ಹೈಲೈಟ್ಸ್:
- ಕೂಪನ್ ಕೊಟ್ಟು 136 ಸ್ಥಾನ ಗೆದ್ದ ಕಾಂಗ್ರೆಸ್ ಎಂದು ಕುಮಾರಸ್ವಾಮಿ ವಾಗ್ದಾಳಿ
- ಮತ್ತಿಕೆರೆ ರೈಲ್ವೇ ನಿಲ್ದಾಣದಲ್ಲಿ ಅವರು ನಡೆಸುತ್ತಿರುವ ಅಕ್ರಮ ವ್ಯವಹಾರ
- ಕಳೆದ ಚುನಾವಣೆಯಲ್ಲಿ ಲುಲು ಮಾಲ್ ಕೂಪನ್ ಕೊಟ್ಟರು ಎಂದ ಕುಮಾರಸ್ವಾಮಿ
ಬೆಂಗಳೂರು : ಕಳೆದ ಅಸೆಂಬ್ಲಿ ಚುನಾವಣೆಯಲ್ಲಿ ಕಾಂಗ್ರೆಸ್ ಗೆದ್ದದ್ದು ಕೂಪನ್ ವಿತರಿಸಿ, ಇವರ ಚುನಾವಣಾ ಗೆಲುವಿನ ರಹಸ್ಯ ನಮಗೆ ಗೊತ್ತಿಲ್ಲವೇ. ಅಕ್ರಮಗಳ ಪಿತಾಮಹರಾಗಿರುವ ಡಿ.ಕೆ.ಶಿವಕುಮಾರ್ ಅವರ ಅಸಲಿಯತ್ತು ನಮಗೆ ತಿಳಿದಿಲ್ಲವೇ ಎಂದು ಕೇಂದ್ರ ಸಚಿವ ಎಚ್.ಡಿ.ಕುಮಾರಸ್ವಾಮಿ ವಾಗ್ದಾಳಿ ನಡೆಸಿದ್ದಾರೆ.
ಬರೀ ಮುಖ್ಯಮಂತ್ರಿಗಳ ರಾಜೀನಾಮೆಯನ್ನು ಒತ್ತಾಯಿಸಿ ನಾವು ಪಾದಯಾತ್ರೆಯನ್ನು ನಡೆಸುತ್ತಿಲ್ಲ. ಸಿದ್ದರಾಮಯ್ಯ ಸರ್ಕಾರದ ಭ್ರಷ್ಟಾಚಾರದ ವಿರುದ್ದ ನಮ್ಮ ಪಾದಯಾತ್ರೆ. ಸಿದ್ದರಾಮಯ್ಯನವರು ಸಿಎಂ ಆಗಿ ಮುಂದುವರಿಯಲು ಯಾವುದೇ ನೈತಿಕತೆಯನ್ನು ಉಳಿಸಿಕೊಂಡಿಲ್ಲ ಎಂದು ಎಚ್.ಡಿ.ಕುಮಾರಸ್ವಾಮಿ ವಾಗ್ದಾಳಿ ನಡೆಸಿದ್ದಾರೆ.
” ಆದಾಯ ತೆರಿಗೆ ಕಚೇರಿಯಲ್ಲಿ ಮತ್ತು ಚುನಾವಣಾ ಆಯೋಗದಲ್ಲಿ ನನ್ನ ಆಸ್ತಿ ಬಗ್ಗೆ ವಿವರಣೆ ಸಿಗುತ್ತದೆ. ಇದಲ್ಲದೇ, ಆರ್ಟಿಐನಲ್ಲಿ ಅರ್ಜಿ ಹಾಕಿದರೆ ಎಲ್ಲಾ ಮಾಹಿತಿಗಳು ಸಿಗುತ್ತದೆ. ಸಾರ್ವಜನಿಕ ಬದುಕಿನಲ್ಲಿ ಇರುವ ನಮ್ಮಂತವರ ದಾಖಲೆಗಳು ಜನರಿಗೆ ಪ್ರಯಾಸವಿಲ್ಲದೇ ಸಿಗುತ್ತದೆ. ಹಾಗಾಗಿ, ನನ್ನ ಆಸ್ತಿಗಳ ಬಗ್ಗೆ ಮಾತನಾಡುವವರು ದಾಖಲೆಗಳನ್ನು ಪಡೆದುಕೊಳ್ಳಲಿ ” ಎಂದು ಕುಮಾರಸ್ವಾಮಿ ಸವಾಲು ಹಾಕಿದ್ದಾರೆ.
” ಸುಳ್ಳು ಹೇಳಿಕೊಂಡು ತಿರುಗಾಡಿಕೊಂಡು ಇರಲು ಸಾಧ್ಯವಿಲ್ಲ. ಮತ್ತಿಕೆರೆ ರೈಲ್ವೇ ನಿಲ್ದಾಣಕ್ಕೆ ರಾತ್ರಿ ಹೋದರೆ, ಅವರ (ಡಿಕೆಶಿ) ಅಕ್ರಮದ ಬಗ್ಗೆ ಗೊತ್ತಾಗುತ್ತದೆ. ದಿನಾರಾತ್ರಿ ದಿಮ್ಮಿ ಬರುತ್ತದೆ, ಕಲ್ಲಿನದ್ದು. ಅದನ್ನು ನೋಡಿದರೆ ಅವರ ಆಸ್ತಿ ಏನು ಎನ್ನುವುದು ಗೊತ್ತಾಗುತ್ತದೆ ” ಎಂದು ಕುಮಾರಸ್ವಾಮಿ, ಡಿಕೆಶಿ ವಿರುದ್ದ ಹೊಸ ಆರೋಪವನ್ನು ಹೊರಿಸಿದ್ದಾರೆ.
ದೆಹಲಿಯಿಂದ ಬಂದ ಉಸ್ತುವಾರಿಗಳು ಸಿಎಂ ಸಿದ್ದರಾಮಯ್ಯನವರಿಗೆ ಕ್ಲೀನ್ ಚಿಟ್ ಕೊಟ್ಟು ಹೋಗಿದ್ದಾರೆ, ಅವರೇನು ತನಿಖಾಧಿಕಾರಿಗಳಾ ಎಂದು ಕುಮಾರಸ್ವಾಮಿ ಪ್ರಶ್ನಿಸಿದ್ದಾರೆ. ಕಣ್ಮುಂದೆ ದಾಖಲೆಗಳಿವೆ, ಮುಖ್ಯಮಂತ್ರಿಗಳೇ 62 ಕೋಟಿ ರೂಪಾಯಿ ಆಸ್ತಿ ಎಂದು ಹೇಳಿಕೊಂಡಿದ್ದಾರೆ. ಇದಕ್ಕಿಂತ ಹೆಚ್ಚು ಇನ್ನೇನು ಬೇಕು ಎಂದು ಕುಮಾರಸ್ವಾಮಿ ಹೇಳಿದ್ದಾರೆ.
” ಉಪ ಮುಖ್ಯಮಂತ್ರಿಗಳು ನಮ್ಮ ಮೇಲೆ ಪೊಳ್ಳು ಸವಾಲನ್ನು ಹಾಕುತ್ತಿದ್ದಾರೆ. ಜನ ಅವರಿಗೇ ಅಧಿಕಾರವನ್ನು ಕೊಟ್ಟಿದ್ದಾರೆ, ಅವರದ್ದೇ ಸರ್ಕಾರವಿದೆ, ತನಿಖೆ ನಡೆಸಲಿ. ಸುಮ್ಮನೇ ಆಪಾದನೆ ಮಾಡಿಕೊಂಡು ತಿರುಗಾಡಿದರೆ ಏನೂ ಪ್ರಯೋಜನವಿಲ್ಲ ” ಎಂದು ಕುಮಾರಸ್ವಾಮಿ ಹೇಳಿದ್ದಾರೆ.
+ There are no comments
Add yours