ಹೈಲೈಟ್ಸ್:
- ಕರ್ನಾಟಕದ 17 ಕ್ಷೇತ್ರಗಳಿಗೆ ಅಭ್ಯರ್ಥಿಗಳನ್ನು ಘೋಷಿಸಿದ ಕಾಂಗ್ರೆಸ್
- ಬಹುತೇಕ ಹೊಸ ಮುಖಗಳಿಗೆ ಮಣೆ ಹಾಕಿರುವುದರ ಹಿಂದಿನ ಲೆಕ್ಕಾಚಾರವೇನು?
- ಕುಟುಂಬ ರಾಜಕಾರಣದ ಆರೋಪವನ್ನೂ ನಿರ್ಲಕ್ಷಿಸಿ ಟಿಕೆಟ್ ಕೊಟ್ಟಿದ್ದು ಏಕೆ?
ಬೆಂಗಳೂರು : ಅಭ್ಯರ್ಥಿಗಳ ಆಯ್ಕೆಗೆ ಕಠಿಣ ಮಾನದಂಡ ಬದಿಗಿರಿಸಿ, ಕುಟುಂಬ ರಾಜಕಾರಣದ ಆರೋಪವನ್ನೂ ನಿರ್ಲಕ್ಷಿಸಿದ ಕಾಂಗ್ರೆಸ್ ಹೈಕಮಾಂಡ್ ಅತೃಪ್ತಿ ತಡೆಗೆ ಮುಂಜಾಗ್ರತೆ ವಹಿಸಿ ಅಭ್ಯರ್ಥಿಗಳ ಹೆಸರು ಘೋಷಿಸಿದೆ. ಗುರುವಾರ 17 ಕ್ಷೇತ್ರಗಳಿಗೆ ಟಿಕೆಟ್ ಘೋಷಿಸಿದ್ದು, ಹಲವು ಹೊಸ ಮುಖಗಳಿಗೆ ಕಾಂಗ್ರೆಸ್ ಮಣೆ ಹಾಕಿದೆ. ಇದರ ನಡುವೆ ಹಲವು ಲೆಕ್ಕಾಚಾರ ಹಾಕಿ ಅಭ್ಯರ್ಥಿಗಳನ್ನು ಕಾಂಗ್ರೆಸ್ ಹೈಕಮಾಂಡ್ ಕಣಕ್ಕಿಳಿಸಿದೆ.
ಕಾಂಗ್ರೆಸ್ ಹೈಕಮಾಂಡ್ ಲೆಕ್ಕಾಚಾರ ಏನು?
ಬೆಳಗಾವಿ, ಚಿಕ್ಕೋಡಿ ಕ್ಷೇತ್ರಗಳಿಗೆ ಸಂಬಂಧಿಸಿ ಈ ಮಾತು ಅಕ್ಷರಶಃ ಸತ್ಯ. ಬೆಳಗಾವಿಯಲ್ಲಿ ಸಚಿವ ಸತೀಶ್ ಜಾರಕಿಹೊಳಿ ಮತ್ತು ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ನಡುವೆ ಪೈಪೋಟಿಯಿದೆ. ಇಬ್ಬರೂ ಮಕ್ಕಳನ್ನು ರಾಜಕಾರಣಕ್ಕೆ ತರಲು ಮುಂದಾಗಿದ್ದವರು. ಈ ಇಬ್ಬರಲ್ಲಿ ಒಬ್ಬರಿಗೆ ಮಣೆ ಹಾಕಿದರೆ ಮತ್ತೊಬ್ಬರು ಮುನಿಸಿಕೊಳ್ಳುವುದು ಗ್ಯಾರಂಟಿಯಿತ್ತು. ಹಾಗಾಗಿ ಬೆಳಗಾವಿಯಿಂದ ಮೃಣಾಲ್ ಹೆಬ್ಬಾಳಕರ್, ಚಿಕ್ಕೋಡಿಯಿಂದ ಪ್ರಿಯಾಂಕಾ ಜಾರಕಿಹೊಳಿ ಅವರಿಗೆ ಟಿಕೆಟ್ ನೀಡಲಾಗಿದೆ. ಈ ಮೂಲಕ ಜತೆಜತೆಯಾಗಿ ಹೋಗುವಂತೆ ಹೆಬ್ಬಾಳಕರ್, ಜಾರಕಿಹೊಳಿ ಕುಟುಂಬಕ್ಕೆ ಸಂದೇಶ ನೀಡಲಾಗಿದೆ. ಇದು ಹೈಕಮಾಂಡ್ನ ತಂತ್ರಗಾರಿಕೆ.
ಶಾಮನೂರು ಕುಟುಂಬಕ್ಕೆ ಮಣೆ:
ದಾವಣಗೆರೆಯಲ್ಲಿ ಶಾಮನೂರು ಕುಟುಂಬ ಬಿಟ್ಟು ಕಾಂಗ್ರೆಸ್ಗೆ ರಾಜಕಾರಣ ಮಾಡಲು ಸಾಧ್ಯವಿಲ್ಲ. ಸಚಿವ ಎಸ್ಎಸ್ ಮಲ್ಲಿಕಾರ್ಜುನ್ ಸ್ಪರ್ಧೆಗೆ ಮನಸ್ಸು ಮಾಡದ ಕಾರಣದ ಶಾಮನೂರು ಕುಟುಂಬದ ಸೊಸೆ ಡಾ ಪ್ರಭಾ ಮಲ್ಲಿಕಾರ್ಜುನ್ ಅವರನ್ನೇ ಸ್ಪರ್ಧೆಗಿಳಿಸಲಾಗುತ್ತಿದೆ.
ಕುರುಬ ಫ್ಯಾಕ್ಟರ್:
ಕೊಪ್ಪಳದಲ್ಲಿ ಕುರುಬ ಸಮುದಾಯದ ಮತ ನಿರ್ಣಾಯಕ. ಹಾಗಾಗಿ ಸಿಎಂ ಆಪ್ತ ವಲಯದ ರಾಜಶೇಖರ್ ಹಿಟ್ನಾಳ್ ಅವರಿಗೆ ಮತ್ತೆ ಟಿಕೆಟ್ ನೀಡಲಾಗಿದೆ. ಇವರ ಸಹೋದರ ರಾಘವೇಂದ್ರ ಹಿಟ್ನಾಳ್ ಶಾಸಕರಾಗಿದ್ದಾರೆ.
ಉತ್ತಮ ಪ್ರೊಫೈಲ್: ಜಯಪ್ರಕಾಶ್ ಹೆಗ್ಡೆ ಈ ಹಿಂದೆ ಕಾಂಗ್ರೆಸ್ನಿಂದಲೇ ಉಡುಪಿ – ಚಿಕ್ಕಮಗಳೂರು ಕ್ಷೇತ್ರದ ಸಂಸದರಾಗಿದ್ದರು. ಇಲ್ಲಿ ಹೇಳಿಕೊಳ್ಳುವಂತಹ ಅಭ್ಯರ್ಥಿಗಳು ಇರಲಿಲ್ಲ. ಹಾಗಾಗಿ ಸಜ್ಜನ ಹೆಗ್ಡೆ ಅವರನ್ನೇ ನೆಚ್ಚಿಕೊಳ್ಳಲಾಗಿದೆ.
ಮರಾಠಾ ಎಫೆಕ್ಟ್: ಉತ್ತರ ಕನ್ನಡದ ಅಭ್ಯರ್ಥಿಯಾಗಿ ಡಾ.ಅಂಜಲಿ ನಿಂಬಾಳ್ಕರ್ ಹೊರಹೊಮ್ಮಿರುವುದು ಅಚ್ಚರಿಯೆನಿಸಿದರೂ ಬಹಳ ಹಿಂದಿನಿಂದಲೂ ಅವರ ಹೆಸರು ಓಡುತ್ತಿತ್ತು. ಇದೇ ಕ್ಷೇತ್ರದ ವ್ಯಾಪ್ತಿಯ ಖಾನಾಪುರದ ಮಾಜಿ ಶಾಸಕಿಯಾಗಿರುವ ಇವರು, ಮರಾಠಾ ಸಮುದಾಯದವರು. ಉತ್ತರ ಕನ್ನಡ ಕ್ಷೇತದಲ್ಲಿ ಮರಾಠಿಗರ ಮತಗಳೂ ನಿರ್ಣಾಯಕವಾಗಿರುವುದರಿಂದ ಕಾಂಗ್ರೆಸ್ ಈ ಪ್ರಯೋಗಕ್ಕಿಳಿದಿದೆ.
ಅಚ್ಚರಿಯೂ ಹೌದು: ನಿವೃತ್ತ ಐಎಎಸ್ ಅಧಿಕಾರಿ ಜಿ.ಕುಮಾರ ನಾಯಕ್ ರಾಯಚೂರು ಅಭ್ಯರ್ಥಿಯಾಗಿರುವುದು ತುಸು ಅಚ್ಚರಿಯೂ ಹೌದು. ಯಾಕೆಂದರೆ, ಕ್ಷೇತ್ರದಲ್ಲಿ ಕಾಂಗ್ರೆಸ್ಗೆ ಅಭ್ಯರ್ಥಿಗಳ ಕೊರತೆಯಿರಲಿಲ್ಲ. ಸೇವಾ ನಿವೃತ್ತಿ ಬಳಿಕ ಕ್ಷೇತ್ರದಲ್ಲಿಸಂಚಾರ ಮಾಡುತ್ತಿರುವ ಕುಮಾರ ನಾಯಕ್ ಪಕ್ಷದ ಮುಖಂಡರಿಗೆ ಭರವಸೆಯಾಗಿ ಕಂಡಿದ್ದರು. ಹಾಗಾಗಿ ಅವರಿಗೆ ಟಿಕೆಟ್ ನೀಡಲಾಗಿದೆ.
ಅನಿವಾರ್ಯ ಆಯ್ಕೆಗಳು!
ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರಿಗೆ ಕಾರ್ಯಬಾಹುಳ್ಯ ಜಾಸ್ತಿಯಿರುವ ಕಾರಣ ಕಲಬುರಗಿಯಿಂದ ಸ್ಪರ್ಧಿಸುತ್ತಿಲ್ಲ. ಅವರ ಪುತ್ರ ಹಾಗೂ ಸಚಿವ ಪ್ರಿಯಾಂಕ್ ಖರ್ಗೆ ಸ್ಪರ್ಧೆ ಪ್ರಸ್ತಾಪವಿದ್ದರೂ ಅವರು ಮನಸ್ಸು ಮಾಡಲಿಲ್ಲ. ಕಾರಣ ಅನಿವಾರ್ಯವಾಗಿ ಖರ್ಗೆ ಅಳಿಯ ರಾಧಾಕೃಷ್ಣ ಅವರನ್ನು ಪರಿಗಣಿಸಲಾಗಿದೆ. ಚಿತ್ರದುರ್ಗದಲ್ಲಿ ಮಾಜಿ ಸಂಸದ ಬಿಎನ್ ಚಂದ್ರಪ್ಪ, ಬೆಂಗಳೂರು ದಕ್ಷಿಣ ಸೌಮ್ಯ ರೆಡ್ಡಿ, ಬೆಂಗಳೂರು ಸೆಂಟ್ರಲ್ ಮನ್ಸೂರ್ ಅಲಿ ಖಾನ್, ಬೆಂಗಳೂರು ಉತ್ತರ ಪ್ರೊ ರಾಜೀವ್ ಗೌಡ, ಮೈಸೂರು ಎಂ.ಲಕ್ಷ್ಮಣ್, ದಕ್ಷಿಣ ಕನ್ನಡ ಪದ್ಮರಾಜ್, ಧಾರವಾಡ ವಿನೋದ್ ಅಸೂಟಿ ಪರಿಗಣಿಸಿರುವುದು ಕೂಡ ಒಂದು ರೀತಿ ಅನಿವಾರ್ಯ ಆಯ್ಕೆ. ಅಭ್ಯರ್ಥಿಗಳ ಕೊರತೆಯೂ ಇದಕ್ಕೆ ಕಾರಣ.
+ There are no comments
Add yours