ನವದೆಹಲಿ (ಜು.29): ‘ಆದಾಯ ರಿಟರ್ನ್ಸ್ ಸಲ್ಲಿಸುವ ಗ್ರಾಹಕರು, ಹೆಚ್ಚಿನ ರೀಫಂಡ್ ಪಡೆಯುವ ಸಲುವಾಗಿ ಕಡಿಮೆ ಆದಾಯ ತೋರಿಸುವುದು ಮತ್ತು ಹೆಚ್ಚಿನ ವೆಚ್ಚ ತೋರಿಸುವುದು ಶಿಕ್ಷಾರ್ಹ ಅಪರಾಧ’ ಎಂದು ಆದಾಯ ತೆರಿಗೆ ಇಲಾಖೆ ಎಚ್ಚರಿಕೆ ನೀಡಿದೆ. ಅಲ್ಲದೆ ಇಂಥ ಸುಳ್ಳು ಮಾಹಿತಿ ರೀಫಂಡ್ ಮಾಡುವ ಪ್ರಕ್ರಿಯೆಯಲ್ಲಿ ವಿಳಂಬಕ್ಕೂ ಕಾರಣವಾಗಬಹುದು ಎಂದು ಹೇಳಿದೆ.
2024-25ನೇ ಸಾಲಿನಲ್ಲಿ ಲೆಕ್ಕಪರಿಶೋಧನೆಗೆ ಒಳಪಡಬೇಕಿಲ್ಲದ ಆದಾಯ ತೆರಿಗೆ ಪಾವತಿದಾರರ ಖಾತೆಗಳ ಐಟಿಆರ್ ಸಲ್ಲಿಕೆಗೆ ಇದೇ ಜು.31 ಕಡೆಯ ದಿನವಾಗಿದೆ. ಜು.26ರವರೆಗೂ 5 ಕೋಟಿಗೂ ಹೆಚ್ಚಿನ ಜನರು ತಮ್ಮ ಆದಾಯ ತೆರಿಗೆ ರಿಟರ್ನ್ಸ್ ಸಲ್ಲಿಕೆ ಮಾಡಿದ್ದಾರೆ.
ಇದೇ ವೇಳೆ ಆದಾಯ ತೆರಿಗೆ ರಿಟರ್ನ್ಸ್ ಸಲ್ಲಿಕೆ ಮಾಡಿ ಬಹಳ ದಿನವಾದರೂ ರೀಫಂಡ್ ಬರದೇ ಇದ್ದ ಪಕ್ಷದಲ್ಲಿ, ಗ್ರಾಹಕರು ಆದಾಯ ತೆರಿಗೆ ಇಲಾಖೆಯಿಂದ ಯಾವುದಾದರೂ ಸಂದೇಶ ಬಂದಿದೆದೆಯೇ ಎಂದು ಪರೀಕ್ಷಿಸಬೇಕು. ಬಂದಿದ್ದರೆ, ಅದರಲ್ಲಿನ ಸೂಚನೆಯಂತೆ ಮುಂದುವರೆಯಬೇಕು. ಇಂಥ ಸಂದೇಶಗಳು ಇ ಫೈಲಿಂಗ್ ಅಕೌಂಟ್ನ ಪೆಂಡಿಂಗ್ ಆ್ಯಕ್ಷನ್ ಮತ್ತು ವರ್ಕ್ ಲಿಸ್ಟ್ ಸೆಕ್ಷನ್ನಲ್ಲಿ ಇರುತ್ತದೆ ಎಂದು ಆದಾಯ ತೆರಿಗೆ ಇಲಾಖೆ ಹೇಳಿದೆ.
ಐಟಿ ರಿಟರ್ನ್ಸ್ ಸಲ್ಲಿಕೆಗೆ 2 ದಿನ ಮಾತ್ರ ಬಾಕಿ
2024-25ನೇ ಸಾಲಿನಲ್ಲಿ ಐಟಿ ರಿಟರ್ನ್ಸ್ ಸಲ್ಲಿಕೆಗೆ ಇದೇ ಜು.31 ಕಡೆಯ ದಿನವಾಗಿದೆ. ಲೆಕ್ಕಪರಿಶೋಧನೆಗೆ ಒಳಪಡಬೇಕಿಲ್ಲದ ಆದಾಯ ತೆರಿಗೆ ಪಾವತಿದಾರರು ರಿಟರ್ನ್ಸ್ ಸಲ್ಲಿಸಬೇಕು. ಜು.26ರವರೆಗೂ 5 ಕೋಟಿಗೂ ಹೆಚ್ಚಿನ ಜನರು ತಮ್ಮ ಆದಾಯ ತೆರಿಗೆ ರಿಟರ್ನ್ಸ್ ಸಲ್ಲಿಕೆ ಮಾಡಿದ್ದಾರೆ.
ವಿದೇಶ ಪ್ರಯಾಣಕ್ಕೆ ತೆರಿಗೆ ಪಾವತಿ ಪ್ರಮಾಣಪತ್ರ ಎಲ್ಲರಿಗೂ ಕಡ್ಡಾಯವಲ್ಲ:
ನವದೆಹಲಿ: ವಿದೇಶ ಪ್ರಯಾಣಕ್ಕೆ ಮುನ್ನ ತೆರಿಗೆ ಪಾವತಿಯ ಪ್ರಮಾಣಪತ್ರ ಸಲ್ಲಿಸುವುದು ಕಡ್ಡಾಯ ಎಂಬ ಇತ್ತೀಚಿನ ಬಜೆಟ್ ಪ್ರಸ್ತಾಪಕ್ಕೆ ಭಾರೀ ಆಕ್ರೋಶ ವ್ಯಕ್ತವಾದ ಬೆನ್ನಲ್ಲೇ, ಕೇಂದ್ರ ಸರ್ಕಾರ ಈ ಕುರಿತು ಸ್ಪಷ್ಟನೆ ನೀಡಿದೆ. ಈ ಪ್ರಸ್ತಾಪ ಎಲ್ಲಾ ನಾಗರಿಕರಿಗೂ ಅನ್ವಯವಾಗದು. ಈ ಕುರಿತು ಆತಂಕ ಬೇಕಿಲ್ಲ ಎಂದು ಸ್ಪಷ್ಟಪಡಿಸಿದೆ.
ಈ ಕುರಿತು ಹೇಳಿಕೆ ಬಿಡುಗಡೆ ಮಾಡಿರುವ ಹಣಕಾಸು ಸಚಿವಾಲಯ, ‘ಹಣಕಾಸು ಅಕ್ರಮದ ಪ್ರಕರಣದಲ್ಲಿ ಭಾಗಿಯಾಗಿರುವವರು, ಯಾವುದೇ ತನಿಖೆಯಲ್ಲಿ ಯಾವ ವ್ಯಕ್ತಿಯ ಹಾಜರಿ ಅಗತ್ಯವಿರುತ್ತದೆಯೋ ಅವರು ಮತ್ತು ₹10 ಲಕ್ಷಕ್ಕಿಂತ ಹೆಚ್ಚಿನ ಮೊತ್ತದ ಸಂಪತ್ತು ತೆರಿಗೆ ಬಾಕಿ ಉಳಿಸಿಕೊಂಡವರಿಗೆ ಮಾತ್ರವೇ ಈ ನಿಯಮ ಅನ್ವಯವಾಗುತ್ತದೆ’ ಎಂದು ಹೇಳಿದೆ.
ಅಲ್ಲದೆ ಇಂಥ ತೆರಿಗೆ ಪ್ರಮಾಣ ಪತ್ರ ಕೇಳುವವರು, ಯಾವ ಕಾರಣಕ್ಕೆ ಅದನ್ನು ಕೇಳಲಾಗುತ್ತಿದೆ ಎಂದು ಮೊದಲು ಮಾಹಿತಿ ನೀಡಬೇಕು ಹಾಗೂ ಇದಕ್ಕೆ ಅವರು ಆದಾಯ ತೆರಿಗೆ ಇಲಾಖೆ ಮುಖ್ಯ ಆಯುಕ್ತರು ಮತ್ತು ಪ್ರಧಾನ ಮುಖ್ಯ ಆಯುಕ್ತರ ಅನುಮೋದನೆ ಪಡೆದಿರಬೇಕು ಎಂದು ಹೇಳಿದೆ.
+ There are no comments
Add yours