ಹೈಲೈಟ್ಸ್:
- ದಿಲ್ಲಿ ಮದ್ಯ ನೀತಿ ಪ್ರಕರಣದಲ್ಲಿ ಬಂಧನವನ್ನು ಪ್ರಶ್ನಿಸಿ ಅರವಿಂದ ಕೇಜ್ರಿವಾಲ್ ಸಲ್ಲಿಸಿದ್ದ ಅರ್ಜಿಯನ್ನು ತಿರಸ್ಕರಿಸಿದ್ದ ದಿಲ್ಲಿ ಹೈಕೋರ್ಟ್
- ಇದಾದ ಒಂದು ದಿನದ ಬಳಿಕ ಅವರು ಸುಪ್ರೀಂ ಕೋರ್ಟ್ ಮೆಟ್ಟಿಲೇರಲು ಮುಂದಾಗಿದ್ದಾರೆ ದಿಲ್ಲಿ ಸಿಎಂ ಕೇಜ್ರಿವಾಲ್
- ಬೆಳಿಗ್ಗೆ 10.30 ರ ಸುಮಾರಿಗೆ ಸಿಜೆಐ ಡಿವೈ ಚಂದ್ರಚೂಡ್ ಅವರ ಮುಂದೆ ಈ ವಿಷಯವನ್ನು ಪ್ರಸ್ತಾಪಿಸಲಿದ್ದಾರೆ ಕೇಜ್ರಿ ವಕೀಲರು
ದಿಲ್ಲಿ ಮದ್ಯ ನೀತಿ ಪ್ರಕರಣದಲ್ಲಿ ಬಂಧನವನ್ನು ಪ್ರಶ್ನಿಸಿ ಸಿಎಂ ಅರವಿಂದ ಕೇಜ್ರಿವಾಲ್ ಸಲ್ಲಿಸಿದ್ದ ಅರ್ಜಿಯನ್ನು ದಿಲ್ಲಿ ಹೈಕೋರ್ಟ್ ಮಂಗಳವಾರ ವಜಾಗೊಳಿಸಿದೆ. ಇದಾದ ಒಂದು ದಿನದ ಬಳಿಕ ಅವರು ಸುಪ್ರೀಂ ಕೋರ್ಟ್ ಮೆಟ್ಟಿಲೇರಲು ಮುಂದಾಗಿದ್ದಾರೆ.
ಆಮ್ ಆದ್ಮಿ ಪಕ್ಷದ (ಎಎಪಿ) ನಾಯಕರ ವಕೀಲರು ಬೆಳಿಗ್ಗೆ 10.30 ರ ಸುಮಾರಿಗೆ ಭಾರತದ ಮುಖ್ಯ ನ್ಯಾಯಮೂರ್ತಿ ಡಿವೈ ಚಂದ್ರಚೂಡ್ ಅವರ ಮುಂದೆ ಈ ವಿಷಯವನ್ನು ಪ್ರಸ್ತಾಪಿಸಿ ತುರ್ತು ವಿಚಾರಣೆಗೆ ಕೋರಲಿದ್ದಾರೆ.ಮಾರ್ಚ್ 21 ರಂದು ಜಾರಿ ನಿರ್ದೇಶನಾಲಯ (ಇಡಿ) ಯಿಂದ ಬಂಧನಕ್ಕೊಳಗಾಗಿದ್ದ ಕೇಜ್ರಿವಾಲ್ ಅವರು ಸಲ್ಲಿಸಿದ್ದ ಅರ್ಜಿಯನ್ನು ಹೈಕೋರ್ಟ್ ಮಂಗಳವಾರ ವಜಾಗೊಳಿಸಿತ್ತು. ಅಕ್ರಮ ಹಣ ವರ್ಗಾವಣೆ ಪ್ರಕರಣದಲ್ಲಿ ದಿಲ್ಲಿ ಸಿಎಂ ಅನೇಕ ಸಮನ್ಸ್ಗಳನ್ನು ತಪ್ಪಿಸಿದ ನಂತರ ಕೇಂದ್ರ ಏಜೆನ್ಸಿಗೆ ಕಡಿಮೆ ಆಯ್ಕೆಗಳು ಉಳಿದಿದ್ದವು ಎಂದು ನ್ಯಾಯಾಲಯ ಅಭಿಪ್ರಾಯಪಟ್ಟಿತ್ತು. ಕೇಜ್ರಿವಾಲ್ ಅವರು ಆಪಾದಿತ ಆದಾಯದ ಬಳಕೆ ಮತ್ತು ಮರೆಮಾಚುವಿಕೆಯಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡಿದ್ದಾರೆ ಎಂದು ಇ.ಡಿ ಆಪಾದಿಸಿದೆ.
ಸಾಮಾನ್ಯ ವ್ಯಕ್ತಿ ಮತ್ತು ಮುಖ್ಯಮಂತ್ರಿಯನ್ನು ಪ್ರಶ್ನಿಸಲು ತನಿಖಾ ಸಂಸ್ಥೆಗೆ ಪ್ರತ್ಯೇಕ ಪ್ರೋಟೋಕಾಲ್ ಇಲ್ಲ ಎಂದೂ ನ್ಯಾಯಾಲಯ ಈ ಸಂದರ್ಭದಲ್ಲಿ ಒತ್ತಿ ಹೇಳಿತ್ತು.
“ಇದಲ್ಲದೆ, ಈ ನ್ಯಾಯಾಲಯವು ಎರಡು ಭಿನ್ನ ಕಾನೂನುಗಳನ್ನು ಹೊಂದಿಲ್ಲ. ಸಾಮಾನ್ಯ ನಾಗರಿಕರಿಗೆ ಮತ್ತು ಮುಖ್ಯಮಂತ್ರಿ ಅಥವಾ ಅಧಿಕಾರದಲ್ಲಿರುವ ಯಾವುದೇ ವ್ಯಕ್ತಿಗೆ ತನಿಖಾ ಸಂಸ್ಥೆಯಿಂದ ವಿಶೇಷ ಸವಲತ್ತುಗಳಿಲ್ಲ. ಸಾರ್ವಜನಿಕ ಹುದ್ದೆಯಲ್ಲಿರುವ, ಅಧಿಕಾರದಲ್ಲಿರುವ ಕಾರಣಕ್ಕೆ ವಿಶೇಷ ರಿಯಾಯಿತಿಗಳಿಲ್ಲ. ಸಾರ್ವಜನಿಕರ ಮತಗಳಿಂದಾಗಿ ಆ ವ್ಯಕ್ತಿಯು ಆ ಸಾರ್ವಜನಿಕ ಕಚೇರಿಯನ್ನು ಅನುಭವಿಸುತ್ತಿದ್ದಾನೆ,” ಎಂದು ಸ್ವರಣಾ ಕಾಂತ ಶರ್ಮಾ ತಮ್ಮ ಆದೇಶದಲ್ಲಿ ತಿಳಿಸಿದ್ದರು.
ಒಂದು ರೂಪಾಯಿಯೂ ಸಿಕ್ಕಿಲ್ಲ
ಹೈಕೋರ್ಟ್ ತೀರ್ಪಿಗೆ ಪ್ರತಿಕ್ರಿಯಿಸಿರುವ ಎಎಪಿ ನಾಯಕ ಮತ್ತು ದೆಹಲಿ ಸಚಿವ ಸೌರಭ್ ಭಾರದ್ವಜ್, ದಿಲ್ಲಿ ಮದ್ಯ ನೀತಿ ಪ್ರಕರಣಕ್ಕೆ ಸಂಬಂಧಿಸಿದಂತೆ ಶೋಧದ ವೇಳೆ ಇ.ಡಿ ಮತ್ತು ಸಿಬಿಐಗೆ ಒಂದು ರೂಪಾಯಿ ಕೂಡ ಸಿಕ್ಕಿಲ್ಲ. ಆದರೆ ಅವರು ಕೋಟಿಗಟ್ಟಲೆ ಹಣದ ಬಗ್ಗೆ ಮಾತನಾಡುತ್ತಿದ್ದಾರೆ. ಒಂದೇ ಒಂದು ರೂಪಾಯಿ ಅಕ್ರಮ ಹಣವೂ ಅವರಿಗೆ ಸಿಕ್ಕಿಲ್ಲ. ಸಾಕ್ಷಿಗಳ ಹೇಳಿಕೆಗಳನ್ನು ಬದಲಿಸಿ, ಇ.ಡಿಯು ತನಗೆ ಬೇಕಾದಂತೆ ಹೇಳಿಕೆ ನೀಡಲು ಒತ್ತಡ ಹೇರಿದೆ. “ಇದು ಅಕ್ರಮ ಹಣ ವರ್ಗಾವಣೆ ಅಲ್ಲ. ಇದು ಭಾರತದ ಇತಿಹಾಸದಲ್ಲಿ ಅತಿದೊಡ್ಡ ರಾಜಕೀಯ ಪಿತೂರಿಯಾಗಿದೆ,” ಎಂದು ಅವರು ಆರೋಪಿಸಿದ್ದಾರೆ.
ಇದೇ ಆಧಾರದ ಮೇಲೆ ಎಎಪಿ ಸಂಸದ ಸಂಜಯ್ ಸಿಂಗ್ ಅವರಿಗೆ ಹೈಕೋರ್ಟ್ ಜಾಮೀನು ನಿರಾಕರಿಸಿತ್ತು. ಆದರೆ ಸುಪ್ರೀಂ ಕೋರ್ಟ್ ಅವರಿಗೆ ಜಾಮೀನು ನೀಡಿದೆ ಎಂದು ಭಾರದ್ವಾಜ್ ಹೇಳಿದ್ದು, ಅರವಿಂದ್ ಕೇಜ್ರಿವಾಲ್ ಅವರಿಗೂ ಸುಪ್ರೀಂ ಕೋರ್ಟ್ನಿಂದ ನ್ಯಾಯ ಸಿಗುವ ವಿಶ್ವಾಸವಿದೆ ಎಂದಿದ್ದಾರೆ.
ಇದೀಗ ಬಂಧನಕ್ಕೆ ಒಳಗಾಗಿ ಹದಿನೆಂಟು ದಿನಗಳು ಕಳೆದಿದ್ದು, ನ್ಯಾಯಾಲಯದಲ್ಲಿ ಹಿನ್ನಡೆ ಅನುಭವಿಸಿದ ನಂತರ ಕೇಜ್ರಿವಾಲ್ ಜಾಮೀನು ಕೋರಿ ಸುಪ್ರೀಂ ಕೋರ್ಟ್ಗೆ ಮರಳಿದ್ದಾರೆ.
+ There are no comments
Add yours