ರಾಯಚೂರು ಲಾಡ್ಜ್‌ನಲ್ಲಿ ಮಹಿಳೆ ಆತ್ಮಹತ್ಯೆ ಕೇಸ್‌ಗೆ ಬಿಗ್ ಟ್ವಿಸ್ಟ್! ಪತಿಯೇ ಕೊಲೆಗಾರ!

1 min read

ಹೈಲೈಟ್ಸ್‌:

  • ರಾಯಚೂರು ನಗರದ ಖಾಸಗಿ ಲಾಡ್ಜ್‌ ನಲ್ಲಿ ಕೆಲಸ ಮಾಡುತ್ತಿದ್ದ ಉತ್ತರ ಪ್ರದೇಶ ಮೂಲದ ಆರೋಪಿ ಅವಿನಾಶ್‌
  • ಉತ್ತರ ಪ್ರದೇಶ ಮೂಲದ ಸೋನಿ ಎನ್ನುವವರನ್ನು ಮದುವೆಯಾಗಿದ್ದ
  • ಇಬ್ಬರೂ ರಾಯಚೂರು ನಗರದಲ್ಲಿ ಕೆಲಸ ಮಾಡುತ್ತಿದ್ದರು

ರಾಯಚೂರು: ಬಿಸಿಲ ನಾಡು ರಾಯಚೂರು ನಗರದ ಲಾಡ್ಜ್‌ವೊಂದರಲ್ಲಿ ಇತ್ತೀಚೆಗೆ ಮಹಿಳೆ ಆತ್ಮಹತ್ಯೆ ಮಾಡಿಕೊಂಡಿದ್ದ ಪ್ರಕರಣಕ್ಕೆ ಬಿಗ್‌ ಟ್ವಿಸ್ಟ್‌ ಸಿಕ್ಕಿದೆ. ಪೊಲೀಸರ ತನಿಖೆ ವೇಳೆ ಮಹಿಳೆಯ ಪತಿಯೇ ಕೊಲೆ ಮಾಡಿ, ಆಕೆಯನ್ನು ಫ್ಯಾನ್‌ಗೆ ನೇತು ಹಾಕಿ ಆತ್ಮಹತ್ಯೆ ಎಂದು ಬಿಂಬಿಸಿರುವುದು ತನಿಖೆ ವೇಳೆ ಬಯಲಾಗಿದೆ.ರಾಯಚೂರು ನಗರದ ಖಾಸಗಿ ಲಾಡ್ಜ್‌ ನಲ್ಲಿ ಕೆಲಸ ಮಾಡುತ್ತಿದ್ದ ಉತ್ತರ ಪ್ರದೇಶ ಮೂಲದ ಆರೋಪಿ ಅವಿನಾಶ್‌, ಉತ್ತರ ಪ್ರದೇಶ ಮೂಲದ ಸೋನಿ ಎನ್ನುವವರನ್ನು ಮದುವೆಯಾಗಿದ್ದ. ಇಬ್ಬರೂ ರಾಯಚೂರು ನಗರದಲ್ಲಿ ಕೆಲಸ ಮಾಡುತ್ತಿದ್ದರು. ಇತ್ತೀಚೆಗೆ ಸೋನಿಗೆ ಗಂಡು ಮಗು ಆಗಿದ್ದು, ಸಿಜೇರಿಯನ್‌ ನೋವು ತಾಳದೆ ಡಿಸೆಂಬರ್ 13 ರಂದು ಆತ್ಮಹತ್ಯೆ ಮಾಡಿಕೊಂಡಿದ್ದಾಳೆ ಎಂದು ಪತಿ ಅವಿನಾಶ್‌ ಕಥೆ ಕಟ್ಟಿದ್ದ. ಈ ಸಂಬಂಧ ರಾಯಚೂರು ಪಶ್ಚಿಮ ಠಾಣೆ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಿದಾಗ ಸತ್ಯ ಬಯಲಾಗಿದೆ.

ಆರೋಪಿ ಪತಿ ಅವಿನಾಶ್, ಮಗುವಿನ ಕಿರಿಕಿರಿಗೆ ಬೇಸತ್ತು ತನ್ನ ಪತ್ನಿ ಹಸಿ ಬಾಣಂತಿಯನ್ನೇ ಹತ್ಯೆ ಮಾಡಿ, ಬಳಿಕ ಫ್ಯಾನ್‌ಗೆ ನೇಣು ಹಾಕಿದ್ದ ಎಂದು ತಿಳಿದು ಬಂದಿದೆ. ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಿದಾಗ ಪತಿ ಅವಿನಾಶ್‌ ಕೊಲೆ ಮಾಡಿರುವ ರಹಸ್ಯ ಬಯಲಾಗಿದೆ. ರಾಯಚೂರು ಪಶ್ಚಿಮ ಠಾಣೆ ಪೋಲಿಸರು ಯುಡಿಆರ್‌ ಆಗಿದ್ದ ಪ್ರಕರಣವನ್ನು ಕೊಲೆ ಪ್ರಕರಣವನ್ನಾಗಿ ಬದಲಿಸಿ ರಾಯಚೂರು ನಗರದ ಮಹಿಳಾ ಠಾಣೆಗೆ ವರ್ಗವಣೆ ಮಾಡಿದ್ದಾರೆ.

ಈ ಜೋಡಿ ಪರಸ್ಪರ ಪ್ರೀತಿಸಿ ಮದುವೆಯಾಗಿದ್ದರು. ದಂಪತಿಗೆ 20 ದಿನಗಳ ಮಗುವಿದೆ. ಗಂಡ – ಹೆಂಡತಿ ಇಬ್ಬರೂ ಕೊಲೆಯಾದ ಲಾಡ್ಜ್‌ನಲ್ಲೇ ಕೆಲಸ ಮಾಡುತ್ತಿದ್ದರು. ಈ ನಡುವೆ ಆರೋಪಿ ಪತಿ ಅವಿನಾಶ್ ಹಣಕಾಸಿನ ಸಮಸ್ಯೆಯಿಂದ ನೊಂದಿದ್ದ. ಪತ್ನಿ ಜೊತೆ ಆಗಾಗ ಜಗಳವಾಡುತ್ತಿದ್ದ ಎಂದೂ ತಿಳಿದು ಬಂದಿದೆ. ಇದೇ ವಿಚಾರಕ್ಕೆ ನಡೆದ ಗಲಾಟೆ ತಾರಕಕ್ಕೇರಿ ಆರೋಪಿಯು ತನ್ನ ಪತ್ನಿಯನ್ನು ಹತ್ಯೆಗೈದಿರುವುದು ತನಿಖೆ ವೇಳೆ ತಿಳಿದು ಬಂದಿದೆ. ಅಲ್ಲದೆ, ಹೆಂಡತಿಯನ್ನು ಹತ್ಯೆ ಮಾಡಿದ ಬಳಿಕ ರಾತ್ರಿ ಪೂರ್ತಿ ಶವದೊಂದಿಗೆ ಇದ್ದ ಆರೋಪಿ, ಬೆಳಗ್ಗೆ ಆತ್ಮಹತ್ಯೆ ಕತೆ ಕಟ್ಟಿದ್ದ ಎಂದು ಪೊಲೀಸರು ಹೇಳಿದ್ದಾರೆ.

ಲಿಂಗಸುಗೂರು ಕೊಲೆ ಪ್ರಕರಣ: ಆರೋಪಿಗಳ ಬಂಧನ

ರಾಯಚೂರು ಜಿಲ್ಲೆ ಲಿಂಗಸುಗೂರು ತಾಲೂಕಿನ ಗುಡದನಾಳ ಗ್ರಾಮದಲ್ಲಿ ಇತ್ತೀಚೆಗೆ ನಡೆದ ಕೊಲೆ ಪ್ರಕರಣ ಸಂಬಂಧ ಇಬ್ಬರು ಆರೋಪಿಗಳನ್ನು ಲಿಂಗಸುಗೂರು ಠಾಣೆ ಪೊಲೀಸರು ಶನಿವಾರ ಬಂಧಿಸಿ, ನ್ಯಾಯಾಂಗ ವಶಕ್ಕೆ ಒಪ್ಪಿಸಿದ್ದಾರೆ. 27 ವರ್ಷ ವಯಸ್ಸಿನ ಶಿವು ಅಲಿಯಾಸ್‌ ಶಿವಪುತ್ರ ಕೊರವರ, 20 ವರ್ಷ ವಯಸ್ಸಿನ ಅಭಿ ಅಲಿಯಾಸ್‌ ಅಭಿಷೇಕ ಬಂಧಿತ ಆರೋಪಿಗಳು.

ಗುಡದನಾಳ ಗ್ರಾಮದ 21 ವರ್ಷ ವಯಸ್ಸಿನ ಶರಣ ಬಸವ ಉಪ್ಪಾರ ಎಂಬುವರ ಕೊಲೆ ನಡೆದಿತ್ತು. ಕೊಲೆಯಾದ ವ್ಯಕ್ತಿಯ ತಾಯಿ ಅಮರಮ್ಮ ಈರಣ್ಣ ಉಪ್ಪಾರ ಅವರು ನೀಡಿದ ದೂರಿನನ್ವಯ ಪೊಲೀಸರು ಆರೋಪಿಗಳನ್ನು ಬಂಧಿಸಿದ್ದಾರೆ.

ಲಿಂಗಸುಗೂರು ಉಪ ವಿಭಾಗದ ಉಪ ಅಧೀಕ್ಷಕ ದತ್ತಾತ್ರೇಯ ಕರ್ನಾಡ್‌, ಸಿಪಿಐ ಪುಂಡಲೀಕ ಎಂ. ಪಟಾತರ ಅವರ ನೇತೃತ್ವದಲ್ಲಿ, ಪಿಎಸ್‌ಐ ಹನುಮಂತ, ಸಿಬ್ಬಂದಿ ಚನ್ನಬಸವ, ಸೂಗುರಪ್ಪ, ಅಮರೇಶ, ನಾಗರಾಜ, ಚಂದ್ರಶೇಖರ, ಶ್ರೀಕಾಂತ, ಸೋಮಪ್ಪ, ಭೀಮಣ್ಣ, ಸಿದ್ದಪ್ಪ, ಹೊನ್ನೇಶ ಅವರನ್ನು ಒಳಗೊಂಡ ತಂಡ ರಚಿಸಿ, ಕೊಲೆ ಮಾಡಿದ ಆರೋಪಿಗಳನ್ನು ಬಂಧಿಸಿದ್ಧಾರೆ.

You May Also Like

More From Author

+ There are no comments

Add yours