ಮಾನ ಮರ್ಯಾದೆ ಇದ್ದರೆ ಕೂಡಲೇ ಸಿದ್ದರಾಮಯ್ಯ ರಾಜೀನಾಮೆ ಕೊಡಲಿ: ಮಾಜಿ ಸಂಸದ ಮುನಿಸ್ವಾಮಿ

1 min read

ಹೈಲೈಟ್ಸ್‌:

  • ಅಂಬೇಡ್ಕರ್ ರಚಿಸಿರುವ ಸಂವಿಧಾನಕ್ಕೆ ಸಿಕ್ಕಿರುವ ಮೊದಲ ಜಯ: ಮಾಜಿ ಸಂಸದ ಎಸ್‌.ಮುನಿಸ್ವಾಮಿ
  • ಸಿದ್ದರಾಮಯ್ಯರಿಗೆ ಮಾನ ಮರ್ಯಾದೆ ಇದ್ದರೆ ಭಂಡತನ ಬಿಟ್ಟು ಕೂಡಲೇ ರಾಜೀನಾಮೆ ಕೊಡಲಿ ಎಂದು ಒತ್ತಾಯ
  • ಪ್ರಾಸಿಕ್ಯೂಷನ್‌ಗೆ ತಡೆ ಕೋರಿ ನಾಳೆ ಹೈಕೋರ್ಟ್ ಕದ ತಟ್ಟಲು ಸಿಎಂ ಸಿದ್ದರಾಮಯ್ಯ ತಯಾರಿ

ಕೋಲಾರ: ಸಿಎಂ ಸಿದ್ದರಾಮಯ್ಯ ವಿರುದ್ಧ ರಾಜ್ಯಪಾಲರು ಪ್ರಾಸಿಕ್ಯೂಷನ್‌ಗೆ ಅನುಮತಿ ನೀಡಿರುವುದು ಅಂಬೇಡ್ಕರ್ ರಚಿಸಿರುವ ಸಂವಿಧಾನಕ್ಕೆ ಸಿಕ್ಕಿರುವ ಮೊದಲ ಜಯವಾಗಿದೆ. ಸಿದ್ದರಾಮಯ್ಯರಿಗೆ ಮಾನ ಮರ್ಯಾದೆ ಇದ್ದರೆ ಭಂಡತನ ಬಿಟ್ಟು ಕೂಡಲೇ ರಾಜೀನಾಮೆ ನೀಡಬೇಕು ಎಂದು ಮಾಜಿ ಸಂಸದ ಎಸ್‌.ಮುನಿಸ್ವಾಮಿ ಆಗ್ರಹಿಸಿದರು.

‘ ತಪ್ಪು ಮಾಡಿದವರು ಎಷ್ಟೇ ದೊಡ್ಡವರಾಗಿದ್ದರು ಕಾನೂನಿಗೆ ತಲೆಬಾಗಲೇ ಬೇಕು ಎಂದರು. ರಾಜ್ಯ ಸರ್ಕಾರದ ಭ್ರಷ್ಟಾಚಾರ ಜಗಜ್ಜಾಹೀರಾಗಿದೆ, ಮೂಡಾ ಮಾತ್ರವಲ್ಲ, ವಾಲ್ಮೀಕಿ ಮತ್ತಿತರ ನಿಗಮಗಳಲ್ಲೂ ಭ್ರಷ್ಟಾಚಾರ ತಾಂಡವವಾಡುತ್ತಿದೆ, ಸದನದಲ್ಲೇ ಮುಖ್ಯಮಂತ್ರಿಅವ್ಯವಹಾರ ನಡೆದಿರುವುದು 187 ಕೋಟಿ ಅಲ್ಲ 89 ಕೋಟಿ ಎಂದು ಒಪ್ಪಿಕೊಂಡಿದ್ದಾರೆ’ ಎಂದರು.

‘ ವಾಲ್ಮೀಕಿ ನಿಗಮದ ಹಣವನ್ನು ಜ್ಯೂವೆಲರಿ ಶಾಪ್, ಸಾರಾಯಿ ಅಂಗಡಿಗಳಿಗೆ, ನಕಲಿ ಖಾತೆಗಳಿಗೆ, ಹೊರ ರಾಜ್ಯದ ಸೊಸೈಟಿಗಳಿಗೆ ಹಸ್ತಂತರಿಸಿರುವುದು ಈಗಾಗಲೇ ಸಾಬೀತಾಗಿದೆ. ಕಪ್ಪು ಚುಕ್ಕೆ ಇಲ್ಲದ ಆಡಳಿತ ಸಿದ್ದರಾಮಯ್ಯನವರದ್ದು ಅಲ್ಲ ಇಡೀ ಮೈಯಲ್ಲಾ ಕಪ್ಪು ಚುಕ್ಕೆಗಳು ತುಂಬಿವೆ ಎಂಬುದನ್ನು ಈ ಹಗರಣಗಳು ಸಾಬೀತು ಮಾಡಿವೆ. ಈ ಸರ್ಕಾರದಲ್ಲಿ ಎಂಎಲ್‌ಎಗಳು, ಸಚಿವರೂ ಹಗರಣದಲ್ಲಿ ತೊಡಗಿದ್ದಾರೆ, ಓರ್ವ ಮಂತ್ರಿ ಜೈಲಿಗೆ ಹೋಗಿದ್ದಾರೆ, ಅಧಿಕಾರಿಗಳು ಆತ್ಮಹತ್ಯೆ ಮಾಡಿಕೊಂಡಿದ್ದಾರೆ’ ಎಂದು ಆರೋಪಿಸಿದರು.

ಸರ್ಕಾರದ ಭ್ರಷ್ಟಾಚಾರ ಹೊರ ಬರುತ್ತಿದ್ದಂತೆ ಬಿಜೆಪಿಯನ್ನು ಬ್ಲಾಕ್ ಮೇಲ್ ಮಾಡಲು ಹೊರಟರು, ವರ್ಷದಿಂದ ಇವರದ್ದೇ ಸರ್ಕಾರ ಇತ್ತು ಏಕೆ ಕ್ರಮ ಕೈಗೊಳ್ಳಲಿಲ್ಲ ಎಂದು ಪ್ರಶ್ನಿಸಿದ ಅವರು, ಗೆದ್ದಾಗ ಇವಿಎಂ ಕುರಿತು ಚಕಾರ ಎತ್ತಲ್ಲ, ಸೋತಾಗ ಇವಿಎಂ ಸರಿಯಿಲ್ಲ ಎಂದು ದೂರುತ್ತಾರೆ ಇವರ ಬಂಡವಾಳ ರಾಜ್ಯದ ಜನತೆಗೆ ಗೊತ್ತಾಗಿದೆ ಎಂದರು. ಭ್ರಷ್ಟಾಚಾರ ಎಂದರೆ ಕಾಂಗ್ರೆಸ್ ಎಂದು ತಿಳಿಸಿದ ಅವರು, ರಾಜ್ಯಪಾಲರು ದ್ವೇಷರಾಜಕಾರಣ ಮಾಡುತ್ತಿದ್ದಾರೆ ಎಂಬ ಆರೋಪ ಅರ್ಥವಿಲ್ಲದ್ದು, ರಾಜ್ಯಪಾಲರಿಗೆ ಅಗತ್ಯ ದಾಖಲೆಗಳು ಸಿಕ್ಕಿರುವುದರಿಂದಲೇ ಅವರು ಪ್ರಾಸಿಕ್ಯೂಷನ್‌ಗೆ ಅನುಮತಿ ನೀಡಿದ್ದಾರೆ ಎಂದರು.

ಸಿಎಂ ಸಿದ್ದರಾಮಯ್ಯ ರಾಜೀನಾಮೆ ನೀಡುವುದು ಅನಿವಾರ್ಯ

‘ ಮುಡಾ ಹಗರಣಕ್ಕೆ ಸಂಬಂಧಿಸಿದಂತೆ ರಾಜ್ಯಪಾಲರು ಸಿಎಂ ವಿರುದ್ಧ ಪ್ರಾಸಿಕ್ಯೂಷನ್‌ಗೆ ಅನುಮತಿ ನೀಡಿದ್ದಾರೆ. ಸಿಎಂ ಸಿದ್ದರಾಮಯ್ಯ ಅವರು ಈಗ ರಾಜೀನಾಮೆ ನೀಡುವುದು ಅನಿವಾರ್ಯವಾಗಿದ್ದು, ಈಗಲಾದರೂ ತನಿಖೆಯನ್ನು ಸಿಬಿಐಗೆ ವಹಿಸಬೇಕು ಎಂದು’ ಮಾಜಿ ಸಿಎಂ ಹಾಗೂ ಬೆಳಗಾವಿ ಸಂಸದ ಜಗದೀಶ ಶೆಟ್ಟರ ಆಗ್ರಹಿಸಿದರು.

‘‘ಸಿಎಂ ಸಿದ್ದರಾಮಯ್ಯ ಪತ್ನಿ ಹೆಸರಿನಲ್ಲಿ 14 ನಿವೇಶನಗಳನ್ನು ಪಡೆದಿದ್ದು ಕಾನೂನು ಬಾಹಿರ. ತನಿಖೆ ಆರಂಭದ ನಂತರವಾದರೂ ರಾಜೀನಾಮೆ ಕೊಡುತ್ತಾರೆಯೋ, ಈಗಲೇ ನೀಡುತ್ತಾರೆಯೋ ಎಂಬುದನ್ನು ನೋಡಬೇಕಿದೆ. ಇನ್ನೊಂದೆಡೆ ಪ್ರಾಸಿಕ್ಯೂಷನ್‌ಗೆ ಅನುಮತಿಸಿದ್ದನ್ನು ಬಹಳಷ್ಟು ಕಾಂಗ್ರೆಸ್‌ ನಾಯಕರು ಒಳಗೊಳಗೆ ಖುಷಿ ಪಡುತ್ತಿದ್ದಾರೆ. ಅರ್ಕಾವತಿ ಪ್ರಕರಣದಲ್ಲಿಅವರು ಪಾರಾಗಿದ್ದರು. ಈ ಬಾರಿ ಸಿದ್ದರಾಮಯ್ಯ ಪಾರಾಗಲು ಸಾಧ್ಯವಿಲ್ಲ,’’ ಎಂದರು.

‘‘ಪ್ರಾಸಿಕ್ಯೂಷನ್‌ಗೆ ಅನುಮತಿ ಪ್ರಶ್ನಿಸಿ ಹೈಕೋರ್ಟ್‌, ಸುಪ್ರೀಂ ಕೋರ್ಟ್‌ಗೆ ಹೋಗಬಹುದು. ಅಲ್ಲಿನ ತೀರ್ಪು ಆಧರಿಸಿ ಮುಂದಿನ ಹೋರಾಟ ಮಾಡಲಾಗುವುದು. ಪ್ರಾಸಿಕ್ಯೂಷನ್‌ಗೆ ಜಾತಿ ಬಣ್ಣ ಬಳಿಯಬಾರದು. ಅಹಿಂದ ನಾಯಕರಾದರೆ ಈ ರೀತಿ ಮಾಡಬಹುದಾ? ಅವರು ತಪ್ಪು ಮಾಡಿಲ್ಲಎಂದಾದರೆ ಏಕೆ ಹೆದರಬೇಕು? ಪ್ರಧಾನಿ ನರೇಂದ್ರ ಮೋದಿ ಸಹ ಹಿಂದುಳಿದ ವರ್ಗಗಳ ನಾಯಕರಾಗಿದ್ದು, ಹತ್ತು ವರ್ಷ ಆಡಳಿತ ನಡೆಸಿದ್ದರೂ ಅವರ ಮೇಲೆ ಹಗರಣಗಳ ಅರೋಪವಿದೆಯೇ?,’’ ಎಂದು ಪ್ರಶ್ನಿಸಿದರು.

You May Also Like

More From Author

+ There are no comments

Add yours