ನವದೆಹಲಿ: ಮದ್ಯ ಹಗರಣ ಪ್ರಕರಣದಲ್ಲಿ ಜೈಲು ಪಾಲಾಗಿರುವ ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರೀವಾಲ್ (Arvind Kejriwal) ಅವರ ಅನಾರೋಗ್ಯ ಮತ್ತು ಇನ್ಸುಲಿನ್ ವಿವಾದ ಇನ್ನೂ ಶಮನವಾಗುತ್ತಿಲ್ಲ. ಇನ್ಸುಲಿನ್ ಬಗ್ಗೆ ಆಮ್ ಆದ್ಮಿ ಪಕ್ಷ ಮತ್ತು ಬಿಜೆಪಿ ನಡುವೆ ತೀವ್ರ ಮಾತಿನ ಚಕಮಕಿ ನಡೆದಿದ್ದು, ಈತನ್ಮಧ್ಯೆ, ತಿಹಾರ್ನಲ್ಲಿ ಕೇಜ್ರಿವಾಲ್ಗೆ ಮೊದಲ ಬಾರಿಗೆ ಇನ್ಸುಲಿನ್ (Insulin Injection) ನೀಡಲಾಗಿದೆ.
ಮೂಲಗಳ ಪ್ರಕಾರ, ಜೈಲಿನಲ್ಲಿ ಕೇಜ್ರೀವಾಲ್ ಅವರ ಸಕ್ಕರೆ ಮಟ್ಟ ನಿರಂತರವಾಗಿ ಹೆಚ್ಚುತ್ತಿದೆ. ಅವರ ಸಕ್ಕರೆ ಮಟ್ಟ ನಿನ್ನೆ ಗರಿಷ್ಠ 320ಕ್ಕೆ ತಲುಪಿತ್ತು. ಇದಾದ ನಂತರ ಅವರಿಗೆ ಇನ್ಸುಲಿನ್ ನೀಡಲಾಗಿದೆ. ಮದ್ಯದ ಹಗರಣ ಪ್ರಕರಣದಲ್ಲಿ ಕೇಜ್ರಿವಾಲ್ ಅವರನ್ನು ಬಂಧಿಸಿದ ನಂತರ, ಅವರಿಗೆ ಇದೇ ಮೊದಲ ಬಾರಿಗೆ ಇನ್ಸುಲಿನ್ ನೀಡಲಾಗಿದೆ.
ಈ ಹಿಂದೆ, ಕೇಜ್ರೀವಾಲ್ಗೆ ಇನ್ಸುಲಿನ್ ನೀಡದ ವಿಷಯದ ಕುರಿತು ನೂರಾರು ಆಮ್ ಆದ್ಮಿ ಪಕ್ಷದ ಕಾರ್ಯಕರ್ತರು ಮತ್ತು ಮುಖಂಡರು ತಿಹಾರ್ ಜೈಲಿನ ಮುಂದೆ ಪ್ರತಿಭಟನೆ ನಡೆಸಿದ್ದರು. ಪಕ್ಷದ ಕಾರ್ಯಕರ್ತರು ತಿಹಾರ್ ಜೈಲಿನ ಹೊರಗೆ ಜಮಾಯಿಸಿ ಇನ್ಸುಲಿನ್ ಡೋಸ್ ಹಿಡಿದು ಜೈಲು ಆಡಳಿತದ ವಿರುದ್ಧ ಸಾಂಕೇತಿಕ ಪ್ರತಿಭಟನೆ ನಡೆಸಿದ್ದರು. ಕೇಜ್ರಿವಾಲ್ಗೆ ಇನ್ಸುಲಿನ್ ನೀಡುವಂತೆ ಎಎಪಿ ನಾಯಕರು ತಿಹಾರ್ ಜೈಲು ಅಧಿಕಾರಿಗಳನ್ನು ಕೇಳಿದ್ದರು.
ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಅವರನ್ನು ತಿಹಾರ್ ಜೈಲಿನಲ್ಲಿ ‘ನಿಧಾನವಾಗಿ ಸಾವಿನ’ತ್ತ ತಳ್ಳಲಾಗುತ್ತಿದೆ ಎಂದು ಆಮ್ ಆದ್ಮಿ ಪಕ್ಷ ಆರೋಪಿಸಿತ್ತು. ಅವರಿಗೆ ಇನ್ಸುಲಿನ್ ನೀಡಲು ಅಧಿಕಾರಿಗಳು ಏಕೆ ನಿರಾಕರಿಸುತ್ತಿದ್ದಾರೆ ಎಂಬ ಪ್ರಶ್ನೆಯನ್ನು ಪಕ್ಷ ಎತ್ತಿತ್ತು. ಆದರೆ, ದೆಹಲಿ ಲೆಫ್ಟಿನೆಂಟ್ ಗವರ್ನರ್ ವಿಕೆ ಸಕ್ಸೇನಾ ಈ ಹೇಳಿಕೆಯನ್ನು ತಿರಸ್ಕರಿಸಿದ್ದಾರೆ. ಕೇಜ್ರಿವಾಲ್ ಅವರ ಆಹಾರ ಮತ್ತು ಇನ್ಸುಲಿನ್ ಅಗತ್ಯತೆಯ ಬಗ್ಗೆ ಜೈಲು ಅಧಿಕಾರಿಗಳ ವರದಿಯನ್ನು ಅವರು ಉಲ್ಲೇಖಿಸಿದ್ದರು.
ಏಮ್ಸ್ನ ಹಿರಿಯ ಮಧುಮೇಹ ತಜ್ಞರೊಂದಿಗೆ ವಿಡಿಯೋ ಕಾನ್ಫರೆನ್ಸಿಂಗ್ ಮೂಲಕ ಕೇಜ್ರಿವಾಲ್ ಸಮಾಲೋಚನೆ ನಡೆಸಲಾಗಿದೆ ಎಂದು ತಿಹಾರ್ ಜೈಲಿನ ಮೂಲಗಳು ತಿಳಿಸಿವೆ. 40 ನಿಮಿಷಗಳ ಸಮಾಲೋಚನೆಯ ನಂತರ, ವೈದ್ಯರು ಕೇಜ್ರಿವಾಲ್ ಬಗ್ಗೆ ಚಿಂತಿಸಬೇಕಾಗಿಲ್ಲ ಎಂದು ಭರವಸೆ ನೀಡಿದರು ಮತ್ತು ಶಿಫಾರಸು ಮಾಡಿದ ಔಷಧಿಗಳನ್ನು ತೆಗೆದುಕೊಳ್ಳುವುದನ್ನು ಮುಂದುವರಿಸಲು ಸಲಹೆ ನೀಡಿದರು.
ಸುನಿತಾ ಕೇಜ್ರಿವಾಲ್ ಅವರ ಕೋರಿಕೆಯ ಮೇರೆಗೆ ತಿಹಾರ್ ಜೈಲು ಆಡಳಿತವು ವಿಡಿಯೋ ಕಾಲ್ ಮೂಲಕ ವೈದ್ಯರೊಂದಿಗೆ ದೆಹಲಿ ಮುಖ್ಯಮಂತ್ರಿಯೊಂದಿಗೆ ಸಮಾಲೋಚನೆ ನಡೆಸಿತು. AIIMS ನ ಹಿರಿಯ ಮಧುಮೇಹ ತಜ್ಞರಲ್ಲದೆ, RMO ತಿಹಾರ್ ಮತ್ತು MO ತಿಹಾರ್ ಸಹ VC ಸಮಯದಲ್ಲಿ ಉಪಸ್ಥಿತರಿದ್ದರು. ವೈದ್ಯರು CGM (ಗ್ಲೂಕೋಸ್ ಮಾನಿಟರಿಂಗ್ ಸೆನ್ಸಾರ್) ಸಂಪೂರ್ಣ ದಾಖಲೆಗಳನ್ನು ಮತ್ತು ಕೇಜ್ರಿವಾಲ್ ಅವರು ತೆಗೆದುಕೊಳ್ಳುತ್ತಿರುವ ಆಹಾರ ಮತ್ತು ಔಷಧಿಗಳ ಸಂಪೂರ್ಣ ವಿವರಗಳನ್ನು ತೆಗೆದುಕೊಂಡರು. ಈ ಸಮಯದಲ್ಲಿ, ಇನ್ಸುಲಿನ್ ಸಮಸ್ಯೆಯನ್ನು ಕೇಜ್ರಿವಾಲ್ ಪ್ರಸ್ತಾಪಿಸಲಿಲ್ಲ ಅಥವಾ ಅದನ್ನು ಬಳಸಲು ವೈದ್ಯರು ಸೂಚಿಸಲಿಲ್ಲ.
ಈ ಹಿಂದೆ, ಜೈಲಿನಲ್ಲಿ ಇನ್ಸುಲಿನ್ ನೀಡುತ್ತಿಲ್ಲ ಎಂಬ ಆರೋಪದ ಮೇಲೆ, ತೆಲಂಗಾಣದ ವೈದ್ಯರ ಸಲಹೆಯ ಮೇರೆಗೆ ಕೇಜ್ರಿವಾಲ್ ಇನ್ಸುಲಿನ್ ರಿವರ್ಸಲ್ ಕಾರ್ಯಕ್ರಮದಲ್ಲಿದ್ದಾರೆ ಎಂದು ತಿಹಾರ್ ಜೈಲಿನ ಆಡಳಿತ ಹೇಳಿತ್ತು. ಬಂಧನಕ್ಕೆ ಮುಂಚೆಯೇ ವೈದ್ಯರು ಅವರ ಇನ್ಸುಲಿನ್ ಡೋಸೇಜ್ ಅನ್ನು ನಿಲ್ಲಿಸಿದ್ದರು. ಅವರ ಬಂಧನದ ಸಮಯದಲ್ಲಿ, ಅವರು ಮಧುಮೇಹ ವಿರೋಧಿ ಮಾತ್ರೆಯಾದ ಮೆಟ್ಫಾರ್ಮಿನ್ ಅನ್ನು ಮಾತ್ರ ಸೇವಿಸುತ್ತಿದ್ದರು.
ಏತನ್ಮಧ್ಯೆ, ಕೇಜ್ರಿವಾಲ್ ಜೈಲಿನಲ್ಲಿ ಅಧಿಕ ಕೊಲೆಸ್ಟ್ರಾಲ್ ಪದಾರ್ಥಗಳನ್ನು ತಿನ್ನುತ್ತಿದ್ದಾರೆ ಎಂದು ಇಡಿ ನ್ಯಾಯಾಲಯದ ಮುಂದೆ ಪ್ರತಿಪಾದಿಸಿತ್ತು. ಇವುಗಳಲ್ಲಿ ಸಿಹಿತಿಂಡಿಗಳು, ಲಡ್ಡುಗಳು, ಬಾಳೆಹಣ್ಣುಗಳು, ಮಾವಿನಹಣ್ಣುಗಳು, ಹಣ್ಣಿನ ಚಾಟ್, ಕರಿದ ಆಹಾರಗಳು, ನಮ್ಕೀನ್, ಭುಜಿಯಾ, ಸಿಹಿ ಚಹಾ, ಆಲೂ-ಪುರಿ ಮತ್ತು ಉಪ್ಪಿನಕಾಯಿ ಸೇರಿವೆ.
+ There are no comments
Add yours