ಹೈಲೈಟ್ಸ್:
- ಹಾವೇರಿ ಮೆಣಸಿನ ಮಾರುಕಟ್ಟೆ ಮೇಲೆ ಪ್ರಭಾವ ಬೀರದ ಮಳೆಯ ಕೊರತೆ, ಬರದ ಬಿಸಿ
- ಈ ಬಾರಿ ಅಧಿಕ ಬಿಸಿಲು ಇದ್ದ ಕಾರಣ ಕಡಿಮೆ ಇಳುವರಿ ಬಂದರೂ ಸಹ ಉತ್ತಮ ಗುಣಮಟ್ಟ ಇದೆ
- ಪ್ರಸ್ತುತ ಮಾರುಕಟ್ಟೆಗೆ ಸುಮಾರು 93 ಸಾವಿರ ಚೀಲ ಮೆಣಸಿನಕಾಯಿ ಆವಕವಾಗಿದೆ
ಹಾವೇರಿ: ಪ್ರಸ್ತುತ ವರ್ಷ ರಾಜ್ಯದಲ್ಲಿ ಹಿಂಗಾರು ಮಳೆ ಮತ್ತು ಮುಂಗಾರು ಮಳೆ ಕೈಕೊಟ್ಟಿದೆ. ರೈತ ಸಂಕುಲ ಸಂಕಷ್ಟಕ್ಕೆ ಸಿಲುಕಿದೆ. ಬಿತ್ತನೆ ಮಾಡಿದ ಬೀಜ ಮೊಳಕೆಯೊಡೆಯದೇ ಭೂಮಿಯಲ್ಲಿ ಕರಗಿವೆ. ಇನ್ನು ಕೆಲ ಬೆಳೆಗಳು ಬೆಳೆದರು ಹಸಿರುಬರಗಾಲ ಆವರಿಸಿದೆ. ರೈತರಿಗೆ ಆದಾಯವಿರಲಿ ರೈತರ ಜಾನುವಾರುಗಳಿಗೆ ಮೇವು ಇಲ್ಲದ ಸ್ಥಿತಿ ನಿರ್ಮಾಣವಾಗಿದೆ.
ಇನ್ನೊಂದು ಕಡೆ ಕಳೆದ ವರ್ಷ ಕೋಲ್ಡ್ ಸ್ಟೋರೇಜ್ನಲ್ಲಿ ಸಂಗ್ರಹಿಸಿಟ್ಟಿರುವ ಮೆಣಸಿನಕಾಯಿಯನ್ನು ರೈತರು ಈ ಬಾರಿ ಮಾರಾಟಕ್ಕೆ ತರುತ್ತಿದ್ದಾರೆ. ಇದಲ್ಲದೆ ಕಳೆದ ವರ್ಷ ಅಧಿಕ ಮಳೆಯಿಂದ ಇಳುವರಿ ಕಡಿಮೆ ಬಂದಿತ್ತು. ಅಲ್ಲದೆ ಗುಣಮಟ್ಟ ಸಹ ಉತ್ತಮವಾಗಿರಲಿಲ್ಲ. ಈ ಬಾರಿ ಅಧಿಕ ಬಿಸಿಲು ಇದ್ದ ಕಾರಣ ಕಡಿಮೆ ಇಳುವರಿ ಬಂದರೂ ಸಹ ಉತ್ತಮ ಗುಣಮಟ್ಟ ಇದೆ. ಹೀಗಾಗಿ ಮಾರುಕಟ್ಟೆಗೆ ಮುಂಗಾರು ಮತ್ತು ಹಿಂಗಾರುಮಳೆ ಕೈಕೊಟ್ಟಿರುವುದು ಯಾವುದೇ ಪರಿಣಾಮ ಬೀರಿಲ್ಲ ಎನ್ನುತ್ತಾರೆ ಸುರೇಶಗೌಡ ಪಾಟೀಲ್.
ಕಳೆದ ವರ್ಷಕ್ಕೆ ಹೋಲಿಕೆ ಮಾಡಿದರೆ ಬ್ಯಾಡಗಿ ಡಬ್ಬಿ ಮೆಣಸಿನಕಾಯಿಗೆ ಕ್ವಿಂಟಲ್ಗೆ 15 ಸಾವಿರ ಕಡಿಮೆಯಾದರೆ ಬೇರೆ ತಳಿಯ ಮೆಣಸಿನಕಾಯಿ ದರದಲ್ಲಿ ಕ್ವಿಂಟಲ್ಗೆ 7 ಸಾವಿರ ಕಡಿಮೆಯಾಗಿದೆ. ಸಂಕ್ರಾಂತಿ ನಂತರ ಮಾರುಕಟ್ಟೆಗೆ ಸುಮಾರು ಎರಡೂವರೆ ಲಕ್ಷದಿಂದ ಮೂರು ಲಕ್ಷ ಚೀಲದವರೆಗೆ ಆವಕವಾಗುವ ಸಾಧ್ಯತೆ ಇದೆ ಎಂದು ಸುರೇಶಗೌಡ ತಿಳಿಸಿದರು.
ಇನ್ನು ಮಾರುಕಟ್ಟೆಗೆ ಗುಜರಾತ್ನ ಗೊಂಡಾಲ ತಳಿಯ ಮೆಣಸಿನಕಾಯಿ ರಾಜ್ಯದಲ್ಲಿ ಬೆಳೆಯುವ 2043 ತಳಿಗೆ ಹೋಲಿಕೆಯಾಗುತ್ತಿರುವ ಕಾರಣ ಬ್ಯಾಡಗಿ ಮೆಣಸಿನಕಾಯಿ ದರ ಇಳಿಕೆಯಾಗಿದೆ ಎನ್ನುತ್ತಾರೆ ವರ್ತಕ ರಾಜು ಮೋರಗೇರಿ. ಇದರಿಂದ ಬ್ಯಾಡಗಿ ಮೆಣಸಿನಕಾಯಿ ದರ 50 ಸಾವಿರದಿಂದ 30 ಸಾವಿರಕ್ಕೆ ಕುಸಿದರೆ ಗೊಂಡಾಲ ತಳಿಯ ಮೆಣಸಿನಕಾಯಿ ದರ ಕ್ವಿಂಟಲ್ಗೆ 20 ಸಾವಿರಕ್ಕೆ ಕುಸಿದಿದೆ. ಹೋಟೆಲ್ ಉದ್ಯಮಿಗಳು ಮಧ್ಯವರ್ತಿಗಳು ಇದನ್ನೆ ಹೆಚ್ಚು ಅವಲಂಬಿಸಿದ್ದರಿಂದ ಮೆಣಸಿನಕಾಯಿ ದರ ಕುಸಿದಿದೆ.
+ There are no comments
Add yours