ಕಲಬುರಗಿಯಲ್ಲಿ ಮೃಗೀಯ ವರ್ತನೆ; ಹಣಕ್ಕಾಗಿ ಬೆತ್ತಲೆಗೊಳಿಸಿ, ಮರ್ಮಾಂಗಕ್ಕೆ ಶಾಕ್‌ ಕೊಟ್ಟು ಚಿತ್ರಹಿಂಸೆ ನೀಡಿದ ಕಿರಾತಕರು

0 min read

ಹೈಲೈಟ್ಸ್‌:

  • ಕಲಬುರಗಿಯಲ್ಲಿ ಸೆಕೆಂಡ್‌ ಹ್ಯಾಂಡ್‌ ಕಾರ್‌ ವ್ಯಾಪಾರಿ ಹಾಗೂ ಇತರೆ ಇಬ್ಬರ ಕಿಡ್ನಾಪ್
  • ಹಣಕ್ಕಾಗಿ ಬೆತ್ತಲೆ ಮಾಡಿ ಚಿತ್ರಹಿಂಸೆ ಹಿಡಿದ ಕಿರಾತಕರು
  • 7 ಆರೋಪಿಗಳ ಬಂಧನ, ಮುಂದುವರೆದ ತನಿಖೆ

ಕಲಬುರಗಿ : ಇದು ನಾಗರಿಕ ಸಮಾಜವೇ ತಲೆ ತಗ್ಗಿಸುವ ಸಂಗತಿ. ಹಣ ಸುಲಿಗೆಗಾಗಿ ಅಮಾಯಕರಿಗೆ ಕ್ರೂರ ಮೃಗಗಳಂತೆ ಚಿತ್ರಹಿಂಸೆ ನೀಡಿದವರು ಮನುಷ್ಯರೇ ಅಲ್ಲ ಎನ್ನುವಷ್ಟರ ಮಟ್ಟಿಗೆ ಹಿಂಸೆ ನೀಡಿದ ಘಟನೆ ನಗರದಲ್ಲಿ ನಡೆದಿದೆ.

ಸೆಕೆಂಡ್‌ ಹ್ಯಾಂಡ್‌ ಕಾರ್‌ ವ್ಯಾಪಾರಿ ಹಾಗೂ ಇತರೆ ಇಬ್ಬರಿಗೆ ಮೂವರು ಕಿರಾತಕರು ಬೆತ್ತಲೆ ಮಾಡಿ ಮರ್ಮಾಂಗಗಳಿಗೆ ಶಾಕ್‌ ಕೊಟ್ಟಿದ್ದಾರೆ. ಮನ ಬಂದಂತೆ ಬಡಿಗೆಯಿಂದ ಹಲ್ಲೆಮಾಡಿದ ಘಟನೆ ಹಾಗರಗಾ ರಸ್ತೆಯಲ್ಲಿ ನಡೆದಿದೆ. ಸೆಕೆಂಡ್‌ ಹ್ಯಾಂಡ್‌ ಕಾರ್‌ ವ್ಯಾಪಾರಿ ಅರ್ಜುನಪ್ಪ ಹಣಮಂತ ಮಡಿವಾಳ, ಎಂ.ಡಿ.ಸಮೀರೊದ್ದಿನ್‌, ಅಬ್ದುಲ್‌ ರಹೇಮಾನ್‌ ಹಲ್ಲೆಗೆ ಒಳಗಾದವರು.

ಇಮ್ರಾನ್‌ ಪಟೇಲ್‌ ಮೆಹಬೂಬ್‌ ಪಟೇಲ್‌, ಮಹ್ಮದ್‌ ಮತೀನ್‌ ಅಲಿಯಾಸ್‌ ಸ್ಟೀಲ್‌ ಮತೀನ್‌ ಅಬ್ದುಲ್‌ ಸಲೀಮ್‌, ಮಹ್ಮದ್‌ ಜಿಯಾ ಉಲ್‌ ಹುಸೇನ್‌ ಅಬ್ದುಲ್‌ ಫಜಲ್‌, ಮಹ್ಮದ್‌ ಅಬಜಲ್‌ ಶೇಕ್‌ ಅನ್ವರ್‌ ಶೇಖ್‌, ಹುಸೇನ್‌ ಶೇಖ್‌ ಮೌಲಾಶೇಖ್‌, ರಮೇಶ ಭೀಮಣ್ಣ ದೊಡ್ಡಮನಿ, ಸಾಗರ ಶ್ರೀಮಂತ ಕೋಳಿ ಎಂಬ ಏಳು ಆರೋಪಿಗಳು ಈ ಕೃತ್ಯ ಎಸಗಿದ್ದಾರೆ. ಪೊಲೀಸರು ಇವರನ್ನು ಬಂಧಿಸಿದ್ದಾರೆ.

ಘಟನೆ ನಡೆದಿದ್ದು ಹೇಗೆ?

ರಮೇಶ ದೊಡ್ಡಮನಿ ಎಂಬುವವರಿಗೆ ಸೆಕೆಂಡ್‌ ಹ್ಯಾಂಡ್‌ ಕಾರ್‌ ಬೇಕಿತ್ತು. ಅದನ್ನು ತೋರಿಸಲು ಹೋದಾಗ ಸೆಕೆಂಡ್‌ ಹ್ಯಾಂಡ್‌ ಕಾರು ವ್ಯಾಪಾರಿ ಸೇರಿ ಮೂವರನ್ನೂ ಒಂದು ಮನೆಯಲ್ಲಿ ಕೂಡಿ ಹಾಕಿ ಆರೋಪಿಗಳು ಟಾರ್ಚರ್‌ ನೀಡಿದ್ದಾರೆ. ಹಣಕ್ಕಾಗಿ ಬೇಡಿಕೆಯಿಟ್ಟು ಒಂದು ದಿನದವರೆಗೆ ಬೆತ್ತಲೆಯಲ್ಲಿಟ್ಟು ಪೀಡಿಸಿದ್ದಾರೆ. ಹಣ ನೀಡಲು ಒಪ್ಪಿಕೊಳ್ಳದಿದ್ದರೆ ನಿಮ್ಮ ಮನೆಗೆ ಹೆಣ ಹೋಗುತ್ತದೆ ಎಂದು ಅಂಜಿಸಿದ್ದಾರೆ. ಒಂದು ದಿನದ ನಂತರ ಸಂಜೆ ಪೊಲೀಸರು ಹಾಗರಗಾ ರಸ್ತೆಯಲ್ಲಿ ಬಂದ ತಕ್ಷಣ ದುಷ್ಕರ್ಮಿಗಳು ಹಲವರು ಓಡಿ ಹೋಗಿದ್ದಾರೆ.

ಸೆಕೆಂಡ್‌ ಹ್ಯಾಂಡ್‌ ಕಾರ್‌ ವ್ಯಾಪಾರಿ ಅರ್ಜುನಪ್ಪ ಹಣಮಂತ ಮಡಿವಾಳ ಗುಲ್ಬರ್ಗ ವಿಶವಿದ್ಯಾಲಯದ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾರೆ. ಪೊಲೀಸರು ಮುಂದಿನ ತನಿಖೆ ನಡೆಸಿದ್ದಾರೆ.

ಘಟನೆಯ ವಿವರ

ಸೇಡಂ ತಾಲೂಕಿನ ದೇವನೂರ ಗ್ರಾಮದ ಮೂಲದ ಅರ್ಜುನಪ್ಪ ಹಣಮಂತ ಮಡಿವಾಳ (30) ಬೆಂಗಳೂರಿನಿಂದ ಸೆಕೆಂಡ್‌ ಹ್ಯಾಂಡ್‌ ಕಾರ್‌ಗಳನ್ನು ತಂದು ಮಾರಾಟ ಮಾಡುತ್ತಿದ್ದ. ಚಿತ್ತಾಪುರದ ರಮೇಶ ದೊಡ್ಡಮನಿ ಎಂಬುವವರು ಎಂಟು ವರ್ಷಗಳಿಂದ ಪರಿಚಯವಿದ್ದ. ಇತ್ತೀಚೆಗೆ ರಮೇಶ ದೊಡ್ಡಮನಿ ತಾನು ತಾಲೂಕು ಅಧ್ಯಕ್ಷನಾಗಿದ್ದು, ಒಳ್ಳೆಯ ಸೆಕೆಂಡ್‌ ಹ್ಯಾಂಡ್‌ ಕಾರ್‌ ಬೇಕು ಎಂದು ತಿಳಿಸಿದ್ದ. ಇದಕ್ಕೆ ಅರ್ಜುನಪ್ಪ ಒಪ್ಪಿಕೊಂಡಿದ್ದಾನೆ. ಇತ್ತೀಚೆಗೆ ರಮೇಶ ದೊಡ್ಡಮನಿಗೆ ಕರೆ ಮಾಡಿ ಕಲಬುರಗಿಯಲ್ಲಿಒಂದು ಟಾಟಾ ಹ್ಯಾರಿಯರ್‌ ಕಾರ್‌ ಇದ್ದು, 6 ಲಕ್ಷ ರೂ.ಗೆ ವ್ಯವಹಾರ ಆಗುತ್ತದೆ ಎಂದು ತಿಳಿಸಿದ್ದ. ಸರಿ ಆ ಕಾರ್‌ ತನಗೆ ಕೊಡಿಸಿದರೆ ಒಂದು ಲಕ್ಷ ರೂ. ಕಮಿಷನ್‌ ಕೊಡಿಸುವುದಾಗಿ ಅರ್ಜುನಪ್ಪನಿಗೆ ತಿಳಿಸಿದ್ದಾನೆ. ಇದಕ್ಕೆ ಅರ್ಜುನಪ್ಪನೂ ಒಪ್ಪಿಕೊಂಡಿದ್ದಾನೆ.

ಮೇ 4 ರಂದು ಕಾರ್‌ ನೋಡಲು ಮುಹೂರ್ತ

ಮೇ 4 ರಂದು ಕಾರ್‌ ನೋಡಲು ಹೋಗೋಣ ಎಂದು ಅರ್ಜುನಪ್ಪ ರಮೇಶ ದೊಡ್ಡಮನಿಗೆ ಬೆಳಗ್ಗೆ 11 ಗಂಟೆಗೆ ಕರೆ ಮಾಡಿ ತಿಳಿಸಿದ್ದಾನೆ. ಸರಿ ಎಂದು ಹೇಳಿದಾಗ ಚಿತ್ತಾಪುರಕ್ಕೆ ಹೋಗಿ ರಮೇಶ ದೊಡ್ಡಮನಿಯನ್ನು ಕಲಬುರಗಿಗೆ 3 ಗಂಟೆ ಸುಮಾರಿಗೆ ಬಂದಿದ್ದಾರೆ.

ಬಳಿಕ ಮಾರಬೇಕಿದ್ದ ಕಾರಿನ ಮಾಲೀಕ ಅಬ್ದುಲ್‌ ರೆಹಮಾನ್‌ ಎಂಡಿ ತಸ್ಲೀಮ್‌ಗೆ ಕರೆ ಮಾಡಿ ಟಾಟಾ ಹ್ಯಾರಿಯರ್‌ ಕಾರ್‌ ತೆಗೆದುಕೊಂಡು ನಾಗನಹಳ್ಳಿ ಕ್ರಾಸ್‌ ಹತ್ತಿರ ಬರಲು ಅರ್ಜುನಪ್ಪ ತಿಳಿಸಿದ್ದಾನೆ. ನಂತರ ಅಬ್ದುಲ್‌ ರೆಹಮಾನ್‌ ತನ್ನ ಕಾರ್‌ ತೆಗೆದುಕೊಂಡು ತನಗೆ ಪರಿಚಯ ಇರುವ ಮಹ್ಮದ್‌ ಸಮಿರುದ್ದೀನ್‌ ಕರೆದುಕೊಂಡು ಬಂದಿದ್ದಾನೆ.

ಬಳಿಕ ರಮೇಶ ದೊಡ್ಡಮನಿ ತನಗೆ ಪರಿಚಯ ಇರುವ ವ್ಯಕ್ತಿ ಇಮ್ರಾನ್‌ ಎಂಬಾತ ಹಣ ಕೊಡುತ್ತಾನೆ. ಅಲ್ಲಿಗೆ ಹೋಗೋಣ, ಅಲ್ಲಿಯೇ ಕಾರ್‌ ನೋಡಿ ಮಾತಾಡೋಣ ಎಂದು ಹೇಳಿದ್ದಾನೆ. ನಂತರ ಹಾಗರಗಾ ರಸ್ತೆಯ ಇನಾಮದಾರ್‌ ಪಬ್ಲಿಕ್‌ ಶಾಲೆ ಹತ್ತಿರದಲ್ಲಿಒಂದು ಮನೆಯ ಹತ್ತಿರ ಬಂದಿದ್ದಾರೆ. ಮನೆಯ ಹತ್ತಿರ ಸುಮಾರ 10ರಿಂದ 12 ಜನರು ಅಲ್ಲಿದ್ದರು. ಕಾರ್‌ ತೆಗೆದುಕೊಂಡು ಹೋದಾಗ ಅಲ್ಲಿನವರು ಕೆಲವರು ಕಾರ್‌ ಟೆಸ್ಟ್‌ ಡ್ರೈವ್‌ ಮಾಡುತ್ತೇವೆಂದು ಕಾರ್‌ ತೆಗೆದುಕೊಂಡು ಹೋಗಿ, ಮರಳಿ ಬಂದಿದ್ದಾರೆ. ಬಳಿಕ ಇಮ್ರಾನ್‌ ಮತ್ತು ರಮೇಶ ದೊಡ್ಡಮನಿ ಎಂಬುವರು ಇವರನ್ನು ಒಳಗೆ ಹಾಕಿ ಎಂದು ಮಾತನಾಡಿಕೊಂಡಿದ್ದಾರೆ. ತಕ್ಷಣ ಇವರ ಮೇಲೆ ಅನುಮಾನ ಬಂದು ತಪ್ಪಿಸಿಕೊಳ್ಳಲು ಯತ್ನಿಸಿದ್ದರೂ ಆಗಲಿಲ್ಲ.

ಮನೆಯೊಳಗೆ ಕೂಡಿ ಚಿತ್ರಹಿಂಸೆ

ಎಲ್ಲರೂ ಕೂಡಿ ಅರ್ಜುನಪ್ಪ ಹಣಮಂತ ಮಡಿವಾಳ, ಎಂ.ಡಿ.ಸಮೀರೊದ್ದಿನ್‌ , ಅಬ್ದುಲ್‌ ರಹೇಮಾನ್‌ಗೆ ಮನೆಯೊಳಗೆ ಕೂಡಿ ಹಾಕಿದ್ದಾರೆ. ಬಳಿಕ ಮೂವರಿಗೂ ಬಟ್ಟೆ ಬಿಚ್ಚಿಸಿ, ಅವರ ಬಳಿ ಇರುವ ವಿದ್ಯುತ್‌ ಲೈಟರ್‌ನಿಂದ ಮರ್ಮಾಂಗಗಳಿಗೆ ಕರೆಂಟ್‌ ಶಾಕ್‌ ಕೊಡಿಸಿದ್ದಾರೆ. ಕಾರ್‌ ಕೊಡಲು ಲೇಟ್‌ ಮಾಡಿದ್ದೀರಿ. ಎಲ್ಲೆಲ್ಲಿಕಾರ್‌ ಮಾರಾಟ ಮಾಡಿದ್ದೀರಿ ಎಲ್ಲಹಣವನ್ನು ಕೊಡಬೇಕು ಎಂದು ಬೆದರಿಸಿದ್ದಾರೆ. ಇಲ್ಲಿಂದ ಹೊರಗಡೆ ಹೋಗಬೇಕಾದರೆ ಒಬ್ಬೊಬ್ಬರು 10 ಲಕ್ಷ ರೂ. ಕೊಡಬೇಕು ಎಂದು ಹೆದರಿಸಿದ್ದಾರೆ. 10ರಿಂದ 12 ಜನರು ಒಬ್ಬರಾದ ಮೇಲೆ ಒಬ್ಬರು ಬಡಿಗೆಗಳಿಂದ ಮೈ ಮೇಲೆ ಹೊಡೆದು ಭುಜಕ್ಕೆ, ಬಲಗೈ, ರಟ್ಟೆ, ಬೆನ್ನಿಗೆ, ಮೊಳಕಾಲುಗಳಿಗೆ, ಪಾದಗಳಿಗೆ ಮನ ಬಂದಂತೆ ಮೂವರಿಗೂ ಥಳಿಸಿದ್ದಾರೆ. ಕೆಲವರು ಸಿಗರೇಟ್‌ನಿಂದ ಸುಟ್ಟಿದ್ದಾರೆ. ಜತೆಗೆ ಎರಡು ಲಾಂಗ್‌ಗಳಿಂದ ಎದೆಗೆ ಚುಚ್ಚಿ ಹೆದರಿಸಿದ್ದಾರೆ.

ಮೇ 5ರಂದು ಸಂಜೆ ಮನೆಯಿಂದ ಹಣ ಹಾಕಿಸಿಕೊಂಡು ಕೊಡಬೇಕು. ಇಲ್ಲದಿದ್ದರೆ ಇಲ್ಲಿಯೇ ಮುಗಿಸುತ್ತೇವೆ ಎಂದು ಹೆದರಿಸಿದ್ದರಿಂದ ಅರ್ಜುನಪ್ಪ ತನ್ನ ಹೆಂಡತಿಯಿಂದ 50 ಸಾವಿರ ರೂ. ಫೋನ್‌ ಪೇ ಹಾಕಿಸಿಕೊಂಡಿದ್ದಾನೆ. ತಕ್ಷಣ ಮೊಬೈಲ್‌ ಕಸಿದುಕೊಂಡ ಆರೋಪಿಗಳು ಪಾಸ್‌ವರ್ಡ್‌ ತಿಳಿದುಕೊಂಡು ಸುಮಾರು 4200 ರೂ. ಖರ್ಚು ಮಾಡಿದ್ದಾರೆ.

ಸಂಜೆ 7 ಗಂಟೆಯ ಒಳಗೆ 7 ಲಕ್ಷ ರೂ. ಹಣ ಕೊಡದಿದ್ದರೆ ಜೀವ ಉಳಿಸುವುದಿಲ್ಲಎಂದು ಹೆದರಿಸಿದ್ದಾರೆ. ಕಾರ್‌ ಮಾರಾಟದಲ್ಲಿ ಎಷ್ಟು ಕಮಿಷನ್‌ ತೆಗೆದುಕೊಳ್ಳುತ್ತೀರಿ ಪ್ರತಿ ತಿಂಗಳು ಒಂದು ಲಕ್ಷ ರೂ. ಕೊಡಬೇಕು. ಹೀಗೆ ಕೊಟ್ಟರೆ ಮಾತ್ರ ನಿಮಗೆ ಸಹಕಾರ ನೀಡುತ್ತೇವೆ ಎಂದು ಚಿತ್ರ ಹಿಂಸೆ ನೀಡುತ್ತಿದ್ದಾಗಲೇ ಪೊಲೀಸರು ದಾಳಿ ನಡೆಸಿದ್ದಾರೆ.

ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಹಲ್ಲೆಮಾಡಿದ ಆರೋಪಿಗಳಿಗೆ ಬಂಧಿಸಲಾಗಿದೆ. ತನಿಖೆ ನಡೆದಿದ್ದು, ಕಾನೂನು ಪ್ರಕಾರ ಕ್ರಮ ಆಗಲಿದೆ.

You May Also Like

More From Author

+ There are no comments

Add yours