ಪ್ರಜ್ವಲ್ ಪ್ರಕರಣ: ರೇವಣ್ಣ, ಬಾಬಣ್ಣ ಸೇರಿ ಮೂವರ ಬಂಧನ; 3ನೇ ಆರೋಪಿ ಬಗ್ಗೆ ಮಾಹಿತಿ ನೀಡಿದರೆ ತನಿಖೆ ಮೇಲೆ ಪರಿಣಾಮ- ಪರಮೇಶ್ವರ

0 min read

ಬೆಂಗಳೂರು: ಹಾಸನ ಜೆಡಿಎಸ್ ಸಂಸದ ಪ್ರಜ್ವಲ್ ರೇವಣ್ಣ ಅವರ ರಾಸಲೀಲೆ ಪ್ರಕರಣವನ್ನು ಸಿಬಿಐ ತನಿಖೆಗೆ ಒಪ್ಪಿಸಬೇಕು ಎಂಬ ಮಾಜಿ ಮುಖ್ಯಮಂತ್ರಿ ಎಚ್ ಡಿ ಕುಮಾರಸ್ವಾಮಿ ಅವರ ಬೇಡಿಕೆಯನ್ನು ಗೃಹ ಸಚಿವ ಡಾ ಜಿ ಪರಮೇಶ್ವರ ಅವರು ಬುಧವಾರ ತಿರಸ್ಕರಿಸಿದ್ದಾರೆ.

ಪ್ರಜ್ವಲ್ ರೇವಣ್ಣ ರಾಸಲೀಲೆ ಪ್ರಕರಣದ ತನಿಖೆ ನಡೆಸಲು ರಾಜ್ಯ ಸರ್ಕಾರದ ಸಿಐಡಿ ಸಮರ್ಥವಾಗಿದೆ ಎಂದು ಗೃಹ ಸಚಿವರು ಹೇಳಿದ್ದಾರೆ.

ಕುಮಾರಸ್ವಾಮಿ ಅವರು 100ಕ್ಕೂ ಹೆಚ್ಚು ಪ್ರಶ್ನೆಗಳನ್ನು ಎತ್ತಿದ್ದಾರೆ. ಅವೆಲ್ಲಕ್ಕೂ ನಾನು ಉತ್ತರಿಸುವುದಿಲ್ಲ. ಅವರು ಸಿಬಿಐ ತನಿಖೆ ಮಾಡಬೇಕು ಎಂದು ಕೇಳಿದ್ದರು ನಾವು ಮಾಡುವುದಿಲ್ಲ. ಪ್ರಕರಣದ ತನಿಖೆ ನಡೆಸಲು ಎಸ್‌ಐಟಿ ಸಮರ್ಥವಾಗಿದೆ. ಸೂಕ್ತ ತನಿಖೆ ನಡೆಸುತ್ತೇವೆ ಎಂದು ಗೃಹ ಸಚಿವರು ತಿಳಿಸಿದ್ದಾರೆ.

ಹೊಳೆನರಸೀಪುರ ಜೆಡಿಎಸ್ ಶಾಸಕ ಹಾಗೂ ಪ್ರಜ್ವಲ್ ತಂದೆ ಎಚ್ ಡಿ ರೇವಣ್ಣ ಕೂಡ ಪ್ರಕರಣದಲ್ಲಿ ಆರೋಪಿಯಾಗಿದ್ದು, ಮೂರು ಮಕ್ಕಳ ತಾಯಿಯಾಗಿರುವ ಮಹಿಳೆಯನ್ನು ಅಪಹರಣ ಮಾಡಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಇದುವರೆಗೆ ಮೂವರನ್ನು ಬಂಧಿಸಲಾಗಿದೆ ಎಂದು ಪರಮೇಶ್ವರ ಹೇಳಿದ್ದಾರೆ.

ತನಿಖೆಯ ಪ್ರಗತಿಗೆ ಸಂಬಂಧಿಸಿದಂತೆ ಪ್ರತಿಕ್ರಿಯಿಸಿದ ಗೃಹ ಸಚಿವರು, ರೇವಣ್ಣ ಮತ್ತು ಅವರ ಸಹಾಯಕ ಸತೀಶ್ ಬಾಬಣ್ಣ ಸೇರಿದಂತೆ ಮೂವರನ್ನು ಬಂಧಿಸಲಾಗಿದೆ. ಮೂರನೇ ವ್ಯಕ್ತಿಯ ಹೆಸರನ್ನು ಬಹಿರಂಗಪಡಿಸುವುದರಿಂದ ತನಿಖೆಯ ಮೇಲೆ ಪರಿಣಾಮ ಬೀರುತ್ತದೆ ಎಂದು ಬಂಧಿತ ಮೂರನೇ ವ್ಯಕ್ತಿಯ ವಿವರಗಳನ್ನು ಹಂಚಿಕೊಳ್ಳಲು ನಿರಾಕರಿಸಿದರು.

ವಿಡಿಯೋ ಸೋರಿಕೆ ಮಾಡಿದವರ ವಿರುದ್ಧ ತನಿಖೆಯಾಗಲಿದೆಯೇ ಎಂಬ ಪ್ರಶ್ನೆಗೆ ಉತ್ತರಿಸಿದ ಪರಮೇಶ್ವರ, ನಾವು ಏನನ್ನೂ ಮುಚ್ಚಿಡಲು ಬಯಸುವುದಿಲ್ಲ. ಪೆನ್ ಡ್ರೈವ್‌ ಬಗ್ಗೆ ಸಂಪೂರ್ಣ ತನಿಖೆಯಾಗಲಿದೆ ಎಂದರು.

ಇದೇ ವೇಳೆ ಪೊಲೀಸರು ಪೆನ್ ಡ್ರೈವ್‌ ಹಂಚಿದ್ದಾರೆ ಎಂಬ ಕುಮಾರಸ್ವಾಮಿ ಆರೋಪದ ಬಗ್ಗೆ ಪ್ರತಿಕ್ರಿಯಿಸಿದ ಪರಮೇಶ್ವರ, ಯಾವ ಪೋಲೀಸರು ಅದನ್ನು ವಿತರಿಸಿದರು ಮತ್ತು ಎಲ್ಲಿ ಎಂಬುದನ್ನು ಪರಿಶೀಲಿಸುವತ್ತೇವೆ. ಕುಮಾರಸ್ವಾಮಿ ಅವರ ಆರೋಪಕ್ಕೆ ಸಂಬಂಧಿಸಿದಂತೆ ಅವರಿಗೆ ನೋಟಿಸ್ ನೀಡಬೇಕೇ ಬೇಡವೇ ಎಂಬುದನ್ನು ಎಸ್‌ಐಟಿ ನಿರ್ಧರಿಸಲಿದೆ ಎಂದು ಪರಮೇಶ್ವರ ತಿಳಿಸಿದ್ದಾರೆ.

ಸಂಸದ ಹಾಗೂ ಹಲವು ಮಹಿಳೆಯರನ್ನು ಒಳಗೊಂಡಿರುವ ಸ್ಪಷ್ಟ ವಿಡಿಯೋಗಳಿರುವ ಪೆನ್ ಡ್ರೈವ್ ಹೊಂದಿದ್ದ ಪ್ರಜ್ವಲ್ ರೇವಣ್ಣ ಅವರ ಚಾಲಕ ಕಾರ್ತಿಕ್ ಗೌಡ ಅವರನ್ನು ಬಂಧಿಸದಿರುವ ಬಗ್ಗೆ ಪ್ರತಿಕ್ರಿಯಿಸಿದ ಪರಮೇಶ್ವರ, ಯಾರನ್ನಾದರೂ ಬಂಧಿಸಲು ಸ್ಪಷ್ಟ ಸಾಕ್ಷ್ಯಾಧಾರಗಳು ಇರಬೇಕು ಎಂದರು.

ಸಾಕ್ಷ್ಯಾಧಾರ ಸಿಗುವವರೆಗೂ ಕಾರ್ತಿಕ್ ಅಥವಾ ದೇವರಾಜೇಗೌಡ(ಬಿಜೆಪಿ ನಾಯಕ) ಅವರನ್ನು ಬಂಧಿಸಲು ಸಾಧ್ಯವಿಲ್ಲ ಎಂದು ಗೃಹ ಸಚಿವರು ಸ್ಪಷ್ಟಪಡಿಸಿದ್ದಾರೆ.

You May Also Like

More From Author

+ There are no comments

Add yours