ಹೈಲೈಟ್ಸ್:
- ಹಿಂದೆ ಸಾಂಪ್ರದಾಯಿಕ ತಿಗುರಿಯಲ್ಲಿ ಮಣ್ಣಿನ ಮಡಕೆ, ಕುಡಿಕೆ ತಯಾರಿಸುತ್ತಿದ್ದ ಕುಂಬಾರರು
- ಗ್ರಾಮೋದ್ಯೋಗ ವಿಕಾಸ ಯೋಜನೆಯಡಿ ನಡೆಯುತ್ತಿದೆ ಕುಂಬಾರ ಸಶಕ್ತೀಕರಣ ಕಾರ್ಯಕ್ರಮ
- ಬಾಗಲಕೋಟೆ ಜಿಲ್ಲೆಯ ಮರಡಿ ಗ್ರಾಮದಲ್ಲಿ ಆಧುನಿಕ ಯಂತ್ರ ಬಳಸುವ ಬಗ್ಗೆ ಸೂಕ್ತ ತರಬೇತಿ
ಮಣ್ಣು ಕಲಿಸಿ ಸಾಂಪ್ರದಾಯಿಕವಾಗಿ ತಿಗುರಿಯಲ್ಲಿ ಮಡಕೆ, ಕುಡಿಕೆ ತಯಾರಿಸುತ್ತಿದ್ದ ಕುಂಬಾರಿಕೆ ವೃತ್ತಿಗೂ ಆಧುನಿಕ ಸ್ಪರ್ಶ ದೊರೆತಿದ್ದು, ಕುಂಬಾರರ ಕೈಗೆ ಈಗ ಎಲೆಕ್ಟ್ರಾನಿಕ್ ಆಧುನಿಕ ಚಕ್ರ ದೊರೆತಿದೆ. ಆ ಮೂಲಕ ಸುಲಭ ಹಾಗೂ ವೇಗವಾಗಿ ಮಣ್ಣಿನ ವಸ್ತುಗಳನ್ನು ತಯಾರಿಸಬಹುದಾಗಿದೆ.
ಇದೇ ಆಧುನಿಕತೆಯ ಹೊಡತಕ್ಕೆ ಸಿಲುಕಿ ನಲುಗಿದ್ದ ಕುಂಬಾರ ವೃತ್ತಿಗೆ ಈಗ ಆಧುನಿಕ ಸ್ಪರ್ಶ ದೊರೆತಿರುವುದು ಆಶ್ಚರ್ಯ.
ಕುಂಬಾರಿಕೆ ಪ್ರೋತ್ಸಾಹಿಸುವ ನಿಟ್ಟಿನಲ್ಲಿ ಕೇಂದ್ರ ಸರಕಾರ ಗ್ರಾಮೋದ್ಯೋಗ ವಿಕಾಸ ಯೋಜನೆಯಡಿ ಕುಂಬಾರ ಸಶಕ್ತೀಕರಣ ಕಾರ್ಯಕ್ರಮದ ಮೂಲಕ ಕುಂಬಾರಿಕೆ ಕೌಶಲ್ಯ ಅಭಿವೃದ್ಧಿ ತರಬೇತಿ ಹಮ್ಮಿಕೊಂಡು ಕುಂಬಾರ ವೃತ್ತಿಗೆ ಅಗತ್ಯ ಇರುವ ಆಧುನಿಕ ಚಕ್ರ (ತಿಗುರಿ) ಬಳಸಿ ಮಣ್ಣಿನ ಪರಿಕರ ಉತ್ಪಾದಿಸುವ ಬಗೆಯ ಕುರಿತು ತರಬೇತಿ ನೀಡುತ್ತಿದೆ. ಆ ಮೂಲಕ ಸಾಂಪ್ರದಾಯಿಕ ವೃತ್ತಿಗೆ ಹೊಸ ಹುರುಪು ಸಿಕ್ಕಿದೆ.
ಹಿಂದೆ ಹರಸಾಹಸ
ಮಣ್ಣಿನ ಮಡಕೆ, ಕುಡಿಕೆ ಸೇರಿದಂತೆ ಈ ತರಹದ ವಸ್ತುಗಳ ತಯಾರಿಕೆಗೆ ಈ ಹಿಂದೆ ಕಟ್ಟಿಗೆಯ ತಿಗುರಿ ಬಳಸಲಾಗುತ್ತಿತ್ತು. ಇದನ್ನು ಕೈಯಿಂದ ಬಡಿಗೆ ಮೂಲಕ ತಿರುಗಿಸುವ ಸಾಹಸ ಮಾಡಬೇಕಿತ್ತು. ಜತೆಗೆ ಈ ಕೆಲಸದಲ್ಲಿ ತೊಡಗಿರುವವರಿಗೆ ಅನಾರೋಗ್ಯವೂ ಎದುರಾಗುತ್ತಿತ್ತು. ಬರಬರುತ್ತ ಆಧುನಿಕತೆ ಹೊಡೆತಕ್ಕೆ ವೃತ್ತಿ ನೆಲಕಚ್ಚಿ ಹಲವರು ಕುಂಬಾರಿಕೆಯನ್ನೇ ತೊರೆದ ನಿದರ್ಶನಗಳು ಸಾಕಷ್ಟಿವೆ.
ಬಂದಿದೆ ನಾವೀನ್ಯತೆ2023-24ನೇ ಸಾಲಿನ ಗ್ರಾಮೋದ್ಯೋಗ ವಿಕಾಸ ಯೋಜನೆಯಡಿ ಕುಂಬಾರ ಸಶಕ್ತೀಕರಣ ಕಾರ್ಯಕ್ರಮದಲ್ಲಿ ಕುಂಬಾರಿಕೆ ಕೌಶಲ್ಯ ಅಭಿವೃದ್ಧಿ ತರಬೇತಿ ಜಿಲ್ಲೆಯಲ್ಲಿ ಮೊದಲ ಬಾರಿ ಹುನಗುಂದ ತಾಲೂಕಿನ ಅಮೀನಗಡ ಹಾಗೂ ಇಳಕಲ್ ತಾಲೂಕಿನ ಮುರಡಿ ಗ್ರಾಮದಲ್ಲಿ ನಡೆಯುತ್ತಿದೆ. ಸೂಕ್ಷ್ಮ, ಸಣ್ಣ ಮತ್ತು ಮಧ್ಯಮ ಉದ್ಯಮಗಳ ಸಚಿವಾಲಯದಿಂದ ಕೇಂದ್ರ ಕುಂಬಾರಿಕೆ ಸಂಸ್ಥೆ, ಖಾದಿ ಮತ್ತು ಗ್ರಾಮೋದ್ಯೋಗ ಆಯೋಗದಿಂದ ನುರಿತ ತರಬೇತುದಾರರು ಆಯ್ಕೆ ಮಾಡಿದ ಪ್ರತಿ ಊರಿನಿಂದ 20 ಜನರಿಗೆ ವೃತ್ತಿಯಲ್ಲಿ ನೈಪುಣ್ಯತೆ ಹೊಂದಲು 10 ದಿನದ ತರಬೇತಿ ನೀಡಲಾಗುತ್ತಿದೆ. ತರಬೇತಿ ನಂತರ ಪ್ರತಿಯೊಬ್ಬರಿಗೂ ಉಚಿತವಾಗಿ ತಿಗುರಿ ಮಷಿನ್ ವಿತರಿಸಲಾಗುತ್ತಿದೆ.
ಹೇಗಿದೆ ಈ ಮಷಿನ್ ವೀಲ್ ?ಎಲೆಕ್ಟ್ರಿಕಲ್ ಹಾಗೂ ಸೋಲಾರ್ ಮೂಲಕವೂ ಈ ವೀಲ್ ಮಷಿನ್ ಕಾರ್ಯನಿರ್ವಹಿಸುತ್ತದೆ. ವಿನೂತನ ಯಂತ್ರದಲ್ಲಿಹಣತೆ, ಮಡಕೆ, ಕುಡಿಕೆ, ತತ್ರಾಣಿ, ಹೂಜಿ, ಕಟಿಂಗ್ ಪಾಟ್, ಪ್ಲಾವರ್ ಪಾಟ್, ವಾಟರ್ಪಾಟ್, ಜಗ್, ಗ್ಲಾಸ್, ಕಪ್, ಚಹಾಕಿತ್ತಲಿ, ಗಂಟೆ, ಸಣ್ಣಮಿನಾರ್, ದೂಪದ ಪಾತ್ರೆ ಹೀಗೆ ಹತ್ತು ಹಲವು ವಸ್ತುಗಳನ್ನು ತಯಾರಿಸಬಹುದಾಗಿದೆ. ಇಂತಹ ವಸ್ತುಗಳಿಗೆ ಇದೀಗ ಮಾರುಕಟ್ಟೆಯಲ್ಲಿಬೇಡಿಕೆಯೂ ಇದೆ. ಹೊರಗಡೆ ಮಾರುಕಟ್ಟೆಯಲ್ಲಿ ಈ ಮಷಿನ್ನ ಬೆಲೆ ಅಂದಾಜು 25 ಸಾವಿರ ರೂಪಾಯಿ ಇದೆ ಎನ್ನಲಾಗುತ್ತಿದೆ.
ಈ ಬಗ್ಗೆ ವಿಜಯ ಕರ್ನಾಟಕದೊಂದಿಗೆ ಮಾತನಾಡಿದ ತರಬೇತಿ ನಿರತ ಸದಸ್ಯ ಮಲ್ಲಪ್ಪ ಎಚ್ ಕುಂಬಾರ, “ಸಾಂಪ್ರದಾಯಿಕ ಕುಂಬಾರಿಕೆಯನ್ನು ಉಳಿಸಿ ಬೆಳೆಸುವ ನಿಟ್ಟಿನಲ್ಲಿಕೇಂದ್ರದ ವಿನೂತನ ಯೋಜನೆಯ ಸಫಲತೆ ಪಡೆದು ಆರ್ಥಿಕವಾಗಿ ಸಬಲೀಕರಣ ಹೊಂದಬಹುದು. ಆಧುನಿಕತೆಗೆ ತಕ್ಕಂತೆ ನವೀನ ರೀತಿಯ ಮಡಕೆ, ಕುಡಿಕೆ ತಯಾರಿಸುವುದು ಅಗತ್ಯವಾಗಿದೆ” ಎಂದಿದ್ದಾರೆ.
+ There are no comments
Add yours