Belagavi Politics: ‘ಅಂಗಡಿ’ ಫ್ಯಾಮಿಲಿಯ 20 ವರ್ಷಗಳ ಪಾರುಪತ್ಯ ಅಂತ್ಯ, ಈ ಬಾರಿ ಬೆಳಗಾವಿ ಟಿಕೆಟ್ ಮಿಸ್ ಆಗೋದು ಖಚಿತ!

1 min read

ಬೆಳಗಾವಿ: ಮುಂಬರುವ ಲೋಕಸಭಾ ಚುನಾವಣೆಗೆ (Lok Sabha Election 2024) ಕೌಂಟ್‌ಡೌನ್ ಶುರುವಾಗಿದೆ. ಈಗಾಗಲೇ ಎಲ್ಲಾ ಪಕ್ಷಗಳು ಅಭ್ಯರ್ಥಿಗಳ ಪಟ್ಟಿಯನ್ನು ಬಿಡುಗಡೆ ಮಾಡುತ್ತಿದೆ. ಈತನ್ಮಧ್ಯೆ ಬೆಳಗಾವಿ ಲೋಕಸಭಾ ಟಿಕೆಟ್ (Belgaum Lok Sabha Constituency) ಕೂಡ ಭಾರೀ ಚರ್ಚೆಗೆ ಗ್ರಾಸವಾಗಿದೆ. ಯಾಕೆಂದರೆ ಕಳೆದ ಇಪ್ಪತ್ತು ವರ್ಷಗಳಿಂದ ಬೆಳಗಾವಿ ಲೋಕಸಭಾ ಕ್ಷೇತ್ರದಲ್ಲಿ ಅಂಗಡಿ ಕುಟುಂಬ ಪಾರುಪತ್ಯ ನಡೆಸಿತ್ತು. ಆದರೆ ಇದೇ ಮೊದಲ ಬಾರಿಗೆ ಟಿಕೆಟ್ ಅಂಗಡಿ ಕುಟುಂಬದಿಂದ ಕೈತಪ್ಪುವ ಸಾಧ್ಯತೆ ಇದೆ.

ಹೌದು.. ಈ ಬಾರಿ ಬೆಳಗಾವಿ ಲೋಕಸಭೆ ಬಿಜೆಪಿ ಟಿಕೆಟ್ ಯಾರಿಗೆ ಎಂಬ ಕುತೂಹಲ ಹೆಚ್ಚಿದ್ದು, ಈ ಬಾರಿ ಮಂಗಳಾ‌ ಅಂಗಡಿಗೆ ಟಿಕೆಟ್ ‌ಮಿಸ್ ಆಗುವುದು ಬಹುತೇಕ ‌ಖಚಿತ ಎಂದು ಹೇಳಲಾಗ್ತಿದೆ. ಬೆಳಗಾವಿ ಲೋಕಸಭೆ ಕ್ಷೇತ್ರದಲ್ಲಿ ಅಂಗಡಿ ಕುಟುಂಬದ 20 ವರ್ಷಗಳ ‌ಪಾರುಪತ್ಯ ಈ ಬಾರಿ ಅಂತ್ಯವಾಗುವ ಎಲ್ಲ ಲಕ್ಷಣಗಳು ಕಾಣುತ್ತಿದ್ದು, ಈ ಕಾರಣಕ್ಕೆ ಬೆಳಗಾವಿ ಕ್ಷೇತ್ರದ ಮೇಲೆ ನೆರೆಯ ಜಿಲ್ಲೆಗಳ ಪ್ರಭಾವಿ ನಾಯಕರು ಕಣ್ಣು ಹಾಕಿದ್ದಾರೆ.

ಸದ್ಯ ಬೆಳಗಾವಿ ಲೋಕಸಭಾ ಕ್ಷೇತ್ರದ ಮೇಲೆ ಮಾಜಿ ಸಿಎಂ ಜಗದೀಶ್ ಶೆಟ್ಟರ್, ಮಾಜಿ ಸಚಿವ ಮುರಗೇಶ್ ನಿರಾಣಿ, ರಮೇಶ‌ ಕತ್ತಿ ಕಣ್ಣು ಹಾಕಿದ್ದಾರೆ. ತನಗೆ ಟಿಕೆಟ್ ಕೊಡಲೇಬೇಕೆಂದು ಪ್ರತಿಯೊಬ್ಬರೂ ಹಠ ಹಿಡಿದಿದ್ದಾರೆ. ಆದರೆ ಶೆಟ್ಟರ್ ಕಡೆಗೆ ಅದೃಷ್ಟ ಹೆಚ್ಚು ವಾಲಿದ್ದು, ಹಾಲಿ ಸಂಸದೆ ಮಂಗಳಾ ಅಂಗಡಿ ಬದಲಿಗೆ ಜಗದೀಶ್ ಶೆಟ್ಟರ್‌ಗೆ ಬಿಜೆಪಿ ‌ಟಿಕೆಟ್ ಸಿಗುವ ಸಾಧ್ಯತೆ ದಟ್ಟವಾಗಿದೆ.

ಮಾಜಿ ಸಿಎಂ ಜಗದೀಶ್ ಶೆಟ್ಟರ್ ಧಾರವಾಡ ಲೋಕಸಭಾ ಕ್ಷೇತ್ರ ಅಥವಾ ಹಾವೇರಿ ಲೋಕಸಭಾ ಕ್ಷೇತ್ರದಿಂದ ಟಿಕೆಟ್ ಬಯಸಿದ್ದರು. ಆದರೆ ಆ ಎರಡೂ ಕ್ಷೇತ್ರಗಳಿಗೆ ಬೇರೆ ಅಭ್ಯರ್ಥಿಗಳನ್ನು ಆಯ್ಕೆ ಮಾಡಿದ್ದರಿಂದ ಅನಿವಾರ್ಯವಾಗಿ ಜಗದೀಶ್ ಶೆಟ್ಟರ್ ಬೆಳಗಾವಿ ಮೇಲೆ ಕಣ್ಣು ಹಾಕಿದ್ದಾರೆ. ಧಾರವಾಡ ಟಿಕೆಟ್ ತಪ್ಪುತ್ತಿದ್ದಂತೆ ಈಗಾಗಲೇ ಶೆಟ್ಟರ್ ಬಿಎಸ್ ಯಡಿಯೂರಪ್ಪರನ್ನು ಭೇಟಿಯಾಗಿ ಮಾತುಕತೆ ನಡೆಸಿದ್ದು, ಬೆಳಗಾವಿ ಟಿಕೆಟ್‌ಗೆ ಹಠ ಹಿಡಿದಿದ್ದಾರೆ ಎನ್ನಲಾಗಿದೆ.

ಮತ್ತೊಂದೆಡೆ ಬೆಳಗಾವಿ ಲೋಕಸಭಾ ಕ್ಷೇತ್ರದಲ್ಲಿ ಪಂಚಮಸಾಲಿ ‌ಕೋಟಾದಡಿ ಮುರಗೇಶ್ ನಿರಾಣಿ ಕೂಡ ‌ಬಿಜೆಪಿ ಟಿಕೆಟ್ ‌ಕೇಳಿದ್ದು, ಬೆಳಗಾವಿಯಲ್ಲಿ ಚುನಾವಣೆಗೆ ನಿಲ್ಲಲು ಅವಕಾಶ ನೀಡುವಂತೆ ಕೇಳಿದ್ದಾರೆ. ಇನ್ನೊಂದೆಡೆ ಈ ಎಲ್ಲಾ ಬೆಳವಣಿಗೆಗಳ ಮಧ್ಯೆ ಬಿಜೆಪಿಗೆ ಮರಳಿ ಸೇರ್ಪಡೆಯಾದ ಮಾಜಿ ಶಾಸಕ ಡಾ. ವಿಶ್ವನಾಥ ಪಾಟೀಲ್ ಕೂಡ ಟಿಕೆಟ್ ಆಕಾಂಕ್ಷಿಯಾಗಿದ್ದು, ಕಳೆದ ವಿಧಾನಸಭೆ ಚುನಾವಣೆಯಲ್ಲಿ ಪಕ್ಷೇರರಾಗಿ ಬೈಲಹೊಂಗಲ ಕ್ಷೇತ್ರದಿಂದ ಸ್ಪರ್ಧೆ ಮಾಡಿದ್ದ ಅವರು ಬೆಳಗಾವಿಯಿಂದ ಟಿಕೆಟ್ ಬಯಸಿದ್ದಾರೆ.ವಿಜಯೇಂದ್ರ ನೇತೃತ್ವದಲ್ಲಿ ಇತ್ತೀಚೆಗೆ ವಿಶ್ವನಾಥ ಪಾಟೀಲ್ ಬಿಜೆಪಿ ಸೇರ್ಪಡೆಯಾಗಿದ್ದು. ಪಂಚಮಸಾಲಿ ‌ಸಮುದಾಯಕ್ಕೆ ಸೇರಿರುವ ಡಾ. ವಿಶ್ವನಾಥ ಪಾಟೀಲ ಬಿಎಸ್‌ವೈ ಆಪ್ತರೂ ಹೌದು. ಹೀಗಾಗಿ ಪಂಚಮಸಾಲಿ ಕೋಟಾದಡಿ ವಿಶ್ವನಾಥ ಪಾಟೀಲ್ ಹೆಸರು ಪ್ರಸ್ತಾಪ‌ವಾಗಿದೆ.

You May Also Like

More From Author

+ There are no comments

Add yours