ದೆಹಲಿ ವಿಮಾನ ನಿಲ್ದಾಣದಲ್ಲಿ ಚಿನ್ನ ಕಳ್ಳಸಾಗಣೆ ಪ್ರಕರಣ: ಕಾಂಗ್ರೆಸ್ ಸಂಸದ ಶಶಿ ತರೂರ್ ಮಾಜಿ ಪಿಎ ಬಂಧನ

0 min read

ನವದೆಹಲಿ: ಚಿನ್ನ ಕಳ್ಳಸಾಗಣೆ ಆರೋಪದ ಮೇಲೆ ಕಾಂಗ್ರೆಸ್ ಸಂಸದ ಶಶಿ ತರೂರ್ ಅವರ ಮಾಜಿ ಆಪ್ತ ಸಹಾಯಕ(ಸಿಬ್ಬಂದಿ)ನನ್ನು ಇಲ್ಲಿನ ಇಂದಿರಾಗಾಂಧಿ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಕಸ್ಟಮ್ಸ್ ಅಧಿಕಾರಿಗಳು ಬಂಧಿಸಿದ್ದಾರೆ.

ಬ್ಯಾಂಕಾಕ್‌ನಿಂದ ಆಗಮಿಸಿದ ಶಶಿ ತರೂರ್ ಅವರ ಆಪ್ತ ಸಹಾಯಕ ಹಾಗೂ ಮತ್ತೊಬ್ಬ ವ್ಯಕ್ತಿಯನ್ನು ಅಧಿಕಾರಿಗಳು ಬಂಧಿಸಿದ್ದು ಅವರ ವಿರುದ್ಧ ಚಿನ್ನ ಕಳ್ಳಸಾಗಣೆ ಪ್ರಕರಣವನ್ನು ದಾಖಲಿಸಿದ್ದಾರೆ.ಬಂಧಿತ ವ್ಯಕ್ತಿಯಿಂದ 35.22 ಲಕ್ಷ ಮೌಲ್ಯದ 500 ಗ್ರಾಂ ತೂಕದ ಚಿನ್ನದ ಸರವನ್ನು ವಶಪಡಿಸಿಕೊಳ್ಳಲಾಗಿದ್ದು ವಿಚಾರಣೆ ನಡೆಸಲಾಗುತ್ತಿದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

ಶಶಿ ತರೂರ್‌ಗೆ ಮಾಜಿ ಪಿಎ ಆಗಿದ್ದ ಶಿವಕುಮಾರ್ ಪ್ರಸಾದ್ ಅವರು ದುಬೈನಿಂದ ವ್ಯಕ್ತಿಯೊಬ್ಬರನ್ನು ಬರಮಾಡಿಕೊಳ್ಳಲು ದೆಹಲಿ ವಿಮಾನ ನಿಲ್ದಾಣಕ್ಕೆ ಬಂದಿದ್ದರು ಎಂದು ಮೂಲಗಳು ತಿಳಿಸಿವೆ. ದುಬೈನಿಂದ ಬಂದ ವ್ಯಕ್ತಿ ಸುಮಾರು 500 ಗ್ರಾಂ ಚಿನ್ನವನ್ನು ಪ್ರಸಾದ್ ಅವರಿಗೆ ನೀಡುತ್ತಿದ್ದ ವೇಳೆ ಇಬ್ಬರನ್ನೂ ಬಂಧಿಸಲಾಯಿತು. ಸದ್ಯ ಪ್ರಕರಣದ ವಿಚಾರಣೆ ನಡೆಯುತ್ತಿದೆ.

ಲೋಕಸಭಾ ಚುನಾವಣೆ ಪ್ರಚಾರಕ್ಕಾಗಿ ಹಿಮಾಚಲ ಪ್ರದೇಶದಲ್ಲಿರುವ ಶಶಿ ತರೂರ್‌ ಅವರು ಈ ಘಟನೆ ಬಗ್ಗೆ ಆಘಾತ ವ್ಯಕ್ತಪಡಿಸಿದ್ದಾರೆ. ಅವರು ನಿವೃತ್ತ ವ್ಯಕ್ತಿಯಾಗಿದ್ದು, ಆಗಾಗ್ಗೆ ಡಯಾಲಿಸಿಸ್‌ ಮಾಡಿಸಿಕೊಳ್ಳುತ್ತಾರೆ. 72 ವರ್ಷ ವಯಸ್ಸಾದರೂ ಸಹಾನೂಭೂತಿಯಿಂದ ಅವರನ್ನು ಉಳಿಸಿಕೊಳ್ಳಲಾಗಿತ್ತು ಎಂದು ಹೇಳಿದ್ದಾರೆ.

ನಾನು ಯಾವುದೇ ತಪ್ಪನ್ನು ಕ್ಷಮಿಸುವುದಿಲ್ಲ, ಈ ಘಟನೆ ಬಗ್ಗೆ ತನಿಖೆಗೆ ಅಗತ್ಯವಾದ ಯಾವುದೇ ಕ್ರಮವನ್ನು ತೆಗೆದುಕೊಳ್ಳುವ ಅಧಿಕಾರಿಗಳ ನಡೆಯನ್ನು ನಾನು ಸಂಪೂರ್ಣವಾಗಿ ಬೆಂಬಲಿಸುತ್ತೇನೆ ಎಂದು ಅವರು ಹೇಳಿದ್ದಾರೆ.

ಚಿನ್ನದ ಕಳ್ಳಸಾಗಣೆ ಪ್ರಕರಣದಲ್ಲಿ ಶಶಿ ತರೂರ್ ಅವರ ಮಾಜಿ ಸಹಾಯಕನ ಬಂಧನಕ್ಕೆ ಸಂಬಂಧಿಸಿದಂತೆ ಆಡಳಿತಾರೂಢ ಭಾರತೀಯ ಜನತಾ ಪಕ್ಷ (ಬಿಜೆಪಿ) ಕಮ್ಯುನಿಸ್ಟ್ ಪಾರ್ಟಿ ಆಫ್ ಇಂಡಿಯಾ (ಮಾರ್ಕ್ಸ್‌ವಾದಿ) ಕಾಂಗ್ರೆಸ್ ವಿರುದ್ಧ ಟೀಕಾ ಪ್ರಹಾರ ನಡೆಸಿವೆ.

You May Also Like

More From Author

+ There are no comments

Add yours