ಲೋಕಸಭೆ ಚುನಾವಣೆ 2024: ಮುಸ್ಲಿಮರಿಗೆ ಮೀಸಲಾತಿ ಕೊಡಿಸಲು ಸಂವಿಧಾನ ಬದಲಾವಣೆಗೆ ಐಎನ್‌ಡಿಐಎ ಹುನ್ನಾರ – ಪಿಎಂ ಮೋದಿ

1 min read

ಹೈಲೈಟ್ಸ್‌:

  • ಐಎನ್‌ಡಿಐಎಯಿಂದ ಬಹುಸಂಖ್ಯಾತರನ್ನು 2ನೇ ದರ್ಜೆ ಪ್ರಜೆಗಳಾಗಿಸಲು ಪ್ರತಿಪಕ್ಷಗಳ ತಂತ್ರ ಎಂದ ಮೋದಿ.
  • ಧರ್ಮದ ಆಧಾರದ ಮೇಲೆ ಮುಸ್ಲಿಮರಿಗೆ ಮೀಸಲು ನೀಡಲು ಇಡೀ ಸಂವಿಧಾನವನ್ನೇ ಬದಲಾವಣೆ ಮಾಡುವ ಗುರಿ ಹೊಂದಿರುವ ಐಎನ್‌ಡಿಐಎ – ಮೋದಿ ಆರೋಪ.
  • ಸಾಂವಿಧಾನಿಕವಾಗಿ ಎಸ್‌ಸಿ, ಎಸ್‌ಟಿ, ಒಬಿಸಿಗಳಿಗೆ ನೀಡಲಾಗಿರುವ ಮೀಸಲು ರದ್ದುಗೊಳಿಸಲು ಸಂಚು ಎಂದ ಮೋದಿ.

ಲಖನೌ: ”ಧರ್ಮದ ಆಧಾರದ ಮೇಲೆ ಮುಸ್ಲಿಮರಿಗೆ ಮೀಸಲು ನೀಡಲು ಇಡೀ ಸಂವಿಧಾನವನ್ನೇ ಬದಲಾವಣೆ ಮಾಡುವ ಗುರಿ ಹೊಂದಿರುವ ಐಎನ್‌ಡಿಐಎ , ಸಾಂವಿಧಾನಿಕವಾಗಿ ಎಸ್‌ಸಿ, ಎಸ್‌ಟಿ, ಒಬಿಸಿಗಳಿಗೆ ನೀಡಲಾಗಿರುವ ಮೀಸಲು ರದ್ದುಗೊಳಿಸಲು ಸಂಚು ರೂಪಿಸಿವೆ,” ಎಂದು ಪ್ರಧಾನಿ ನರೇಂದ್ರ ಮೋದಿ ಗಂಭೀರ ಆರೋಪ ಮಾಡಿದ್ದಾರೆ.

ಉತ್ತರ ಪ್ರದೇಶದ ಘೋಸಿಯಲ್ಲಿ ಬಿಜೆಪಿ ಚುನಾವಣಾ ಪ್ರಚಾರ ಸಭೆ ಉದ್ದೇಶಿಸಿ ಭಾನುವಾರ ಮಾತನಾಡಿದ ಮೋದಿ ಅವರು, ”ದೇಶದ ಬಹುಸಂಖ್ಯಾತ ಜನರನ್ನು ಎರಡನೇ ದರ್ಜೆಯ ಪ್ರಜೆಗಳಾಗಿ ರೂಪಿಸುವುದು ಐಎನ್‌ಡಿಐಎ ಪಕ್ಷಗಳ ಬಯಕೆಯಾಗಿದೆ. ಹಾಲಿ ಮೀಸಲು ವ್ಯವಸ್ಥೆ ರದ್ದುಗೊಳಿಸಿ, ಮುಸ್ಲಿಮರಿಗೆ ಮೀಸಲು ಸೌಲಭ್ಯ ಕಲ್ಪಿಸುವ ಹುನ್ನಾರ ಮಾಡಿವೆ,” ಎಂದು ಆರೋಪಿಸಿದರು.

ಪಿತೂರಿ ಬಗ್ಗೆ ಎಚ್ಚರ

”ಐಎನ್‌ಡಿಐಎ ಪಿತೂರಿ ಬಗ್ಗೆ ಪೂರ್ವಾಂಚಲ ಪ್ರದೇಶದಿಂದ ಎಚ್ಚರಿಕೆ ನೀಡುತ್ತಿದ್ದೇನೆ. ಒಂದು ವರ್ಗದ ಮತಬ್ಯಾಂಕ್‌ ಉಳಿಸಿಕೊಳ್ಳಲು ಪ್ರತಿಪಕ್ಷಗಳ ನಾಯಕರು ಸಂವಿಧಾನ ಬದಲಿಸುತ್ತಾರೆ. ಎಸ್‌ಸಿ, ಎಸ್‌ಟಿ, ಒಬಿಸಿ ಮೀಸಲು ಕಿತ್ತುಕೊಂಡು ಮುಸ್ಲಿಮರಿಗೆ ನೀಡುತ್ತಾರೆ. ಮತ ನೀಡುವ ಮುನ್ನ ಗಂಭೀರವಾಗಿ ಯೋಚನೆ ಮಾಡಿ,” ಎಂದು ಮೋದಿ ಕಿವಿಮಾತು ಹೇಳಿದರು.

ಪೂರ್ವಾಂಚಲ ನಿರ್ಲಕ್ಷ್ಯ, ಮಾಫಿಯಾಗೆ ಬೆಂಬಲ

”ಸಮಾಜವಾದಿ ಪಕ್ಷ ಹಾಗೂ ಕಾಂಗ್ರೆಸ್‌ ಬಹು ಕಾಲದಿಂದ ಪೂರ್ವಾಂಚಲ ಪ್ರದೇಶದ ಅಭಿವೃದ್ಧಿ ನಿರ್ಲಕ್ಷಿಸಿವೆ. ಜನರನ್ನು ಬಡತನಕ್ಕೆ ದೂಡಿ ಅಸಹಾಯಕರನ್ನಾಗಿ ಮಾಡಿವೆ. ನಾಗರಿಕರ ವಾಸ್ತವ ಸಮಸ್ಯೆಗಳನ್ನು ಮರೆ ಮಾಚಲು ಧರ್ಮ, ಜಾತಿಗಳ ನಡುವೆ ವಿಷ ಬೀಜ ಬಿತ್ತುತ್ತಿವೆ,” ಎಂದು ಮೋದಿ ವಾಗ್ದಾಳಿ ನಡೆಸಿದರು.

”ಕೌಟುಂಬಿಕ ಹಿತಾಸಕ್ತಿ ಹೊಂದಿರುವ ಕಾಂಗ್ರೆಸ್‌ ಹಾಗೂ ಸಮಾಜವಾದಿ ಪಕ್ಷಗಳು ಪೂರ್ವಾಂಚಲ ಪ್ರದೇಶವನ್ನು ರೌಡಿಗಳು, ಗೂಂಡಾಗಳ ಮಾಫಿಯಾ ಮಾಡಿವೆ. ಜನರನ್ನು ಅಸಹಾಯಕರಾಗಿಸಿ ಶೋಷಣೆ ಮಾಡಿವೆ. ನಿಮ್ಮ ಮನೆ, ಭೂಮಿಯನ್ನು ಕಿತ್ತುಕೊಂಡು ದೌರ್ಜನ್ಯ ನಡೆಸಿವೆ. ಇಂಥ ಮಾಫಿಯಾ ಬೆಂಬಲಿಗರಿಗೆ ತಲೆ ಎತ್ತಲು ಅವಕಾಶ ಕೊಡಬೇಡಿ,” ಎಂದು ಮೋದಿ ಮನವಿ ಮಾಡಿದರು.

ರಾಮನ ವಿರೋಧಿಗಳು

”ಕಾಂಗ್ರೆಸ್‌ ಹಾಗೂ ಅದರ ಮಿತ್ರ ಪಕ್ಷಗಳು ರಾಮ ಮಂದಿರ ನಿರ್ಮಾಣವನ್ನೇ ವಿರೋಧಿಸಿದ್ದವು. ದೇಶದ ಜನರ 500 ವರ್ಷಗಳ ನಿರೀಕ್ಷೆಯನ್ನು ಕೋರ್ಟ್‌ ತೀರ್ಪಿನ ಬಳಿಕ ಈಡೇರಿಸಲಾಗಿದೆ. ಆದರೆ, ಪ್ರತಿಪಕ್ಷಗಳ ಗುಂಪು 1985ರ ಶಾ ಬಾನೋ ಪ್ರಕರಣದಂತೆ ಮಂದಿರ ಕುರಿತ 2019ರ ತೀರ್ಪನ್ನು ರದ್ದುಗೊಳಿಸುವ ಮಸಲತ್ತು ಮಾಡಿವೆ,” ಎಂದು ಮೋದಿ ದೂರಿದರು.

ಮೋದಿ ರೋಡ್‌ ಶೋ ತಡೆಗೆ ನಿಷೇಧಾಜ್ಞೆ!

ಕೋಲ್ಕೊತಾ: ಪಶ್ಚಿಮ ಬಂಗಾಳ ರಾಜಧಾನಿ ಕೋಲ್ಕೊತಾದಲ್ಲಿಮೇ 26 ರಿಂದ 60 ದಿನಗಳ ಕಾಲ ಸೆಕ್ಷನ್‌ 144ರ ಅನ್ವಯ ಜಾರಿ ಮಾಡಿರುವ ಪ್ರತಿಬಂಧಕ ಆಜ್ಞೆ ರಾಜಕೀಯ ಆರೋಪ ಪ್ರತ್ಯಾರೋಪಕ್ಕೆ ದಾರಿ ಮಾಡಿಕೊಟ್ಟಿದೆ.

‘ಚುನಾವಣೆಯಲ್ಲಿಸೋಲುವ ಭೀತಿಗೆ ಸಿಲುಕಿರುವ ಸಿಎಂ ಮಮತಾ ಬ್ಯಾನರ್ಜಿ ಅವರು ಪ್ರಧಾನಿ ಮೋದಿ ಅವರ ರೋಡ್‌ ಶೋ, ಪ್ರಚಾರ ಸಭೆ ತಡೆಯಲು ಕೋಲ್ಕೊತಾದಲ್ಲಿಏಕಾಏಕಿ ನಿಷೇಧಾಜ್ಞೆ ಜಾರಿ ಮಾಡಿದ್ದಾರೆ. ನೆನಪಿರಲಿ ಟಿಎಂಸಿಯ ಯಾವ ದುಷ್ಟ ಶಕ್ತಿಗಳು ಬಿಜೆಪಿಯನ್ನು ತಡೆಯಲು ಸಾಧ್ಯವಿಲ್ಲ,” ಎಂದು ಬಂಗಾಳ ಬಿಜೆಪಿ ಅಧ್ಯಕ್ಷ ಸುಕಾಂತಾ ಮಜುಂದಾರ್‌ ಆರೋಪಿಸಿದ್ದಾರೆ.

ಬಿಜೆಪಿ ಆರೋಪಕ್ಕೆ ಸ್ಪಷ್ಟನೆ ನೀಡಿರುವ ಕೋಲ್ಕೊತಾ ಪೊಲೀಸ್‌ ಆಯುಕ್ತ ವಿನೀತ್‌ ಕುಮಾರ್‌ ಗೋಯಲ್‌, ”ಭದ್ರತೆ ಕಾರಣಕ್ಕೆ ಸೆಂಟ್ರಲ್‌ ಕೋಲ್ಕೊತಾದ ಡಾಲ್ಹೌಸಿ, ವಿಕ್ಟೋರಿಯಾ ಹೌಸ್‌ ಪ್ರದೇಶದಲ್ಲಿಮಾತ್ರ ಮೇ 26 ರಿಂದ ಜುಲೈ 26ರವರೆಗೆ ನಿಷೇಧಾಜ್ಞೆ ಜಾರಿ ಮಾಡಲಾಗಿದೆ. ಇದು ಸಾಮಾನ್ಯ ಪ್ರಕ್ರಿಯೆಯಾಗಿದೆ. ಈ ಹಿಂದೆಯೂ ಇದೇ ರೀತಿ ಕ್ರಮ ತೆಗೆದುಕೊಳ್ಳಲಾಗಿತ್ತು,” ಎಂದಿದ್ದಾರೆ.

ಉತ್ತರಪ್ರದೇಶದ ಗೋರಖ್‌ಪುರದಲ್ಲಿಸಾರ್ವಜನಿಕ ರ್ಯಾಲಿ ವೇಳೆ ಸ್ಥಳೀಯ ಮಹಿಳೆಯರು ಪ್ರಧಾನಿ ಮೋದಿ ಅವರಿಗೆ ಶಿವ-ಪಾರ್ವತಿ ಮೂರ್ತಿಯನ್ನು ಉಡುಗೊರೆಯಾಗಿ ನೀಡಿದರು.

You May Also Like

More From Author

+ There are no comments

Add yours