ಅಲ್ಲಿದೆ ನಮ್ಮನೆ, ಇಲ್ಲಿ ಬಂದೆ ಸುಮ್ಮನೆ… ಪುರಂದರದಾಸರು ಅಂದೇನೋ ಹೀಗೆ ಹಾಡಿದರು. ಆದರೆ, ಚುನಾವಣೆ ಸ್ಪರ್ಧೆ ವಿಚಾರದಲ್ಲಿ ರಾಜಕಾರಣಿಗಳು ಅಲ್ಲಿಂದ ಇಲ್ಲಿಗೆ, ಇಲ್ಲಿಂದ ಅಲ್ಲಿಗೆ ಸುಮ್ಮನೆಯಂತೂ ಹೋಗುವುದಿಲ್ಲ. ಒಂದೆಡೆಯ ಸೋಲಿನ ಭಯ, ಇನ್ನೊಂದೆಡೆಯ ಗೆಲುವಿನ ಆಶಯ ಅವರನ್ನು ಎರಡೂ ಕಡೆ ಸ್ಪರ್ಧಿಸುವಂತೆ ಪ್ರೇರೇಪಿಸುತ್ತಿರುತ್ತದೆ. ಎರಡೂ ಕ್ಷೇತ್ರಗಳಲ್ಲಿಚುನಾವಣೆಗೆ ನಿಂತು ಮತಪರೀಕ್ಷೆ ಎದುರಿಸುವ ಪರಂಪರೆ ಇಂದು ನಿನ್ನೆಯದೇನಲ್ಲ.
ಈ ಬಾರಿಯ ಲೋಕಸಭೆ ಚುನಾವಣೆಯಲ್ಲಿಎರಡು ಸ್ಥಾನಗಳಿಂದ ಸ್ಪರ್ಧಿಸುತ್ತಿರುವರ ಪೈಕಿ ರಾಹುಲ್ ಗಾಂಧಿ ಹೈಲೈಟ್. ರಾಹುಲ್ ಗಾಂಧಿ ಅವರು ಕೇರಳದ ವಯನಾಡು ಹಾಗೂ ಉತ್ತರಪ್ರದೇಶದ ರಾಯ್ಬರೇಲಿಯ ಲೋಕಸಭಾ ಕಣದಲ್ಲಿನಿಂತಿದ್ದಾರೆ. ಒಡಿಶಾ ಮುಖ್ಯಮಂತ್ರಿ ನವೀನ್ ಪಟ್ನಾಯಕ್ ಕೂಡ ಎರಡು ವಿಧಾನಸಭಾ ಕ್ಷೇತ್ರಗಳಲ್ಲಿಸ್ಪರ್ಧಿಸುತ್ತಿದ್ದಾರೆ. ಜತೆಗೆ ವಿಧಾನಸಭೆ ಚುನಾವಣೆಯೂ ನಡೆಯುತ್ತಿದೆ. ನವೀನ್ ಪಟ್ನಾಯಕ್ ಹಿಂಜಾಲಿ ಮತ್ತು ಕಾಂತಾಬಾಂಜಿ ಕ್ಷೇತ್ರದಿಂದ ನಾಮಪತ್ರ ಸಲ್ಲಿಸಿದ್ದಾರೆ. ಚನ್ನಪಟ್ಟಣ ಶಾಸಕರಾಗಿರುವ ಎಚ್.ಡಿ. ಕುಮಾರಸ್ವಾಮಿ ಅವರು ಮಂಡ್ಯ ಲೋಕಸಭಾ ಕ್ಷೇತ್ರದಿಂದಲೂ ಕಣಕ್ಕೆ ಧುಮುಕಿದ್ದಾರೆ.
2019ರಲ್ಲೂಲೋಕಸಭೆ ಚುನಾವಣೆಯಲ್ಲಿ2 ಸ್ಥಾನಗಳಲ್ಲಿ ಸುಮಾರು 23 ಅಭ್ಯರ್ಥಿಗಳು ಸ್ಪರ್ಧಿಸಿದ್ದರು. ಅಂದು ರಾಹುಲ್ ವಯನಾಡ್ ಮತ್ತು ಅಮೇಥಿಯಿಂದ ಚುನಾವಣೆಗೆ ಸ್ಪರ್ಧಿಸಿದ್ದರು. ಅಮೇಥಿಯಲ್ಲಿ ಸೋಲನ್ನಪ್ಪಿ, ವಯನಾಡಿನಲ್ಲಿಗೆಲುವಿನ ನಗು ಬೀರಿದ್ದರು. 2014ರ ಲೋಕಸಭಾ ಚುನಾವಣೆಯಲ್ಲಿಪ್ರಧಾನಿ ನರೇಂದ್ರ ಮೋದಿ ವಾರಾಣಸಿ (ಉ.ಪ್ರ.) ಮತ್ತು ವಡೋದರಾ (ಗುಜರಾತ್) ಕ್ಷೇತ್ರದಿಂದ ಮತಪರೀಕ್ಷೆ ಎದುರಿಸಿದ್ದರು. ಆ ಎರಡೂ ಸ್ಥಾನಗಳಲ್ಲಿಗೆಲುವು ಸಾಧಿಸಿದ್ದರು. ಇದಾದ ನಂತರ ಅವರು ವಡೋದರಾ ಸ್ಥಾನಕ್ಕೆ ರಾಜೀನಾಮೆ ನೀಡಿದ್ದರು. ರಾಜಕಾರಣಿಗಳ ಈ ನಡೆಯಿಂದ ಲಾಭವೆಷ್ಟು? ನಷ್ಟವೆಷ್ಟು? ಎನ್ನುವ ಕುರಿತಾದ ಚರ್ಚೆಗಳೂ ಪ್ರತಿ ಚುನಾವಣೆಗಳಲ್ಲೂಕೇಳಿಬರುತ್ತಲೇ ಇರುತ್ತವೆ.
1ಕ್ಕಿಂತ ಹೆಚ್ಚು ಕ್ಷೇತ್ರಗಳ ಸ್ಪರ್ಧೆ ಹೊಸತಲ್ಲ…
ಚೆಸ್ ಆಟದಲ್ಲಿಪ್ರಮುಖ ದಾಳಗಳಿಗೆ ಹೇಗೆ ಅತ್ತಿತ್ತ ಚಲಿಸದಂತೆ ಪ್ರತಿಬಂಧಿಸಲಾಗುತ್ತದೋ, ರಾಜಕೀಯದಾಟದಲ್ಲಿಯೂ ಪ್ರಮುಖ ನಾಯಕರಿಗೆ ಇಂಥ ಪರೀಕ್ಷೆ ಇದ್ದಿದ್ದೇ. ಲೋಕಸಭಾ ಚುನಾವಣಾ ಚರಿತ್ರೆ ಗಮನಿಸಿದಾಗ, 1ಕ್ಕಿಂತ ಹೆಚ್ಚು ಸ್ಥಾನಗಳಲ್ಲಿಚುನಾವಣೆಗೆ ಸ್ಪರ್ಧಿಸಿದವರಲ್ಲಿಅಟಲ್ ಬಿಹಾರಿ ವಾಜಪೇಯಿ, ಲಾಲ್ ಕೃಷ್ಣ ಅಡ್ವಾಣಿ, ಸೋನಿಯಾ ಗಾಂಧಿ, ಮಾಯಾವತಿ, ಸುಷ್ಮಾ ಸ್ವರಾಜ್ರಂಥ ಅನೇಕ ದೊಡ್ಡ ನಾಯಕರ ಹೆಸರುಗಳೂ ಮುಂಚೂಣಿಯಲ್ಲಿರುವುದನ್ನು ಗಮನಿಸಬಹುದು.
- ಅಟಲ್ ಬಿಹಾರಿ ವಾಜಪೇಯಿ: 1957ರ ಚುನಾವಣೆಯಲ್ಲಿ ವಾಜಪೇಯಿ ಅವರು ಉತ್ತರಪ್ರದೇಶದ 3 ಸ್ಥಾನಗಳಲ್ಲಿಸ್ಪರ್ಧಿಸಿದ್ದರು. ಮಥುರಾ, ಬಲರಾಂಪುರ ಮತ್ತು ಲಖನೌದಲ್ಲಿ ನಿಂತಿದ್ದರು. ಬಲರಾಂಪುರದಲ್ಲಿ ಮಾತ್ರವೇ ಗೆದ್ದಿದ್ದರು. 1962ರಲ್ಲಿ ಅವರು ಬಲರಾಂಪುರ ಮತ್ತು ಲಖನೌದಿಂದ ಚುನಾವಣೆ ಎದುರಿಸಿ, ಎರಡೂ ಕಡೆ ಸೋಲುಂಡಿದ್ದರು. 1996ರಲ್ಲಿ ಗಾಂಧಿನಗರ ಮತ್ತು ಲಖನೌ ಕ್ಷೇತ್ರಗಳಿಗೆ ವಾಜಪೇಯಿ ಅಭ್ಯರ್ಥಿಯಾಗಿದ್ದರು.
- ಇಂದಿರಾಗಾಂಧಿ: 1980ರ ಚುನಾವಣೆಯಲ್ಲಿ ರಾಯ್ಬರೇಲಿ ಹೊರತಾಗಿ, ತೆಲಂಗಾಣದ ಮೇದಕ್ ಕ್ಷೇತ್ರದಿಂದ ಸ್ಪರ್ಧಿಸಿದ್ದರು. ಎರಡೂ ಸ್ಥಾನಗಳಲ್ಲಿ ಇಂದಿರಾ ಗೆಲುವು ಸಾಧಿಸಿದ್ದರು. ಮೇದಕ್ ಸ್ಥಾನವನ್ನು ತೊರೆದಿದ್ದರು.
- ಲಾಲ್ಕೃಷ್ಣ ಆಡ್ವಾಣಿ: 1991ರ ಸಂಸತ್ ಚುನಾವಣೆಯಲ್ಲಿಗಾಂಧಿನಗರ ಮತ್ತು ಹೊಸದಿಲ್ಲಿ ಸ್ಥಾನದಿಂದ ಸ್ಪರ್ಧಿಸಿ, ಎರಡಲ್ಲೂಗೆದ್ದಿದ್ದರು. ಹೊಸದಿಲ್ಲಿ ಕೈಬಿಟ್ಟು ಗಾಂಧಿನಗರದ ಸಂಸದರಾಗಿ ಮುಂದುವರಿದರು.
- ಸೋನಿಯಾ ಗಾಂಧಿ: 1999ರಲ್ಲಿಕರ್ನಾಟಕದ ಬಳ್ಳಾರಿ ಮತ್ತು ಉತ್ತರ ಪ್ರದೇಶದ ಅಮೇಥಿಯಿಂದ ಸ್ಪರ್ಧಿಸುವ ಮೂಲಕ ಸೋನಿಯಾ ಗಾಂಧಿ ರಾಜಕೀಯ ಇನ್ನಿಂಗ್ಸ್ ಆರಂಭಿಸಿದ್ದರು. ಎರಡೂ ಸ್ಥಾನಗಳಲ್ಲಿಗೆದ್ದರು. ಬಳ್ಳಾರಿ ಕ್ಷೇತ್ರಕ್ಕೆ ರಾಜೀನಾಮೆ ಕೊಟ್ಟಿದ್ದರು. ಬಳಿಕ ರಾಯ್ಬರೇಲಿಯಲ್ಲಿ ಅಪಾರ ಜನಪ್ರಿಯತೆ ಕಂಡು, ‘ಏಕಕಣ’ವನ್ನಾಗಿ ಪರಿವರ್ತಿಸಿಕೊಳ್ಳುವಲ್ಲಿ ಸಫಲರಾದರು.
- 1991ರ ಚುನಾವಣೆಯಲ್ಲಿ ಮಾಯಾವತಿ ಅವರು ಬಿಜ್ನೋರ್, ಬುಲಂದ್ಶಹರ್ ಮತ್ತು ಹರಿದ್ವಾರದಿಂದ ಸ್ಪರ್ಧಿಸಿದರು. ಈ ಮೂರೂ ಸ್ಥಾನಗಳಲ್ಲಿ ಸೋಲುಂಡರು.
ಒಬ್ಬ ಅಭ್ಯರ್ಥಿ ಎಷ್ಟು ಸ್ಥಾನಗಳಲ್ಲಿ ಸ್ಪರ್ಧಿಸಬಹುದು?
1996ರವರೆಗೆ ಒಬ್ಬ ವ್ಯಕ್ತಿಯು ಎಷ್ಟು ಸ್ಥಾನಗಳಿಂದ ಬೇಕಾದರೂ ಚುನಾವಣೆಗೆ ಸ್ಪಧಿಸಲು ಅವಕಾಶವಿತ್ತು. ಆಗ ಯಾವುದೇ ನಿರ್ಬಂಧಗಳಿರಲಿಲ್ಲ. ಆದರೆ, ಗೆದ್ದ ಮೇಲೆ ಆ ಜನಪ್ರತಿನಿಧಿ ಕೇವಲ ಒಂದು ಸ್ಥಾನವನ್ನು ಮಾತ್ರ ಪ್ರತಿನಿಧಿಸಲು ಕಾನೂನು ಅವಕಾಶ ನೀಡಿತ್ತು. 1996ರಲ್ಲಿ ಪ್ರಜಾಪ್ರತಿನಿಧಿ ಕಾಯಿದೆಯ ಸೆಕ್ಷನ್ 33ಕ್ಕೆ ತಿದ್ದುಪಡಿ ತರಲಾಯಿತು. ಒಬ್ಬ ವ್ಯಕ್ತಿಯು ಗರಿಷ್ಠ 2 ಸ್ಥಾನಗಳಲ್ಲಿ ಚುನಾವಣೆಗೆ ಸ್ಪರ್ಧಿಸಲು ಈ ಕಾಯಿದೆ ಸೀಮಿತ ಅವಕಾಶ ಮಾಡಿಕೊಟ್ಟಿತು. ಆದಾಗ್ಯೂ, ಈಗಲೂ ಒಬ್ಬ ವ್ಯಕ್ತಿಯು ಕೇವಲ ಒಂದು ಸ್ಥಾನವನ್ನಷ್ಟೇ ಪ್ರತಿನಿಧಿಸಲು ಸಾಧ್ಯ. ಒಂದು ವೇಳೆ 2 ಸ್ಥಾನಗಳಲ್ಲಿ ಗೆದ್ದರೆ, ಆ ಪೈಕಿ ಒಂದು ಸ್ಥಾನಕ್ಕೆ ರಾಜೀನಾಮೆ ನೀಡುವುದು ಅನಿವಾರ್ಯ.
+ There are no comments
Add yours