ಸದ್ಯದಲ್ಲೇ ಮತ್ತೊಂದು ಸಿ.ಡಿ ಫ್ಯಾಕ್ಟರಿ ಬಹಿರಂಗವಾಗಲಿದೆ : ಯತ್ನಾಳ್‌ ಬಾಂಬ್

1 min read

ಬಿಜಾಪುರ,ಮೇ7-ಸದ್ಯದಲ್ಲೇ ಮತ್ತೊಂದು ಸಿ.ಡಿ ಫ್ಯಾಕ್ಟರಿ ರಾಜ್ಯದಲ್ಲಿ ಬಹಿರಂಗವಾಗಲಿದೆ ಎಂದು ಬಿಜೆಪಿ ಶಾಸಕ ಬಸನಗೌಡ ಪಾಟೀಲ್‌ ಯತ್ನಾಳ್‌ ಸ್ಫೋಟಕ ಹೇಳಿಕೆ ನೀಡಿದ್ದಾರೆ. ಸಿ.ಡಿ ಯಾರಿಗೆ ಸಂಬಂಧಿಸಿದ್ದು, ಅದರ ಹಿಂದೆ ಯಾರಿದ್ದಾರೆ ಎಂಬ ವಿವರವನ್ನು ಮಾತ್ರ ಬಹಿರಂಗಪಡಿಸದೆ ಕುತೂಹಲ ಕೆರಳಿಸಿದರು.

ಒಂದು ಕಡೆ ಹಾಸನ ಸಂಸದ ಪ್ರಜ್ವಲ್‌ ರೇವಣ್ಣ ಅವರಿಗೆ ಸೇರಿದೆ ಎನ್ನಲಾದ ಪೆನ್‌ಡ್ರೈವ್‌ ಪ್ರಕರಣ ವಿವಾದ ಸೃಷ್ಟಿಸಿರುವ ಬೆನ್ನಲ್ಲೇ ಯತ್ನಾಳ್‌ ಅವರ ಹೇಳಿಕೆ ರಾಜಕೀಯ ವಲಯದಲ್ಲಿ ಭಾರೀ ಮಹತ್ವ ಪಡೆದುಕೊಂಡಿದೆ.

ಲೋಕಸಭೆ ಚುನಾವಣೆಯಲ್ಲಿ ಬಿಜಾಪುರದಲ್ಲಿ ತಮ್ಮ ಹಕ್ಕು ಚಲಾಯಿಸಿದ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನಾನು ಯಾವುದನ್ನು ಬಾಯಿ ಚಪಲಕ್ಕೆ ಇಲ್ಲವೇ ಪ್ರಚಾರಕ್ಕೆ ಹೇಳುವುದಿಲ್ಲ. ಹಿಂದೆಯೇ ನಾನು ಸಿ.ಡಿ ಸ್ಫೋಟಗೊಳ್ಳಲಿದೆ ಎಂದು ಹೇಳಿದ್ದೆ. ಆದರೆ ಯಾರದ್ದು ಎಂದು ಹೇಳಿರಲಿಲ್ಲ. ನನ್ನ ಮಾತು ಈಗ ನಿಜವಾಗಿದೆ ಎಂದು ತಮ್ಮ ಹೇಳಿಕೆಯನ್ನು ಬಲವಾಗಿ ಸಮರ್ಥಿಸಿಕೊಂಡರು.

ಪ್ರಜ್ವಲ್‌ ಅಶ್ಲೀಲ ವಿಡಿಯೋ ಬಹಿರಂಗವಾಗಿದ್ದರ ಹಿಂದೆ ಡಿಸಿಎಂ ಡಿ.ಕೆ ಶಿವಕುಮಾರ್‌ ಕೈವಾಡವಿದೆ ಎಂದು ಆರೋಪಿಸಿದ ಅವರು, ವಕೀಲ, ಬಿಜೆಪಿ ನಾಯಕ ದೇವೇರಾಜೇ ಗೌಡರು ಆರೋಪಿಸಿದಂತೆ ಪ್ರಕರಣದಲ್ಲಿ ಉಪಮುಖ್ಯಮಂತ್ರಿ ಶಿವಕುಮಾರ್‌ ಅವರ ಕೈವಾಡ ಇರುವುದು ಸ್ಪಷ್ಟ ಎಂದರು.

ರಾಜ್ಯ ಸರ್ಕಾರ ರಚನೆ ಮಾಡಿರುವ ಎಸ್‌ಐಟಿಯು ಡಿ.ಕೆ.ಶಿವಕುಮಾರ್‌ ವಶದಲ್ಲಿದೆ. ಅದು ಅವರ ಆಣತಿಯಂತೆ ಕೆಲಸ ಮಾಡುತ್ತದೆ ಎಂದು ಯತ್ನಾಳ್‌ ದೂರಿದರು.ಪ್ರಜ್ವಲ್‌ ಪ್ರಕರಣ ಉತ್ತರ ಕರ್ನಾಟಕ ಭಾಗದ ಚುನಾವಣೆಯಲ್ಲಿ ಬಿಜೆಪಿ ಮೇಲೆ ಪರಿಣಾಮ ಬೀರುವುದಿಲ್ಲ. ಉತ್ತರ ಕರ್ನಾಟಕ ಭಾಗದಲ್ಲಿ 2019ರ ಚುನಾವಣೆಯಲ್ಲಿಯೂ ನಾವು ಉತ್ತಮ ಸಾಧನೆ ಮಾಡಿದ್ದೆವು. ಈ ಭಾಗದಲ್ಲಿ ಜೆಡಿಎಸ್‌ ಅಷ್ಟು ಪ್ರಬಲವಾಗಿಲ್ಲ. ಈ ಎಲ್ಲ ಕಾರಣಗಳಿಂದ ಪ್ರಜ್ವಲ್‌ ಪ್ರಕರಣದಿಂದ ಈ ಭಾಗದಲ್ಲಿ ಬಿಜೆಪಿಗೆ ಹಿನ್ನಡೆಯಾಗುವುದಿಲ್ಲ ಎಂದು ಹೇಳಿದರು.

You May Also Like

More From Author

+ There are no comments

Add yours