ಪಾಕ್‌ ಆಕ್ರಮಿತ ಕಾಶ್ಮೀರ ನಮ್ಮ ಭೂಭಾಗವಲ್ಲ: ಪಾಕ್‌ ಒಪ್ಪಿಗೆ

0 min read

ಹೈಲೈಟ್ಸ್‌:

  • ಪಾಕಿಸ್ತಾನ ಆಕ್ರಮಿತ ಕಾಶ್ಮೀರ (ಪಿಒಕೆ) ನಮ್ಮದಲ್ಲ. ಅದೊಂದು ವಿದೇಶಿ ನೆಲ: ಪಾಕಿಸ್ತಾನ
  • ಆ ಪ್ರಾಂತ್ಯದ ಮೇಲೆ ನಮಗೆ ಯಾವುದೇ ಅಧಿಕಾರ ಇಲ್ಲ ಎಂದು ಒಪ್ಪಿಕೊಂಡ ಪಾಕಿಸ್ತಾನ
  • ಜಾಗತಿಕ ವೇದಿಕೆಗಳಲ್ಲಿ ಪಾಕ್‌ ಸರಕಾರದ ಈ ಹೇಳಿಕೆಯನ್ನು ಭಾರತ ದಾಖಲೆಯಾಗಿ ಸಲ್ಲಿಸಬಹುದಾಗಿದೆ

ಇಸ್ಲಾಮಾಬಾದ್‌: ಪಾಕಿಸ್ತಾನ ಆಕ್ರಮಿತ ಕಾಶ್ಮೀರ (ಪಿಒಕೆ) ನಮ್ಮದಲ್ಲ. ಅದೊಂದು ವಿದೇಶಿ ನೆಲವಾಗಿದ್ದು, ಆ ಪ್ರಾಂತ್ಯದ ಮೇಲೆ ನಮಗೆ ಯಾವುದೇ ಅಧಿಕಾರ ಇಲ್ಲ ಎಂದು ಪಾಕಿಸ್ತಾನ ಸರಕಾರ ಇಸ್ಲಾಮಾಬಾದ್‌ ಹೈಕೋರ್ಟ್‌ನಲ್ಲಿ ಒಪ್ಪಿಕೊಂಡಿದೆ.

75 ವರ್ಷಗಳ ಬಳಿಕ ಮೊದಲ ಬಾರಿಗೆ ಪಾಕಿಸ್ತಾನ ಸರಕಾರವೇ ನೇರವಾಗಿ ಪಿಒಕೆ ನಮ್ಮ ನೆಲವಲ್ಲ, ವಿದೇಶಿ ಭೂ ಭಾಗ ಎಂದು ಹೇಳಿರುವುದು ‘ಪಿಒಕೆ ನಮ್ಮದು’ ಎಂಬ ಭಾರತದ ವಾದಕ್ಕೆ ಪುಷ್ಟಿ ಸಿಕ್ಕಂತಾಗಿದೆ. ಜಾಗತಿಕ ವೇದಿಕೆಗಳಲ್ಲಿ ಪಾಕ್‌ ಸರಕಾರದ ಈ ಹೇಳಿಕೆಯನ್ನು ಭಾರತ ದಾಖಲೆಯಾಗಿ ಸಲ್ಲಿಸಬಹುದಾಗಿದೆ ಎಂದು ತಜ್ಞರು ವಿಶ್ಲೇಷಿಸಿದ್ದಾರೆ.

ಕಾಶ್ಮೀರಿ ಕವಿ ಹಾಗೂ ಪತ್ರಕರ್ತ ಅಹ್ಮದ್‌ ಫರ್ಹಾದ್‌ ಶಾ ಅವರ ಅಪಹರಣ ಪ್ರಕರಣದ ವಿಚಾರಣೆ ವೇಳೆ ಶೆಹಬಾಜ್‌ ಷರೀಫ್‌ ನೇತೃತ್ವದ ಸರಕಾರದ ಹೆಚ್ಚುವರಿ ಅಟಾರ್ನಿ ಜನರಲ್‌ ‘ಪಾಕ್‌ ಆಕ್ರಮಿತ ಕಾಶ್ಮೀರ’ ಪ್ರದೇಶ ಪಾಕಿಸ್ತಾನದ ಭಾಗವೇ ಅಲ್ಲಎಂದು ಒಪ್ಪಿಕೊಂಡಿದ್ದಾರೆ.

ಫರ್ಹಾದ್‌ ಶಾ ಅವರನ್ನು ಪಾಕಿಸ್ತಾನ ಗುಪ್ತಚರ ಸಂಸ್ಥೆ ಅಪಹರಣ ಮಾಡಿದೆ. ಅವರನ್ನು ಕೂಡಲೇ ಬಿಡುಗಡೆ ಮಾಡುವಂತೆ ಕೋರಿ ಅವರ ಪತ್ನಿ ಸಲ್ಲಿಸಿದ್ದ ಅರ್ಜಿ ವಿಚಾರಣೆ ನಡೆಸಿದ ಹೈಕೋರ್ಟ್‌ ನ್ಯಾ.ಮೊಹ್ಸಿನ್‌ ಅಖ್ತರ್‌ ಕಯಾನಿ ಅವರು, ಕೂಡಲೇ ಅಪಹೃತ ವ್ಯಕ್ತಿಯನ್ನು ಕೋರ್ಟ್‌ ಮುಂದೆ ಹಾಜರುಪಡಿಸುವಂತೆ ಸೂಚಿಸಿದರು.

ಈ ವೇಳೆ ಸರಕಾರದ ಪರವಾಗಿ ಹಾಜರಾದ ಹೆಚ್ಚುವರಿ ಅಟಾರ್ನಿ ಜನರಲ್‌, ‘‘ಫರ್ಹಾದ್‌ ಶಾ ಅವರು ಪಾಕ್‌ ಆಕ್ರಮಿತ ಕಾಶ್ಮೀರದ ಪೊಲೀಸ್‌ ಕಸ್ಟಡಿಯಲ್ಲಿದ್ದಾರೆ. ಹೀಗಾಗಿ ಅವರನ್ನು ಕೋರ್ಟ್‌ ಎದುರು ಹಾಜರುಪಡಿಸುವುದು ಕಷ್ಟಸಾಧ್ಯ,’’ ಎಂದು ಹೇಳಿದರು.

ಯಾವ ಕಾರಣಕ್ಕೆ ಕೋರ್ಟ್‌ಗೆ ಹಾಜರುಪಡಿಸಲು ಸಾಧ್ಯವಿಲ್ಲಎಂಬ ನ್ಯಾಯಮೂರ್ತಿ ಕಯಾನಿ ಮರು ಪ್ರಶ್ನೆಗೆ ಉತ್ತರ ನೀಡಿದ ಹೆಚ್ಚುವರಿ ಅಟಾರ್ನಿ ಜನರಲ್‌, ‘‘ಪಿಒಕೆ ವಿದೇಶಿ ಭೂಭಾಗ. ಅದಕ್ಕೆ ಪ್ರತ್ಯೇಕ ಸಂವಿಧಾನವಿದೆ, ನ್ಯಾಯಾಲಯವಿದೆ. ಪಾಕ್‌ ಕೋರ್ಟ್‌ ತೀರ್ಪುಗಳು ಅಲ್ಲಿಗೆ ಅನ್ವಯವಾಗುವುದಿಲ್ಲ. ಹೀಗಿರುವಾಗ ಅವರನ್ನು ಹೇಗೆ ಇಲ್ಲಿನ ಕೋರ್ಟ್‌ಗೆ ಕರೆತರಲು ಸಾಧ್ಯ,’’ ಎಂದು ವಾದ ಮುಂದಿಟ್ಟರು.

ಪಿಒಕೆ ವಿದೇಶಿ ನೆಲವಾಗಿದ್ದರೆ ಪಾಕಿಸ್ತಾನದ ಸೇನೆ ಹಾಗೂ ರೇಂಜರ್‌ಗಳು ಅಲ್ಲಿಗೆ ಹೇಗೆ ಪ್ರವೇಶ ಪಡೆದರು ಎಂದು ನ್ಯಾಯಾಲಯ ಪ್ರಶ್ನಿಸಿತು. ಪಾಕಿಸ್ತಾನ ಗುಪ್ತಚರ ಸಂಸ್ಥೆಗಳು ಬಲವಂತವಾಗಿ ಜನರ ಅಪಹರಣ ಮಾಡುತ್ತಿರುವುದು ನ್ಯಾಯೋಚಿತವಲ್ಲಎಂದು ಸರಕಾರವನ್ನು ನ್ಯಾ.ಕಯಾನಿ ತರಾಟೆಗೆ ತೆಗೆದುಕೊಂಡರು.

ಫರ್ಹಾದ್‌ ಶಾ ಯಾರು?

ಅಹ್ಮದ್‌ ಫಾರ್ಹಾದ್‌ ಶಾ ಅವರು ಕಾಶ್ಮೀರಿ ಕವಿ ಹಾಗೂ ಪರ್ತಕರ್ತ. ಪಾಕ್‌ ಆಕ್ರಮಿತ ಕಾಶ್ಮೀರಿ ಜನರ ಮೂಲಭೂತ ಹಕ್ಕುಗಳ ಪರವಾಗಿ ಸರಕಾರದ ಜತೆಗೆ ಸಂಘರ್ಷ ನಡೆಸುತ್ತಿರುವ ಹೋರಾಟಗಾರ. ಸರಕಾರಿ ಹಾಗೂ ಸೇನಾ ನೀತಿಗಳನ್ನು ಬಲವಾಗಿ ವಿರೋಧಿಸಿರುವ ಫರ್ಹಾದ್‌ ಶಾ, ಪಿಒಕೆಯಲ್ಲಿಇಸ್ಲಾಮಿಕ್‌ ಗಣರಾಜ್ಯಗಳ ನೀತಿಗಳಿಗೆ ಬೆಲೆ ನೀಡುವುದಿಲ್ಲಎಂದು ಪ್ರತಿಪಾದಿಸಿದ್ದಾರೆ.

1947 ರಲ್ಲಿ ಪಿಒಕೆ ಸೃಷ್ಟಿ

ಭಾರತ ಸ್ವಾತಂತ್ರ್ಯಗೊಂಡ ವೇಳೆ ಕಾಶ್ಮೀರದ ರಾಜ ಹರಿಸಿಂಗ್‌ ಅವರು ಭಾರತದ ಒಕ್ಕೂಟ ಸೇರುವ ನಿರ್ಧಾರ ತೆಗೆದುಕೊಂಡರು. ಈ ವೇಳೆ ಪಾಕಿಸ್ತಾನ ಸೇನೆಯು ಕಾಶ್ಮೀರದ ಒಂದು ಭಾಗವನ್ನು ವಶಕ್ಕೆ ತೆಗೆದುಕೊಂಡಿತು. ಗೃಹ ಸಚಿವರಾಗಿದ್ದ ಸರ್ದಾರ್‌ ವಲ್ಲಭಭಾಯಿ ಪಟೇಲ್‌ ಅವರು ಪಾಕ್‌ ಸೇನೆಯನ್ನು ಹಿಂದಕ್ಕೆ ಕಳಿಸುವಂತೆ ಭಾರತೀಯ ಸೇನೆಗೆ ಆದೇಶ ನೀಡಿದರು.

ಆದರೆ, ಮಧ್ಯಪ್ರವೇಶ ಮಾಡಿದ ಪ್ರಧಾನಿ ಜವಹಾರ್‌ಲಾಲ್‌ ನೆಹರು ಅವರು ಸೇನೆಯನ್ನು ತಡೆದು ವಿಷಯವನ್ನು ವಿಶ್ವಸಂಸ್ಥೆಯ ಅಂಗಳಕ್ಕೆ ಎಳೆದೊಯ್ದರು. ಅಲ್ಲಿಂದ ಕಾಶ್ಮೀರದ ಒಂದು ಭಾಗ ‘ಪಿಒಕೆ’ ಎಂಬ ವಿವಾದಿತ ಪ್ರದೇಶವಾಗಿ ಉಳಿದುಕೊಂಡಿತು.

You May Also Like

More From Author

+ There are no comments

Add yours