ತೆಲಂಗಾಣದಲ್ಲಿ ಕಾಂಗ್ರೆಸ್‌ಗೆ ‘ಕುದುರೆ ವ್ಯಾಪಾರ’ ಭೀತಿ: ಶಾಸಕರ ‘ರಕ್ಷಣೆ’ಗೆ ಡಿಕೆ ಶಿವಕುಮಾರ್ ನೇತೃತ್ವದಲ್ಲಿ ರಾಜ್ಯದ ತಂಡ

1 min read

ಹೈಲೈಟ್ಸ್‌:

  • ತೆಲಂಗಾಣ ವಿಧಾನಸಭೆ ಚುನಾವಣೆ 2023ರಲ್ಲಿ ಮುನ್ನಡೆ ಪಡೆದಿರುವ ಕಾಂಗ್ರೆಸ್ ಪಕ್ಷ
  • ಶಾಸಕರನ್ನು ಬಿಆರ್‌ಎಸ್ ಸೆಳೆದುಕೊಳ್ಳದಂತೆ ತಡೆಯಲು ಕರ್ನಾಟಕದಿಂದ ತಂಡ ರವಾನೆ
  • ರೆಸಾರ್ಟ್ ರಾಜಕಾರಣಕ್ಕೆ ವ್ಯವಸ್ಥೆ ಮಾಡಿರುವ ಡಿಕೆ ಶಿವಕುಮಾರ್ ನೇತೃತ್ವದ ಸಚಿವರ ತಂಡ

ಹೈದರಾಬಾದ್: ತೆಲಂಗಾಣ ವಿಧಾನಸಭೆ ಚುನಾವಣೆಯಲ್ಲಿ ಕಾಂಗ್ರೆಸ್ ಆರಂಭಿಕ ಮುನ್ನಡೆ ಪಡೆದುಕೊಂಡಿದೆ. ಎಕ್ಸಿಟ್ ಪೋಲ್ ಫಲಿತಾಂಶಗಳು ಆಡಳಿತಾರೂಢ ಭಾರತ ರಾಷ್ಟ್ರ ಸಮಿತಿ ಹಾಗೂ ವಿರೋಧ ಪಕ್ಷ ಕಾಂಗ್ರೆಸ್ ನಡುವೆ ತೀವ್ರ ಜಿದ್ದಾಜಿದ್ದಿಯ ಪೈಪೋಟಿ ಇರಲಿವೆ ಎಂದು ಭವಿಷ್ಯ ನುಡಿದಿದ್ದವು. ಹೀಗಾಗಿ ಎರಡೂ ಪಕ್ಷಗಳಲ್ಲಿ ಢವಢವ ಶುರುವಾಗಿತ್ತು. ಇದರ ಬೆನ್ನಲ್ಲೇ ಆಪರೇಷನ್ ಭೀತಿ ಜೋರಾಗಿದೆ. ಹೀಗಾಗಿ ಕಾಂಗ್ರೆಸ್ ಶಾಸಕರ ರಕ್ಷಣೆಗೆ ಕರ್ನಾಟಕ ಉಪ ಮುಖ್ಯಮಂತ್ರಿ ಡಿಕೆ ಶಿವಕುಮಾರ್ ಅವರು ಹೈದರಾಬಾದ್‌ನಲ್ಲಿ ಮೊಕ್ಕಾಂ ಹೂಡಿದ್ದಾರೆ. ಅವರ ಜತೆ ಮೂವರು ಸಚಿವರು ಕೂಡ ಹೈದರಾಬಾದ್‌ಗೆ ತೆರಳಿದ್ದಾರೆ.

ತೆಲಂಗಾಣದಲ್ಲಿ ಅಖಾಡಕ್ಕೆ ಇಳಿದ ಎಲ್ಲಾ 119 ಅಭ್ಯರ್ಥಿಗಳನ್ನು ಬಿಆರ್‌ಎಸ್ ‘ಆಪರೇಷನ್’ನಿಂದ ಬಚಾವ್ ಮಾಡುವ ಹೊಣೆಯನ್ನು ಡಿಕೆ ಶಿವಕುಮಾರ್ ಅವರಿಗೆ ವಹಿಸಲಾಗಿದೆ ಎಂದು ವರದಿಯಾಗಿದೆ. ಡಿಕೆ ಶಿವಕುಮಾರ್ ಅವರ ಜತೆ ಸಚಿವರಾದ ಜಮೀರ್ ಅಹ್ಮದ್ ಖಾನ್, ಬಿ ನಾಗೇಂದ್ರ ಮತ್ತು ಎನ್‌ಎಸ್ ಬೋಸರಾಜು ಹೈದರಾಬಾದ್‌ನಲ್ಲಿದ್ದಾರೆ.

ಕಾಂಗ್ರೆಸ್ ತನ್ನ ಪ್ರತಿ ಅಭ್ಯರ್ಥಿಯನ್ನೂ ಕಾಪಾಡಲು ಅವರ ಜತೆ ಒಬ್ಬ ಕಾರ್ಯಕರ್ತನನ್ನು ನಿಯೋಜಿಸಿದೆ. ಅವರು ಅಭ್ಯರ್ಥಿಯನ್ನು ಬಿಟ್ಟು ಎಲ್ಲಿಯೂ ಹೋಗುವಂತಿಲ್ಲ. ತೆಲಂಗಾಣ ವಿಧಾನಸಭೆ ಚುನಾವಣೆಯ ಫಲಿತಾಂಶ ಹೊರಬರುವವರೆಗೂ ಇಡೀ ದಿನ ಅಭ್ಯರ್ಥಿಯ ಜತೆಗೇ ಕಾರ್ಯಕರ್ತ ಇರಲಿದ್ದಾರೆ.

ಮಧ್ಯಾಹ್ನದ ವೇಳೆಗೆ ಫಲಿತಾಂಶದ ಬಹುತೇಕ ಚಿತ್ರಣ ದೊರಕಲಿದೆ. ಗೆದ್ದ ಹಾಗೂ ಗೆಲುವಿನ ಹಂತದಲ್ಲಿರುವ ಅಭ್ಯರ್ಥಿಗಳು ಎದುರಾಳಿಗಳ ‘ಆಪರೇಷನ್‌’ಗೆ ಸಿಲುಕದಂತೆ ತಡೆಯಲು ಕಾಂಗ್ರೆಸ್ ಸಕಲ ಸಿದ್ಧತೆ ನಡೆಸಿದೆ. ಹೈದರಾಬಾದ್‌ನ ತಾಜ್ ಕೃಷ್ಣ ಹೋಟೆಲ್ ಎದುರು ಕೆಲವು ಬಸ್‌ಗಳನ್ನು ಸಿದ್ಧವಾಗಿ ಇರಿಸಲಾಗಿದೆ. ಇದು ಕಾಂಗ್ರೆಸ್ ತಂಡಕ್ಕಾಗಿ ಮೀಸಲಾಗಿಡಲಾಗಿದೆ ಎನ್ನಲಾಗಿದೆ.

ಶಾಸಕರ ಮೇಲೆ ನಂಬಿಕೆ ಇದೆ ಎಂದ ಡಿಕೆಶಿ

ಕಾಂಗ್ರೆಸ್‌ನ ‘ಟ್ರಬಲ್ ಶೂಟರ್’ ಡಿಕೆ ಶಿವಕುಮಾರ್ ಅವರು, ತಮ್ಮ ಶಾಸಕರ ಮೇಲೆ ವಿಶ್ವಾಸ ವ್ಯಕ್ತಪಡಿಸಿದ್ದರು. ತೆಲಂಗಾಣದಲ್ಲಿ ಕಾಂಗ್ರೆಸ್ ಗೆಲುವು ಸಾಧಿಸಲಿದೆ. ತಮ್ಮ ಪಕ್ಷದ ಶಾಸಕರ ಕುದುರೆ ವ್ಯಾಪಾರ ಮಾಡುವುದು ಅಸಾಧ್ಯ. ಎಲ್ಲಾ ಶಾಸಕರ ಮೇಲೆ ನಂಬಿಕೆ ಇದೆ ಎಂದು ಶನಿವಾರ ಹೇಳಿದ್ದರು.

ಫಲಿತಾಂಶ ಪ್ರಕಟಕ್ಕೂ ಮುನ್ನ, ಐದೂ ರಾಜ್ಯಗಳಲ್ಲಿ ಎಲ್ಲಾ ಗೆದ್ದ ಅಭ್ಯರ್ಥಿಗಳನ್ನು ಕರ್ನಾಟಕದ ರೆಸಾರ್ಟ್ ಹಾಗೂ ಹೋಟೆಲ್‌ಗಳಿಗೆ ಸ್ಥಳಾಂತರ ಮಾಡಲು ಕಾಂಗ್ರೆಸ್ ತಮಗೆ ಸೂಚನೆ ನೀಡಿದೆ ಎಂಬ ವರದಿಗಳನ್ನು ಅವರು ನಿರಾಕರಿಸಿದ್ದರು.

2017ರ ಗುಜರಾತ್ ಚುನಾವಣೆಯಲ್ಲಿ ಶಾಸಕರನ್ನು ಸೆಳೆದುಕೊಳ್ಳಲು ಬಿಜೆಪಿ ಪ್ರಯತ್ನಿಸಲಿದೆ ಎಂಬ ಭಯದೊಂದಿಗೆ 44 ಶಾಸಕರನ್ನು ಕರ್ನಾಟಕಕ್ಕೆ ಕರೆತರುವ ವ್ಯವಸ್ಥೆ ಮಾಡಲಾಗಿತ್ತು. ಅಂತಹದೇ ವ್ಯವಸ್ಥೆ ಈಗ ಮಾಡಲಾಗಿದೆ ಎಂದು ವರದಿಯಾಗಿದೆ. “ಶಾಸಕರು ಎಲ್ಲಿಗೂ ಹೋಗುವ ಅಗತ್ಯವಿಲ್ಲ” ಎಂದು ಡಿಕೆ ಶಿವಕುಮಾರ್ ಪ್ರತಿಕ್ರಿಯೆ ನೀಡಿದ್ದಾರೆ.

ತೆಲಂಗಾಣದಲ್ಲಿ ಜಯ ಸಾಧಿಸುವುದು ಖಚಿತವಾಗಿರುವ ಕೆಲವು ಅಭ್ಯರ್ಥಿಗಳನ್ನು ಬಿಆರ್‌ಎಸ್‌ ನಾಯಕರು ಸಂಪರ್ಕಿಸಲು ಪ್ರಯತ್ನಿಸಿದ್ದರು. ಆದರೆ ಪಕ್ಷ ಅದನ್ನು ಸ್ಥಳೀಯವಾಗಿಯೇ ನಿಭಾಯಿಸಲಿದೆ ಎಂದು ಹೇಳಿದ್ದಾರೆ. ಒಂದು ವೇಳೆ ಕಾಂಗ್ರೆಸ್‌ಗೆ ಸರ್ಕಾರ ರಚಿಸಲು ಸಂಖ್ಯಾಬಲದ ಕೊರತ ಎದುರಾದರೆ ಮುಂದಿನ ಕ್ರಮ ಕೈಗೊಳ್ಳಲು ಕೂಡ ಡಿಕೆ ಶಿವಕುಮಾರ್ ಅವರ ನೆರವು ಅಗತ್ಯವಾಗಿದೆ.

You May Also Like

More From Author

+ There are no comments

Add yours