ಹೈಲೈಟ್ಸ್:
- ಚಂಡೀಗಢ ಮೇಯರ್ ಚುನಾವಣೆಯಲ್ಲಿ ಚುನಾವಣಾಧಿಕಾರಿ ಕಾರ್ಯವೈಖರಿಗೆ ಅಸಮಾಧಾನ
- ಪ್ರಜಾಪ್ರಭುತ್ವದ ಕಗ್ಗೊಲೆಗೆ ನಾವು ಅವಕಾಶ ನೀಡುವುದಿಲ್ಲ ಎಂದು ಸುಪ್ರೀಂಕೋರ್ಟ್ ಹೇಳಿಕೆ
- ವಿವಾದದ ಬಗ್ಗೆ ವಿವರಣೆ ನೀಡುವಂತೆ ಚುನಾವಣಾಧಿಕಾರಿ ಅನಿಲ್ ಮಾಸಿಗ್ಗೆ ನ್ಯಾಯಪೀಠ ಸೂಚನೆ
ಹೊಸದಿಲ್ಲಿ: ಚಂಡೀಗಢ ಮೇಯರ್ ಚುನಾವಣೆ ವೈಖರಿ, ಫಲಿತಾಂಶ ಪ್ರಕಟಿಸಿದ ರೀತಿ ಪ್ರಜಾಪ್ರಭುತ್ವದ ಕಗ್ಗೊಲೆ, ಪ್ರಜಾಪ್ರಭುತ್ವದ ಅಪಹಾಸ್ಯ ಎಂದು ಖಾರವಾದ ಪದಗಳಲ್ಲಿ ವ್ಯಾಖ್ಯಾನಿಸಿರುವ ಸುಪ್ರೀಂ ಕೋರ್ಟ್, ಮತ ಪತ್ರಗಳನ್ನು ವಿರೂಪಗೊಳಿಸಿದ ಚುನಾವಣಾಧಿಕಾರಿ ವಿರುದ್ಧ ಕಾನೂನು ಕ್ರಮ ಜರುಗಿಸಬೇಕಾದ ಅಗತ್ಯವಿದೆ ಎಂದು ಅಭಿಪ್ರಾಯಪಟ್ಟಿದೆ.
ಮೇಯರ್ ಚುನಾವಣಾ ಫಲಿತಾಂಶದ ಸಿಂಧುತ್ವ ಪ್ರಶ್ನಿಸಿ ಆಮ್ ಆದ್ಮಿ ಪಕ್ಷ ಸಲ್ಲಿಸಿದ್ದ ಅರ್ಜಿ ವಿಚಾರಣೆ ನಡೆಸಿದ ಸುಪ್ರೀಂ ಕೋರ್ಟ್ನ ಸಿಜೆಐ ಡಿವೈ ಚಂದ್ರಚೂಡ್, ನ್ಯಾ ಜೆಬಿ ಪರ್ದಿವಾಲಾ, ನ್ಯಾ ಮನೋಜ್ ಮಿಶ್ರಾ ಅವರಿದ್ದ ನ್ಯಾಯಪೀಠ, ಚುನಾವಣಾ ಅಧಿಕಾರಿಯಾಗಿ ಕಾರ್ಯ ನಿರ್ವಹಿಸಿದ್ದ ಬಿಜೆಪಿಯ ಅನಿಲ್ ಮೈಶ್ ಅವರ ನಡೆಗೆ ಆಕ್ರೋಶ ವ್ಯಕ್ತಪಡಿಸಿದೆ.
”ಚುನಾವಣಾ ಅಧಿಕಾರಿಯಾಗಿದ್ದ ಅನಿಲ್ ಮಾಸಿಹ್ ಅವರು ಮತಪತ್ರಗಳನ್ನು ತಿರುಚಿದ್ದಾರೆ. ಬಿಜೆಪಿಗೆ ಅನುಕೂಲ ಮಾಡಿಕೊಡಲು ಆಪ್ ಸದಸ್ಯರ ಮತ ಪತ್ರಗಳ ಮೇಲೆ ಉದ್ದೇಶಪೂರ್ವಕವಾಗಿ ಗೀಚಿ, ಮತಗಳನ್ನು ಅಸಿಂಧುಗೊಳಿಸಿದ್ದಾರೆ,” ಎಂದು ಆಪ್ ಪರ ವಕೀಲರು ನ್ಯಾಯಪೀಠದ ವಾದ ಮಂಡಿಸಿದರು.
ಚುನಾವಣೆ ನಡೆಸಿದ ರೀತಿ, ಫಲಿತಾಂಶ ಪ್ರಕಟಿಸಿದ ಕ್ರಮ ಪ್ರಶ್ನಿಸಿರುವ ಸುಪ್ರೀಂ ಕೋರ್ಟ್, ಕ್ಯಾಮೆರಾ ನೋಡಿಕೊಂಡು ಚುನಾವಣಾಧಿಕಾರಿ ಏನು ಮಾಡುತ್ತಿದ್ದಾರೆ? ಇದೇನಾ ಚುನಾವಣೆ ನಡೆಸುವ ವಿಧಾನ ಎಂದು ಸಾಲಿಸಿಟರ್ ಜನರಲ್ ಅವರನ್ನು ನ್ಯಾಯಪೀಠ ಪ್ರಶ್ನಿಸಿತು.
ಪ್ರಜಾಪ್ರಭುತ್ವದ ಕತ್ತು ಹಿಸುಕಲು ಬಿಡಲ್ಲ
”ಚುನಾವಣೆಯಲ್ಲಿ ಪಾರದರ್ಶಕತೆ ಕಾಯ್ದುಕೊಳ್ಳಬೇಕು ಎಂಬುದು ಪ್ರಜಾಪ್ರಭುತ್ವದ ಆಶಯ. ಆದರೆ, ಚಂಡೀಗಢ ಮೇಯರ್ ಚುನಾವಣೆಯಲ್ಲಿ ಇದೆಲ್ಲವೂ ಮಾಯವಾಗಿದೆ. ದೇಶದಲ್ಲಿ ಪ್ರಜಾಪ್ರಭುತ್ವ ವ್ಯವಸ್ಥೆಯನ್ನು ಹತ್ಯೆ ಮಾಡಲು ನಾವು ಅವಕಾಶ ಕೊಡುವುದಿಲ್ಲ,” ಎಂದು ಸಿಜೆಐ ಚಂದ್ರಚೂಡ್ ಗುಡುಗಿದರು. ಇದೇ ವೇಳೆ ಫೆ 19 ರಂದು ಸುಪ್ರೀಂ ಕೋರ್ಟ್ಗೆ ಹಾಜರಾಗಿ ಚುನಾವಣೆ ನಡೆಸಿದ ವಿಧಾನದ ಬಗ್ಗೆ ವಿವರಣೆ ನೀಡುವಂತೆ ಅನಿಲ್ ಮಾಸಿಹ್ ಅವರಿಗೆ ಸಿಜೆಐ ಚಂದ್ರಚೂಡ್ ನಿರ್ದೇಶನ ನೀಡಿದರು.
ಹೈಕೋರ್ಟ್ಗೆ ವರದಿ ಸಲ್ಲಿಸಿ
ಮತದಾನ ಸೇರಿದಂತೆ ಮೇಯರ್ ಚುನಾವಣಾ ಪ್ರಕ್ರಿಯೆಯ ಎಲ್ಲಾ ವಿವರಗಳನ್ನು ವಿಡಿಯೋಗ್ರಫಿ ಸಮೇತ ಪೂರ್ಣ ಮಾಹಿತಿಯನ್ನು ಪಂಜಾಬ್ – ಹರಿಯಾಣ ಹೈಕೋರ್ಟ್ಗೆ ಸಲ್ಲಿಸುವಂತೆ ಸುಪ್ರೀಂ ಕೋರ್ಟ್ ನಿರ್ದೇಶನ ನೀಡಿದೆ. ಜತೆಗೆ ಮತಪತ್ರಗಳನ್ನು ಸಂರಕ್ಷಣೆ ಮಾಡುವಂತೆ ಪಂಜಾಬ್ – ಹರಿಯಾಣ ಹೈಕೋರ್ಟ್ ರಿಜಿಸ್ಟ್ರಾರ್ಗೆ ಸೂಚನೆ ನೀಡಿರುವ ಸುಪ್ರಿಂ ಕೋರ್ಟ್, ಫೆ 12ರಂದು ವಿಚಾರಣೆಗೆ ದಿನಾಂಕ ನಿಗದಿ ಮಾಡುವಂತೆಯೂ ನಿರ್ದೇಶಿಸಿದೆ.
ಪಾಲಿಕೆ ಸಭೆ ರದ್ದು
ಈ ಮಧ್ಯೆ ಫೆ 7 ರಂದು ಕರೆಯಲಾಗಿದ್ದ ಚಂಡೀಗಢ ಪಾಲಿಕೆಯ ಮೊದಲ ಸಭೆಯನ್ನು ಅನಿರ್ದಿಷ್ಟಾವಧಿಗೆ ಮುಂದೂಡಿ ಸುಪ್ರೀಂ ಕೋರ್ಟ್ ಆದೇಶ ಮಾಡಿದೆ. ಮುಂದಿನ ಆದೇಶದವರೆಗೆ ಪಾಲಿಕೆ ಸಭೆ ನಡೆಸದಂತೆ ತಾಕೀತು ಮಾಡಿದೆ. ಜ 30 ರಂದು ನಡೆದಿದ್ದ ಮೇಯರ್ ಚುನಾವಣೆಯಲ್ಲಿಆಮ್ ಆದ್ಮಿ ಪಕ್ಷ ಹಾಗೂ ಕಾಂಗ್ರೆಸ್ ಜಂಟಿ ಅಭ್ಯರ್ಥಿ ಕುಲದೀಪ್ ಕುಮಾರ್ ಅವರನ್ನು ಬಿಜೆಪಿಯ ಮನೋಜ್ ಸೋನ್ಕರ್ 12-16 ಮತಗಳ ಅಂತರದಲ್ಲಿ ಸೋಲಿಸಿದ್ದರು.
+ There are no comments
Add yours