Tulsi Vivah 2023: ತುಳಸಿ ವಿವಾಹ-ಪೂಜೆ; ಪೌರಾಣಿಕ ಹಿನ್ನೆಲೆ ಮತ್ತು ಆಚರಣೆಯ ವಿಧಾನ

1 min read

Tulsi Vivah & Pooja 2023: ಹಿಂದೂ ಸಂಸ್ಕೃತಿಯಲ್ಲಿ ತುಳಸಿ ಗಿಡಕ್ಕೆ ಮಹತ್ವದ ಸ್ಥಾನವಿದ್ದು, ಹಿಂದೂಗಳು ಭಕ್ತಿಯಿಂದ ಪೂಜಿಸುತ್ತಾರೆ. ಶುಭ-ಅಶುಭ ಕಾರ್ಯಗಳಲ್ಲಿ ತುಳಸಿ ಎಲೆಗೆ ಮಹತ್ವದ ಸ್ಥಾನವಿದೆ. ಬೆಳಕಿನ ಹಬ್ಬ ದೀಪಾವಳಿ ಮುಗಿದು ಹಿಂದೂಗಳು ಆಚರಿಸುವ ಕಿರು ದೀಪಾವಳಿ ಹಬ್ಬವೇ ತುಳಸಿ ಪೂಜೆ. ಚಾಂದ್ರಮಾನ ಕಾರ್ತಿಕಮಾಸದ ಶುಕ್ಲಪಕ್ಷದ 12ನೇ ದಿನ ಅಂದರೆ ದ್ವಾದಶಿಯಂದು ಈ ಹಬ್ಬವನ್ನು ಉತ್ಥಾನ ದ್ವಾದಶಿ ಅಂತಾ ಆಚರಿಸಲಾಗುತ್ತದೆ.

ತುಳಸಿ ವಿವಾಹದ ಪೌರಾಣಿಕ ಕಥೆ

ತುಳಸಿ ವಿವಾಹದ ಹಿಂದೆ ಅದ್ಭುತ ಪೌರಾಣಿಕ ಕಥೆಯಿದೆ. ಹಿಂದೂ ಪುರಾಣದ ಪ್ರಕಾರ ವೃಂದಾ ಹೆಸರಿನ ಯುವತಿಯೇ ತುಳಸಿಯಾಗಿ ಗಿಡದ ರೂಪ ಪಡೆದಿರುವುದು. ಈಕೆ ಜಲಂಧರನೆಂಬ ದುಷ್ಟ ರಾಜನನ್ನು ಮದುವೆಯಾಗಿರುತ್ತಾಳೆ. ಅವಳಿಗೆ ಮಹಾವಿಷ್ಣುವಿನ ಮೇಲೆ ವಿಶೇಷ ಭಕ್ತಿ ಇರುತ್ತದೆ. ಇದು ಜಲಂಧರನಿಗೆ ಇಷ್ಟವಿರುವುದಿಲ್ಲ. ಹೀಗಾಗಿ ಆತ ದೇವ-ದೇವತೆಗಳಿಗೆ ಉಪಟಳ ನೀಡುತ್ತಿರುತ್ತಾನೆ. ಆಗ ಶಿವನು ಇದಕ್ಕೆ ಪರಿಹಾರ ಕಂಡುಕೊಳ್ಳಲು ವಿಷ್ಣುವಿನ ಮೊರೆ ಹೋಗುತ್ತಾನೆ. ಆಗ ವಿಷ್ಣು ಜಲಂಧರನ ರೂಪ ತಾಳಿ ವೃಂದಾಳನ್ನು ಮೋಹಿಸಿ ಆಕೆಯ ಪಾವಿತ್ರ್ಯತೆಗೆ ಧಕ್ಕೆ ತರುತ್ತಾನೆ. ಈ ವೇಳೆ ಶಿವನು ಜಲಂಧರ ರಾಜನನ್ನು ಸಂಹರಿಸುತ್ತಾನೆ. ತನ್ನ ಚಾರಿತ್ರ್ಯಕ್ಕೆ ಧಕ್ಕೆ ತಂದ ವಿಷ್ಣುವಿಗೆ ವೃಂದಾ ಕಪ್ಪು ಕಲ್ಲಾಗಿ ಹೋಗು ಅಂತಾ ಶಾಪ ಹಾಕಿ ನಿನಗೆ ಪತ್ನಿಯ ವಿರಹವುಂಟಾಗಲಿ ಅಂತಾ ಹೇಳುತ್ತಾಳೆ.

ಹೀಗಾಗಿಯೇ ರಾಮಾಯಣದಲ್ಲಿ ವಿಷ್ಣುವಿನ ಅವತಾರ ರಾಮನಿಂದ ಕೆಲ ವರ್ಷಗಳ ಕಾಲ ಸೀತೆಯು ದೂರವಾಗುತ್ತಾಳೆ. ತನ್ನ ಚಾರಿತ್ರ್ಯಕ್ಕೆ ಧಕ್ಕೆಯಾಗಿದ್ದರಿಂದ ವೃಂದಾ ಪತಿಯ ಚಿತೆಗೆ ಹಾರಿ ಸಾವನ್ನಪ್ಪುತ್ತಾಳೆ. ವಿಷ್ಣುವು ಆಕೆಯ ಆತ್ಮವನ್ನು ತುಳಸಿ ಗಿಡವಾಗಿ ಪರಿವರ್ತಿಸಿ, ಮುಂದಿನ ಜನ್ಮದಲ್ಲಿ ಸಾಲಿಗ್ರಾಮವಾಗಿ ಪ್ರಭೋದಿನಿ ಏಕಾದಶಿಯ ದಿನದಂದು ತುಳಸಿಯನ್ನು ವಿವಾಹವಾಗುತ್ತಾನೆ. ಇದರ ಸಂಕೇತವೇ ವಿಷ್ಣು-ತುಳಸಿ ವಿವಾಹ.

ಆಚರಣೆಯ ವಿಧಾನ

ತುಳಸಿ ಕಟ್ಟೆಯನ್ನು ರಂಗೋಲಿ, ಹೂವು, ಮಾವಿನ ಎಲೆಗಳಿಂದ ಅಲಂಕರಿಸಬೇಕು. ಬಳಿಕ ವಿಷ್ಣುವಿನ ಅವತಾರ ಕೃಷ್ಣನ ಮೂರ್ತಿಯನ್ನು ಇಟ್ಟು ಪೂಜಿಸಬೇಕು. ದೀಪಾವಳಿಯ ಸಂಭ್ರಮವೇ ತುಳಸಿ ವಿವಾಹ ಸಮಯದಲ್ಲಿಯೂ ಇರುತ್ತದೆ. ತುಳಸಿ ಗಿಡದೊಂದಿಗೆ ಬೆಟ್ಟದ ನೆಲ್ಲಿಕಾಯಿ ಗಿಡವನ್ನು ನೆಟ್ಟು ಪೂಜಿಸುವ ರೂಢಿ ಇದೆ. ದೀಪದಿಂದ ಗಿಡದ ಸುತ್ತ ಅಲಂಕರಿಸಲಾಗುತ್ತದೆ. ತುಳಸಿ ಗಿಡದ ವಿವಾಹದ ದಿನ ಪೂಜೆಯಲ್ಲಿ ಭಾಗವಹಿಸುವವರು ಉಪವಾಸ ಕೈಗೊಳ್ಳುತ್ತಾರೆ. ತುಳಸಿ ಗಿಡದ ಸುತ್ತಲೂ ಮದುವೆ ಮಂಟಪ ನಿರ್ಮಿಸುತ್ತಾರೆ. ಇದಕ್ಕೆ ತುಳಸಿ ಬೃಂದಾವನವೆಂದು ಹೆಸರು. ವೃಂದಾಳ ಆತ್ಮವು ರಾತ್ರಿಯಿಡೀ ಇದ್ದು ಮರುದಿನ ಬೆಳಿಗ್ಗೆ ಹೊರಟುಹೋಗುತ್ತದೆ ಎಂಬ ನಂಬಿಕೆಯಿದೆ.

You May Also Like

More From Author

+ There are no comments

Add yours