
ಟೀಂ ಇಂಡಿಯಾ ಮುಖ್ಯ ಕೋಚ್ ಹುದ್ದೆಗೆ ಭಾರೀ ಚರ್ಚೆ ನಡೆಯುತ್ತಿದೆ. ರಾಹುಲ್ ದ್ರಾವಿಡ್ ಉತ್ತರಾಧಿಕಾರಿ ಯಾರು ಎಂಬುದು ಇನ್ನಷ್ಟೇ ಗೊತ್ತಾಗಬೇಕಿದೆ. ಈ ಹುದ್ದೆಗೆ ಹಲವು ಹೆಸರುಗಳು ಕೇಳಿ ಬರುತ್ತಿವೆ. ಗೌತಮ್ ಗಂಭೀರ್ ಹೆಸರು ಮುಂಚೂಣಿಯಲ್ಲಿದ್ದಾರೆ. ಆದರೆ ಅವರಿಗೆ ಈ ಹುದ್ದೆಗೇರಲು ಒಂದು ಸಂಕಷ್ಟ ಎದುರಾಗಿದೆ. ಕೆಕೆಆರ್ ಮೆಂಟರ್ ಮತ್ತು ಟೀಂ ಇಂಡಿಯಾ ಮುಖ್ಯ ಕೋಚ್ ಎರಡೂ ಸ್ಥಾನಗಳಲ್ಲಿ ಒಂದನ್ನು ಅವರು ಬಿಡಬೇಕಾಗುತ್ತದೆ.

ಗಂಭೀರ್ ವಿಷಯದಲ್ಲಿ ದೈನಿಕ್ ಜಾಗರಣ್ನಲ್ಲಿ ಪ್ರಕಟವಾದ ವರದಿ ಕ್ರಿಕೆಟ್ ವಲಯದಲ್ಲಿ ಚರ್ಚೆಗೀಡುಮಾಡಿದೆ. ಟೀಂ ಇಂಡಿಯಾ ಮುಖ್ಯ ಕೋಚ್ ಹುದ್ದೆಗೆ ಬಿಸಿಸಿಐ ಈಗಾಗಲೇ ಗಂಭೀರ್ ಅವರನ್ನು ಸಂಪರ್ಕಿಸಿದೆ ಎಂದು ಈ ವರದಿ ಬಹಿರಂಗಪಡಿಸಿದೆ . ಅವರೂ ಕೂಡ ಈ ಸ್ಥಾನಕ್ಕೆ ಆಸಕ್ತಿ ತೋರಿದ್ದಾರೆ ಎನ್ನಲಾಗಿದೆ. ಭಾನುವಾರ (ಮೇ 26) ಗಂಭೀರ್ ಐಪಿಎಲ್ 2024 ರ ಫೈನಲ್ ಬಳಿಕ ಈ ವಗ್ಗೆ ಚರ್ಚಿಸುವ ಸಾಧ್ಯತೆಗಳಿವೆ.

ಗಂಭೀರ್ ಈ ಹುದ್ದೆಗೆ ಇನ್ನೂ ಅರ್ಜಿ ಸಲ್ಲಿಸಿಲ್ಲ. ಮಂಡಳಿಯ ಹಿರಿಯರೊಂದಿಗೆ ಮಾತನಾಡಿ ನಿರ್ಧಾರ ಕೈಗೊಳ್ಳಬಹುದು. ಆದರೆ ಅವರಿಗೆ ಮತ್ತೊಂದು ಸಂಕಷ್ಟ ಎದುರಾಗಿದೆ. ಈ ವರ್ಷದ ಐಪಿಎಲ್ನಲ್ಲಿ ಕೆಕೆಆರ್ನ ಮೆಂಟರ್ ಆಗಿ ಬಂದಿದ್ದರು. ಈ ಸಂದರ್ಭದಲ್ಲಿ ತಂಡದ ಮಾಲೀಕ ಶಾರುಖ್ ಖಾನ್ ಅವರಿಗೆ ಬ್ಲಾಂಕ್ ಚೆಕ್ ನೀಡಿರುವುದಾಗಿ ವರದಿ ಬಹಿರಂಗಪಡಿಸಿದೆ.

ಹತ್ತು ವರ್ಷಗಳ ಕಾಲ ತನ್ನ ಕೆಕೆಆರ್ ತಂಡದ ಜವಾಬ್ದಾರಿಯನ್ನ ನಿಬಾಯಿಸಲು ಶಾರುಖ್ ಗಂಭೀರ್ಗೆ ದೊಡ್ಡ ಆಫರ್ ನೀಡಿದ್ದಾರೆ ಎನ್ನಲಾಗುತ್ತಿದೆ. ಇದಕ್ಕಾಗಿ ಎಷ್ಟು ಬೇಕಾದರೂ ಹಣ ಕೊಡಲು ಸಿದ್ಧ ಎಂದು ಖಾಲಿ ಚೆಕ್ ನೀಡಿದ್ದಾರೆ ಎಂದು ವರದಿ ತಿಳಿಸಿದೆ.

ಇದೇ ಕಾರಣದಿಂದ ಗಂಭೀರ್ ಟೀಮ್ ಇಂಡಿಯಾ ಕೋಚ್ ಆಗುವುದನ್ನ ನಿರ್ಧರಿಸಲು ಗೊಂದಲಕ್ಕೀಡಾಗಿದ್ದಾರೆ. ಒಂದು ವೇಳೆ ಟೀಂ ಇಂಡಿಯಾ ಕೋಚ್ ಹುದ್ದೆ ಬಯಸಿದರೆ ಕೆಕೆಆರ್ ಗೆ ಗುಡ್ ಬೈ ಹೇಳಬೇಕಾಗುತ್ತದೆ. ಮತ್ತು ಈ ಬಗ್ಗೆ ಅವರು ಯಾವ ನಿರ್ಧಾರ ತೆಗೆದುಕೊಳ್ಳುತ್ತಾರೆ ಎಂಬುದು ಕುತೂಹಲ ಮೂಡಿಸಿದೆ.

ಗಂಭೀರ್ 2007 ರ ಟಿ 20 ವಿಶ್ವಕಪ್ ಮತ್ತು 2011 ರ ಏಕದಿನ ವಿಶ್ವಕಪ್ ಭಾರತಕ್ಕೆ ಗೆದ್ದ ತಂಡದ ಭಾಗವಾಗಿದ್ದರು. ಅವರು 2012 ಮತ್ತು 2014 ರಲ್ಲಿ ನಾಯಕರಾಗಿ ಕೆಕೆಆರ್ಗೆ ಎರಡು ಐಪಿಎಲ್ ಟ್ರೋಫಿಗಳನ್ನು ನೀಡಿದರು. ಇದೀಗ ಮೆಂಟರ್ ಆಗಿ ಫೈನಲ್ಗೆ ಕರೆತಂದಿದ್ದಾರೆ.

ಇದಲ್ಲದೆ, ಗೌತಿ ಬಿಸಿಸಿಐ ನಿಗದಿಪಡಿಸಿದ ಎಲ್ಲಾ ಮಾನದಂಡಗಳನ್ನು ಪೂರೈಸುವ ಅಭ್ಯರ್ಥಿಯಾಗಿದ್ದಾರೆ. ಎಲ್ಲದಕ್ಕೂ ಮಿಗಿಲಾಗಿ ದೇಶೀಯ ಕ್ರಿಕೆಟ್ ಬಗ್ಗೆ ಸಾಕಷ್ಟು ತಿಳಿದಿರುವ ವ್ಯಕ್ತಿ. ಇದರೊಂದಿಗೆ ಗಂಭೀರ್ಗೆ ಮುಖ್ಯ ಕೋಚ್ ಹುದ್ದೆ ನೀಡಿದರೆ ಉತ್ತಮ ಎಂಬ ಅಭಿಪ್ರಾಯ ವ್ಯಕ್ತವಾಗಿದೆ. ಮತ್ತು ಅವರು ಯಾವ ನಿರ್ಧಾರ ತೆಗೆದುಕೊಳ್ಳುತ್ತಾರೆ ಎಂಬುದು ಕುತೂಹಲ ಮೂಡಿಸಿದೆ.
+ There are no comments
Add yours