ಹೈಲೈಟ್ಸ್:
- ಸುಪ್ರೀಂಕೋರ್ಟ್ಗೆ ಸಲ್ಲಿಸಿದ ಅಫಿಡವಿಟ್ನಲ್ಲಿ ಕೇಂದ್ರ ಸರ್ಕಾರದ ಸ್ಪಷ್ಟನೆ
- ಚುನಾವಣಾ ಬಾಂಡ್ಗಳ ಸಿಂಧುತ್ವ ಕುರಿತ ಅರ್ಜಿ ವಿಚಾರಣೆ ಮಂಗಳವಾರದಿಂದ
- ಪಾರದರ್ಶಕತೆ ಕಾಯ್ದುಕೊಳ್ಳಲು ಹಣ ನೀಡಿದವರ ಹೆಸರು ಬಹಿರಂಗ ಮಾಡಬೇಕು ಎಂದ ಆಯೋಗ
ಹೊಸದಿಲ್ಲಿ: ”ರಾಜಕೀಯ ಪಕ್ಷಗಳು ಪಡೆಯುವ ದೇಣಿಗೆ ವಿಚಾರವಾಗಿ ಮಾಹಿತಿ ಪಡೆಯುವ ಹಕ್ಕು ನಾಗರಿಕರಿಗೆ ಇಲ್ಲ,” ಎಂದು ಸುಪ್ರೀಂ ಕೋರ್ಟ್ಗೆ ಕೇಂದ್ರ ಸರಕಾರ ಅಫಿಡವಿಟ್ ಸಲ್ಲಿಸಿದೆ.
ರಾಜಕೀಯ ಪಕ್ಷಗಳಿಗೆ ದೇಣಿಗೆ ನೀಡಲು ಅನುಕೂಲ ಕಲ್ಪಿಸಿರುವ ಚುನಾವಣಾ ಬಾಂಡ್ಗಳ ಸಿಂಧುತ್ವ ಪ್ರಶ್ನಿಸಿ ಉದ್ಯಮಿ ಗಿರೀಶ್ ಭಾರದ್ವಾಜ್ ಸೇರಿದಂತೆ ಹಲವರು ಸಲ್ಲಿಸಿದ್ದ ಅರ್ಜಿಗಳ ವಿಚಾರಣೆಯನ್ನು ಸಿಜೆಐ ಡಿ.ವೈ. ಚಂದ್ರಚೂಡ್ ನೇತೃತ್ವದ ಪಂಚ ಸದಸ್ಯ ಸಾಂವಿಧಾನಿಕ ಪೀಠವು ಅ 31 ರಿಂದ ವಿಚಾರಣೆ ಕೈಗೆತ್ತಿಕೊಳ್ಳಲಿದೆ.
ರಾಜಕೀಯ ಪಕ್ಷಗಳು ಅನಿಯಮಿತವಾಗಿ ಹಣ ಸಂಗ್ರಹಿಸಲು ಅವಕಾಶ ಮಾಡಿಕೊಡಲು ಹಣಕಾಸು ಕಾಯಿದೆಗೆ ತರಲಾದ ಐದು ತಿದ್ದುಪಡಿ ಪ್ರಶ್ನಿಸಿ ಸುಪ್ರೀಂ ಕೋರ್ಟ್ನಲ್ಲಿ ಅರ್ಜಿ ಸಲ್ಲಿಸಲಾಗಿದೆ. ಈ ಅರ್ಜಿಗಳಿಗೆ ಸಂಬಂಧಿಸಿದಂತೆ ಸರಕಾರ ಕೋರ್ಟ್ಗೆ ಅಫಿಡವಿಟ್ ಸಲ್ಲಿಸಿದ್ದು, ”ರಾಜಕೀಯ ಪಕ್ಷಗಳಿಗೆ ಚುನಾವಣಾ ಬಾಂಡ್ಗಳ ಮೂಲಕ ನೀಡುತ್ತಿರುವ ಹಣ ಶುದ್ಧ ಕೊಡುಗೆಯಾಗಿದೆ. ಮಾಹಿತಿ ಹಕ್ಕು ಕಾಯಿದೆಯಡಿ ನಾಗರಿಕರು ದೇಣಿಗೆ ಕುರಿತ ಮಾಹಿತಿ ಪಡೆಯುವ ಯಾವುದೇ ಹಕ್ಕು ಹೊಂದಿಲ್ಲ. ಸಂವಿಧಾನದ 19 (1) (ಎ) ವಿಧಿ ಅನ್ವಯ ಮಾಹಿತಿ ಪಡೆಯಲು ಆಗುವುದಿಲ್ಲ. ಇದರಿಂದ ಜನರ ಮೂಲಭೂತ ಹಕ್ಕಿಗೆ ಧಕ್ಕೆಯಾಗುವುದಿಲ್ಲ,” ಎಂದು ವಾದಿಸಿದೆ.
ಸುಪ್ರೀಂ ಕೋರ್ಟ್ಗೆ ಅಫಿಡವಿಟ್ ಸಲ್ಲಿಸಿರುವ ಅಟಾರ್ನಿ ಜನರಲ್ ವೆಂಕಟರಮಣಿ, ”ನಾಗರಿಕರಿಗೆ ಸಂಬಂಧವಿಲ್ಲದ ಕೆಲವೊಂದು ವಿಷಯದಲ್ಲಿ ಮಾಹಿತಿ ಪಡೆಯುವ ಸಾಮನ್ಯ ಹಕ್ಕು ಜನರಿಗೆ ಇರುವುದಿಲ್ಲ,” ಎಂದು ಮನವರಿಕೆ ಮಾಡಿಕೊಟ್ಟಿದ್ದಾರೆಂದು ತಿಳಿದುಬಂದಿದೆ.
ಏನಿದು ಚುನಾವಣಾ ಬಾಂಡ್?
ಚುನಾವಣಾ ಬಾಂಡ್ ಎಂಬುದು ಭರವಸೆಯ ಪತ್ರದ ರೂಪದಲ್ಲಿದ್ದು, ಅದನ್ನು ಯಾವುದೇ ವ್ಯಕ್ತಿ, ಕಂಪನಿ, ಸಂಸ್ಥೆ ಅಥವಾ ಸಂಘಟನೆಯ ವ್ಯಕ್ತಿಗಳು ಖರೀದಿಸಬಹುದಾಗಿದೆ. ಆ ವ್ಯಕ್ತಿ ಅಥವಾ ಸಂಸ್ಥೆಯು ಭಾರತೀಯತೆಯನ್ನು ಹೊಂದಿರಬೇಕಷ್ಟೆ. ಬಹು ವರ್ಗಗಳಲ್ಲಿರುವ ಚುನಾವಣಾ ಬಾಂಡ್ಗಳನ್ನು ರಾಜಕೀಯ ಪಕ್ಷಗಳಿಗೆ ದೇಣಿಗೆ ನೀಡುವ ನಿರ್ದಿಷ್ಟ ಉದ್ದೇಶಕ್ಕಾಗಿ ನೀಡಲಾಗುತ್ತದೆ.
ಹಣಕಾಸು ಕಾಯಿದೆಯನ್ನು-(2017) ತಿದ್ದುಪಡಿ ಮೂಲಕ ಚುನಾವಣಾ ಬಾಂಡ್ಗಳನ್ನು 2018 ಜ. 2 ರಂದು ದೇಶದಲ್ಲಿ ಜಾರಿಗೆ ತರಲಾಯಿತು. ಬಾಂಡ್ಗಳನ್ನು ಸಾರ್ವಜನಿಕವಾಗಿ ನೀಡಲು ಆರ್ಬಿಐ ಕಾಯಿದೆ, ಆದಾಯ ತೆರಿಗೆ ಕಾಯಿದೆ ಹಾಗೂ ಜನಪ್ರತಿನಿಧಿ ಕಾಯಿದೆಗಳಿಗೆ ತಿದ್ದುಪಡಿ ಮಾಡಲಾಗಿದೆ. ರಾಜಕೀಯ ಪಕ್ಷಗಳಿಗೆ ನೀಡುವ ದೇಣಿಗೆ ವಿಚಾರದಲ್ಲಿ ಪಾರದರ್ಶಕತೆ ಕಾಯ್ದುಕೊಳ್ಳಲು ಬಾಂಡ್ ಯೋಜನೆ ರೂಪಿಸಲಾಗಿತ್ತು.
ಯಾರು ಅರ್ಹರು?
ಪ್ರಜಾಪ್ರತಿನಿಧಿ ಕಾಯಿದೆ 1951ರ ನಿಯಮ 29 ಅಡಿ ನೋಂದಾಯಿತ ರಾಜಕೀಯ ಪಕ್ಷಗಳು ಬಾಂಡ್ಗಳ ಮೂಲಕ ದೇಣಿಗೆ ಪಡೆಯಲು ಷರತ್ತುಬದ್ಧ ಅರ್ಹತೆ ಹೊಂದಿರುತ್ತವೆ. ಹಿಂದಿನ ಸಾರ್ವತ್ರಿಕ ಚುನಾವಣೆಯಲ್ಲಿ ಶೇ 1ರಷ್ಟು ಮತ ಪಡೆದ ಪಕ್ಷಗಳಿಗೆ ದೇಣಿಗೆ ಪಡೆಯುವ ಅವಕಾಶವಿದೆ.
ಆಯೋಗದ ವಾದವೇನು?
ರಾಜಕೀಯ ಪಕ್ಷಗಳು ಪಡೆಯುವ ದೇಣಿಗೆ ವಿಷಯದಲ್ಲಿ ಪಾರದರ್ಶಕತೆ ಕಾಯ್ದುಕೊಳ್ಳಲು ಹಣ ನೀಡಿದವರ ಹೆಸರು ಬಹಿರಂಗ ಮಾಡಬೇಕಾದ ಅಗತ್ಯವಿದೆ ಎಂದು ಚುನಾವಣಾ ಆಯೋಗ ಕೋರ್ಟ್ಗೆ ತಿಳಿಸಿದೆ. ಆದರೆ, ದೇಣಿಗೆದಾರರ ಗೌಪ್ಯತೆ ಕಾಪಾಡಲು ಹೆಸರು ಬಹಿರಂಗಪಡಿಸಲು ಸಾಧ್ಯವಿಲ್ಲ ಎಂದು ವಾದಿಸಿದೆ.
+ There are no comments
Add yours