ವಿಶೇಷ ಚೇತನರ ಮನೆಬಾಗಿಲಿಗೆ ಸರಕಾರಿ ಸೌಲಭ್ಯ, ಬೆಂಗಳೂರು ಗ್ರಾ. ಜಿಲ್ಲೆಯಲ್ಲಿ ವಿನೂತನ ಪ್ರಯತ್ನ

0 min read

ಹೈಲೈಟ್ಸ್‌:

  • ವಿಶೇಷ ಚೇತನರಿಗೆ ಅನೇಕ ಸೌಲಭ್ಯಗಳನ್ನು ನೀಡುತ್ತಿರುವ ರಾಜ್ಯ ಸರಕಾರ
  • ಎಲ್ಲಾ ಯೋಜನೆಯನ್ನು ಸಮರ್ಪಕವಾಗಿ ತಲುಪಿಸುವ ಉದ್ದೇಶದಿಂದ ವಿನೂತನ ಕಾರ್ಯಕ್ರಮ ಹಮ್ಮಿಕೊಂಡ ಇಲಾಖೆ
  • ವಿಶೇಷ ಚೇತನರ ಮನೆ ಬಾಗಿಲಿಗೆ ಸರಕಾರಿ ಸೇವೆಗಳನ್ನು ತಲುಪಿಸಲು ಕಾರ್ಯಕ್ರಮ ರೂಪಿಸಿದ ಬೆಂಗಳೂರು ಗ್ರಾ. ಜಿಲ್ಲೆ
  • ವಿಶೇಷ ಚೇತನ ಇಲಾಖೆಯಿಂದ ರಾಜ್ಯದಲ್ಲೇ ಈ ರೀತಿಯ ಮೊದಲ ಪ್ರಯತ್ನ
  • ಪ್ರತಿ ಬುಧವಾರ ಒಂದೊಂದು ಗ್ರಾಪಂನಲ್ಲಿ ಕಾರ್ಯಕ್ರಮ ಆಯೋಜಿಸುವ ವಿಶೇಷ ಚೇತನ ಇಲಾಖೆ

ವಿಶೇಷ ಚೇತನರಿಗೆ ಸರಕಾರ ಅನೇಕ ಸೌಲಭ್ಯಗಳನ್ನು ನೀಡುತ್ತಿದ್ದು, ಎಲ್ಲಾ ಯೋಜನೆಯನ್ನು ಸಮರ್ಪಕವಾಗಿ ತಲುಪಿಸುವ ದೃಷ್ಟಿಯಿಂದ ಬೆಂಗಳೂರು ಗ್ರಾಮಾಂತರ ಜಿಲ್ಲೆಯಲ್ಲಿ ರಾಜ್ಯದಲ್ಲೇ ಮೊದಲ ಬಾರಿಗೆ ವಿಶೇಷ ಚೇತನರ ಮನೆ ಬಾಗಿಲಿಗೆ ಸರಕಾರಿ ಸೇವೆಗಳನ್ನು ತಲುಪಿಸಲು ಕಾರ್ಯಕ್ರಮ ರೂಪಿಸಲಾಗಿದೆ. ಈ ಹಿನ್ನೆಲೆಯಲ್ಲಿ ವಿಶೇಷ ಚೇತನರ ಮನೆ ಬಾಗಿಲಿಗೆ ಸೇವೆಗಳನ್ನು ನೀಡುವ ಕೆಲಸವನ್ನು ಇಲಾಖೆ ಮಾಡುತ್ತಿದೆ.

ಸರಕಾರ ವಿಶೇಷ ಚೇತನರ ಅನುಕೂಲಕ್ಕಾಗಿ ಯುಡಿಐಟಿ, ಪೋಷಣಾ ಭತ್ಯೆ, ವೈದ್ಯಕೀಯ ಪರಿಹಾರ ನಿಧಿ, ಸಾಧನಾ ಸಲಕರಣೆ ಸೇರಿದಂತೆ ಸಾಕಷ್ಟು ಯೋಜನೆಗಳನ್ನು ಹಮ್ಮಿಕೊಂಡಿದೆ. ಇದನ್ನು ಯಶಸ್ವಿಯಾಗಿ ವಿಶೇಷ ಚೇತನರಿಗೆ ತಲುಪುವಲ್ಲಿ ಹಿನ್ನಡೆಯಾಗುತ್ತಿರುವುದನ್ನು ಗಮನಿಸಿ ಬೆಂಗಳೂರು ಗ್ರಾಮಾಂತರ ಜಿಲ್ಲೆಯಲ್ಲಿ ವಿಶೇಷ ಚೇತನರ ಇಲಾಖೆ ವಿಶೇಷ ಚೇತನರ ಮನೆಬಾಗಿಲಿಗೆ ಸರಕಾರದ ಯೋಜನೆಗಳನ್ನು ತಲುಪಿಸಲು ಮುಂದಾಗಿದೆ.

ಪ್ರತಿ ಬುಧವಾರ ಒಂದೊಂದು ಗ್ರಾಪಂ ವ್ಯಾಪ್ತಿಯ ವಿಶೇಷ ಚೇತನರ ಮನೆಗಳಿಗೆ ಭೇಟಿ ನೀಡಿ ಅವರಿಗೆ ಅಗತ್ಯವಾದ ಸೌಲಭ್ಯ, ಮಾಹಿತಿ ಪಡೆದು ಅದನ್ನು ತಲುಪಿಸುವ ಪ್ರಯತ್ನಕ್ಕೆ ಮುಂದಾಗಿದೆ. ಇದಕ್ಕೆ ಜಿಲ್ಲೆಯಾದ್ಯಂತ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗುತ್ತಿದೆ. ಪ್ರತಿ ವಾರ ಕೂಡ ಕಾರ್ಯಕ್ರಮ ನಡೆಯುತ್ತಿದ್ದು, ಉತ್ತಮ ಸೇವೆಗಳು ಕೂಡ ಮನೆ ಬಾಗಿಲಿಗೆ ತಲುಪುವಂತಹ ಕೆಲಸವಾಗುತ್ತಿದೆ.

ಮನೆಬಾಗಿಲಿಗೆ ಅಧಿಕಾರಿಗಳು

ವಿಶೇಷ ಚೇತನರಿಗೆ ಸರಕಾರ ಯುಡಿಐಡಿ ಗುರುತಿನ ಚೀಟಿ ನೀಡುತ್ತಿದ್ದು, ಇದರನ್ವಯ ಸಾಕಷ್ಟು ಯೋಜನೆಗಳನ್ನು ನೀಡುತ್ತಿದೆ. ಅದರಲ್ಲೂ ಪೋಷಣಾ ಭತ್ಯೆ, ಪಿಂಚಣಿ, ವೈದ್ಯಕೀಯ ಪರಿಹಾರ ನಿಧಿ, ಯಂತ್ರ ಚಾಲಿತ ದ್ವಿಚಕ್ರ ವಾಹನ, ಶೇ. 5ರ ಅನುದಾನದಲ್ಲಿ ಸೌಲಭ್ಯ ಹಾಗೂ ವಿದ್ಯಾರ್ಥಿಗಳಿಗೆ ಸಂಬಂಧಿಸಿದಂತೆ ವಿದ್ಯಾರ್ಥಿ ವೇತನ, ಶುಲ್ಕ ಮರುಪಾವತಿ, ಅಂಧ ವಿದ್ಯಾರ್ಥಿಗಳಿಗೆ ಲ್ಯಾಪ್‌ಟಾಪ್‌, ಬ್ರೈಲ್‌ ಕಿಟ್‌ ಸೇರಿದಂತೆ ಸಾಕಷ್ಟು ಯೋಜನೆಗಳನ್ನು ಆರಂಭಿಸಿದೆ.

ಆದರೆ ಕೆಲವರಿಗೆ ಈ ಯೋಜನೆಯ ಬಗ್ಗೆ ಮಾಹಿತಿ ಕೊರತೆ ಇದ್ದರೆ, ಕೆಲವರಿಗೆ ಅರ್ಜಿ ಸಲ್ಲಿಸಿ ಪಡೆದುಕೊಳ್ಳಲು ಸಮಸ್ಯೆಯಾಗುತ್ತಿತ್ತು. ಇದರಿಂದ ವಿಶೇಷ ಚೇತನ ಇಲಾಖೆ ಅಧಿಕಾರಿಗಳೇ ವಿಶೇಷ ಚೇತನರ ಮನೆ ಬಾಗಿಲಿಗೆ ತೆರಳಿ ಅವರಿಗೆ ಅಗತ್ಯವಾದ ಯೋಜನೆಗಳ ಬಗ್ಗೆ ಮಾಹಿತಿ ಪಡೆದು ಅದನ್ನು ತಲುಪಿಸಲು ಅಗತ್ಯ ಕ್ರಮ ಕೈಗೊಂಡಿದ್ದಾರೆ.

ಏನೇನು ಅನುಕೂಲ?

ವಿಶೇಷ ಚೇತನರ ಮನೆ ಬಾಗಿಲಿಗೆ ಅಧಿಕಾರಿಗಳು ಭೇಟಿ

ಇಲಾಖೆ ಯೋಜನೆಗಳ ಬಗ್ಗೆ ಮಾಹಿತಿ

ಕೆಲ ಸೌಲಭ್ಯಗಳನ್ನು ಸ್ಥಳದಲ್ಲೇ ವಿತರಣೆ

ಜಿಲ್ಲೆಯಲ್ಲಿ ಸರಕಾರಿ ಸೌಲಭ್ಯಗಳನ್ನು ಕೇವಲ ವಿಶೇಷ ಚೇತನರ ಮನೆಬಾಗಿಲಿಗೆ ತಲುಪಿಸಲು ಪ್ರಯತ್ನವಾಗುತ್ತಿಲ್ಲ. ಇದರ ಜತೆಗೆ ಹಿರಿಯರಿಗೂ ಕೂಡ ಅವರ ಬಳಿಗೆ ಸೌಲಭ್ಯಗಳನ್ನು ತಲುಪಿಸಲು ಪ್ರಯತ್ನಿಸಲಾಗುತ್ತಿದೆ. ಅದರಲ್ಲೂ ಹಿರಿಯ ನಾಗರಿಕರ ಗುರುತಿನ ಚೀಟಿ, ಪಿಂಚಣಿ ಸೇರಿದಂತೆ ಸಾಕಷ್ಟು ಸೌಲಭ್ಯಗಳನ್ನು ತಲುಪಿಸಲು ಕ್ರಮ ವಹಿಸಲಾಗಿದೆ. ಇದರ ಜತೆಗೆ ಪ್ರತಿ ಗ್ರಾಪಂ ಮಟ್ಟಕ್ಕೆ ಅಧಿಕಾರಿ, ಸಿಬ್ಬಂದಿಗಳು ತೆರಳಿ ವಿಶೇಷ ಚೇತನರ ಹಾಗೂ ಹಿರಿಯ ನಾಗರಿಕರಿಗೆ ಸಂಬಂಧಿಸಿದ ಸಮಸ್ಯೆಗಳನ್ನು ಆಲಿಸಿ ಆ ಮೂಲಕ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳುವ ಕೆಲಸ ಮಾಡುತ್ತಿದ್ದಾರೆ. ಪ್ರತಿ ವಾರ ಚುರುಕಾಗಿ ಈ ಕಾರ್ಯಗಳು ನಡೆಯುತ್ತಿವೆ. ಇದಕ್ಕೆ ವಿಶೇಷ ಚೇತನರಿಂದ ಉತ್ತಮ ಸ್ಪಂದನೆ ವ್ಯಕ್ತವಾಗುತ್ತಿದೆ.

ಏನೇನು ಸೌಲಭ್ಯ?

ಯುಡಿಐಡಿ (ವಿಕಲಚೇತನರ ವಿಶಿಷ್ಟ ಗುರುತಿನ ಚೀಟಿ)

ಸಾಧನ ಸಲಕರಣೆ

ವೈದ್ಯಕೀಯ ಪರಿಹಾರ ನಿಧಿ

ನಿರಾಮಯ ಆರೋಗ್ಯ ವಿಮೆ

ಅಂಗವಿಕಲ ಮಹಿಳಾ ಉದ್ಯೋಗಸ್ಥ ಮತ್ತು ವಿದ್ಯಾರ್ಥಿನಿಯರ ವಸತಿ ನಿಲಯ

ಪ್ರತಿ ಬುಧವಾರ ಒಂದು ಗ್ರಾಪಂ ವ್ಯಾಪ್ತಿಯ ಎಲ್ಲಾ ಗ್ರಾಮಗಳ ವಿಶೇಷ ಚೇತನರ ಮನೆಗಳಿಗೆ ಸ್ವತಃ ಅಧಿಕಾರಿ, ಸಿಬ್ಬಂದಿಗಳೊಂದಿಗೆ ಭೇಟಿ ನೀಡಿ, ಮನೆ ಬಾಗಿಲಿಗೆ ಸರಕಾರಿ ಸೇವೆ ತಲುಪಿಸುವುದು ಕಾರ್ಯಕ್ರಮದ ಮುಖ್ಯ ಉದ್ದೇಶವಾಗಿದೆ. ಕಾರ್ಯಕ್ರಮದಲ್ಲಿ ವಿಶೇಷ ಚೇತನರು ಮತ್ತು ಹಿರಿಯ ನಾಗರಿಕರಿಗೆ ಅವಶ್ಯಕತೆ ಇರುವ ನಾನಾ ಬೇಡಿಕೆಗಳ ಸಂಬಂಧ ಸ್ಥಳದಲ್ಲೇ ಅರ್ಜಿ ಪಡೆಯುವುದು ಹಾಗೂ ಮನೆಬಾಗಿಲಿಗೆ ಎಲ್ಲಾ ಸೌಲಭ್ಯ ತಲುಪಿಸುವ ಗುರಿ ಹೊಂದಲಾಗಿದೆ ಎಂದು ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಜಿಲ್ಲಾ ವಿಕಲಚೇತನರ ಕಲ್ಯಾಣಾಧಿಕಾರಿ ಜಗದೀಶ್‌. ಎನ್‌.ಎಂ. ಹೇಳಿದ್ದಾರೆ.

You May Also Like

More From Author

+ There are no comments

Add yours