ಹೈಲೈಟ್ಸ್:
- ಬಾಗಲಕೋಟೆ ಮತಯಾಚನೆಗೆ ವೇಗ, ನಾಯಕರ ಸಭೆಗಳಿಗೆ ಬೇಡಿಕೆ
- ಪ್ರಚಾರಕ್ಕೆ ಬರಲಿದ್ದಾರೆ ರಾಜಕಾರಣದ ಸ್ಟಾರ್ಗಳು
- ಪಿಎಂ, ಸಿಎಂ ಆಗಮನ ಕೋಟೆ ಪ್ರಚಾರಕ್ಕೆ ರಂಗು
ಬಾಗಲಕೋಟೆ: ಲೋಕಸಭೆ ಕ್ಷೇತ್ರದ ಚುನಾವಣೆ ಅಖಾಡ ಬಿಸಿ ಏರಿದ್ದು, ಬಿರು ಬಿಸಿಲಿನ ಮಧ್ಯೆ ಸ್ಟಾರ್ ರಾಜಕಾರಣಿಗಳು ಪ್ರಚಾರ ಸಭೆಗೆ ಬರಲಿದ್ದಾರೆ. ಮೊದಲ ಹಂತದ ಚುನಾವಣೆಯ ಮತದಾನದ ದಿನ ಸಮೀಪಿಸುತ್ತಿದೆ. ಏ. 26 ರ ನಂತರ ನಾನಾ ಪಕ್ಷಗಳ ಸ್ಟಾರ್ ಪ್ರಚಾರಕರು ಮೊದಲ ಹಂತದ ಪ್ರಚಾರ ಮುಗಿಸಿ ಎರಡನೇ ಹಂತದಲ್ಲಿ ಉತ್ತರದ ಕಡೆಗೆ ಮುಖ ಮಾಡಲಿದ್ದಾರೆ.
ಘಟಾನುಘಟಿ ನಾಯಕರ ಭೇಟಿ:
ಅತ್ತ ದಕ್ಷಿಣದ ತುದಿಯಲ್ಲಿ ಮತದಾನ ನಡೆಯುತ್ತಿದ್ದಂತೆ ಇತ್ತ ಉತ್ತರದಲ್ಲಿ ಪ್ರಚಾರದ ಭರಾಟೆ ಜೋರಾಗಲಿದೆ. ನಾನಾ ಕಾರಣಗಳಿಂದ ಪ್ರತಿ ಚುನಾವಣೆಯಲ್ಲಿ ರಾಜಕಾರಣಿಗಳನ್ನು ಬಾಗಲಕೋಟೆ ಕ್ಷೇತ್ರ ಆಕರ್ಷಿಸುತ್ತದೆ. ಹಿಂದುತ್ವದ ಅಲೆ, ಕಾಂಗ್ರೆಸ್ನ ಆಡಳಿತ, ಪ್ರಭಾವಿ ಅಭ್ಯರ್ಥಿಗಳಿಂದಾಗಿ ಎಲ್ಲ ಪಕ್ಷಗಳ ರಾಷ್ಟ್ರೀಯ ನಾಯಕರು ಜಿಲ್ಲೆಯಲ್ಲಿ ಕಡ್ಡಾಯವಾಗಿ ಪ್ರಚಾರ ನಡೆಸುತ್ತಾರೆ.
ಪ್ರಧಾನಿ ನರೇಂದ್ರ ಮೋದಿ ಏ.28 ರಂದು ಬಾಗಲಕೋಟೆಯಲ್ಲಿ ಪ್ರಚಾರ ಸಭೆ ನಡೆಸಲಿದ್ದಾರೆ. 2014, 2019 ರಲ್ಲಿ ಜಿಲ್ಲೆಯಲ್ಲಿ ಸಂಸದ ಗದ್ದಿಗೌಡರ ಪರ ಮೋದಿ ಪ್ರಚಾರ ನಡೆಸಿದ್ದರು. ಇದೀಗ ಲೋಕಸಭೆ ಚುನಾವಣೆಯಲ್ಲಿ ಮತ್ತೊಮ್ಮೆ ಜಿಲ್ಲೆಗೆ ಬರಲಿದ್ದಾರೆ. ಮರು ದಿನ ಸಂಜೆ ಕಾಂಗ್ರೆಸ್ ಪ್ರಚಾರ ಸಭೆಯಲ್ಲಿ ಸಿಎಂ ಸಿದ್ದರಾಮಯ್ಯ, ಡಿಸಿಎಂ ಡಿ.ಕೆ.ಶಿವಕುಮಾರ್ ಭಾಗವಹಿಸಲಿದ್ದಾರೆ. ಏ.27ರಂದು ಸಿಎಂ ಬನಹಟ್ಟಿಯಲ್ಲಿ ಪ್ರಚಾರ ಸಭೆಯಲ್ಲಿ ಭಾಗಿಯಾಗಲಿದ್ದಾರೆ.
ಗಣ್ಯರ ದಂಡು:
ಇನ್ನು ಕಾಂಗ್ರೆಸ್ನಿಂದ ಸಚಿವರು, ಮಾಜಿ ಸಚಿವರು, ಶಾಸಕರು ಸೇರಿದಂತೆ ಜಾತಿವಾರು ಲೆಕ್ಕಾಚಾರದಲ್ಲೂ ಮುಖಂಡರು ಪ್ರಚಾರಕ್ಕೆ ಬರಲಿದ್ದಾರೆ. ಸಿಎಂ ಸಿದ್ದರಾಮಯ್ಯ ಜಿಲ್ಲೆಯಲ್ಲಿ ಎರಡು ಬಾರಿ ಪ್ರವಾಸ ಕೈಗೊಳ್ಳುವ ಪಟ್ಟಿ ಸದ್ಯಕ್ಕೆ ಸಿದ್ಧವಾಗಿದೆ.
ಇಲ್ಲಿನ ಲೋಕಸಭೆ ಕ್ಷೇತ್ರದಲ್ಲಿ ಪ್ರಚಾರ ವೇಗ ಪಡೆಯುತ್ತಿದ್ದಂತೆ ರಾಷ್ಟ್ರೀಯ, ರಾಜ್ಯ ಮಟ್ಟದ ನಾಯಕರು ಭೇಟಿ ನೀಡಲಿದ್ದಾರೆ. ಮುಖಂಡರು ಕೇವಲ ಪ್ರಚಾರ ಸಭೆಗೆ ಸೀಮಿತವಾಗದೇ ಪಾದಯಾತ್ರೆ, ಮನೆ, ಮನೆ ಪ್ರಚಾರ ನಡೆಸುವ ಸಾಧ್ಯತೆಯಿದೆ. ಕಾಂಗ್ರೆಸ್, ಬಿಜೆಪಿ ಪಕ್ಷಗಳು ಆಯಾ ವಿಧಾನಸಭೆ ಕ್ಷೇತ್ರಕ್ಕೆ ಸೀಮಿತವಾಗಿ ಮುಖಂಡರನ್ನು ಕರೆ ತರಲಿವೆ.
+ There are no comments
Add yours