ಅಯೋಧ್ಯಾ ರಾಮಮಂದಿರದ ಗರ್ಭಗೃಹಕ್ಕೆ ರಾಮಲಲ್ಲಾ ಮೂರ್ತಿ ಹೊತ್ತು ತರಲಿದ್ದಾರೆ ಪ್ರಧಾನಿ ಮೋದಿ!

0 min read

ಹೈಲೈಟ್ಸ್‌:

  • ತಾತ್ಕಾಲಿಕ ನೆಲೆಯಿಂದ ರಾಮ ಮಂದಿರದ ಗರ್ಭ ಗೃಹಕ್ಕೆ ಮೂರ್ತಿ ರವಾನೆ
  • 500 ಮೀಟರ್ ದೂರ ಮೂರ್ತಿ ಹೊತ್ತು ತರಲಿದ್ದಾರೆ ಪ್ರಧಾನಿ ಮೋದಿ
  • ಪ್ರಧಾನಿ ಮೋದಿ ಮೂರ್ತಿ ಹೊತ್ತು ಸಾಗುವಾಗ ಯುಪಿ ಸಿಎಂ ಯೋಗಿ ಆದಿತ್ಯನಾಥ್ ಸಾಥ್

ಅಯೋಧ್ಯೆ (ಉತ್ತರ ಪ್ರದೇಶ): ರಾಮ ಜನ್ಮ ಭೂಮಿಯಲ್ಲಿ ನಿರ್ಮಾಣವಾಗುತ್ತಿರುವ ನೂತನ ಶ್ರೀರಾಮ ಮಂದಿರದ ಗರ್ಭ ಗೃಹದಲ್ಲಿ ಜನವರಿ 22 ರಂದು ರಾಮ ಲಲ್ಲಾ ಮೂರ್ತಿಯ ಪ್ರಾಣ ಪ್ರತಿಷ್ಠಾಪನಾ ಕಾರ್ಯ ನಡೆಯಲಿದೆ. ಈ ಕಾರ್ಯಕ್ರಮದಲ್ಲಿ ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರು ತಮ್ಮ ಎಲ್ಲಾ ಶಿಷ್ಟಾಚಾರಗಳನ್ನೂ ಬದಿಗಿಟ್ಟು ರಾಮ ಲಲ್ಲಾ ಮೂರ್ತಿಯನ್ನು ರಾಮ ಮಂದಿರದ ಗರ್ಭ ಗೃಹಕ್ಕೆ ಹೊತ್ತು ತರುವ ಸಾಧ್ಯತೆ ಇದೆ ಎಂಬ ಮಾಹಿತಿ ಲಭ್ಯವಾಗಿದೆ.

ವಿಜಯ ಕರ್ನಾಟಕ ವೆಬ್‌ ಸಹೋದರ ಸಂಸ್ಥೆ ಟೈಮ್ಸ್‌ ಆಫ್ ಇಂಡಿಯಾಗೆ ಈ ಕುರಿತ ಎಕ್ಸ್‌ಕ್ಲೂಸಿವ್ ಮಾಹಿತಿ ಅತ್ಯುನ್ನತ ಮೂಲಗಳಿಂದ ಲಭ್ಯವಾಗಿದೆ. ಸದ್ಯ ರಾಮ ಲಲ್ಲಾ ಮೂರ್ತಿ ಭಗವಾನ್ ಶ್ರೀರಾಮ ಮಂದಿರದಿಂದ 500 ಮೀಟರ್ ದೂರದಲ್ಲಿ ಇರುವ ತಾತ್ಕಾಲಿಕ ದೇಗುಲದಲ್ಲಿ ಇದೆ. ಈ ಮೂರ್ತಿಯನ್ನು ಅಯೋಧ್ಯಾ ಶ್ರೀರಾಮ ಮಂದಿರದ ಗರ್ಭ ಗೃಹದವರೆಗೂ ಪ್ರಧಾನಿ ಮೋದಿ ಅವರು ಕಾಲ್ನಡಿಗೆ ಮೂಲಕ ತಮ್ಮ ಕೈಯ್ಯಾರೆ ಹೊತ್ತು ತಂದು ಪ್ರತಿಷ್ಠಾಪನೆಗೆ ನೆರವಾಗಲಿದ್ದಾರೆ ಅನ್ನೋ ಮಾಹಿತಿ ಲಭ್ಯವಾಗಿದೆ.

ಶ್ರೀ ರಾಮ ಜನ್ಮ ಭೂಮಿ ತೀರ್ಥ ಕ್ಷೇತ್ರ ಟ್ರಸ್ಟ್ ಇಂಥಾದ್ದೊಂದು ಪ್ರತಿಷ್ಠಿತ ಗೌರವವನ್ನು ಪ್ರಧಾನಿ ಮೋದಿ ಅವರಿಗೆ ನೀಡಲು ತೀರ್ಮಾನಿಸಿದೆ ಎಂದು ತಿಳಿದು ಬಂದಿದೆ. ರಾಮ ಲಲ್ಲಾ (ಬಾಲ ರಾಮ) ಮೂರ್ತಿಯನ್ನು ಅಯೋಧ್ಯೆಯಲ್ಲಿ ನೂತನವಾಗಿ ನಿರ್ಮಾಣ ಆಗುತ್ತಿರುವ ಶ್ರೀರಾಮ ಮಂದಿರದ ಗರ್ಭಗೃಹದಲ್ಲಿ ನೆಲೆಗೊಳಿಸಲಾಗುವುದು. ರಾಮ ಲಲ್ಲಾ ಮೂರ್ತಿಯನ್ನು 8 ಅಡಿ ಎತ್ತರದ ಚಿನ್ನ ಲೇಪಿತ ಅಮೃತ ಶಿಲೆಯ ಸಿಂಹಾಸನದ ಮೇಲೆ ಪ್ರತಿಷ್ಠಾಪನೆ ಮಾಡಲಾಗುವುದು.

ಪ್ರಧಾನಿ ಮೋದಿ ಅವರು ಅಯೋಧ್ಯಾ ಶ್ರೀರಾಮ ಮಂದಿರದ ಗರ್ಭ ಗೃಹಕ್ಕೆ ರಾಮ ಲಲ್ಲಾ ಮೂರ್ತಿಯನ್ನು ಹೊತ್ತು ತರುವಾಗ ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಹಾಗೂ ಆರ್‌ಎಸ್‌ಎಸ್ ಮುಖ್ಯಸ್ಥ ಮೋಹನ್ ಭಾಗವತ್ ಅವರೂ ಕೂಡಾ ಕಾಲ್ನಡಿಗೆ ವೇಳೆ ಸಾಥ್ ನೀಡಲಿದ್ದಾರೆ.

ಇನ್ನು ರಾಮ ಮಂದಿರದ ಗರ್ಭ ಗೃಹದಲ್ಲಿ ರಾಮ ಲಲ್ಲಾ ಮೂರ್ತಿಯ ಪ್ರಾಣ ಪ್ರತಿಷ್ಠಾಪನೆ ಕಾರ್ಯಕ್ರಮದ ಪೂಜಾ ಕೈಂಕರ್ಯಗಳ ನೇತೃತ್ವವನ್ನೂ ಪ್ರಧಾನಿ ಮೋದಿ ಅವರೇ ವಹಿಸಲಿದ್ದಾರೆ. ಮೋದಿ ಅವರ ಮೂಲಕವೇ ಧಾರ್ಮಿಕ ವಿಧಿ ವಿಧಾನಗಳು ನೆರವೇರಲಿವೆ. ಜನವರಿ 22 ರಂದು ಬೆಳಗ್ಗೆ 11.30ರಿಂದ ಮಧ್ಯಾಹ್ನ 12.30ರ ಒಳಗಿನ ಶುಭ ಗಳಿಗೆಯಲ್ಲಿ ಈ ಕಾರ್ಯಕ್ರಮ ನಡೆಯಲಿದೆ.

ರಾಮ ಲಲ್ಲಾ ಮೂರ್ತಿಯ ಪ್ರಾಣ ಪ್ರತಿಷ್ಠಾಪನೆ ಕಾರ್ಯಕ್ರಮದಲ್ಲಿ ದೇಶದ ಉದ್ದಗಲಕ್ಕೂ ಇರುವ ಹಲವು ಧಾರ್ಮಿಕ ಕ್ಷೇತ್ರಗಳ ಸಾಧು ಸಂತರು ಹಾಗೂ ಧಾರ್ಮಿಕ ಮುಖಂಡರು ಭಾಗಿಯಾಗಲಿದ್ದಾರೆ. ಸದ್ಯ ಉತ್ಸವ ಮೂರ್ತಿಯಂತೆ ಕಂಗೊಳಿಸುತ್ತಿರುವ ರಾಮ ಲಲ್ಲಾ ಮೂರ್ತಿಯನ್ನು ತಾತ್ಕಾಲಿಕ ದೇಗುಲದಿಂದ ಭವ್ಯ ಶ್ರೀರಾಮ ಮಂದಿರಕ್ಕೆ ಪ್ರಧಾನಿ ಮೋದಿ ಅವರು ಹೊತ್ತು ತಂದ ಬಳಿಕ ಅದನ್ನು ರಾಮ ಮಂದಿರದ ಗರ್ಭ ಗೃಹದಲ್ಲಿ ಪ್ರಾಣ ಪ್ರತಿಷ್ಠಾಪನೆ ಮಾಡಿ ನೆಲೆಗೊಳಿಸಲಾಗುವುದು ಎಂದು ತಿಳಿದು ಬಂದಿದೆ.

ಇದಲ್ಲದೆ ಭಗವಾನ್ ಶ್ರೀರಾಮನ 3 ಮೂರ್ತಿಗಳನ್ನೂ ಕೆತ್ತನೆ ಮಾಡಲಾಗಿದ್ದು, ಅವುಗಳ ಪೈಕಿ ಒಂದು ಮೂರ್ತಿಯನ್ನು ಕೂಡಾ ರಾಮ ಲಲ್ಲಾ ವಿಗ್ರಹದ ಜೊತೆಯಲ್ಲೇ ಗರ್ಭ ಗೃಹದಲ್ಲಿ ನೆಲೆಗೊಳಿಸಲಾಗುವುದು. ಈ ಮೂಲಕ ‘ಅಚಲ ಮೂರ್ತಿ’ ಹಾಗೂ ‘ಚಲ ಮೂರ್ತಿ’ ಎರಡಕ್ಕೂ ಭವ್ಯ ರಾಮ ಮಂದಿರದ ಗರ್ಭ ಗೃಹದಲ್ಲಿ ಸ್ಥಾನ ಸಿಗಲಿದೆ.

‘ಚಲ ಮೂರ್ತಿ’ಯಾದ ರಾಮ ಲಲ್ಲಾ ಜೊತೆಗೆ ಗರ್ಭ ಗೃಹದಲ್ಲಿ ಶಾಶ್ವತವಾಗಿ ನೆಲೆಗೊಳಿಸಲು ‘ಅಚಲ ಮೂರ್ತಿ’ ಒಂದನ್ನು ನಿರ್ಮಿಸಲಾಗುತ್ತಿದೆ. ಇದಕ್ಕಾಗಿ ಮೂರು ವಿಭಿನ್ನ ಮೂರ್ತಿಗಳನ್ನು ಸಿದ್ದಪಡಿಸಲು ಶ್ರೀರಾಮ ಜನ್ಮ ಭೂಮಿ ತೀರ್ಥ ಕ್ಷೇತ್ರ ಟ್ರಸ್ಟ್‌ ಆದೇಶಿಸಿತ್ತು. ಮೂರು ಮೂರ್ತಿಗಳ ಪೈಕಿ ಒಂದು ಮೂರ್ತಿಯನ್ನು ಅಂತಿಮಗೊಳಿಸಿ ಅದನ್ನು ‘ಅಚಲ ಮೂರ್ತಿ’ಯನ್ನಾಗಿ ಭಗವಾನ್ ಶ್ರೀರಾಮ ಮಂದಿರದ ಗರ್ಭ ಗೃಹದಲ್ಲಿ ಪ್ರಾಣ ಪ್ರತಿಷ್ಠಾಪನೆ ಮಾಡಲಾಗುವುದು.

You May Also Like

More From Author

+ There are no comments

Add yours