ರಾಜ್ಯ ಬಜೆಟ್‌ನಲ್ಲಿ ಶಾಲಾ ಮಕ್ಕಳ ಸೈಕಲ್‌ಗೆ ₹200 ಕೋಟಿ ಅನುದಾನದ ನಿರೀಕ್ಷೆ

1 min read

ಹೈಲೈಟ್ಸ್‌:

  • ಮೂರು ವರ್ಷಗಳಿಂದ ನನೆಗುದಿಗೆ ಬಿದ್ದಿರುವ ಶಾಲಾ ಮಕ್ಕಳ ಸೈಕಲ್‌ ಯೋಜನೆ
  • ಮತ್ತೆ ಬಜೆಟ್‌ನಲ್ಲಿ ಅನುದಾನ ಮೀಸಲಿಡಬೇಕು ಎಂದು ಶಿಕ್ಷಣ ಇಲಾಖೆ ಪ್ರಸ್ತಾವನೆ
  • ಯೋಜನೆಗೆ ಪ್ರತಿ ವರ್ಷ ಬೇಕಿದೆ 200 ಕೋಟಿ ರೂಪಾಯಿ ಅನುದಾನ
  • ಈ ವರ್ಷ ಯೋಜನೆಗೆ ಸರಕಾರ ಬಜೆಟ್‌ನಲ್ಲಿ ಅನುದಾನ ಹಂಚಿಕೆ ಮಾಡುವ ನಿರೀಕ್ಷೆ

ಬೆಂಗಳೂರು: ಮೂರು ವರ್ಷಗಳಿಂದ ನನೆಗುದಿಗೆ ಬಿದ್ದಿರುವ ಸೈಕಲ್‌ ಯೋಜನೆಗೆ ಮತ್ತೆ ಬಜೆಟ್‌ನಲ್ಲಿ ಅನುದಾನ ಮೀಸಲಿಡಬೇಕೆಂದು ಶಿಕ್ಷಣ ಇಲಾಖೆ ರಾಜ್ಯ ಸರಕಾರಕ್ಕೆ ಪ್ರಸ್ತಾವನೆ ಸಲ್ಲಿಸಿದೆ.ಅತ್ಯವಶ್ಯಕ ಯೋಜನೆಗಳಿಗೆ ಮಾತ್ರ ಪ್ರಸ್ತಾವನೆ ಸಲ್ಲಿಸಬೇಕೆಂದು ಆರ್ಥಿಕ ಇಲಾಖೆಯು ಎಲ್ಲ ಇಲಾಖೆಗಳಿಗೂ ಮೌಖಿಕ ಸೂಚನೆ ನೀಡಿದೆ. ಈ ನಿಟ್ಟಿನಲ್ಲಿ ಶಿಕ್ಷಣ ಇಲಾಖೆಯು ಸೈಕಲ್‌ ನೀಡುವುದನ್ನು ಮತ್ತೆ ಆರಂಭಿಸಬೇಕೆಂದು ಅನುದಾನ ಕೋರಿದೆ. ಈ ಯೋಜನೆಗೆ ವರ್ಷಕ್ಕೆ 190-200 ಕೋಟಿ ರೂ. ಅವಶ್ಯಕತೆ ಬೀಳಲಿದೆ. ಯೋಜನೆಗೆ ಅನುದಾನ ನೀಡುವಂತೆ ಕೋರಿ ಈ ಹಿಂದೆ 792 ಕೋಟಿ ರೂ.ಗಳ ಪ್ರಸ್ತಾವನೆಯನ್ನು ಸಹ ಶಿಕ್ಷಣ ಇಲಾಖೆಯು ಸಲ್ಲಿಸಿತ್ತು. ಆದರೆ, ಆರ್ಥಿಕ ಕಾರಣದ ನೆಪವೊಡ್ಡಿ ಅನುದಾನ ನೀಡಿರಲಿಲ್ಲ. ಈ ವರ್ಷ ಯೋಜನೆಗೆ ಸರಕಾರ ಬಜೆಟ್‌ನಲ್ಲಿ ಅನುದಾನ ಹಂಚಿಕೆ ಮಾಡುವ ನಿರೀಕ್ಷೆಯಿದೆ.

ಕೊರೊನಾದಿಂದಾಗಿ ರಾಜ್ಯ ಸರಕಾರ ಕಳೆದೆರಡು ವರ್ಷಗಳಿಂದ ಆರ್ಥಿಕ ಸಂಕಷ್ಟ ಎದುರಿಸುತ್ತಿದ್ದು, ಸಾಕಷ್ಟು ಯೋಜನೆಗಳಿಗೆ ಅನುದಾನ ಕಡಿತ ಮಾಡಿತ್ತು. ಅದೇ ರೀತಿ ಸೈಕಲ್‌, ಶೂ-ಸಾಕ್ಸ್‌ ನೀಡುವ ಯೋಜನೆಗೂ ಅನುದಾನ ನೀಡಿರಲಿಲ್ಲ. ಸಮವಸ್ತ್ರ, ಪಠ್ಯಪುಸ್ತಕಕ್ಕೆ ಮಾತ್ರ ಗಮನ ನೀಡಿತ್ತು.

ಯೋಜನೆ ಹಿನ್ನೆಲೆ

2006-07ನೇ ಸಾಲಿನಲ್ಲಿ ಅಂದಿನ ಜೆಡಿಎಸ್‌-ಬಿಜೆಪಿ ಸಮ್ಮಿಶ್ರ ಸರಕಾರ ಸೈಕಲ್‌ ವಿತರಿಸುವ ಯೋಜನೆ ಪ್ರಾರಂಭಿಸಿತು. ಶಾಲೆ ಬಿಟ್ಟ ಹೆಣ್ಣು ಮಕ್ಕಳನ್ನು ಮತ್ತೆ ಶಾಲೆಗೆ ಕರೆತರುವ ಉದ್ದೇಶದಿಂದ 8ನೇ ತರಗತಿಯಲ್ಲಿ ಓದುತ್ತಿರುವ ವಿದ್ಯಾರ್ಥಿನಿಯರಿಗೆ ಸೈಕಲ್‌ ನೀಡಲು ಮುಂದಾಯಿತು. ಈ ಯೋಜನೆ ಹೆಚ್ಚು ಪ್ರಚಾರ ಪಡೆದ ಹಿನ್ನೆಲೆಯಲ್ಲಿ ಪಾಲಕರು ಬಾಲಕರಿಗೂ ವಿಸ್ತರಿಸುವಂತೆ ಬೇಡಿಕೆ ಮುಂದಿಟ್ಟರು. ಆನಂತರದಲ್ಲಿ ಸರಕಾರ ಪ್ರೌಢಶಾಲೆಗೆ ಸೇರುವ ಬಾಲಕ ಮತ್ತು ಬಾಲಕಿಯರಿಗೆ ಸೈಕಲ್‌ ವಿತರಿಸಲು ಮುಂದಾಯಿತು. ಮಹಾನಗರ ಪಾಲಿಕೆಗೆ ಸೇರಿದ ಹಾಗೂ ಬಸ್‌ಗಳ ಸಂಖ್ಯೆ ಹೆಚ್ಚಿರುವ ನಗರಗಳಲ್ಲಿ ಓದುತ್ತಿರುವ ಮಕ್ಕಳಿಗೆ ಯೋಜನೆ ಪ್ರಯೋಜನ ದೊರೆಯುವುದಿಲ್ಲ. 2015-16ನೇ ಶೈಕ್ಷಣಿಕ ವರ್ಷದಲ್ಲಿ ಶೂ ಮತ್ತು ಸಾಕ್ಸ್‌ ವಿತರಿಸುವ ಯೋಜನೆ ಆರಂಭವಾಗಿತ್ತು. ಕೊರೊನಾದಿಂದಾಗಿ ಶಾಲೆಗಳೇ ಸರಿಯಾಗಿ ನಡೆಯದೇ ಇದ್ದುದರಿಂದ ಈ ಯೋಜನೆಯನ್ನು ಕೂಡ ಮೊಟಕುಗೊಳಿಸಿತು.

ಮೊಟ್ಟೆಗೂ ಅನುದಾನ ನೀಡಿ

ಸರಕಾರಿ ಶಾಲಾ ಮಕ್ಕಳಲ್ಲಿನ ಪೌಷ್ಟಿಕಾಂಶ ಗುಣಮಟ್ಟ ಹೆಚ್ಚಿಸುವ ಉದ್ದೇಶದಿಂದ ಜಾರಿಗೆ ತಂದ ವಾರದಲ್ಲಿ 2 ದಿನ ಮೊಟ್ಟೆ ಯೋಜನೆಯನ್ನು 5 ದಿನಕ್ಕೆ ವಿಸ್ತರಣೆ ಮಾಡುವ ಉದ್ದೇಶದಿಂದ ಅನುದಾನ ಕೋರಿ ಶಿಕ್ಷಣ ಇಲಾಖೆ ಸರಕಾರಕ್ಕೆ ಪ್ರಸ್ತಾವನೆ ಸಲ್ಲಿಸಿದೆ.

ಗ್ರಾಮೀಣ ಪ್ರದೇಶದಲ್ಲಿ ಶಾಲೆಗಳಿಗೆ ತೆರಳಲು ಸೈಕಲ್‌ ಹೆಚ್ಚು ಅನುಕೂಲಕರ. ಪ್ರೌಢಶಾಲೆ ಐದಾರು ಕಿ. ಮೀ. ದೂರವಿದ್ದರೆ ಮಕ್ಕಳು ಶಾಲೆಗೆ ಹೋಗುವುದಿಲ್ಲ. ಹಾಗಾಗಿ ಸರಕಾರ ನಮಗೆ ಸೈಕಲ್‌ ನೀಡಬೇಕು ಎಂದು ಬೆಂಗಳೂರಿನ ಪ್ರೌಢಶಾಲೆ ವಿದ್ಯಾರ್ಥಿ ಪ್ರಸಾದ್‌ ಬಾಬು ಆಗ್ರಹಿಸಿದ್ದಾರೆ.

You May Also Like

More From Author

+ There are no comments

Add yours