ಜಗತ್ತಿನೆಲ್ಲೆಡೆ ಕ್ರಿಸ್ಮಸ್ ಸಂಭ್ರಮ: ಜೀಸಸ್ ಹುಟ್ಟಿದ ಬೆತ್ಲಹಮ್‌ನಲ್ಲಿ ಸಂಭ್ರಮವೇ ಇಲ್ಲ, ಸ್ಮಶಾನ ಮೌನ

1 min read

ಬೆತ್ಲೆಹೆಮ್: ಜಗತ್ತಿನೆಲ್ಲೆಡೆ ಕ್ರಿಸ್‌ಮಸ್ ಸಂಭ್ರಮ ಜೋರಾಗಿದ್ದು, ಕ್ರಿಶ್ಚಿಯನ್ ಸಮುದಾಯದ ಜನ ಚರ್ಚ್‌ಗಳಿಗೆ ಹೋಗಿ ಪ್ರಾರ್ಥನೆ ಸಲ್ಲಿಸುವುದರ ಜೊತೆ ಮನೆಯಲ್ಲಿ ಹಬ್ಬದಡುಗೆ ಮಾಡಿ ಸಂಭ್ರಮಿಸುತ್ತಿದ್ದಾರೆ. ಆದರೆ ಇಡೀ ಜಗತ್ತಿಗೆ ಶಾಂತಿಯ ಸಂದೇಶ ನೀಡಿದ ಏಸುವಿನ ಜನ್ಮಸ್ಥಳದಲ್ಲಿ ಮಾತ್ರ ಕ್ರಿಸ್‌ಮಸ್‌ ಹಬ್ಬದ ಯಾವುದೇ ಸಂಭ್ರಮ ಇಲ್ಲವಾಗಿದ್ದು, ಯುದ್ಧದಿಂದಾಗಿ ಅಲ್ಲಿ ಸ್ಮಶಾನ ಮೌನ ಆವರಿಸಿದೆ.

ಎಂಥಾ ವಿಚಿತ್ರ ನೋಡಿ, ಯಾರ ಹುಟ್ಟಿದ ದಿನಕ್ಕಾಗಿ ಇಡೀ ಜಗತ್ತು ಇಂದು ಸಂಭ್ರಮದಿಂದ ಸಜ್ಜಾಗಿದೆಯೋ ಅಂತಹ ಉದಾತ್ತ ನಾಯಕ ಹುಟ್ಟಿದ ಸ್ಥಳ ಮಾತ್ರ ಇಂದು ಬೆಂಕಿಯುಂಡೆಯಂತಾಗಿದ್ದು, ಸದಾ ಧಗಧಗಿಸುಲೇ ಇದೆ. ಪ್ಯಾಲೇಸ್ತೇನ್‌ನ ಬೆತ್ಲೆಹೆಮ್ ಏಸುಕ್ರಿಸ್ತನ ಜನ್ಮಸ್ಥಾನವಾಗಿದ್ದು, ಇಸ್ರೇಲ್ ಹಮಾಸ್ ಯುದ್ಧದಿಂದಾಗಿ ಆ ಪ್ರದೇಶ ಇಂದು ಯಾವುದೇ ಹಬ್ಬದ ಸಂಭ್ರಮವಿಲ್ಲದೇ ಬಿಕೋ ಎನ್ನುತ್ತಿದೆ. ಪ್ರತಿವರ್ಷ ಕ್ರಿಸ್‌ಮಸ್‌ ಹಬ್ಬದಂದು ಜಗತ್ತಿನ ವಿವಿಧೆಡೆಯಿಂದ ಇಲ್ಲಿಗೆ ಪ್ರವಾಸಿಗರು ಆಗಮಿಸುತ್ತಿದ್ದರು. ಜನರ ಸೇರುವಿಕೆಯಿಂದಾಗಿ ಈ ಪ್ರದೇಶ ಕಳೆಕಟ್ಟಿರುತ್ತಿತ್ತು. ಆದರೆ ಈ ಬಾರಿ ನಡೆದ ನಡೆಯುತ್ತಲೇ ಇರುವ ಇಸ್ರೇಲ್ ಹಮಾಸ್ ಯುದ್ಧ ಪ್ರವಾಸಿಗರನ್ನು ಇತ್ತ ಬಾರದಂತೆ ತಡೆದಿದೆ.

ಕ್ರಿಶ್ಚಿಯನ್ನರು ಏಸುಕ್ರಿಸ್ತನ ಜನ್ಮಸ್ಥಾನ ಎಂದು ನಂಬಿರುವ ಈ ಪ್ಯಾಲೇಸ್ತೇನ್ ನಗರ ಬೆತ್ಲಹೆಮ್ ವೆಸ್ಟ್‌ಬ್ಯಾಂಕ್‌ನಲ್ಲಿದ್ದು, ಇಸ್ರೇಲಿಗರ ಹಿಡಿತದಲ್ಲಿದೆ. ಪ್ರಸ್ತುತ ಯುದ್ಧದಿಂದಾಗಿ ಇಲ್ಲಿನ ಹೊಟೇಲ್‌ಗಳು, ರೆಸ್ಟೋರೆಂಟ್‌ಗಳು, ಅಂಗಡಿಗಳು ಜನರಿಲ್ಲದೇ ಬಿಕೋ ಎನ್ನುತ್ತಿವೆ. ಆಕ್ಟೋಬರ್ 7 ರಂದು ದಕ್ಷಿಣ ಇಸ್ರೇಲ್ ಮೇಲೆ ಹಮಾಸ್ ಉಗ್ರರು ದಾಳಿ ಮಾಡಿದ ನಂತರ ಈ ಯುದ್ಧ ಆರಂಭವಾಗಿತ್ತು.  ಈ ಯುದ್ಧದ ನಂತರ ಇಲ್ಲಿಗೆ ಯಾರೊಬ್ಬರೂ ಬರುತ್ತಿಲ್ಲ ಎಂದು ಅಂಗಡಿ ಮಾಲೀಕರೊಬ್ಬರು ಹೇಳಿದ್ದಾರೆ.

ಇಲ್ಲಿ ಯಾರು ಅತಿಥಿಗಳು ಬರುವುದೇ ಇಲ್ಲ, ಒಬ್ಬರೇ ಒಬ್ಬರು ಇಲ್ಲ ಎಂದು ವಿಷಾದ ವ್ಯಕ್ತಪಡಿಸುತ್ತಾರೆ ಅಲೆಕ್ಸಾಂಡ್ರಾ ಹೊಟೇಲ್ ಮಾಲೀಕ ಜೋಯಿ ಕನವಟಿ, ಈ ಪ್ರದೇಶದಲ್ಲಿ ಇವರ ಕುಟುಂಬ 4 ತಲೆಮಾರಿನಿಂದಲೂ ವಾಸಿಸುತ್ತಿದೆ. ಇದು ನಾನು ನೋಡಿದ ಅತ್ಯಂತ ಕೆಟ್ಟ ಕ್ರಿಸ್‌ಮಸ್‌, ಕ್ರಿಸ್ಮಸ್‌ ದಿನದಂದೇ ಬೆತ್ಲಹೆಮ್ ಮುಚ್ಚಿದೆ. ಇಲ್ಲಿ ಕ್ರಿಸ್‌ಮಸ್ ಟ್ರೀ ಇಲ್ಲ, ಸಂತೋಷವಿಲ್ಲ, ಕ್ರಿಸ್‌ಮಸ್ ಉತ್ಸಾಹವಿಲ್ಲ ಎಂದು ಅವರು ಹೇಳಿದ್ದಾರೆ.

 

ಜೆರುಸಲೆಮ್‌ನ ದಕ್ಷಿಣ ಭಾಗದಲ್ಲಿರುವ ಬೆತ್ಲೆಹೆಮ್ ಪ್ರಪಂಚದೆಲ್ಲೆಡೆಯಿಂದ ಪ್ರವಾಸಿಗರನ್ನು ಆಕರ್ಷಿಸುತ್ತಿತ್ತು. ಇದು ಇಲ್ಲಿನ ಜನರ ಆದಾಯ ಹೆಚ್ಚಿಸುತ್ತಿತ್ತು. ಇಲ್ಲಿರುವ ಚರ್ಚ್ ಆಫ್ ನೆಟಿವಿಟಿಯನ್ನು ಜೀಸಸ್ ಜನಿಸಿದ ಸ್ಥಳವೆಂದೇ ಪ್ರಪಂಚದೆಲ್ಲೆಡೆಯ ಜನ ನಂಬುತ್ತಾರೆ. ಆಕ್ಟೋಬರ್ 7ಕ್ಕೂ ಮೊದಲು ನಮ್ಮ ಹೊಟೇಲ್ ಕ್ರಿಸ್‌ಮಸ್‌ ಆಚರಣೆಗಾಗಿ ಬರುವ ಪ್ರವಾಸಿಗರಿಂದಲೇ ಫುಲ್ ಬುಕ್ಕಿಂಗ್ ಆಗಿತ್ತು. ಹೀಗಾಗಿ ನಗರದ ಸಮೀಪದಲ್ಲೇ ಇರುವ ಕೊಠಡಿಗಳನ್ನು ಕೂಡ ಪ್ರವಾಸಿಗರಿಗಾಗಿ ಅವರು ಹುಡುಕಾಡುತ್ತಿದ್ದರು. ಆದರೆ ಯಾವಾಗ ಯುದ್ಧ ಆರಂಭವಾಯ್ತೋ ಅವಾಗಿನಿಂದ ಎಲ್ಲರೂ ತಮ್ಮ ಬುಕ್ಕಿಂಗ್ ಕ್ಯಾನ್ಸಲ್ ಮಾಡಿಕೊಂಡರು. ಮುಂದಿನ ವರ್ಷಕ್ಕೆ ಬುಕ್ ಮಾಡಿಕೊಂಡವರು ಕೂಡ ತಮ್ಮ ಬುಕ್ಕಿಂಗ್ ಕ್ಸನ್ಸಲ್ ಮಾಡಿದ್ದಾರೆ ಎಂದು ಹೊಟೇಲ್ ಮಾಲೀಕ ಕನವಟಿ ಸುದ್ದಿಸಂಸ್ಥೆ ರಾಯಿಟರ್ಸ್ ಜೊತೆ ಅಳಲು ತೋಡಿಕೊಂಡಿದ್ದಾರೆ.

You May Also Like

More From Author

+ There are no comments

Add yours