ಬೆಂಗಳೂರು: ಮಲ್ಲೇಶ್ವರಂನ ಮಂತ್ರಿ ಸ್ಕ್ವೇರ್ ಅನ್ನು ಶುಕ್ರವಾರ ಬೆಳಗ್ಗೆ 10 ಗಂಟೆಗೆ ಓಪನ್ ಮಾಡಲು ಅರ್ಜಿದಾರರಿಗೆ ಅವಕಾಶ ನೀಡುವಂತೆ ಕರ್ನಾಟಕ ಹೈಕೋರ್ಟ್ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ (ಬಿಬಿಎಂಪಿ)ಗೆ ನಿರ್ದೇಶಿಸಿದೆ.
ಮಾಲ್ ನಡೆಸುತ್ತಿರುವ ಅರ್ಜಿದಾರ M/s Abhishek Propbuild Pvt Ltd ಕಂಪನಿಗೆ ಜುಲೈ 31 ಅಥವಾ ಅದಕ್ಕೂ ಮೊದಲು ಬಿಬಿಎಂಪಿಗೆ 20 ಕೋಟಿ ರೂಪಾಯಿಗಳನ್ನು ಠೇವಣಿ ಮಾಡುವಂತೆ ನಿರ್ದೇಶಿಸಿದ ನಂತರ ಹೈಕೋರ್ಟ್ ಈ ಮಧ್ಯಂತರ ಆದೇಶ ನೀಡಿದೆ ಮತ್ತು ಠೇವಣಿಯಲ್ಲಿ 3.50 ಕೋಟಿ ತೆರಿಗೆಯನ್ನು ಜೂನ್ 1 ಅಥವಾ ಅದಕ್ಕಿಂತ ಮೊದಲು ಠೇವಣಿ ಮಾಡಬೇಕು ಎಂದು ಸೂಚಿಸಿದೆ.
ಮಾಲ್ಗೆ ಬೀಗ ಹಾಕಿರುವ ಬಿಬಿಎಂಪಿಯ ಕ್ರಮ ಪ್ರಶ್ನಿಸಿ ಮಾಲೀಕರು ಸಲ್ಲಿಸಿದ್ದ ತಕರಾರು ಅರ್ಜಿ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಜ್ಯೋತಿ ಮೂಲಿಮನಿ ನೇತೃತ್ವದ ರಜಾಕಾಲದ ಪೀಠ, ಈ ಮಧ್ಯಂತರ ಆದೇಶವನ್ನು ನೀಡಿದೆ.
2019 ರಿಂದ 41 ಕೋಟಿ ರೂಪಾಯಿಗಳ ಆಸ್ತಿ ತೆರಿಗೆ ಬಾಕಿಯನ್ನು ಪಾವತಿಸದ ಕಾರಣ ಮಂತ್ರಿ ಮಾಲ್ ಗೆ ಬಿಬಿಎಂಪಿ ಬೀಗ ಹಾಕಿತ್ತು. ಹೀಗಾಗಿ ಕಂಪನಿಯು ಹೈಕೋರ್ಟ್ ಮೆಟ್ಟಿಲೇರಿತ್ತು.
ಅರ್ಜಿದಾರ ಕಂಪನಿಯ ಹಣಕಾಸು ಅಕಾರಿ ಅಫಿಡವಿಟ್ ಸಲ್ಲಿಸಿ, 2024ರ ಜುಲೈ 31ರೊಳಗೆ 20 ಕೋಟಿ ರೂ.ಗಳನ್ನು ಬಿಬಿಎಂಪಿಗೆ ಪಾವತಿಸುವುದಾಗಿ ನ್ಯಾಯಪೀಠಕ್ಕೆ ಮುಚ್ಚಳಿಕೆ ನೀಡಿದರು. ಇದನ್ನು ದಾಖಲಿಸಿಕೊಂಡ ನ್ಯಾಯಪೀಠ, ‘‘ಅರ್ಜಿದಾರ ಕಂಪನಿಯು 2024ರ ಜೂ.1ರೊಳಗೆ 3.5 ಕೋಟಿ ರೂ. ಆಸ್ತಿ ತೆರಿಗೆಯನ್ನು ಬಿಬಿಎಂಪಿಗೆ ಪಾವತಿಸಬೇಕು. ಶುಕ್ರವಾರ (ಮೇ 17) ಬೆಳಗ್ಗೆ 10 ಗಂಟೆಯಿಂದ ಮಾಲ್ಗೆ ಹಾಕಿರುವ ಬೀಗವನ್ನು ಬಿಬಿಎಂಪಿ ತೆಗೆಯಬೇಕು’’ ಎಂದು ಸೂಚಿಸಿದೆ.
+ There are no comments
Add yours