ಬಿಸಿಲಿನ ತಾಪಕ್ಕೆ ಉದುರುತ್ತಿವೆ ಮಾವಿನ ಹೂ-ಪಿಂದೆಗಳು; ಇಳುವರಿ ಕುಸಿಯುವ ಆತಂಕ

1 min read

ಹೈಲೈಟ್ಸ್‌:

  • ಬಿಸಿಲಿನ ತಾಪಕ್ಕೆ ಉದುರುತ್ತಿವೆ ಮಾವಿನ ಹೂವುಗಳು
  • ಈ ಬಾರಿ ಇಳುವರಿ ಕಡಿಮೆಯಾಗುವ ಆತಂಕ
  • ಕಾಯಿ ಕಚ್ಚದೆ ಹೂ ಕ್ರಮೇಣವಾಗಿ ಉದುರುತ್ತಿರುವುದು ಬೆಳೆಗಾರರು ಸಂಕಷ್ಟಕ್ಕೆ ಸಿಲುಕುವಂತಾಗಿದೆ

ಕೋಲಾರ: ಮಾವು ಬೆಳೆಗೆ ಸಂಬಂಧಿಸಿದಂತೆ ಪ್ರಸಕ್ತ ಸಾಲಿನಲ್ಲಿ ಕೈಕೊಟ್ಟ ಮಳೆ, ಒಂದು ತಿಂಗಳು ತಡವಾಗಿ ಅರಳಿದ ಹೂಗಳು ಇದೀಗ ಬಿಸಿಲಿನ ತಾಪ ಹೆಚ್ಚಾಗಿರುವ ಕಾರಣ ಹೂ ಹಾಗೂ ಪಿಂದೆಗಳು ಹೆಚ್ಚಿನ ಪ್ರಮಾಣದಲ್ಲಿ ಉದುರುತ್ತಿರುವುದರಿಂದಾಗಿ ಈ ಬಾರಿ ಇಳುವರಿ ಕಡಿಮೆಯಾಗುವ ಆತಂಕ ಮಾವು ಬೆಳೆಗಾರರಲ್ಲಿ ಎದುರಾಗಿದೆ.

ರಾಜ್ಯದಲ್ಲೇ ಅತಿ ಹೆಚ್ಚು ಮಾವು ಬೆಳೆಯುವ ತಾಲೂಕು ಶ್ರೀನಿವಾಸಪುರ. ವಿಶ್ವ ಪ್ರಸಿದ್ಧ ಮಾವಿನ ಹಣ್ಣಿನ ನಗರ ಎಂದೇ ಖ್ಯಾತಿ ಪಡೆದಿದೆ. ಜಿಲ್ಲೆಯಲ್ಲಿ ಸುಮಾರು 55,000 ಎಕ್ಟೇರ್‌ ಪ್ರದೇಶದಲ್ಲಿ ಮಾವು ಬೆಳೆಯಲಾಗುತ್ತಿದ್ದು, ಅದರಲ್ಲಿ 36,000ಕ್ಕೂ ಹೆಚ್ಚಿನ ಹೆಕ್ಟೇರ್‌ ಮಾವಿನ ಬೆಳೆಯ ಪ್ರದೇಶ ಶ್ರೀನಿವಾಸಪುರ ತಾಲೂಕಿನಲ್ಲಿದೆ.

ಈ ಬಾರಿಯ ಮಾವು ಬೆಳೆಯ ಮೇಲೆ ಬಿಸಿಲಿನ ತಾಪ ಸಾಕಷ್ಟು ಪರಿಣಾಮ ಬೀರುತ್ತಿದ್ದು, ಕಾಯಿ ಕಚ್ಚದೆ ಹೂ ಕ್ರಮೇಣವಾಗಿ ಉದುರುತ್ತಿರುವುದು ಬೆಳೆಗಾರರು ಸಂಕಷ್ಟಕ್ಕೆ ಸಿಲುಕುವಂತಾಗಿದೆ.

ಕಳೆದ 2022-23 ರಲ್ಲಿ ಸೈಕ್ಲೋನ್‌ ಪರಿಣಾಮವಾಗಿ ಮಚ್ಚೆ ರೋಗದಿಂದ ಇಳುವರಿ ಕುಂಠಿತವಾಗಿತ್ತು. ಆದರೆ 2023-24ನೇ ಸಾಲಿನಲ್ಲಿಉತ್ತಮ ಇಳುವರಿಯ ನಿರೀಕ್ಷೆಯಲ್ಲಿದ್ದರು. ಆದರೆ ಆ ನಿರೀಕ್ಷೆಯು ಹುಸಿಯಾಗುವಂತಾಗಿದ್ದು, ಈಗಾಗಲೇ ಶೇ.60 ರಷ್ಟು ಹೂಗಳು ಉದುರಿಹೋಗಿವೆ. ಜತೆಗೆ ಚಿಕ್ಕ ಬಟಾಣಿ ಪ್ರಮಾಣದಲ್ಲಿದ್ದ ಮಾವಿನ ಪಿಂದೆಗಳು ಸಹ ಉದುರುತ್ತಿವೆ. ಇದರಿಂದಾಗಿ ಇಳುವರಿ ಮೇಲೆಯೂ ಸಾಕಷ್ಟು ಪರಿಣಾಮ ಬೀರಲಿದೆ.

ಶ್ರೀನಿವಾಸಪುರ ಭಾಗದಲ್ಲಿ ವಾರ್ಷಿಕ ಆದಾಯವನ್ನು ಮಾವು ಬೆಳೆ ನೀಡುತ್ತದೆ. ಹೀಗಾಗಿ ಬಹುತೇಕ ರೈತರು ಮಾವು ಬೆಳೆಯ ಮೇಲೆ ಅವಲಂಬಿತರಾಗುತ್ತಾರೆ. ಆದರೆ, ಈ ಸಾಲಿನಲ್ಲಿ ಬಿಸಿಲಿನ ತಾಪದಿಂದಾಗಿ ಹೂ, ಪಿಂದೆಗಳು ಉದುರುತ್ತಿರುವುದನ್ನು ನೋಡಿದರೆ 20 ಟನ್‌ ಪಡೆಯುತ್ತಿದ್ದವರಿಗೆ 4 ಟನ್‌ ಸಿಗುವುದು ಅನುಮಾನವಾಗಿದೆ.

ಔಷಧ ಸಿಂಪಡಣೆ-ಪ್ರಯೋಜನವಾಗಿಲ್ಲ:

ಇಳುವರಿಯ ಪ್ರಮಾಣವೂ ಕ್ರಮೇಣ ಕಡಿಮೆಯಾಗಲಿ ಎನ್ನುವುದನ್ನು ಅರಿತ ಬೆಳೆಗಾರರು ಮಾವಿನ ಹೂ, ಪಿಂದೆ ಉದುರುವಿಕೆ ನಿಯಂತ್ರಣಕ್ಕಾಗಿ ಅನೇಕ ಬಾರಿ ಔಷಧಗಳನ್ನು ಸಿಂಪಡಣೆ ಮಾಡುತ್ತಿದ್ದರೂ ಪ್ರಯೋಜನವಾಗುತ್ತಿಲ್ಲ. ಹೂ ಉದುರುವ ಜತೆಗೆ ಮರಗಳ ಬೆಳವಣಿಗೆಗೂ ಅಡ್ಡಿಯಾಗುವ ಆತಂಕ ಎದುರಾಗಿದ್ದು, ಈಗಲಾದರೂ ಮಳೆ ಸುರಿದರೆ ಇರುವುದರಲ್ಲಿಯೇ ಸ್ವಲ್ಪ ಪ್ರಮಾಣದ ಇಳುವರಿಯನ್ನು ಪಡೆದುಕೊಳ್ಳಲು ಸಹಕಾರಿಯಾಗಲಿದೆ.

ವಿಶೇಷ ಪ್ಯಾಕೇಜ್‌ ಘೋಷಣೆ ಮಾಡುವಂತೆ ಆಗ್ರಹ

ಕಳೆದ ಒಂದೂವರೆ ತಿಂಗಳಿಂದ ಔಷಧಿ ಸಿಂಪಡಣೆ ಮಾಡುತ್ತಿದ್ದರೂ ಹೂ ಉದುರುವಿಕೆ ನಿಯಂತ್ರಣಕ್ಕೆ ಬಾರದೇ ಇರುವುದು ಬೆಳೆಗಾರರನ್ನು ಮತ್ತಷ್ಟು ಆತಂಕಕ್ಕೀಡು ಮಾಡಿದೆ. ಕಳೆದ ಬಜೆಟ್‌ನಲ್ಲಿ ಮಾವು ಸಂಸ್ಕರಣಾ ಘಟಕ, ಮಾವು ಸಂಬಂಧಿತ ಕೈಗಾರಿಕೆ ನಿರೀಕ್ಷೆಯಲ್ಲಿದ್ದ ಬೆಳೆಗಾರರಿಗೆ ಸರಕಾರದ ಬಗ್ಗೆ ಬೇಸರ ಮೂಡಿಬಂದಿದ್ದು, ಮಾವು ಬೆಳೆಗಾರರಿಗೆ ವಿಶೇಷ ಪ್ಯಾಕೇಜ್‌ ಘೋಷಣೆ ಮಾಡಬೇಕು ಎನ್ನುವ ಆಗ್ರಹವೂ ಕೇಳಿಬಂದಿದೆ.

6-7 ತಿಂಗಳ ಕಾಲ ಮಳೆ ಇಲ್ಲದಿರುವುದೇ ಕಾರಣ. ಸರಕಾರವು ಮಾವು ಬೆಳೆಗಾರರ ಬಗ್ಗೆ ಯೋಚನೆ ಮಾಡದಿರುವುದು ಹಾಗೂ ಪ್ರಕೃತಿಯೂ ಸಹ ಅನುಕೂಲಕರವಾಗಿರದ ಹಿನ್ನೆಲೆಯಲ್ಲಿ ನತದೃಷ್ಟರಾಗಿದ್ದೇವೆ. ಮಳೆ ಕೂಡಲೇ ಬಂದಿದ್ದೇ ಆದಲ್ಲಿಶೇ.30-40ರಷ್ಟು ಇಳುವರಿ ಕಾಣಬಹುದು ಇಲ್ಲವಾದರೆ ತೀವ್ರ ಕುಸಿತವಾಗಲಿದೆ.

ಹೂ ಹಾಗೂ ಪಿಂದೆ ಉದುರುವುದು ನೈಸರ್ಗಿಕ ಕ್ರಿಯೆ. ಆದರೆ ಈ ವರ್ಷ ಹೂ ಬಿಡುವುದು 1 ತಿಂಗಳು ತಡವಾಗಿದ್ದು, ಬಿಸಿಲಿಗೆ ಉದುರುವ ಪ್ರಮಾಣ ಹೆಚ್ಚಾಗಿದೆ. ಅದನ್ನು ತಡೆಯುವ ಸಲುವಾಗಿ ಪ್ಲಾನೋಫಿಕ್ಸ್‌ ಔಷಧವನ್ನು 20 ಪಿ.ಪಿ.ಯಷ್ಟು ಸಿಂಪಡಣೆ ಮಾಡುವುದು ಸೂಕ್ತ. ಜತೆಗೆ ಹಲವು ಔಷಧಗಳ ಸಿಂಪಡಣೆಯಿಂದಾಗಿ ಕಾಯಿ ಕಚ್ಚಲು, ಬೆಳವಣಿಗೆ ಹೊಂದಲು ಸಹಕಾರಿಯಾಗಲಿದೆ.

You May Also Like

More From Author

+ There are no comments

Add yours