Lok Sabha Elections : ದೇವೇಗೌಡರ ಕುಟುಂಬದಿಂದ ಮತ್ತೆ ಮೂವರು ಕಣಕ್ಕೆ; 2019ರ ರಿಸಲ್ಟ್‌ ರಿಪೀಟ್‌ ಆಗುತ್ತಾ? ಸೋಲಿನ ಕಹಿ ಮರೆಸುತ್ತಾ?

0 min read

ಹೈಲೈಟ್ಸ್‌:

  • ಎಚ್‌ಡಿ ದೇವೇಗೌಡ ಅವರ ಕುಟುಂಬದಿಂದ ಮತ್ತೆ ಮೂವರು ಕಣಕ್ಕೆ
  • 2019ರ ಲೋಕಸಭಾ ಚುನಾವಣೆ ರಿಸಲ್ಟ್‌ ಈ ಬಾರಿಯೂ ರಿಪೀಟ್‌ ಆಗುತ್ತಾ?
  • ಅಥವಾ ಮೂವರು ಗೆದ್ದು ಕಳೆದ ಬಾರಿಯ ಸೋಲಿನ ಕಹಿ ಮರೆಸುತ್ತಾ?

ಬೆಂಗಳೂರು : ಮಾಜಿ ಪ್ರಧಾನಿ ಎಚ್‌ಡಿ ದೇವೇಗೌಡ ಅವರು ಕರ್ನಾಟಕದ ಪ್ರಮುಖ ರಾಜಕೀಯ ನಾಯಕರೊಬ್ಬರಲ್ಲಿ ಒಬ್ಬರು. ಅವರ ಕುಟುಂಬದವರು ಕಣದಲ್ಲಿ ಇಲ್ಲದೇ ಕರ್ನಾಟಕದ ಬಹುತೇಕ ಚುನಾವಣೆಗಳೇ ನಡೆದಿಲ್ಲ. ಈ ಬಾರಿಯ ಲೋಕಸಭಾ ಚುನಾವಣೆಯಲ್ಲಿಯೂ ಎಚ್‌ಡಿ ದೇವೇಗೌಡರ ಕುಟುಂಬದಿಂದ ಮೂವರು ಕಣದಲ್ಲಿದ್ದು, ಅದೃಷ್ಟ ಪರೀಕ್ಷೆಗೆ ಇಳಿದಿದ್ದಾರೆ. ಮೂವರ ಪೈಕಿ ಒಬ್ಬರು ರಾಜಕಾರಣಕ್ಕೆ ಹೊಸಬರು ಬೇರೆ, ಅವರ ಸ್ಪರ್ಧೆ ಈ ಸಲ ಕುತೂಹಲ ಕೆರಳಿಸಿದೆ.

ಕಳೆದ ಬಾರಿಯೂ ಎಂಪಿ ಚುನಾವಣೆಗೆ ದೊಡ್ಡಗೌಡರ ಕುಟುಂಬದಿಂದ ಮೂವರು ಸ್ಪರ್ಧಿಸಿದ್ದರು. ಆಗ ಎರಡು ಹೊಸ ಮುಖಗಳು ಎಚ್‌ಡಿಡಿ ಕುಟುಂಬದಿಂದ ಕಣದಲ್ಲಿದ್ದವು. 2019ರಲ್ಲಿ ತುಮಕೂರು ಲೋಕಸಭಾ ಕ್ಷೇತ್ರದಿಂದ ಮಾಜಿ ಪ್ರಧಾನಿ ಎಚ್‌ಡಿ ದೇವೇಗೌಡ, ಮಂಡ್ಯ ಲೋಕಸಭಾ ಕ್ಷೇತ್ರದಿಂದ ನಿಖಿಲ್‌ ಕುಮಾರಸ್ವಾಮಿ, ಹಾಸನ ಲೋಕಸಭಾ ಕ್ಷೇತ್ರದಿಂದ ಪ್ರಜ್ವಲ್‌ ರೇವಣ್ಣ ಸ್ಪರ್ಧಿಸಿದ್ದರು.

ಆ ಚುನಾವಣೆಯಲ್ಲಿ ಸ್ವತಃ ಎಚ್‌ಡಿ ದೇವೇಗೌಡ ಅವರೇ ತುಮಕೂರಿನಲ್ಲಿ ಸೋಲು ಅನುಭವಿಸಿದ್ದರು, ಇತ್ತ ನಿಖಿಲ್‌ ಕುಮಾರಸ್ವಾಮಿ ಪಕ್ಷೇತರ ಅಭ್ಯರ್ಥಿ ಸುಮಲತಾ ಅಂಬರೀಶ್‌ ವಿರುದ್ಧ ಮಂಡ್ಯದಲ್ಲಿ ಸೋಲು ಕಂಡಿದ್ದರು. ಗೆದ್ದಿದ್ದು ಪ್ರಜ್ವಲ್‌ ರೇವಣ್ಣ ಮಾತ್ರ. 9 ಕ್ಷೇತ್ರದಲ್ಲಿ ಸ್ಪರ್ಧಿಸಿದ್ದ ಜೆಡಿಎಸ್‌ ಹಾಸನದಲ್ಲಿ ಮಾತ್ರ ಗೆಲುವು ಸಾಧಿಸಿತ್ತು. ದೇವೇಗೌಡರ ಕುಟುಂಬದ ಇಬ್ಬರು ಸೋಲು ಕಂಡಿದ್ದರು.

ಇನ್ನು, ಈ ಬಾರಿ ಬೆಂಗಳೂರು ಗ್ರಾಮಾಂತರ ಲೋಕಸಭಾ ಕ್ಷೇತ್ರದಿಂದ ಎಚ್‌ಡಿ ದೇವೇಗೌಡರ ಅಳಿಯ ಡಾ ಸಿಎನ್‌ ಮಂಜುನಾಥ್‌ ಸ್ಪರ್ಧಿಸಿದ್ದಾರೆ. ಇವರು ರಾಜಕೀಯಕ್ಕೆ ಹೊಸಬರಾಗಿದ್ದು ಜೆಡಿಎಸ್‌ ಬಿಟ್ಟು, ಬಿಜೆಪಿಯಿಂದ ಸ್ಪರ್ಧಿಸಿದ್ದಾರೆ. ಇತ್ತ ಕಳೆದ ಬಾರಿ ಪುತ್ರ ಸೋಲು ಅನುಭವಿಸಿದ್ದ ಮಂಡ್ಯದಲ್ಲಿ ಮಾಜಿ ಸಿಎಂ ಎಚ್‌ಡಿ ಕುಮಾರಸ್ವಾಮಿ ಈ ಬಾರಿ ಸ್ಪರ್ಧಿಸುತ್ತಿದ್ದು, ಗೆಲುವಿನ ಹುಡುಕಾಟದಲ್ಲಿದ್ದಾರೆ. ಹಾಸನದಲ್ಲಿ ಹಾಲಿ ಸಂಸದ ಪ್ರಜ್ವಲ್‌ ರೇವಣ್ಣ ಮತ್ತೆ ಜೆಡಿಎಸ್‌ ಅಭ್ಯರ್ಥಿಯಾಗಿ ಕಣಕ್ಕಿಳಿದಿದ್ದಾರೆ.

ಕಳೆದ ಬಾರಿ ಎಚ್‌ಡಿ ದೇವೇಗೌಡ ಅವರ ಕುಟುಂಬದಿಂದ ಸ್ಪರ್ಧಿಸಿದ್ದ ಮೂವರಲ್ಲಿ ಒಬ್ಬರು ಮಾತ್ರ ಗೆದ್ದಿದ್ದರು. ಈ ಬಾರಿ ಮತ್ತೆ ಎಚ್‌ಡಿಕೆ ಕುಟುಂಬದಿಂದ ಮೂವರು ಸ್ಪರ್ಧಿಸಿದ್ದು, ಎಷ್ಟು ಜನ ಗೆಲ್ಲುತ್ತಾರೆ ಎಂಬುದು ಕುತೂಹಲ ಕೆರಳಿಸಿದೆ. 2019ರ ಫಲಿತಾಂಶ ಮರುಕಳಿಸುತ್ತಾ ಅಥವಾ ಈ ಬಾರಿ ಕಳೆದ ಬಾರಿನ ಸೋಲಿನ ಕಹಿಯನ್ನು ಮರೆಸುತ್ತಾರಾ ಎಂಬುದು ಈಗಿನ ಪ್ರಶ್ನೆ.

ಕಳೆದ ಬಾರಿ ಮಂಡ್ಯ ಕದನ, ಈ ಬಾರಿ ಬೆಂ. ಗ್ರಾಮಾಂತರ ಸಮರ!

ಕಳೆದ ಬಾರಿ ರಾಜ್ಯದ ಜನರನ್ನು ಮಂಡ್ಯ ಲೋಕಸಭಾ ಕ್ಷೇತ್ರ ಗಮನ ಸೆಳೆದಿತ್ತು. ಸುಮಲತಾ ಅಂಬರೀಶ್‌ ವಿರುದ್ಧ ನಿಖಿಲ್‌ ಕುಮಾರಸ್ವಾಮಿ ಸ್ಪರ್ಧಿಸಿದ್ದರಿಂದ ಮಂಡ್ಯ ಇಂಡಿಯಾದಲ್ಲೇ ಸದ್ದು ಮಾಡಿತ್ತು. ಅದೇ ರೀತಿ ಈ ಬಾರಿ ಬೆಂಗಳೂರು ಗ್ರಾಮಾಂತರ ಗಮನ ಸೆಳೆಯುತ್ತಿದೆ. ಹಾಲಿ ಸಂಸದ ಡಿಕೆ ಸುರೇಶ್‌ ಅವರ ಎದುರು ಡಾ ಸಿಎನ್‌ ಮಂಜುನಾಥ್‌ ಸ್ಪರ್ಧಿಸಿರುವುದರಿಂದ ಜಿದ್ದಾಜಿದ್ದಿನ ಕಣ ಸೃಷ್ಟಿಯಾಗಿದೆ. ಡಿಕೆ ಸುರೇಶ್‌ ಅವರನ್ನು ಸೋಲಿಸಲು ಮೈತ್ರಿ ನಾಯಕರು ಪಣತೊಟ್ಟಿದ್ದು, ಫಲಿತಾಂಶ ಏನಾಗಲಿದೆ ಎಂಬುದು ಸದ್ಯದ ಪ್ರಶ್ನೆ.

You May Also Like

More From Author

+ There are no comments

Add yours