮೇಶ್ವರ ಆಸ್ಪತ್ರೆಗೆ ಒಬ್ಬರನ್ನು ದಾಖಲಿಸಲಾಗಿದೆ. ಉಳಿದಿಬ್ಬರಿಗೆ ಸುಟ್ಟ ಗಾಯಗಳು ಹೆಚ್ಚಾದ ಹಿನ್ನೆಲೆಯಲ್ಲಿ ಜಿಮ್ಸ್ ಆಸ್ಪತ್ರೆಗೆ ಸಾಗಿಸಲಾಗಿದೆ ಎಂದರು.
ಈಗಾಗಲೇ ಎಸ್ಪಿ ಅವರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದ್ದಾರೆ. ಉತ್ಸಾಹದಿಂದ ಕಾರ್ಯಕ್ರಮ ಚೆನ್ನಾಗಿ ಮಾಡಬೇಕು ಎಂಬ ಹುರುಪು ಇಂದು ಅವರನ್ನು ಇವತ್ತು ನಮ್ಮಿಂದ ಕಸಿದುಕೊಂಡಿದೆ. ಮೃತರೆಲ್ಲರೂ ಪರಿಶಿಷ್ಟ ಜಾತಿ ವರ್ಗಕ್ಕೆ ಸೇರಿದ ಅತ್ಯಂತ ಬಡ ಕುಟುಂಬ ಯುವಕರಾಗಿದ್ದಾರೆ. ಯುವಕರ ಕುಟುಂಬಕ್ಕೆ ಭಗವಂತ ದುಖ ಸಹಿಸುವ ಸ್ಥೈರ್ಯ ಕೊಡಲಿ. ಆಸ್ಪತ್ರೆಯಲ್ಲಿ ಇರುವವರು ಬೇಗ ಗುಣಮುಖರಾಗಲಿ. ಮೃತಪಟ್ಟ ಯುವಕರಿಗೆ ಸರ್ಕಾರ ಪರಿಹಾರ ಕೊಡಬೇಕು. ಇಂದು ಸಿಎಂ ಬಳಿ ಹೋಗ್ತಿದ್ದೇನೆ ಪರಿಹಾರ ಕೊಡುವ ಸಂಬಂಧ ಸಿಎಂ ಹತ್ತಿರ ಮಾತಾಡ್ತೇನೆ. ನೋವು ತರುವಂತ ಘಟನೆ ಆದಾಗ ಕೆಲವು ನಿಯಮ ತರಬೇಕು ಅಂತ ಹಲವರ ಸಲಹೆ ಇದೆ. ಆ ಚಿಂತನೆ ನಡೆಸಲಾಗುವುದು ಎಂದರು.
+ There are no comments
Add yours