Indian Muslims: ಜಗತ್ತಿನ ಬೇರೆಡೆ ಕಿರುಕುಳ ಅನುಭವಿಸಿದರೂ ಭಾರತ ದೇಶ ಮುಸ್ಲಿಮರಿಗೆ ಸ್ವರ್ಗವಾಗಿದೆ; ಪ್ರಧಾನಿ ಮೋದಿ

1 min read

ನವದೆಹಲಿ: ಭಾರತ ದೇಶ ಮುಸ್ಲಿಮರಿಗೆ (Indian Muslims) ಸ್ವರ್ಗ ಎಂದು ಪ್ರಧಾನಿ ನರೇಂದ್ರ ಮೋದಿ (Narendra Modi) ಬಣ್ಣಿಸಿದ್ದಾರೆ. ವಿದೇಶಿ ಪತ್ರಿಕೆಯೊಂದಕ್ಕೆ ಸಂದರ್ಶನ ನೀಡಿದ ವೇಳೆ ಪ್ರಶ್ನೆಯೊಂದಕ್ಕೆ ಉತ್ತರಿಸಿದ ನರೇಂದ್ರ ಮೋದಿ ಈ ರೀತಿ ಹೇಳಿದ್ದಾರೆ.

ವಿದೇಶಿ ಪತ್ರಿಕೆ ‘ಫೈನಾನ್ಷಿಯಲ್ ಟೈಮ್ಸ್’ಗೆ ನೀಡಿದ ಸಂದರ್ಶನದಲ್ಲಿ ಭಾರತವು ಮುಸ್ಲಿಮರಿಗೆ ಸ್ವರ್ಗವಾಗಿದೆ ಎಂದಿರೋದು ಮಾತ್ರವಲ್ಲದೇ ಕೆನಡಾ ವಿವಾದ ಮತ್ತು ಇಸ್ರೇಲ್-ಹಮಾಸ್ ಸಂಘರ್ಷದ ಬಗ್ಗೆಯೂ ಪ್ರಧಾನಿ ಮೋದಿ ಬಹಿರಂಗವಾಗಿ ಚರ್ಚೆ ನಡೆಸಿದ್ದಾರೆ. ಜಗತ್ತಿನ ಬೇರೆಡೆ ಕಿರುಕುಳ ಎದುರಿಸುತ್ತಿದ್ದರೂ ಸಹ ಭಾರತದಲ್ಲಿ ಮುಸ್ಲಿಮರು ಸುರಕ್ಷಿತ ನೆಲೆ ಕಂಡುಕೊಂಡಿದ್ದು, ನೆಮ್ಮದಿಯಿಂದ ಬದುಕುತ್ತಿದ್ದಾರೆ ಎಂದರು.

ಕೆನಡಾದಲ್ಲಿ ನಡೆಯುತ್ತಿರುವ ಘಟನೆಗಳ ಬಗ್ಗೆಯೂ ಮಾತನಾಡಿದ ಮೋದಿ, ಅಭಿವ್ಯಕ್ತಿ ಸ್ವಾತಂತ್ರ್ಯದ ನೆಪದಲ್ಲಿ ಹಿಂಸಾಚಾರದ ಆಟವನ್ನು ಆಡುತ್ತಿದ್ದಾರೆ ಎಂದು ನೇರವಾಗಿ ಹೇಳಿದರು. ಭಾರತದಲ್ಲಿ ಮುಸ್ಲಿಂ ಅಲ್ಪಸಂಖ್ಯಾತರ ಭವಿಷ್ಯ ಏನು ಎಂದು ಕೇಳಿದ ಪ್ರಶ್ನೆಗೆ ಉತ್ತರಿಸಿದ ಮೋದಿ, ‘ಜಗತ್ತಿನ ಬೇರೆಡೆ ಕಿರುಕುಳವನ್ನು ಎದುರಿಸುತ್ತಿದ್ದರೂ, ಅವರು (ಮುಸ್ಲಿಂ ಅಲ್ಪಸಂಖ್ಯಾತರು) ಭಾರತದಲ್ಲಿ ಸುರಕ್ಷಿತವಾದ ನೆಲೆಯನ್ನು ಕಂಡುಕೊಂಡಿದ್ದಾರೆ. ಅವರು ಸಂತೋಷದಿಂದ ಮತ್ತು ಸಮೃದ್ಧವಾಗಿ ಬದುಕುತ್ತಿದ್ದಾರೆ ಎಂದರು.

ಚೀನಾ ಮತ್ತು ಹಮಾಸ್-ಇಸ್ರೇಲ್ ಸಂಘರ್ಷದ ಬಗ್ಗೆ ಪ್ರಧಾನಿ ಹೇಳಿದ್ದೇನು?

ಭಾರತವನ್ನು ಚೀನಾದೊಂದಿಗೆ ಹೋಲಿಸಿದ ಬಗ್ಗೆ ಮಾತನಾಡಿದ ಪ್ರಧಾನಿ ಮೋದಿ, ನೀವು ಚೀನಾದೊಂದಿಗೆ ಹೋಲಿಸಿದ್ದೀರಿ, ಆದರೆ ಭಾರತವನ್ನು ಇತರ ಪ್ರಜಾಪ್ರಭುತ್ವಗಳೊಂದಿಗೆ ಹೋಲಿಸುವುದು ಹೆಚ್ಚು ಸೂಕ್ತವಾಗಬಹುದು ಎಂದು ಹೇಳಿದರು. ಅದೇ ಸಮಯದಲ್ಲಿ, ಹಮಾಸ್-ಇಸ್ರೇಲ್ ಸಂಘರ್ಷದ ಕುರಿತು, ನಾನು ಮಧ್ಯಪ್ರಾಚ್ಯ ದೇಶದ ನಾಯಕರೊಂದಿಗೆ ಸಂಪರ್ಕದಲ್ಲಿರುತ್ತೇನೆ. ಭಾರತವು ಶಾಂತಿಯತ್ತ ಹೆಚ್ಚಿನ ಪ್ರಯತ್ನಗಳನ್ನು ಮಾಡುತ್ತದೆ. ನಾವು ಖಂಡಿತವಾಗಿಯೂ ಶಾಂತಿಯತ್ತ ಗಮನ ವಹಿಸುತ್ತೇವೆ ಎಂದು ಪ್ರಧಾನಿ ಮೋದಿ ಹೇಳಿದರು.

ಕೆನಡಾ ವಿವಾದ ಮತ್ತು ಅಮೆರಿಕದ ಆರೋಪಗಳ ಬಗ್ಗೆ ಪ್ರಧಾನಿ ಮೋದಿ ಹೇಳಿದ್ದೇನು?

ಅಮೆರಿಕದ ಆರೋಪಕ್ಕೆ ಮೊದಲ ಪ್ರತಿಕ್ರಿಯೆ ನೀಡಿದ ಪ್ರಧಾನಿ ಮೋದಿ, ‘ಯಾರಾದರೂ ನಮಗೆ ಯಾವುದೇ ಮಾಹಿತಿ ನೀಡಿದರೆ, ನಾವು ಖಂಡಿತವಾಗಿಯೂ ಪರಿಶೀಲಿಸುತ್ತೇವೆ. ನಮ್ಮ ಪ್ರಜೆಗಳಲ್ಲಿ ಯಾರಾದರೂ ಒಳ್ಳೆಯದು ಅಥವಾ ಕೆಟ್ಟದ್ದನ್ನು ಮಾಡಿದ್ದರೆ ನಾವು ಅದನ್ನು ಪರಿಶೀಲಿಸಲು ಸಿದ್ಧರಿದ್ದೇವೆ. ಕಾನೂನು ಸುವ್ಯವಸ್ಥೆಯಲ್ಲಿ ನಮಗೆ ಬದ್ಧತೆ ಇದೆ ಎಂದರು.

ಇದೇ ವೇಳೆ ಕೆನಡಾ ವಿಚಾರವಾಗಿ ದಿಟ್ಟ ಉತ್ತರ ನೀಡಿದ ಅವರು, ಅಭಿವ್ಯಕ್ತಿ ಸ್ವಾತಂತ್ರ್ಯದ ನೆಪದಲ್ಲಿ ಹಿಂಸಾಚಾರದ ಆಟ ಆಡಲಾಗುತ್ತಿದೆ. ಅಭಿವ್ಯಕ್ತಿ ಸ್ವಾತಂತ್ರ್ಯದ ನೆಪದಲ್ಲಿ ಈ ಅಂಶಗಳು ಬೆದರಿಕೆ ಮತ್ತು ಹಿಂಸಾಚಾರಕ್ಕೆ ಪ್ರಚೋದನೆ ನೀಡುತ್ತಿವೆ. ಆದರೆ, ಈ ಆರೋಪಗಳು ಕೆನಡಾದಲ್ಲಿ ರಾಜತಾಂತ್ರಿಕ ಜ್ವಾಲೆಗೆ ಕಾರಣವಾಗುತ್ತವೆ ಎಂದರು.

You May Also Like

More From Author

+ There are no comments

Add yours