ಟಿಕೆಟ್ ಹಂಚಿಕೆಯಲ್ಲಿ ಸಮುದಾಯದ ಕಡೆಗಣನೆ: ಈಡಿಗ, ಪಂಚಮಸಾಲಿ ಮಠಾಧೀಶರ ಆಕ್ರೋಶ

1 min read

ಹೈಲೈಟ್ಸ್‌:

  • ಲೋಕಸಭೆ ಚುನಾವಣೆಯಲ್ಲಿ ಸಮುದಾಯದ ಅವಗಣನೆ ಕುರಿತು ಸ್ವಾಮೀಜಿಗಳು ಕಿಡಿ
  • ಈಡಿಗ ಮತ್ತು ಪಂಚಮಸಾಲಿ ಸಮುದಾಯದ ಸ್ವಾಮೀಜಿಗಳಿಂದ ಪಕ್ಷಗಳ ವಿರುದ್ಧ ಆಕ್ರೋಶ
  • ಪಕ್ಷಗಳಿಂದ ನಮ್ಮ ಸಮುದಾಯಕ್ಕೆ ಅನ್ಯಾಯ ಮಾಡಲಾಗಿದೆ ಎಂದ ಪ್ರಣವಾನಂದ ಸ್ವಾಮೀಜಿ

ಕಲಬುರಗಿ/ ಗದಗ: ಟಿಕೆಟ್ ಹಂಚಿಕೆ ವಿಚಾರದಲ್ಲಿ ಪಕ್ಷಗಳ ಮುಖಂಡರ ಅಸಮಾಧಾನ ಶಮನಗೊಳ್ಳುತ್ತಿರುವ ಬೆನ್ನಲ್ಲೇ ಸಮುದಾಯಕ್ಕೆ ಸೂಕ್ತ ಪ್ರಾತಿನಿಧ್ಯ ಸಿಕ್ಕಿಲ್ಲ ಎಂದು ಈಡಿಗ ಮತ್ತು ಪಂಚಮಸಾಲಿಗಳು ಬೇಸರ ಹೊರಹಾಕಿದ್ದಾರೆ. ಪ್ರತ್ಯೇಕವಾಗಿ ಸುದ್ದಿಗೋಷ್ಠಿ ನಡೆಸಿದ ಈಡಿಗ ಸಮುದಾಯದ ಚಿತ್ತಾಪುರ ಕರದಾಳ ಬ್ರಹ್ಮಶ್ರೀ ನಾರಾಯಣ ಗುರು ಶಕ್ತಿ ಪೀಠದ ಪ್ರಣವಾನಂದ ಸ್ವಾಮೀಜಿ ಮತ್ತು ಹರಿಹರ ಪಂಚಮಸಾಲಿ ಪೀಠದ ವಚನಾನಂದ ಸ್ವಾಮೀಜಿ ಅವರು, “ರಾಜಕೀಯ ಪಕ್ಷಗಳು ನಮ್ಮ ಸಮುದಾಯಕ್ಕೆ ಅನ್ಯಾಯ ಮಾಡುತ್ತಿವೆ. ಈ ಬಗ್ಗೆ ಸಮುದಾಯದ ಸಭೆ ಕರೆದು ಶೀಘ್ರ ನಿರ್ಧಾರ ತೆಗೆದುಕೊಳ್ಳಲಾಗುವುದು,” ಎಂದು ಹೇಳಿದ್ದಾರೆ.

ಕಲಬುರಗಿಯಲ್ಲಿ ಮಾತನಾಡಿದ ಪ್ರಣವಾನಂದ ಸ್ವಾಮೀಜಿ ಅವರು, “ಅನ್ಯಾಯ ಖಂಡಿಸಿ ಲೋಕಸಭೆ ಚುನಾವಣೆ ವೇಳೆ ಯಾವ ನಿರ್ಧಾರ ತೆಗೆದುಕೊಳ್ಳಬೇಕು ಎಂಬ ಬಗ್ಗೆ ಗಂಭೀರ ಚಿಂತನೆ ನಡೆಸಲಾಗುತ್ತಿದೆ. ಚುನಾವಣೆ ಬಹಿಷ್ಕಾರದ ಬಗ್ಗೆ ಏ. 26 ಅಥವಾ 27ರಂದು ನಿರ್ಧಾರ ತೆಗೆದುಕೊಳ್ಳಲಿದ್ದೇವೆ,”ಎಂದು ಹೇಳಿದರು.

“ಮೂರು ವರ್ಷಗಳಿಂದ ಸಮುದಾಯದ ಹಲವು ಬೇಡಿಕೆ ಈಡೇರಿಕೆಗಾಗಿ ನಿರಂತರ ಹೋರಾಟ ನಡೆಯುತ್ತಿದೆ. ಹಿಂದೆ ಪ್ರತಿಪಕ್ಷದಲ್ಲಿದ್ದ ಕಾಂಗ್ರೆಸ್ ನಮ್ಮ ಹೋರಾಟಕ್ಕೆ ಸಾಥ್ ನೀಡಿತ್ತು. ಆದರೆ, ಅವರು ಅಧಿಕಾರಕ್ಕೆ ಬಂದು ವರ್ಷವಾಗುತ್ತಿದ್ದರೂ ಸಮುದಾಯದೆ ಬೇಡಿಕೆಗಳ ಬಗ್ಗೆ ನಿರ್ಣಯ ತೆಗೆದುಕೊಳ್ಳದೆ ಅನ್ಯಾಯ ಮಾಡಲಾಗುತ್ತಿದೆ,”ಎಂದರು.

“ಕಳೆದ ಬಾರಿಯ ಬಿಜೆಪಿ ಸರಕಾರ ನಾರಾಯಣ ಗುರು ಅಭಿವೃದ್ದಿ ನಿಗಮ ಸ್ಥಾಪಿಸಿತ್ತು. ಆದರೆ, ಸಿಎಂ ಸಿದ್ದರಾಮಯ್ಯ ಬಿಡಿಗಾಸು ಹಣ ನೀಡಿಲ್ಲ. ಈಡಿಗರ ಅಭಿವೃದ್ಧಿ ನಿಗಮಕ್ಕೆ ಸುಮಾರು 500 ಕೋಟಿ ರೂ. ನೀಡಬೇಕು,” ಎಂದು ಆಗ್ರಹಿಸಿದರು.

“ಆರು ಬಾರಿ ಶಾಸಕರಾಗಿ, ಸಚಿವರಾಗಿ ಸೇವೆ ಸಲ್ಲಿಸಿರುವ ಮಾಲೀಕಯ್ಯ ಗುತ್ತೇದಾರ ಅವರಿಗೆ ಬಿಜೆಪಿ ಅನ್ಯಾಯ ಮಾಡಿದೆ. ಎಂಎಲ್ಸಿ ಮಾಡುವ ಭರವಸೆ ಸಹ ಈಡೇರಿಲ್ಲ. ಕಾಂಗ್ರೆಸ್‌ನಲ್ಲೂ ಹಲವು ವರ್ಷಗಳಿಂದ ಸೇವೆ ಸಲ್ಲಿಸುತ್ತಿರುವ ಜಗದೇವ ಗುತ್ತೇದಾರ ಅವರನ್ನು ಎಂಎಲ್ಸಿ ಮಾಡಬೇಕು.” ಎಂದು ಆಗ್ರಹಿಸಿದರು

You May Also Like

More From Author

+ There are no comments

Add yours