ಬೆರಣಿ ಮಾರಿ 10 ತೊಲ ಚಿನ್ನ ಖರೀದಿಸಿದ ವಿಜಯಪುರದ ನಾರಿ!

1 min read

ಹೈಲೈಟ್ಸ್‌:

  • ಮುದ್ದೇಬಿಹಾಳ ಅರೇಮುರಾಳ ಗ್ರಾಮದಲ್ಲಿ ಬೆರಣಿ, ಗೋ ಮೂತ್ರ ಮಾರಾಟ
  • ನಿತ್ಯ 50-100 ಕುಳ್ಳು ತಟ್ಟುತ್ತಾರೆ ಈ ಮಹಿಳೆ
  • ಹಾಲು, ಮೊಸರು ಉಚಿತ ಹಂಚಿಕೆ | ಅನಾಥ ಮಕ್ಕಳನ್ನು ಪ್ರವಾಸಕ್ಕೆ ಕಳಿಸುವುದು

ವಿಜಯಪುರ : ಸೆಗಣಿ ಎಂದಾಕ್ಷಣ ಮೂಗು ಮುರಿಯುವವರೇ ಹೆಚ್ಚು. ಆದರೆ ಆ ಸೆಗಣಿಯಿಂದ ಕುಳ್ಳು ತಯಾರಿಸಿ ಮತ್ತು ಗೋಮೂತ್ರ ಮಾರಿ ಮಹಿಳೆಯೊಬ್ಬರು ಬರೋಬ್ಬರಿ 10 ತೊಲ ಚಿನ್ನ ಖರೀದಿ ಮಾಡಿದ್ದಾರೆ!.

ಮುದ್ದೇಬಿಹಾಳ ತಾಲೂಕಿನ ಅರೇಮುರಾಳ ಗ್ರಾಮದ ಸಾವಿತ್ರಿ ರಮೇಶ ವಗ್ಗರ ಎಂಬ ಮಹಿಳೆ ಕಳೆದ ಐದು ವರ್ಷದಿಂದ ಕೋಣ, ಹೋರಿ, 5 ಆಕಳು ಹಾಗೂ 4 ಕರುಗಳನ್ನು ಸಾಕಿದ್ದಾರೆ. ಸದ್ಯ ಚಿನ್ನದ ಬೆಲೆ ಗಗನಕ್ಕೇರಿದ್ದು ಹಣವಂತ ಮಹಿಳೆಯರಿಗೂ ಇದರ ಖರೀದಿ, ಬಿಸಿ ತುಪ್ಪವಾಗಿ ಪರಿಣಮಿಸಿದೆ. ಆದರೆ ಇವರು ಆಕಳ ಸೆಗಣಿಯಿಂದ ಮಾಡಿದ ಕುಳ್ಳು (ಬೆರಣಿ) ಮತ್ತು ಗೋಮೂತ್ರ ಮಾರಾಟ ಮಾಡಿ ಚಿನ್ನ ಖರೀದಿಸುವ ಮೂಲಕ ಸುತ್ತಲಿನ ಜನ ಹುಬ್ಬೇರಿಸವಂತೆ ಮಾಡಿದ್ದಾರೆ.

ಆರಂಭಿಸಿದ್ದು ಹೇಗೆ?

5 ವರ್ಷದ ಹಿಂದೆ ಮುದ್ದೇಬಿಹಾಳ ಆಸ್ಪತ್ರೆಗೆ ಚಿಕಿತ್ಸೆಗೆ ಹೋದಾಗ ಅಲ್ಲಿ ಮಹಿಳೆಯೊಬ್ಬರು ಬಂದು ನನ್ನ ಮಗಳು ಹೆರಿಗೆಗೆ ಬಂದಿದ್ದಾಳೆ. ನಿಮ್ಮ ಹಳ್ಳಿಯಲ್ಲಿ ಕುಳ್ಳು ಕೊಡುವವರಿದ್ದರೆ ಹೇಳಿ ಎಂದು ಫೋನ್‌ ನಂಬರ್‌ ಕೊಟ್ಟಿದ್ದರಂತೆ ಅದನ್ನೇ ಸಾವಿತ್ರಿ ನಾನೇ ಆ ಕುಳ್ಳುಗಳನ್ನು ಮಾಡಿಕೊಟ್ಟರೆ ಹೇಗೆ ಎಂದು ಆಲೋಚಿಸಿ 100 ಕುಳ್ಳು ಮಾಡಿ ಕೊಟ್ಟಿದ್ದಾರೆ. ಅದಕ್ಕೆ ಅವರು 500 ರೂ ಕೊಟ್ಟಿದ್ದರಿಂದ ಖುಷಿಯಾಗಿ, ಅಲ್ಲಿಂದ ಇಲ್ಲಿಯವರೆಗೆ ಸಾವಿತ್ರಿ ಅವರು ಕುಳ್ಳು ಮಾರಾಟ ಮಾಡುವುದನ್ನು ಕಾಯಕವಾಗಿಸಿಕೊಂಡಿದ್ದಾರೆ.

5 ರೂ.,ಗೊಂದು ಕುಳ್ಳು:

ಸದ್ಯ ಇವರ ಕುಳ್ಳು ವಿಜಯಪುರ, ಬಾಗಲಕೋಟೆ ಜಿಲ್ಲೆಯಲ್ಲಿ ಪ್ರಸಿದ್ಧಿಯಾಗಿದೆ. ಬೇಸಿಗೆ ಮತ್ತು ಚಳಿಗಾಲದಲ್ಲಿ ನಿತ್ಯ 50-100 ಕುಳ್ಳು ತಟ್ಟುತ್ತಾರೆ. ಅವುಗಳನ್ನು ಚೆನ್ನಾಗಿ ಒಣಗಿಸಿ ರಟ್ಟಿನ ಬಾಕ್ಸ್‌ದಲ್ಲಿ ತುಂಬಿ ಬೆಚ್ಚಗಿನ ಜಾಗದಲ್ಲಿಡುತ್ತಾರೆ. ಗರ, ಗ್ರಾಮೀಣ ಪ್ರದೇಶದ ಜನರಿಗೆ ಒಂದು ಕುಳ್ಳಿಗೆ 5 ರೂ.ನಂತೆ ಮಾರಾಟ ಮಾಡುತ್ತಾರೆ. ಸದ್ಯ ಬೇಸಿಗೆ ಇರುವ ಕಾರಣ ಕುಳ್ಳುಗಳನ್ನು ಭರ್ಜರಿಯಾಗಿ ತಟ್ಟಿ ಒಣಗಿಸುತ್ತಿದ್ದಾರೆ. ವಿಶೇಷವಾಗಿ ಬಾಣಂತಿಯರಿಗೆ ಬೆಂಕಿ ಕಾಯಿಸಿಲು, ಚಕ್ಕಡಿ ಗಾಲಿ ಕಟ್ಟಲು ಕುಳ್ಳು ಬಳಕೆಯಾಗುತ್ತವೆ.

ಕೊಡ ಗೋ ಮೂತ್ರಕ್ಕೆ 300 ರೂ.!

ದಾಳಿಂಬೆ ಬೆಳೆಗಾರರು ಹಾಗೂ ಸಾವಯವ ಕೃಷಿ ಮಾಡುವ ರೈತರಿಗೆ ಗೋಮೂತ್ರ ಅವಶ್ಯವಾಗಿದ್ದು, ಒಂದು ಕೊಡ ಗೋಮೂತ್ರಕ್ಕೆ 300 ರೂ., ನಂತೆ 8 ದಿನಕ್ಕೊಮ್ಮೆ ಎರಡ್ಮೂರು ಕೊಡ ಗೋ ಮೂತ್ರ ಮಾರಾಟ ಮಾಡುತ್ತಾರೆ. ಇವರು ಹಾಲು ಮೊಸರನ್ನು ಮಾರಾಟ ಮಾಡಲ್ಲ. ಕೇಳಿದವರಿಗೆ ಉಚಿತವಾಗಿ ಕೊಡುತ್ತಾರೆ. ಪ್ರತಿ ವರ್ಷ ಸಂಕ್ರಮಣದಂದು ಸುಮಾರು 10-15 ಮಕ್ಕಳಿಗೆ ಪ್ರವಾಸಕ್ಕೆ ಕರೆದುಕೊಂಡು ಹೋಗುತ್ತಾರೆ. ಸಾಕಷ್ಟು ಮಹಿಳೆಯರಿಗೆ ಇವರ ಕಾರ್ಯ ಮಾದರಿಯಾಗಿದೆ.

ಆನ್‌ಲೈನ್‌ದಲ್ಲಿ ಮಾರುವ ಪ್ಲಾನ್‌:

‘ನಾನು ಶಾಲೆ ಕಲಿತಿಲ್ಲ. ನನ್ನ ಮಕ್ಕಳು ವಿದ್ಯಾವಂತರು. ಕೆಲವು ಸಲ ಅವರ ಶುಲ್ಕವನ್ನು ಇದರ ಹಣದಿಂದಲೇ ಕಟ್ಟಿರುವೆ. ನಾನು ಕುಳ್ಳು ಮಾರುವುದು ನಮ್ಮ ಸುತ್ತಲಿನ ಹಳ್ಳಿಗಳಿಗೆ ಗೊತ್ತಿದೆ. ಕೆಲವರು ಫೋನ್‌ ಮಾಡಿ ಬುಕ್‌ ಮಾಡುತ್ತಾರೆ. ಕೆಲವರು ತುರ್ತಾಗಿ ಬೇಕು ಎಂದು ಕೇಳುತ್ತಾರೆ. ನಮ್ಮ ಮನೆಯಲ್ಲಿ ವರ್ಷದ 12 ತಿಂಗಳು ಕುಳ್ಳು ಸ್ಟಾಕ್‌ ಇರುತ್ತವೆ. ನನ್ನ ಮಕ್ಕಳು ಆನ್‌ಲೈನ್‌ದಲ್ಲಿ ಮಾರಾಟ ಮಾಡುವ ಯೋಜನೆ ಮಾಡಿದ್ದಾರೆ ನೋಡಬೇಕು’ ಎನ್ನುತ್ತಾರೆ ಸಾವಿತ್ರಿ.

ಅವಳು ಶಾಲೆ ಕಲಿತಿಲ್ಲ ಆದರೆ ಬದುಕನ್ನು ಹೇಗೆ ರೂಪಿಸಿಕೊಳ್ಳಬೇಕು ಎಂಬ ಕೌಶಲ ಅವಳಲ್ಲಿದೆ. ಕೃಷಿ ಕಾರ್ಯದ ಜತೆಗೆ ಕುಳ್ಳು ಬಡಿಯುವುದು, ಆಕಳ ಮೂತ್ರ ಹಿಡಿಯುವುದು. ಕೌದಿ ಹೊಲಿಯುವುದು. ಸಂಘಗಳನ್ನು ನಡೆಸುತ್ತಾಳೆ. ಇಂದಿನ ಯುವಕರು ನೌಕರಿಗಾಗಿ ಅಲಿಯದೇ, ತಮ್ಮ ಊರಲ್ಲಿ ಸ್ವ ಉದ್ಯೋಗ ಮಾಡಬೇಕು.

You May Also Like

More From Author

+ There are no comments

Add yours